Saturday, December 14, 2013

ದ್ಯಾವ್ರೇ ಭಟ್ರು ಇಷ್ಟು ಚಂದ ನಟಿಸ್ತಾರಾ...!!!

ಇಷ್ಟು ದಿನ ಯೋಗರಾಜ ಭಟ್ಟರು ಒಳ್ಳೆಯ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತ್ಯ ರಚನೆಕಾರ, ಇನ್ನೂ ಏನೇನೋ ಆಗಿದ್ದರು. ಒಂದು ಒಳ್ಳೆಯ ಸಿನಿಮಾದ ಪಾಕ ಬಡಿಸಲು ಏನೇನು ಬೇಕೋ ಅದೆಲ್ಲವನ್ನೂ ಭಟ್ರು ಅಚ್ಚುಕಟ್ಟಾಗಿ ಮಾಡ್ತಿದ್ರು. ಆದರೆ ಅವರೊಬ್ಬ ಒಳ್ಳೆಯ ನಟ ಅನ್ನೋದು ಗೊತ್ತಾಗಿದ್ದು ದ್ಯಾವ್ರೇ ನೋಡಿದಾಗಲೇ. ಶಿಷ್ಯನ ಸಿನಿಮಾಗೆ ಗುರುವಿನಿಂದ ಇದಕ್ಕಿಂತ ದೊಡ್ಡ ಬೆಂಬಲ ಸಿಗೋದಿಕ್ಕೆ ಸಾಧ್ಯವಿಲ್ಲ. ಗಡ್ಡ ವಿಜಿ ಆಕ್ಷನ್ ಕಟ್ ಹೇಳಿದ್ದಕ್ಕೆ ಭಟ್ರು ಚಂದಗೆ ಅಭಿನಯಿಸಿದ್ದಾರೆ.

ದ್ಯಾವ್ರೇ ಸಿನಿಮಾ ನೋಡಿದಾಗಿನಿಂದ ಮನಸ್ಸಿನಲ್ಲಿ ಹಲವು ಪಾತ್ರಗಳು ಅಚ್ಚಾಗಿ ಉಳಿದಿವೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಎಲ್ಲವೂ ಜೈಲಿನಲ್ಲಿ ಆರಂಭವಾದ್ರೂ ಒಬ್ಬೊಬ್ಬರದ್ದು ಒಂದೊಂದು ಕಥೆ. ಒಂದೊಂದು ವ್ಯಥೆ. ಇದು ಒಬ್ಬ ನಾಯಕನ ಸುತ್ತ ಹೆಣೆದ ಕಥೆಯಲ್ಲ. ಸಿನಿಮಾದಲ್ಲಿ ಹೆಚ್ಚಿನ ಭಾಗ ಯೋಗರಾಜ ಭಟ್ಟರು ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರನ್ನು ಹೀರೋ ಅನ್ನಬಹುದೇನೋ. ಆದರೆ ಅವರೊಬ್ಬರೇ ಹೀರೋ ಅಲ್ಲ. ಚೀಂಕ್ರನಾಗಿ ಕಾಣಿಸಿಕೊಂಡ ನೀನಾಸಂ ಸತೀಶ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಪರಾಕಾಯ ಪ್ರವೇಶ ಅಂದ್ರೆ ಇದೇನಾ...? ಇಷ್ಟವಾಗುವ ಇನ್ನಷ್ಟು ಪಾತ್ರಗಳು ದ್ಯಾವ್ರೇಗೆ ಜೀವತುಂಬಿವೆ. ಎಲೆಕ್ಷನ್ ಗೆ ನಿಂತು ಎಂಎಲ್ಎ ಆಗುವ ಕನಸುಕಾಣುತ್ತಲೇ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಚಿಕ್ಕರಸ ಪಾತ್ರ ಸಿನಿಮಾ ಮುಗಿದ ಮೇಲೂ ಕಾಡುತ್ತದೆ. ಇಂಗ್ಲಿಷ್ ಗೋಡೆ, ಜಗ್ಗ ಹೀಗೆ  ಸಿನಿಮಾದ ಹೀರೋಗಳ ಸಂಖ್ಯೆ ಬೆಳೆಯುತ್ತದೆ.

ಮುವತ್ತು ವರ್ಷ ಜೈಲಲ್ಲಿದ್ದು ಹೊರಬಂದ ದ್ಯಾವಣ್ಣನಿಗೆ ಹೊರಪ್ರಪಚಂದಲ್ಲಾದ ಬದಲಾವಣೆಗಳೇ ಗೊತ್ತಿಲ್ಲ. ಗುದ್ದಲಿ, ಸಲಕೆಗಳನ್ನು ರೆಡಿ ಮಾಡಿ ಕೆಲಸಕ್ಕೆ ಹೊರಡುವ ಅವನಿಗೆ ಬುಲ್ಡೋಜರ್ ಗಳು ಬಂದಿರೋದು ಹೇಗೆ ತಾನೇ ಗೊತ್ತಾಗಬೇಕು. ಜೈಲಲ್ಲಿದ್ದು ಬಂದ ಅಮಾಯಕ ದ್ಯಾವಣ್ಣನಿಗೆ ಹೊರ ಪ್ರಪಚಂದ ಬದುಕು ದುಸ್ತರವಾಗುತ್ತಾ ಹೋಗುತ್ತದೆ. ಪಾತ್ರ ಸಣ್ಣದು. ಆದರೆ ಸೃಷ್ಟಿಸುವ ಭಾವನೆಗಳು ದೊಡ್ಡದು. ಒಂಥರಾ ಚಿತ್ರಕ್ಕೆ ಟೈಟಲ್ ನಂತಿರುವ ಪಾತ್ರ ದ್ಯಾವಣ್ಣನದ್ದು.

ಇಷ್ಟೆಲ್ಲಾ ಹೇಳಿದ್ಮೇಲೆ ಒಂದು ಪಾತ್ರ ಹೇಳಲೇ ಬೇಕು. ಅದು ಇನ್ಸ್ ಪೆಕ್ಟರ್ ಸಾವಂತ್ ನದ್ದು. 'ಆ ದಿನಗಳು' ಚಿತ್ರದಲ್ಲಿ ಸರ್ದಾರ್ ಪಾತ್ರದಲ್ಲಿ ಮಿಂಚಿದ್ದ ಸತ್ಯ ಈಗ ಸರ್ದಾರ್ ಸತ್ಯ ಆಗಿದ್ದಾರೆ. ಯಾಕಂದ್ರೆ ಅದು ಅವರು ಜೀವತುಂಬಿದ್ದ ಪಾತ್ರ. ಈಗ ಸರ್ದಾರ್ ಸತ್ಯ ಸಾವಂತನಾಗಿ ಕಾಣಿಸಿಕೊಂಡಿದ್ದಾರೆ. ಅಟ್ಟಹಾಸ ಹಾಗೂ ವಿಕಟ ನಗು ಈ ಪಾತ್ರದ ಜೀವಾಳ. ಎರಡನ್ನೂ ಸರ್ದಾರ್ ಅದ್ಭುತವಾಗಿ ನಿಭಾಯಿಸಿದ್ದಾರೆ.

ಮತ್ತೆ ಭಟ್ಟರ ಕಡೆಗೆ ಬರಲೇಬೇಕು. ಜೈಲರ್ ಭಟ್ಟರು ಇಡೀ ಚಿತ್ರದಲ್ಲಿ ಬೆರೆತುಹೋಗಿದ್ದಾರೆ. ಗೋಡೇೇೇೇೇ.... ಎಂದು ಅವರು ಚೀತ್ಕರಿಸುವ ರೀತಿ ಹೃದಯ ಕಲಕುತ್ತದೆ. ಪಾತ್ರದ ಆಳವನ್ನು ಹೆಚ್ಚಿಸುತ್ತದೆ. ಯೋಗರಾಜ ಭಟ್ಟರ ಇತರೆ ಸಿನಿಮಾಗಳಂತೆ ಉಡಾಫೆ ಶೈಲಿಯಲ್ಲಿ ನೀತಿ ಹೇಳುವ ಪರಿಪಾಠ ದ್ಯಾವ್ರೇಯಲ್ಲೂ ಮುಂದುವರಿದಿದೆ. ಗುರುವಿನಿಂದ ಶಿಷ್ಯನಿಗೆ ಬಂದಿರುವ ಬಳುವಳಿ ಇದು.

ದ್ಯಾವ್ರೇಯಲ್ಲಿ ಆಗಲೇ ಹೇಳಿದಂತೆ ಹೀರೋ ಪಾತ್ರಗಳು ಹಲವಿವೆ. ಜೊತೆಗೆ ಪುಟಾಣಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹೀರೋಯಿನ್ ಗಳ ಜೊತೆಗೆ ಒಳ್ಳೆಯ ಹಾಡುಗಳು, ಅದಕ್ಕೊಪ್ಪುವ ಸಂಗೀತ. ಚಂದನೆಯ ಸಿನಿಮಾಟೋಗ್ರಫಿ, ಸ್ಕ್ರೀನ್ ಪ್ಲೇ.. ಹೀಗೆ ದ್ಯಾವ್ರೆಯಲ್ಲಿ ಪ್ರತಿಯೊಂದು ಅಂಶವೂ ಹೀರೋಯಿನ್ ಸ್ಥಾನವನ್ನು ತುಂಬುತ್ತವೆ. ಒಂದು ಒಳ್ಳೆಯ ಸಿನಿಮಾವನ್ನು ಗಡ್ಡ ವಿಜಯ್ ಕೊಟ್ಟಿದ್ದಾರೆ.

ದ್ಯಾವ್ರೇೇೇೇೇೇ..... ಇಂತಾ ಸಿನಿಮಾಗಳು ನಿಜಕ್ಕೂ ಗೆಲ್ಲಬೇಕು.!