ಹಲೋ..
ಹಲೋ..
ಹರಿಪ್ರಸಾದ್..
?
ಹೌದು..
ಹಲೋ..
ಹಲೋ..
ಗೊತ್ತಾಯ್ತಾ ಯಾರೂ ಅಂತ..
ಹೆಚ್ಎಂ ಸರ್..
ಹಾಂ..
ಗುರುತು ಹಿಡಿದೆ..
ಮೊನ್ನೆಯಷ್ಟೇ
ಹೆಚ್ಎಂ ಫೋನ್ ಮಾಡಿದಾಗ ನಮ್ಮಿಬ್ಬರ
ನಡುವಿನ ಮಾತು ಶುರುವಾಗಿದ್ದು
ಹೀಗೆ. ಹೆಚ್ಎಂ
ಈಗ ರಾಮನಗರದ ಡಿಡಿಪಿಐ ಆಗಿದ್ದಾರೆ.
ಆದ್ರೆ ನಮ್ಗೆ ಈಗ್ಲೂ ಅವ್ರು
ಹೆಚ್ಎಂ.
ದಕ್ಷಿಣ
ಕನ್ನಡ ಜಿಲ್ಲೆ,
ಸುಳ್ಯ ತಾಲೂಕಿನ ಅಜ್ಜಾವರ
ಪ್ರೌಢಶಾಲೆಗೆ ಹೆಚ್ಎಂ ಆಗಿ
ಗಂಗಮಾರೇಗೌಡರು ಬಂದಾಗ ನಾನು
ಎಂಟನೇ ಕ್ಲಾಸ್ನ ವಿದ್ಯಾರ್ಥಿ.
ಆದ್ರೆ ಹೈಸ್ಕೂಲ್ನಲ್ಲೂ
ವಿದ್ಯಾರ್ಥಿಗಳ ಕೈ ಬರಹ ತಿದ್ದಬಹುದು,
ಅಕ್ಷರ ಚಂದ ಬರೆಯುವಂತೆ ಮಾಡಬಹುದು
ಎನ್ನುವುದನ್ನು ಸಾಧಿಸಿ ತೋರಿಸಿದ್ದು
ಗಂಗಮಾರೇಗೌಡರು.
ಅದುವರೆಗೆ ಕಾಟಾಚಾರಕ್ಕೆ
ಬರೀತಿದ್ದ ಕಾಪಿಯನ್ನು ತಿದ್ದಿ
ತೀಡಿದ್ದು ಅವರೇ.
ಬೋರ್ಡ್ ಮೇಲೆ ಗೆರೆ ಎಳೆದು
ಅಲ್ಲೇ ಅ, ಆ,
ಇ, ಈ..
ಬರೆದು,
ಎ,ಬಿ,ಸಿ,ಡಿ..
ಬರೆದು ಹೇಗೆ ಅಕ್ಷರಗಳನ್ನು
ಚಂದಗೆ ಬರೀಬೇಕು ಅಂತ ತೋರಿಸಿಕೊಟ್ಟಿದ್ದರು.
ಅವರ ಕೈ ಬರಹದಲ್ಲಿ ಕನ್ನಡದ
ಅಕ್ಷರಗಳು ಬೋರ್ಡ್ ಮೇಲೆ ಅರಳಿದ
ಹೂವುಗಳಂತೆಯೇ ಭಾಸವಾಗುತ್ತಿದ್ದವು.
ಕನ್ನಡದ ಸ್ಪಷ್ಟ ಉಚ್ಛರಣೆ
ಕಲಿಸಿದ್ದು ಪ್ರೈಮರಿಯಲ್ಲಿ
ಜನಾರ್ಧನ ಮಾಷ್ಟ್ರು ಹಾಗೂ ರುಕ್ಮಿಣಿ
ಟೀಚರ್. ಆದರೆ
ಇವತ್ತಿಗೂ ಕಿವಿಯಲ್ಲಿರುವ ಕಂಚಿನ
ಕಂಠ ಗಂಗಮಾರೇಗೌಡರದ್ದು.
ಕೆಲವೊಂದು
ಸಂದರ್ಭಗಳಲ್ಲಿ ಯಾವುದೋ ಸಮಸ್ಯೆಯನ್ನು
ಎದುರಿಸಲು ಹಿಂಜರಿಕೆಯಾದಾಗ ಸದಾ
ನೆನಪಾಗುವುದು ಗಂಗಮಾರೇಗೌಡರು
ಮಾಡಿದ್ದ ಒಂದು ಭಾಷಣ.
ಅದು ನಮ್ಮ ಹೈಸ್ಕೂಲಿನ
ವಾರ್ಷಿಕೋತ್ಸವದಲ್ಲಿ ಅವರು
ಮಾಡಿದ್ದ ಭಾಷಣ.
ಅನೇಕ ವರ್ಷಗಳ ನಂತರ ಅದೇ ಮೊದಲ
ಬಾರಿಗೆ ನಮ್ಮ ಹೈಸ್ಕೂಲಿನಲ್ಲಿ
ವಾರ್ಷಿಕೋತ್ಸವ ನಡೆದಿತ್ತು.
ಈ ವಾರ್ಷಿಕೋತ್ಸವಕ್ಕೂ ಮೊದಲು
ಅಜ್ಜಾವರ ಹೈಸ್ಕೂಲಿನ ವಿಶಾಲವಾದ
ಗ್ರೌಂಡ್ನಲ್ಲಿ ಇದ್ದ ಏರು
ತಗ್ಗುಗಳನ್ನು ಜೆಸಿಬಿ ತರಿಸಿ
ರಾತ್ರಿ ಹಗಲು ಕೆಲಸದ ಮೂಲಕ ಸರಿ
ಮಾಡಿಸಿದ್ದು ಗಂಗಮಾರೇಗೌಡರು
ಹೆಚ್ಎಂ ಆಗಿದ್ದಾಗ.
ಆದರೆ ಹೀಗೆ ಕೆಲಸ ಮಾಡಿದ್ದಕ್ಕೆ
ಗಂಗಮಾರೇಗೌಡರ ವಿರುದ್ಧವೇ ಒಂದಷ್ಟು
ಆಪಾದನೆಗಳನ್ನು ಮಾಡಿದ್ದರು ಎಂದು
ನೆನಪು. ಇದರ
ಜೊತೆಗೆ ನಮ್ಮ ಊರಲ್ಲಿ ಕಾಂಗ್ರೆಸ್-ಬಿಜೆಪಿ
ಅಂತ ದೊಡ್ಡ ಮಟ್ಟದ ರಾಜಕಾರಣ ಬೇರೆ.
ಇಂತಹ ಸಂದರ್ಭದಲ್ಲೇ ವಾರ್ಷಿಕೋತ್ಸವ
ಆಚರಣೆಗೆ ಗಂಗಮಾರೇಗೌಡರು
ನಿರ್ಧರಿಸಿದ್ದರು.
ಆದರೆ ಅದನ್ನು ವಿರೋಧಿಸಿ ಒಂದು
ಗುಂಪು ವಾರ್ಷಿಕೋತ್ಸವದ ದಿನ
ಕಪ್ಪುಬಾವುಟ ಪ್ರದರ್ಶಿಸುವ
ಬೆದರಿಕೆ ಹಾಕಿದ್ದರು.
ಈ ಗುಸುಗುಸು ವಿದ್ಯಾರ್ಥಿಗಳಾಗಿದ್ದ
ನಮಗೆಲ್ಲಾ ಒಂದು ರೀತಿಯ ಆತಂಕ
ಸೃಷ್ಟಿಸಿತ್ತು.
ಆದರೆ ವಿದ್ಯಾರ್ಥಿಗಳ ಮನಸ್ಸನ್ನು
ತಿಳಿಗೊಳಿಸುವ ದೃಷ್ಟಿಯಿಂದಲೋ
ಏನೋ (ಈಗ
ಯೋಚಿಸುವಾಗ ಹಾಗನ್ನಿಸುತ್ತದೆ)
ಕಲ್ಲಡ್ಕದ ಬೊಂಬೆಗಳು,
ಕೀಲು ಕುದುರೆ ತರಿಸಿ ನೀಲಗಿರಿ
ಅಡ್ಕದಿಂದ ಹೈಸ್ಕೂಲ್ವರೆಗೆ
ಸುಮಾರು ಅರ್ಧ ಕಿಲೋಮೀಟರ್
ಉದ್ದಕ್ಕೆ ವಾರ್ಷಿಕೋತ್ಸವದ
ಉದ್ಘಾಟನೆಗೂ ಮೊದಲು ಮೆರವಣಿಗೆ
ನಡೆಸಿದ್ದರು.
ಇದಾದ
ನಂತರ ವಾರ್ಷಿಕೋತ್ಸವದ ಉದ್ಘಾಟನೆ
ವೇಳೆ ಶಾಲೆಯ ವರದಿಯನ್ನು ಮಂಡಿಸಿ
ಗಂಗಮಾರೇಗೌಡರು ಅವತ್ತು ಒಂದು
ಭಾಷಣ ಮಾಡಿದ್ದರು.
ಕ್ಲಾಸ್ರೂಂನಲ್ಲಿ ಕೇಳುತ್ತಿದ್ದ
ಕಂಚಿನ ಕಂಠ ಅವತ್ತು ಇನ್ನಷ್ಟು
ಸ್ಪಷ್ಟವಾಗಿ,
ಅಧಿಕಾರಯುತವಾಗಿ,
ವಿಶ್ವಾಸದಿಂದ ಮೊಳಗಿತ್ತು.
‘ಒಬ್ಬ ಸರ್ಕಾರಿ ನೌಕರನಾಗಿ
ಕರ್ನಾಟಕದ ಯಾವುದೇ ಮೂಲೆಯಲ್ಲಿ
ಕೆಲಸ ಮಾಡಲು ನಾನು ತಯಾರಿದ್ದೇನೆ...'
ಎಂದು ಗೌಡರು ಹೇಳಿದ್ದರು.
ಇದು ಕಪ್ಪುಬಾವುಟ ಪ್ರದರ್ಶಿಸುವ,
ಚಿಲ್ರೆ ಪಾಲಿಟಿಕ್ಸ್
ಮಾಡುವವರಿಗೆ ಗಂಗಮಾರೇಗೌಡರು
ಕೊಟ್ಟ ಎಚ್ಚರಿಕೆಯಂತಿತ್ತು.
ಅಂದಿನ ನಂತರ ಮತ್ತೆಂದೂ
ಗಂಗಮಾರೇಗೌಡರ ವಿರುದ್ಧ ಆಪಾದನೆ
ಮಾಡುವ ಧೈರ್ಯ ಪ್ರದರ್ಶಿಸಿದ್ದು
ನಾನು ಕಂಡಿಲ್ಲ.
ಅವರ ಅವಧಿಯಲ್ಲೇ ತಾಲೂಕು ಮಟ್ಟದ
ಕ್ರೀಡಾಕೂಟ,
ಜಿಲ್ಲಾ ಮಟ್ಟದ ಯೋಗ ಸಮ್ಮೇಳನ,
ಶಾಲಾ ವಾರ್ಷಿಕೋತ್ಸವ ಹೀಗೆ
ಸಾಲು ಸಾಲು ಕಾರ್ಯಕ್ರಮಗಳು
ನಡೆದಿದ್ದವು.
ಒಂದು ರೀತಿಯಲ್ಲಿ ಅಜ್ಜಾವರ
ಪ್ರೌಢಶಾಲೆಯ ಸುವರ್ಣ ದಿನಗಳವು.
ಅದೇ ಸಂದರ್ಭದಲ್ಲಿ ನಾನು
ಅಲ್ಲಿನ ವಿದ್ಯಾರ್ಥಿ.
ಶಿಕ್ಷಕರ
ದಿನಾಚರಣೆಯ ಸಂದರ್ಭದಲ್ಲಿ ಇದೆಲ್ಲಾ
ನೆನಪಾಯಿತು.
ಗಂಗಮಾರೇಗೌಡರ ರೀತಿಯಲ್ಲೇ
ನನ್ನನ್ನು ತಿದ್ದಿತೀಡಿ ಪ್ರಭಾವಿಸಿದ
ಎಲ್ಲಾ ಗುರುಗಳಿಗೂ ಶಿಕ್ಷಕರ
ದಿನಾಚರಣೆಯ ಶುಭಾಶಯ.