Thursday, December 1, 2011

ರೆಡಿಮೇಡ್ ನಾಯಕರು ಬೇಕು...

ಕುಮಾರಸ್ವಾಮಿ ಮತ್ತೊಮ್ಮೆ ರಾಜಕೀಯದ ವಿಚಿತ್ರ ಹೆಜ್ಜೆ ಇಟ್ಟಿದ್ದಾರೆ. ಶ್ರೀರಾಮುಲು ಬೆಂಬಲಿಸುವ ಮೂಲಕ.
ಅಕಸ್ಮಿಕವಾಗಿ ನಾನು ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡಿದೆ ಅನ್ನೋ ಮಾತನ್ನು ಕುಮಾರಸ್ವಾಮಿ ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ. ನಿಜ. ಅವ್ರು ಸಿಎಂ ಆಗಿದ್ದು ಅಕಸ್ಮಿಕವಾಗಿ. ಅಪವಿತ್ರ ಮೈತ್ರಿಯಲ್ಲಿ ಹುಟ್ಟಿದ ಸರ್ಕಾರದ ಮೇಲೆ ಜನ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಂಡೂ ಇರಲಿಲ್ಲ. ಆದ್ರೆ ಇಪ್ಪತ್ತು ತಿಂಗಳ ಬಹುತೇಕ ಹದಿನೆಂಟು ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಒಬ್ಬ ಒಳ್ಳೆಯ ಆಡಳಿತಗಾರ ಎನಿಸಿಕೊಂಡಿದ್ದರು. ಜಾತಿ, ಪ್ರದೇಶವನ್ನು ಮೀರಿದ ವರ್ಚಸ್ಸು ಅವ್ರಿಗೆ ಸಿಕ್ಕಿತ್ತು.

ಇದೆಲ್ಲಾ ಸರಿ. ಆದ್ರೆ ಕುಮಾರಸ್ವಾಮಿ ಈಗ ಮಾಡ್ತಿರೋದೇನು? ಕಳೆದ ಎರಡೂವರೆ ವರ್ಷದಲ್ಲಿ ಕುಮಾರಸ್ವಾಮಿ ಹಲವು ಬಾರಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವ, ಹೋರಾಟ ಮಾಡುವ ಘೋಷಣೆಗಳನ್ನು ಮಾಡಿದ್ದಾರೆ. ಬೀದರ್ ನಿಂದ ಚಾಮರಾಜನಗರದವರೆಗೆ ಪಾದಯಾತ್ರೆಯೋ, ಬಸ್ ಯಾತ್ರೆಯೋ ಯಾವುದೋ ವಿಶಿಷ್ಟ ಯಾತ್ರೆ ಮಾಡೋದಾಗಿ ಘೋಷಿಸಿಕೊಂಡಿದ್ದರು. ಆದ್ರೆ ಯಾವಾಗ ಕಾಂಗ್ರೆಸ್ ಕಳೆದ ವರ್ಷ ಬಳ್ಳಾರಿವರೆಗೆ ಪಾದಯಾತ್ರೆ ಮಾಡ್ತೋ ಆಗ ಇದ್ದಕ್ಕಿದ್ದಂತೆ ಕುಮಾರಸ್ವಾಮಿ ತಮ್ಮ ಐಡಿಯಾವನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡಿದ್ರು ಅಂತ ಹೇಳ್ಕೊಂಡ್ರು. ಹೀಗೆ ಹೇಳುತ್ತಾ ಕಾಲ ಕಳೆದ್ರೇ ಹೊರತು ಕುಮಾರಸ್ವಾಮಿ ಯಾವುದೇ ಯಾತ್ರೆಗೆ ಮನಸ್ಸು ಮಾಡ್ಲಿಲ್ಲ. ಇಷ್ಟಕ್ಕೂ ಪಾದಯಾತ್ರೆಗೆ ಯಾರೂ ಪೇಟೆಂಟ್ ಪಡ್ಕೊಂಡಿಲ್ಲ.
ಆದ್ರೆ ಕಳೆದ ಒಂದೂವರೆ ವರ್ಷದಿಂದ ಕುಮಾರಸ್ವಾಮಿ ಹೆಚ್ಚು ಆಕ್ಟಿವ್ ಆಗಿದ್ದುದು ಯಡಿಯೂರಪ್ಪ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡೋದ್ರಲ್ಲಿ. ಯಡಿಯೂರಪ್ಪರನ್ನ ಖೆಡ್ಡಾಗೆ ಬೀಳಿಸೋದ್ರಲ್ಲಷ್ಟೇ ಕುಮಾರಸ್ವಾಮಿಯವ್ರಿಗೆ ಆಸಕ್ತಿ ಇತ್ತು. ಹಾಗಿದ್ರೂ ಕೊನೆಗೆ ಯಡಿಯೂರಪ್ಪ ಜೈಲಿಗೆ ಹೋದಾಗ ಅವ್ರ ಬಗ್ಗೆ ಅನುಕಂಪದ ಮಳೆಗೆರೆದು ನಾಯಕತ್ವದ ಒಣ ಪ್ರದರ್ಶನಕ್ಕೆ ಮುಂದಾದ್ರು.
ಇಷ್ಟೆಲ್ಲಾ ಆದ್ಮೇಲೆ ಕುಮಾರಸ್ವಾಮಿಗೆ ಇದ್ದಕ್ಕಿದ್ದಂತೆ ಶ್ರೀರಾಮುಲು ಕಡೆಗೆ ಒಲವು ಹೆಚ್ಚಾಯ್ತು. ನಾಯಕ ಸಮುದಾಯದ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟೇ ಇಂತದ್ದೊಂದು ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಹೇಗಾದ್ರೂ ಮಾಡಿ ಬಿಜೆಪಿ ಸರ್ಕಾರವನ್ನು ಕೆಡವಿ ಚುನಾವಣೆಗೆ ಹೋಗಿ ಐವತ್ತರವತ್ತು ಸೀಟ್ ಗೆದ್ರೆ ಮುಂದೆ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿಭಾಯಿಸಬಹುದು ಅನ್ನೋ ಲೆಕ್ಕಾಚಾರ ಜೆಡಿಎಸ್ ಪಾಳಯದಲ್ಲಿದೆ. ಇದಕ್ಕೆ ಜೆಡಿಎಸ್ ಗೆ ಸದ್ಯ ರೆಡಿಮೇಡ್ ನಾಯಕರು ಬೇಕು. ಶ್ರೀರಾಮುಲು ಇಂತ ಒಬ್ಬ ರೆಡಿಮೇಡ್ ನಾಯಕ. ಅವ್ರ ಮೂಲಕ ಕೆಲ ಜಿಲ್ಲೆಗಳಲ್ಲಿ ಜೆಡಿಎಸ್ ಗೆ ನೇರ ಅಥವಾ ಪರೋಕ್ಷ ಸಹಾಯ ಆಗುತ್ತೆ ಅನ್ನೋ ಲೆಕ್ಕಾಚಾರ ಜೆಡಿಎಸ್ ನದ್ದು.
ಹಾಗಾದ್ರೆ ಕಳೆದ ಮೂರೂವರೆ ವರ್ಷದಿಂದ ಜೆಡಿಎಸ್ ನ ನಾಯಕರು ಪಕ್ಷ ಕಟ್ಟುವ ಕೆಲಸಕ್ಕೆ ಪ್ರಾಮಾಣಿಕವಾಗಿ ಏನ್ ಕೆಲ್ಸ ಮಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ದಾಖಲೆಗಳನ್ನು ಸರಣಿಯಾಗಿ ಬಿಡುಗಡೆ ಮಾಡಿದ ಕುಮಾರಸ್ವಾಮಿ ಉಳಿದಂತೆ ಮಾಡಿದ್ದೇನು. ಮಾಜಿ ಸಿಎಂ ಆಗಿದ್ದ ಕುಮಾರಸ್ವಾಮಿ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಹೋದ್ರೂ ಒಂದಷ್ಟು ಅಭಿಮಾನಿಗಳ ದಂಡಿತ್ತು. ಆದ್ರೆ ಕ್ಷೇತ್ರಗಳ ಪ್ರವಾಸದ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಮೀಡಿಯಾ ಮುಂದೆ ಹೇಳ್ಕೊಂಡ್ರೇ ಹೊರತು ವಾಸ್ತವವಾಗಿ ವಿಷಯಾಧಾರಿತ ಪ್ರವಾಸ ಮಾಡಲು ಹೋಗಲೇ ಇಲ್ಲ.
ಹಾಗೆ ನೋಡಿದ್ರೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಬೆಳೆಸಲು ಅದ್ರ ನಾಯಕರಿಗೆ ಹಠ ಮತ್ತು ಸತತ ಪರಿಶ್ರಮ ಬೇಕು. ಪಶ್ಚಿಮ ಬಂಗಾಳದಲ್ಲಿ ಇವತ್ತು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ರೆ ಅದಕ್ಕೆ ಅವರ ನಿರಂತರ ಪರಿಶ್ರಮ ಕಾರಣ. ಎಡಪಕ್ಷಗಳಂತಹ ಕಾರ್ಯಕರ್ತರ ಆಧಾರಿತ ಪಕ್ಷವನ್ನು ಬುಡಮೇಲು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿದ್ದರು ಮಮತಾ. ವಿಷಯಾಧಾರಿತವಾಗಿ ಹೋರಾಟ ನಡೆಸುತ್ತಲೇ ಸಾಗಿದ್ರು. ಅವಕಾಶ ಸಿಕ್ಕಾಗ ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ರು. ಅದೇ ಅವ್ರನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆಯ ಮೇಲೆ ತಂದು ಕೂರಿಸಿದ್ದು.
ಆದ್ರೆ ಸದಾಶಿವನಗರದ ಗೆಸ್ಟ್ ಹೌಸ್ ನಲ್ಲಿ ಕುಳಿತೇ ಬಹುಕಾಲ ಕಳೆಯುವ ಕುಮಾರಸ್ವಾಮಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದು ಬಿಟ್ಟರೆ ಇದುವರೆಗೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲೇ ಇಲ್ಲ. ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ವಾಸ್ತವ್ಯ ಹೂಡೋದಾಗಿ ಘೋಷಿಸಿದ್ದು ಬಿಟ್ಟರೆ ಅತ್ತ ತಲೆಹಾಕಿ ಮಲಗಲಿಲ್ಲ. ಯಡಿಯೂರಪ್ಪ ವಿರುದ್ಧದ ದಾಖಲೆ ಬಿಡುಗಡೆ ಮಾಡಿದ್ದನ್ನೇ ದೊಡ್ಡ ಹೋರಾಟ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಅವ್ರ ಅಕ್ಕಪಕ್ಕದಲ್ಲಿ ಕುಳಿತವರು ಅದನ್ನೇ ಸಾಧನೆ ಎಂಬಂತೆ ಹೇಳುತ್ತಿದ್ದಾರೆ.
ಹೀಗಾಗಿ ಚುನಾವಣೆ ಹತ್ತಿರವಾಗುತ್ತಿರುವಾಗ ಕುಮಾರಸ್ವಾಮಿಯವ್ರಿಗೆ ಅರ್ಜೆಂಟಾಗಿ ರೆಡಿಮೇಡ್ ನಾಯಕರು ಬೇಕು. ಈಗ ಶ್ರೀರಾಮುಲು. ಮುಂದೆ ಇನ್ಯಾರೋ. .
ಯಾವನಿಗ್ಗೊತ್ತು?