Sunday, March 3, 2013

'ನಮ್ಮ ರಾಬರ್ಟ್ ಕ್ಲೈವ್' ತೆರೆದಿಡುವ ಕಟುಸತ್ಯ

ರಾಬರ್ಟ್ ಕ್ಲೈವ್...!
ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ. ಪ್ಲಾಸಿ ಕದನದಲ್ಲಿ ಸಿರಾಜ್ ಉದ್ ದೌಲನಿಗೂ ರಾಬರ್ಟ್ ಕ್ಲೈವ್ ನೇತೃತ್ವದ ಬ್ರಿಟಿಷ್ ಪಡೆಗೂ ಯುದ್ದ ನಡೆದು ಸಿರಾಜ್ ಉದ್ ದೌಲ ಸೋತು ಹೋದ. ಸಿರಾಜ್ ಉದ್ ದೌಲನ ಸೇನಾಪತಿಯಾಗಿದ್ದ ಮೀರ್ ಜಾಫರ್ ಮೋಸದಿಂದ ಯುದ್ಧ ಸೋಲುವಂತೆ ನೋಡಿಕೊಂಡ. ಮುಂದೆ ಮೀರ್ ಜಾಫರನೇ ನವಾಬನಾದ. ಶಾಲೆಯಲ್ಲಿ ಇತಿಹಾಸದ ಪಾಠದಲ್ಲಿ ಓದಿದ್ದ ಘಟನೆಗಳಿವು.
ಆದ್ರೆ ರಾಬರ್ಟ್ ಕ್ಲೈವನನ್ನು ರಂಗಭೂಮಿಗೆ ಎಳೆದು ತಂದು ಆತನ ಬಾಯಿಂದಲೇ ಅವನ ಕಥೆಯನ್ನು ಹೇಳಿಸಿದ್ದು ಮಾತ್ರವಲ್ಲ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೇಗೆ ದೇಶದ ಆಡಳಿತ ಸೂತ್ರ ಹಿಡಿಯಿತು ಅನ್ನೋದನ್ನು ಬಿಡಿಸಿಟ್ಟಿರೋದು ಪ್ರಕಾಶ್ ಬೆಳವಾಡಿ. 'ನಮ್ಮ ರಾಬರ್ಟ್ ಕ್ಲೈವ್' ಬೆಳವಾಡಿ ರಚಿಸಿ, ನಿರ್ದೇಶಿಸಿರುವ ಕಥಾನಕ.
ಇತ್ತೀಚೆಗೆ ಭಾರತದಲ್ಲಿ ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತಾಡ್ತಾರೆ. ಭಾರತದ ರಾಜಕಾರಣಿಗಳು ಭ್ರಷ್ಟರು. ಅಧಿಕಾರಿಗಳು ಭ್ರಷ್ಟರು. ಅಷ್ಟೇ ಅಲ್ಲ ಜನರು ಕೂಡ ಭ್ರಷ್ಟರು ಅನ್ನೋ ಮಾತು ಸಹಜ ಕೋಪದೊಂದಿಗೆ ವ್ಯಕ್ತವಾಗುತ್ತಿದೆ.  'ಹಿಂದೆ ಎಲ್ಲವೂ ಸರಿ ಇತ್ತು. ಈಗ ಎಲ್ಲಾ ಹಾಳಾಗೋಗಿದೆ' ಅಂತ ಗೋಗರೆಯೋದು ಮಾಮೂಲಾಗಿದೆ. ಆದ್ರೆ ಇದು ಕೇವಲ ಇಂದಿನ ಸೃಷ್ಟಿಯಲ್ಲ. ಇದು ಎಲ್ಲವೂ ಒಪ್ಪತಕ್ಕ ವಿಚಾರ. ಆದ್ರೆ ಇತಿಹಾಸವನ್ನು ಕೆದಕೋದು ಮಾತಾಡಿದಷ್ಟು ಸುಲಭವಲ್ಲ. ಆ ಕೆಲಸ ಮಾಡಿದ್ದಾರೆ ಪ್ರಕಾಶ್ ಬೆಳವಾಡಿ.
ಇತಿಹಾಸಕ್ಕೆ ಬೆಳಕು ಚೆಲ್ಲಿ, ರಾಬರ್ಟ್ ಕ್ಲೈವ್ ಮತ್ತು ಆತನ ಹಿಂದೆ ನಡೆದ ಘಟನೆಗಳೇ ನಾಟಕದ ವಸ್ತು. ಇಂಗ್ಲೆಂಡ್ ನಿಂದ ಇಂಡಿಯಾಗೆ ವ್ಯಾಪಾರಕ್ಕೆ ಬಂದ ಕಂಪನಿಯವರು, ಲಾಭ ನಷ್ಟದ ಲೆಕ್ಕಾಚಾರ ಹಾಕ್ಕೊಂಡು ಬಂದವರು. ಭಾರತದೊಳಗೆ ಬಂದ ನಂತರ ಇಲ್ಲಿನ ದೊರೆಗಳು, ನವಾಬರು, ನಿಜಾಮರು, ಸುಬೇದಾರರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಪಳಗಿಸಿಕೊಳ್ಳುತ್ತಾರೆ. ಇದೆಲ್ಲೆದಕ್ಕೂ ನೆರವಾಗೋದು ದಲ್ಲಾಳಿ ಸೇಠ್ ಗಳು.. ಸೇಠುಗಳಲ್ಲಿ ವ್ಯಕ್ತಿಗಳು ಬದಲಾಗಬಹುದು. ಆದ್ರೆ ಪಾತ್ರ ಬದಲಾಗೋದಿಲ್ಲ. ಇದನ್ನು ಮನೋಜ್ಞವಾಗಿ ನಾಟಕದಲ್ಲಿ ನಿರೂಪಿಸಲಾಗಿದೆ.
' ಭಾರತದಲ್ಲಿ ಅಧಿಕಾರ ಸಿಗುವ ಮೊದಲು ಆತ ತಾವು ಹೇಳಿದಂತೆ ಕೇಳುತ್ತಾರೆ.. ಆದ್ರೆ ಒಮ್ಮೆ ಗದ್ದುಗೆ ಏರಿದ ಮೇಲೆ ಎದೆ ಸೆಟೆಸಿ ತಮಗೇ ಸವಾಲಾಗುತ್ತಾರೆ ..' ಅನ್ನೋ ರೀತಿಯ ಮಾತೊಂದು ಬರುತ್ತದೆ. ಇದು ಅಂದಿಗೂ ನಿಜ. ಇಂದಿಗೂ ನಿಜ.
ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಮೂಲಧಾತುವಿನಂತಿದೆ ರಾಬರ್ಟ್ ಕ್ಲೈವ್ ಮತ್ತಾತನ ಕಂಪನಿ ಆಡಳಿತ ಕಾಲದ ಕಥೆ. ಚಕ್ರವರ್ತಿ, ನವಾಬ, ನಿಜಾಮ, ಸುಬೇದಾರರ ನಡುವೆ ಕಂಪನಿಯ ಅಧಿಕಾರಿಗಳು. ಜೊತೆಗೆ ಇವರೆಲ್ಲರ ನಡುವೆ ತಮ್ಮ ಹಿತ ಕಾಯ್ದುಕೊಳ್ಳುವ ದಲ್ಲಾಳಿಗಳು. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ, ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸುವವರು.  ತಮ್ಮ ಲಾಭ ನಷ್ಟದ ಬಗ್ಗೆ ಚಿಂತಿಸುವವರು. ಹೀಗೆ ಪ್ರತಿಯೊಂದು ಸ್ತರದಲ್ಲೂ ತಾಂಡವವಾಡುವ ಲಂಚಗುಳಿತನವನ್ನು ಬಿಂಬಿಸಲಾಗಿದೆ.
ನಾಟಕದಲ್ಲಿ ಇತಿಹಾಸವನ್ನು ಹೇಳುತ್ತಾ ಹೋಗೋದ್ರಿಂದ ಎಲ್ಲಾ ಮಾಹಿತಿಯನ್ನು ನೋಡುಗ ನೆನಪಿಟ್ಟುಕೊಳ್ಳೋದು ಕಷ್ಟ. ಇಷ್ಟಕ್ಕೂ ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕಂತೇನಿಲ್ಲವಲ್ಲ. ಆದ್ರೆ ಇವೆಲ್ಲಾ ಮೆಲುಕಾಗಿ - ನಮ್ಮ ಮುಂದೆ ನಮ್ಮ ಇತಿಹಾಸದ ಕಟುಸತ್ಯಗಳನ್ನು ತೆರೆದಿಡುತ್ತದೆ. ಈ ಕೆಲಸವನ್ನು ಪ್ರಕಾಶ್ ಬೆಳವಾಡಿ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಅವಕಾಶ ಸಿಕ್ಕಾಗ ಮಿಸ್ ಮಾಡಿಕೊಳ್ಳದೆ ನೋಡಲೇಬೇಕಾದ ನಾಟಕ ಇದು.