Friday, January 24, 2014

ಸಾಂಸ್ಕೃತಿಕ ನೀತಿ ರೂಪುಗೊಳ್ಳುತ್ತಿದೆ

ರಾಜ್ಯದಲ್ಲಿ ಕೃಷಿ ನೀತಿ, ಕೈಗಾರಿಕಾ ನೀತಿ, ಯುವ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ, ಹೀಗೆ ಸಾಲು ಸಾಲು ನೀತಿಗಳನ್ನು ಸರ್ಕಾರ ರೂಪಿಸುತ್ತಾ ಬಂದಿದೆ. ಇದಕ್ಕೊಂದು ಹೊಸ ಸೇರ್ಪಡೆಯಾಗಿ ಸಾಂಸ್ಕೃತಿಕ ನೀತಿ ಸೇರಿಕೊಳ್ಳಲಿದೆ. ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹಿರಿಯ ಸಾಹಿತಿಗಳು ವಹಿಸಿಕೊಂಡಿದ್ದಾರೆ.

ಇದರ ನಡುವೆ ಸಾಂಸ್ಕೃತಿಕ ನೀತಿಯನ್ನು ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ವಿರೋಧಿಸಿದ್ದಾರೆ. ತುಂಬ ಅರ್ಥಗರ್ಭಿತವಾದ ಪ್ರತಿಕ್ರಿಯೆಯೊಂದನ್ನು ಅವರು ಕೊಟ್ಟಿದ್ದಾರೆ. ಸಾಂಸ್ಕೃತಿಕ ನೀತಿಯನ್ನು ರೂಪಿಸುವಾಗ ರಾಜ್ಯದಲ್ಲಿ ಆಡಳಿತವಿರುದ ರಾಜಕೀಯ ಪಕ್ಷದ ಆಶಯಗಳು ಅದರೊಳಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಅವರು ಯಾವುದೇ ಪಕ್ಷವನ್ನು ನೇರವಾಗಿ ಉಲ್ಲೇಖಿಸದೇ ಇರೋದರಿಂದ ಇದಕ್ಕೊಂದು ವಿಶಾಲಾರ್ಥವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಇದೆಲ್ಲಾ ಪೂರ್ವಾಗ್ರಹ ಪೀಡಿತ ಹೇಳಿಕೆ ಎಂದು ತಿರಸ್ಕರಿಸಿದ್ದಾರೆ. ಉಮಾಶ್ರೀ ಇದನ್ನು ಕೇವಲ ಕಾಂಗ್ರೆಸ್‌ ಸರ್ಕಾರ ಅನ್ನುವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇಕೋ ಗೊತ್ತಿಲ್ಲ. 

ಸಾಂಸ್ಕೃತಿಕ ನೀತಿ ರಾಜ್ಯದ ಸಂಸ್ಕೃತಿಯನ್ನು ಒಳ್ಳಗೊಂಡಿರುತ್ತದೆ. ಸಂಸ್ಕೃತಿಯನ್ನು ಪೋಷಿಸುವ, ಹಾಗೂ ಬೆಳೆಸುವ ದೂರದೃಷ್ಟಿಯನ್ನು ಹೊಂದಿರಬೇತು. ಇದರಲ್ಲಿ ಪ್ರತಿಯೊಂದು ಸಂಸ್ಕೃತಿಯ ಬಗ್ಗೆಯೂ ಸಮಾನ ದೃಷ್ಟಿಕೋನವಿರಬೇಕು. ಜನಪದ ಸಂಸ್ಕೃತಿ, ಜಾತಿಗಳ ಸಂಸ್ಕೃತಿ, ವೈದಿಕ ಸಂಸ್ಕೃತಿ, ಅಲ್ಪಸಂಖ್ಯಾತರ ಸಂಸ್ಕೃತಿ, ಆದಿವಾಸಿಗಳ ಸಂಸ್ಕೃತಿ ಹೀಗೆ ಸಂಸ್ಕೃತಿಯ ಆಳ ಮತ್ತು ವಿಸ್ತಾರ ದೊಡ್ಡದು. ಇವುಗಳಲ್ಲಿ ಯಾವುದೇ ಸಂಸ್ಕೃತಿಯ ಬಗ್ಗೆಯೂ ಉದಾಸೀನವನ್ನೋ ಅಥವಾ ಉದ್ದೇಶಪೂರ್ವಕ ಕಡೆಗಣನೆ ಮಾಡುವಂತದ್ದು ಸಲ್ಲದು. ಆದರೆ ಭೈರಪ್ಪ ಹೇಳಿದಂತೆ ರಾಜಕೀಯ ಆಶಯಗಳು ಸೇರಿಕೊಂಡಾಗ ಆಡಳಿತದಲ್ಲಿರುವ ಆಯಾ ಪಕ್ಷಗಳ ಹಿತಾಸಕ್ತಿ ಮುಖ್ಯವಾಗುತ್ತದೆ. ಅದು ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು. ಈ ಎರಡೂ ಪಕ್ಷಗಳು ಓಲೈಕೆ ರಾಜಕಾರಣವನ್ನು ಮಾಡುತ್ತಾ ಬಂದಿವೆ. ಇಂತಹ ಓಲೈಕೆಯ ರಾಜಕಾರಣದ ಅಂಶಗಳು ಸಾಂಸ್ಕೃತಿಕ ನೀತಿಯ ಮೇಲೆ ಪರಿಣಾಮ ಬೀರಿದರೆ ಅದರಿಂದ ಅಪಾಯವೇ ಹೆಚ್ಚು. 

ಕೃಷಿ ನೀತಿ, ಕೈಗಾರಿಕಾ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ ಮೊದಲಾದುವುಗಳಲ್ಲಿ ಸರ್ಕಾರದ ನೀತಿ ಸರಿಯಾಗಿಲ್ಲದಿದ್ದರೆ ಅದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು. ರಾಜ್ಯದ ಸಾಧನೆಗಳ ಮೇಲೆ ಅಡ್ಡ ಪರಿಣಾಮಬೀರಬಹುದು. ಇದನ್ನು ಮುಂದೆ ಬರುವ ಸರ್ಕಾರಗಳು ವಿವೇಚನೆಯಿಂದ ಸರಿಪಡಿಸಿಕೊಳ್ಳಬಹುದು. ಆದರೆ ಯುವ ನೀತಿ, ಸಾಂಸ್ಕೃತಿಕ ನೀತಿಯಲ್ಲಿ ಎಡವಟ್ಟುಗಳಾದ್ರೆ ಅದನ್ನು ಸರಿಪಡಿಸೋದು ಕಷ್ಟ. 90ರ ದಶಕದಲ್ಲಿ ದೇಶದಲ್ಲಿ ನಡೆದಿರುವ ಸಾಂಸ್ಕೃತಿಕ ದಾಳಿಗಳ ನಂತರ ಹುಟ್ಟಿಕೊಂಡಿರುವ ಸಮುದಾಯಕ್ಕೆ ಈ ದೇಶದ ಮೂಲ ಬೇರುಗಳ ಆಶಯವೇ ಗೊತ್ತಾಗುತ್ತಿಲ್ಲ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಓದಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುತ್ತಿದೆ. ಮಾನಸಿಕ ಮಾಲಿನ್ಯ ಹಾಗೂ ಬೌದ್ಧಿಕ ದಾರಿದ್ರ್ಯ ಹೆಚ್ಚುತ್ತಿದೆ. ಅಭಿವ್ಯಕ್ತಿಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚುತನ ಹೆಚ್ಚುತ್ತಿದೆ. 

ಸಾಂಸ್ಕೃತಿಕ ನೀತಿಯ ವಿಚಾರದಲ್ಲಿ ಸಾಹಿತಿಗಳ ತಂಡ ಎಷ್ಟೇ ಒಳ್ಳೆಯ ವರದಿಯನ್ನು ನೀಡಿದರೂ ರಾಜಕೀಯ ಪಕ್ಷಗಳು ಇದರಲ್ಲಿರುವ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ಕ್ಯಾಂಪೇನ್ ಶುರುಮಾಡಿದ್ರೂ ಅಚ್ಚರಿಯೇನಿಲ್ಲ. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ವಿಚಾರದಲ್ಲಿ ಇದೇ ಆಗುತ್ತಿದೆ. ಸಾಂಸ್ಕೃತಿಕ ನೀತಿಯೂ ಇದೇ ಅಪಾಯವನ್ನು ಮುಂದೆ ಎದುರಿಸಬಹುದು. 

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜನಪದ ಜಾತ್ರೆ ಅನ್ನೋ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಅಷ್ಟೇ ಅಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತಿ ಶನಿವಾರ ಜನಪದ ಜಾತ್ರೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಬಂದು ಜಾನಪದ ನೃತ್ಯ ವೈಭವವನ್ನು ಕಂಡು ಸಂಭ್ರಮಿಸುತ್ತಿದ್ದರು. ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುವ ನಿಜವಾದ ಆಸಕ್ತಿಯಿರುವ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮುಂದೆ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದೆಲ್ಲಾ ತನ್ನ ಪಕ್ಷದ ಕೊಡುಗೆ ಅಂತಲೇ ಬಿಜೆಪಿ ಬಿಂಬಿಸಿಕೊಂಡು ಬಂದಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಾನಪದ ಜಾತ್ರೆ ನೋಡಲು ಸಿಗಲಿಲ್ಲ !



Tuesday, January 14, 2014

ಮಲ್ಲಿಕಾರ್ಜುನ ಬಂಡೆಯವರ ನೆನೆದು...

ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇತ್ತು. ಹೀಗಾಗಿ ಚುನಾವಣೆಯ ಹಿಂದಿನ ಎರಡು ರಾತ್ರಿಗಳ ವಿವರ ಹೇಳಬೇಕಿಲ್ಲ. ಹಣ ಮತ್ತು ಹೆಂಡದ ಹೊಳೆ ನೇರವಾಗಿ ಮತದಾರರ ಮನೆಗಳತ್ತಲೇ ಹರಿಯೋದು ಈ ರಾತ್ರಿಗಳಲ್ಲಿ. ಸಹಜವಾಗೇ ಟಿವಿ ಪತ್ರಕರ್ತರಿಗೆ ಇಂತ ರಾತ್ರಿಗಳಲ್ಲಿ ಏನಾದ್ರೂ ಎಕ್ಸ್‌ಕ್ಲೂಸಿವ್ ದೃಶ್ಯ ಸಿಗುತ್ತಾ ಅನ್ನೋ ಕುತೂಹಲ ಹೆಚ್ಚು. ಇದಕ್ಕಾಗಿ ಅವತ್ತು ನಾವು ನೈಟ್‌ ರೌಂಡ್ಸ್‌ಗೆ ಹೊರಟಿದ್ವಿ. ನಾನು, ಕುಲಕರ್ಣಿ ಮತ್ತು ಗುಲ್ಬರ್ಗಾ ಕ್ಯಾಮರಾಮನ್ ಗಂಗಾಧರ್.

ರಾತ್ರಿ ಎಲ್ಲಾ ಸುಮಾರು ಕಡೆ ಸುತ್ತಾಡಿ ಕೊನೆಗೆ ನಾವು ಬಂದಿದ್ದು ಗುಲ್ಬರ್ಗಾದ ಶರಣ ಬಸವೇಶ್ವರ ದೇಗುಲದ ಹತ್ತಿರ. ಅಷ್ಟೊತ್ತಿಗೆ ಅಲ್ಲಿ ನಮಗೆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಒಬ್ರು ಎದುರಾದ್ರೂ. ನಮ್‌ ಗಂಗಾಧರ್ ಅವರನ್ನು ಪರಿಚಯಿಸಿದ. ಹಾಗೆ ಅವತ್ತಿನ ರಾತ್ರಿ ಸಿಕ್ಕವರೇ ಮಲ್ಲಿಕಾರ್ಜುನ್ ಬಂಡೆ. ತೆಳು ನೀಲಿ ಬಣ್ಣದ ಟೀ ಶರ್ಟ್‌ ಹಾಕ್ಕೊಂಡಿದ್ರು ಬಂಡೆ. ಕಟ್ಟುಮಸ್ತಾದ ಮೈಕಟ್ಟು. ಖಡಕ್ ಆಫೀಸರ್ ಗೆ ಬೇಕಾದ ವ್ಯಕ್ತಿತ್ವ ಅವರಿಗಿತ್ತು. ಹಾಗೇ ಸುಮ್ಮನೆ ಎಲೆಕ್ಷನ್ ವಿಚಾರದಲ್ಲಿ ಒಂದಷ್ಟು ಹೊತ್ತು ಹರಟೆ ಹೊಡ್ಕೊಂಡು ನಿಂತಿದ್ವಿ. ಅವರ ಮಾತುಗಳಲ್ಲಿ ಚುನಾವಣೆಯಲ್ಲಿ ಹರಿಯುವ ಹಣದ ಹೊಳೆಯ ಬಗ್ಗೆ ತೀವ್ರ ಅಸಮಾಧಾನವಿತ್ತು. ಹೀಗೇ ಡಿಪಾರ್ಟ್‌ಮೆಂಟ್ ವಿಚಾರ - ಅದೂ ಇದೂ ಅಂತ ಮಾತಾಡ್ತಿದ್ವಿ. ಅಷ್ಟೊತ್ತಲ್ಲಿ ಅಲ್ಲೊಂದು ಕಾರ್‌ ಬಂದಿತ್ತು.

ಅದು ವಿಧಾನ ಪರಿಷತ್ ಸದಸ್ಯರೊಬ್ಬರ ಕಾರು. ಸ್ವತಃ ಆ ಶಾಸಕ ಕೂಡ ಅದೇ ಕಾರಿನಲ್ಲಿದ್ರು. ಗುಲ್ಬರ್ಗಾದ ಉಪಚುನಾವಣೆಯಲ್ಲಿ ಅವರು ವಿಶೇಷ ಜವಾಬ್ದಾರಿ ನಿಭಾಯಿಸುತ್ತಿದ್ದವರು. ಹೀಗಾಗಿ ಅವರ ಕಾರಿನಲ್ಲೇನಾದ್ರೂ ಹಣ ಸಾಗಾಟ ಇರಬಹುದಾ ಅನ್ನೋ ಅನುಮಾನ ನಮಗೆ ಕಾಡಿತ್ತು. ಹೇಗಿದ್ರೂ ಜೊತೇಲಿ ಬಂಡೆ ಇದ್ರಲ್ಲಾ. ಅವರ ಜೊತನೇ ಇದನ್ನು ಹೇಳಿದ್ವಿ. ತಕ್ಷಣ ಬಂಡೆ ಕಾರ್ಯಪ್ರವೃತ್ತರಾದ್ರು. ಹೋಗಿ ಶಾಸಕರ ಇನೋವಾ ಕಾರನ್ನು ತಡೆದು ನಿಲ್ಲಿಸಿದ್ರು. ಶಾಸಕರನ್ನು ಕಾರಿಂದ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಿದ್ರು. ಆ ಕಾರಿನಲ್ಲಿ ಹಣ ಇರಲಿಲ್ಲ. ಆದ್ರೆ ಚುನಾವಣೆಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ನಿಷ್ಟುರತೆ ಇಷ್ಟವಾಯಿತು. ಯಾವುದೇ ಮುಲಾಜಿಲ್ಲದೆ ಗುಲ್ಬರ್ಗಾದ ಆ ಪ್ರಭಾವಿ ಶಾಸಕರ ಕಾರನ್ನು ತಪಾಸಣೆ ಮಾಡಿದ್ದು. ಅದೂ ಕ್ಯಾಮರಾ ಮುಂದೆ ಮಾಡೋದು ಇದೆಯಲ್ಲಾ. ಅಧಿಕಾರಿ ದಕ್ಷನಾಗಿದ್ದರೆ ಮಾತ್ರ ಇಂತದ್ದೆಲ್ಲಾ ಮಾಡಲು ಸಾಧ್ಯ. ( ಬೇರೆ ಚುನಾವಣೆಗಳ ಸಂದರ್ಭದಲ್ಲಿ ಬೇಕೆ ಪೊಲೀಸ್ ಅಧಿಕಾರಿಗಳ ಹತ್ತಿರ ನಾವು ಇಂತದ್ದೇ ಅನುಮಾನ ಹೇಳಿದಾಗ ಹಲವು ಸಬೂಬು ಹೇಳಿದ ಉದಾಹರಣೆಗಳು ನಮ್ಮ ಮುಂದಿವೆ.)  ಮಲ್ಲಿಕಾರ್ಜುನ ಬಂಡೆಗೆ ರಾಜಕಾರಣಿಗಳನ್ನು ಓಲೈಸುವ ಮನೋಭಾವ ಇರಲಿಲ್ಲ ಅನ್ನೋದನ್ನು ಇದು ಎತ್ತಿ ತೋರಿಸುತ್ತಿತ್ತು.

ಇದಾದ್ಮೇಲೂ ಒಂದಷ್ಟು ಹೊತ್ತು ಮಾತಾಡಿದ್ವಿ. ಮಲ್ಲಿಕಾರ್ಜುನ ಬಂಡೆ ಮೊದಲ ಭೇಟಿಯಲ್ಲೇ ತುಂಬ ಇಷ್ಟವಾದ್ರು. ಅವರ ಬಗ್ಗೆ ಒಂದು ವಿಶೇಷ ಗೌರವ ಮೂಡಿತ್ತು. ನಮ್ ಗಂಗಾಧರ್ ಕೂಡ ಬಂಡೆಯ ಹಲವು ಸಾಹಸಗಳ ಬಗ್ಗೆ ಅವತ್ತು ರಾತ್ರಿ ಹೇಳ್ತಿದ್ದ. ರಾಜಕಾರಣಿಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಹೆಚ್ಚು ನಿಷ್ಠುರವಾಗಿರುತ್ತಿದ್ದ ಮಲ್ಲಿಕಾರ್ಜುನ್ ಬಂಡೆ ಸಾಮಾನ್ಯ ಜನರ ಬಗ್ಗೆ ಅಷ್ಟೇ ಪ್ರೀತಿಯಿಂದ ವರ್ತಿಸುತ್ತಿದ್ದರು.

ಮೊನ್ನೆ ರೌಡಿ ಮುನ್ನಾನ ಬಲಿಹಾಕಲು ಇದೇ ಸಾಹಸಿ ಮಲ್ಲಿಕಾರ್ಜುನ ಬಂಡೆ ತಮ್ಮ ತಂಡದೊಂದಿಗೆ ಹೋಗಿದ್ದರು. ಕಳೆದ ರಾತ್ರಿ ಬಂಡೆ ಇಹಲೋಕದ ಸಂಬಂಧ ಕಡಿದುಕೊಂಡಿದ್ದಾರೆ. ಬಂಡೆ ನಿಧನರಾದ ಸುದ್ದಿ ಕೇಳಿ ಗುಲ್ಬರ್ಗಾದ ಜನ ತೀವ್ರ ಶೋಕ ತಪ್ತರಾಗಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಜನರ ಪ್ರೀತಿಯನ್ನು ಗಳಿಸೋದು ಸುಲಭವಲ್ಲ. ಕರ್ನಾಟಕ ಇಂತಹ ಹಲವು ದಕ್ಷ ಅಧಿಕಾರಿಗಳನ್ನು ಕಂಡಿದೆ. ಜನ ಪ್ರೀತಿಯಿಂದ ಈಗಲೂ ಹಲವು ಪೊಲೀಸ್ ಅಧಿಕಾರಿಗಳನ್ನು ನೆನೆಯುತ್ತಾರೆ. ಅಂತವರ ಸಾಲಿಗೆ ನಿಸ್ಸಂಶಯವಾಗಿ ಬಂಡೆ ಸೇರುತ್ತಾರೆ.

ಮಲ್ಲಿಕಾರ್ಜುನ ಬಂಡೆ ವ್ಯಕ್ತಿತ್ವ ಛಾಪು ಮೂಡಿಸಿದ ನೆನಪುಗಳು ಅವರ ಸಂಪರ್ಕಕ್ಕೆ ಬಂದವರ ಮನದಲ್ಲಿ ಸದಾ ಹಸಿರಾಗಿರಲಿದೆ. ಆದರೆ ಅವರ ಕುಟುಂಬಕ್ಕೆ ಆದ ನಷ್ಟವನ್ನು ತುಂಬಲು ಅಸಾಧ್ಯ.