ರಾಜ್ಯದಲ್ಲಿ ಕೃಷಿ ನೀತಿ, ಕೈಗಾರಿಕಾ ನೀತಿ, ಯುವ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ, ಹೀಗೆ ಸಾಲು ಸಾಲು ನೀತಿಗಳನ್ನು ಸರ್ಕಾರ ರೂಪಿಸುತ್ತಾ ಬಂದಿದೆ. ಇದಕ್ಕೊಂದು ಹೊಸ ಸೇರ್ಪಡೆಯಾಗಿ ಸಾಂಸ್ಕೃತಿಕ ನೀತಿ ಸೇರಿಕೊಳ್ಳಲಿದೆ. ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹಿರಿಯ ಸಾಹಿತಿಗಳು ವಹಿಸಿಕೊಂಡಿದ್ದಾರೆ.
ಇದರ ನಡುವೆ ಸಾಂಸ್ಕೃತಿಕ ನೀತಿಯನ್ನು ಹಿರಿಯ ಕಾದಂಬರಿಕಾರ ಎಸ್.ಎಲ್.ಭೈರಪ್ಪ ವಿರೋಧಿಸಿದ್ದಾರೆ. ತುಂಬ ಅರ್ಥಗರ್ಭಿತವಾದ ಪ್ರತಿಕ್ರಿಯೆಯೊಂದನ್ನು ಅವರು ಕೊಟ್ಟಿದ್ದಾರೆ. ಸಾಂಸ್ಕೃತಿಕ ನೀತಿಯನ್ನು ರೂಪಿಸುವಾಗ ರಾಜ್ಯದಲ್ಲಿ ಆಡಳಿತವಿರುದ ರಾಜಕೀಯ ಪಕ್ಷದ ಆಶಯಗಳು ಅದರೊಳಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಅವರು ಯಾವುದೇ ಪಕ್ಷವನ್ನು ನೇರವಾಗಿ ಉಲ್ಲೇಖಿಸದೇ ಇರೋದರಿಂದ ಇದಕ್ಕೊಂದು ವಿಶಾಲಾರ್ಥವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಇದೆಲ್ಲಾ ಪೂರ್ವಾಗ್ರಹ ಪೀಡಿತ ಹೇಳಿಕೆ ಎಂದು ತಿರಸ್ಕರಿಸಿದ್ದಾರೆ. ಉಮಾಶ್ರೀ ಇದನ್ನು ಕೇವಲ ಕಾಂಗ್ರೆಸ್ ಸರ್ಕಾರ ಅನ್ನುವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇಕೋ ಗೊತ್ತಿಲ್ಲ.
ಸಾಂಸ್ಕೃತಿಕ ನೀತಿ ರಾಜ್ಯದ ಸಂಸ್ಕೃತಿಯನ್ನು ಒಳ್ಳಗೊಂಡಿರುತ್ತದೆ. ಸಂಸ್ಕೃತಿಯನ್ನು ಪೋಷಿಸುವ, ಹಾಗೂ ಬೆಳೆಸುವ ದೂರದೃಷ್ಟಿಯನ್ನು ಹೊಂದಿರಬೇತು. ಇದರಲ್ಲಿ ಪ್ರತಿಯೊಂದು ಸಂಸ್ಕೃತಿಯ ಬಗ್ಗೆಯೂ ಸಮಾನ ದೃಷ್ಟಿಕೋನವಿರಬೇಕು. ಜನಪದ ಸಂಸ್ಕೃತಿ, ಜಾತಿಗಳ ಸಂಸ್ಕೃತಿ, ವೈದಿಕ ಸಂಸ್ಕೃತಿ, ಅಲ್ಪಸಂಖ್ಯಾತರ ಸಂಸ್ಕೃತಿ, ಆದಿವಾಸಿಗಳ ಸಂಸ್ಕೃತಿ ಹೀಗೆ ಸಂಸ್ಕೃತಿಯ ಆಳ ಮತ್ತು ವಿಸ್ತಾರ ದೊಡ್ಡದು. ಇವುಗಳಲ್ಲಿ ಯಾವುದೇ ಸಂಸ್ಕೃತಿಯ ಬಗ್ಗೆಯೂ ಉದಾಸೀನವನ್ನೋ ಅಥವಾ ಉದ್ದೇಶಪೂರ್ವಕ ಕಡೆಗಣನೆ ಮಾಡುವಂತದ್ದು ಸಲ್ಲದು. ಆದರೆ ಭೈರಪ್ಪ ಹೇಳಿದಂತೆ ರಾಜಕೀಯ ಆಶಯಗಳು ಸೇರಿಕೊಂಡಾಗ ಆಡಳಿತದಲ್ಲಿರುವ ಆಯಾ ಪಕ್ಷಗಳ ಹಿತಾಸಕ್ತಿ ಮುಖ್ಯವಾಗುತ್ತದೆ. ಅದು ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು. ಈ ಎರಡೂ ಪಕ್ಷಗಳು ಓಲೈಕೆ ರಾಜಕಾರಣವನ್ನು ಮಾಡುತ್ತಾ ಬಂದಿವೆ. ಇಂತಹ ಓಲೈಕೆಯ ರಾಜಕಾರಣದ ಅಂಶಗಳು ಸಾಂಸ್ಕೃತಿಕ ನೀತಿಯ ಮೇಲೆ ಪರಿಣಾಮ ಬೀರಿದರೆ ಅದರಿಂದ ಅಪಾಯವೇ ಹೆಚ್ಚು.
ಕೃಷಿ ನೀತಿ, ಕೈಗಾರಿಕಾ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ ಮೊದಲಾದುವುಗಳಲ್ಲಿ ಸರ್ಕಾರದ ನೀತಿ ಸರಿಯಾಗಿಲ್ಲದಿದ್ದರೆ ಅದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು. ರಾಜ್ಯದ ಸಾಧನೆಗಳ ಮೇಲೆ ಅಡ್ಡ ಪರಿಣಾಮಬೀರಬಹುದು. ಇದನ್ನು ಮುಂದೆ ಬರುವ ಸರ್ಕಾರಗಳು ವಿವೇಚನೆಯಿಂದ ಸರಿಪಡಿಸಿಕೊಳ್ಳಬಹುದು. ಆದರೆ ಯುವ ನೀತಿ, ಸಾಂಸ್ಕೃತಿಕ ನೀತಿಯಲ್ಲಿ ಎಡವಟ್ಟುಗಳಾದ್ರೆ ಅದನ್ನು ಸರಿಪಡಿಸೋದು ಕಷ್ಟ. 90ರ ದಶಕದಲ್ಲಿ ದೇಶದಲ್ಲಿ ನಡೆದಿರುವ ಸಾಂಸ್ಕೃತಿಕ ದಾಳಿಗಳ ನಂತರ ಹುಟ್ಟಿಕೊಂಡಿರುವ ಸಮುದಾಯಕ್ಕೆ ಈ ದೇಶದ ಮೂಲ ಬೇರುಗಳ ಆಶಯವೇ ಗೊತ್ತಾಗುತ್ತಿಲ್ಲ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಓದಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುತ್ತಿದೆ. ಮಾನಸಿಕ ಮಾಲಿನ್ಯ ಹಾಗೂ ಬೌದ್ಧಿಕ ದಾರಿದ್ರ್ಯ ಹೆಚ್ಚುತ್ತಿದೆ. ಅಭಿವ್ಯಕ್ತಿಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚುತನ ಹೆಚ್ಚುತ್ತಿದೆ.
ಸಾಂಸ್ಕೃತಿಕ ನೀತಿಯ ವಿಚಾರದಲ್ಲಿ ಸಾಹಿತಿಗಳ ತಂಡ ಎಷ್ಟೇ ಒಳ್ಳೆಯ ವರದಿಯನ್ನು ನೀಡಿದರೂ ರಾಜಕೀಯ ಪಕ್ಷಗಳು ಇದರಲ್ಲಿರುವ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ಕ್ಯಾಂಪೇನ್ ಶುರುಮಾಡಿದ್ರೂ ಅಚ್ಚರಿಯೇನಿಲ್ಲ. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ವಿಚಾರದಲ್ಲಿ ಇದೇ ಆಗುತ್ತಿದೆ. ಸಾಂಸ್ಕೃತಿಕ ನೀತಿಯೂ ಇದೇ ಅಪಾಯವನ್ನು ಮುಂದೆ ಎದುರಿಸಬಹುದು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜನಪದ ಜಾತ್ರೆ ಅನ್ನೋ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಅಷ್ಟೇ ಅಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಲಾಲ್ಬಾಗ್ನಲ್ಲಿ ಪ್ರತಿ ಶನಿವಾರ ಜನಪದ ಜಾತ್ರೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಬಂದು ಜಾನಪದ ನೃತ್ಯ ವೈಭವವನ್ನು ಕಂಡು ಸಂಭ್ರಮಿಸುತ್ತಿದ್ದರು. ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುವ ನಿಜವಾದ ಆಸಕ್ತಿಯಿರುವ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮುಂದೆ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದೆಲ್ಲಾ ತನ್ನ ಪಕ್ಷದ ಕೊಡುಗೆ ಅಂತಲೇ ಬಿಜೆಪಿ ಬಿಂಬಿಸಿಕೊಂಡು ಬಂದಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಾನಪದ ಜಾತ್ರೆ ನೋಡಲು ಸಿಗಲಿಲ್ಲ !