Thursday, May 1, 2014

ಕುಮಾರಸ್ವಾಮಿ ಮತ್ತು ಚುನಾವಣೆ

ಇದನ್ನು ತುಂಬ ದಿನಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಬರೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆಯ ಬ್ಯುಸಿಯ ನಡುವೆ ಬರೆಯಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಮುಗಿದು ರಿಸಲ್ಟ್‌ಗಾಗಿ ಎದುರು ನೋಡುತ್ತಿರುವಾಗ ಬರೆಯೋದು ಸೂಕ್ತ ಅನ್ನಿಸಿತ್ತು.

ವಿಷಯ ಇಷ್ಟೆ. ಈ ಬಾರಿ ಮತ್ತೆ ಲೋಕಸಭೆ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.2009ರಲ್ಲೂ ಕುಮಾರಸ್ವಾಮಿ ಸ್ಪರ್ಧಿಸಿದ್ದರು. 2013ರಲ್ಲಿ ಕುಮಾರಸ್ವಾಮಿ ವಿಧಾನಸಭೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೇಲೆ ಉಪಚುನಾವಣೆ ಹೇರಿದ್ದರು. ಇದಕ್ಕೆ ಮುಂಚೆ 2009ರಲ್ಲಿ ರಾಮನಗರದ ವಿಧಾನಸಭಾ ಕ್ಷೇತ್ರದ ಮೇಲೂ ಉಪಚುನಾವಣೆ ಹೇರಿದ್ದರು. ಈಗ ಅವರಿಗೆ ಚಿಕ್ಕಬಳ್ಳಾಪುರದಿಂದ ಅರ್ಜೆಂಟಾಗಿ ಎಂಪಿಯಾಗುವ ಉತ್ಸಾಹ ಬಂದು ಚುನಾವಣೆಗೆ ಧುಮುಕಿಯಾಗಿದೆ. ಮತದಾರನ ತೀರ್ಪು ಮತಪೆಟ್ಟಿಗೆಯಲ್ಲಿ ಅಡಗಿದೆ. ಕುಮಾರಸ್ವಾಮಿ ಇಲ್ಲಿ ಗೆದ್ದರೆ ಮತ್ತೆ ರಾಮನಗರಕ್ಕೆ ಉಪಚುನಾವಣೆ ನಡೆಯುತ್ತೆ. ಅಲ್ಲಿಗೆ ರಾಮನಗರದ ಶಾಸಕ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಹಿತಾಸಕ್ತಿಗಾಗಿ ಐದು ವರ್ಷಗಳ ಅಂತರದಲ್ಲಿ ಆ ಕ್ಷೇತ್ರದ ಜನರು ಐದು ಬಾರಿ ಚುನಾವಣೆಯನ್ನು ಎದುರಿಸುವಂತಹ ಕೊಡುಗೆಯನ್ನು ಕೊಟ್ಟಂತಾಗುತ್ತೆ.

ಇಷ್ಟಕ್ಕೂ ಕುಮಾರಸ್ವಾಮಿಯವರು ಎಂಪಿಯಾಗಿ ಗೆದ್ದರೆ ಏನು ಪ್ರಯೋಜನ. ಒಂದು ವೇಳೆ ಅವರದೇ ಲೆಕ್ಕಾಚಾರದಂತೆ ಹೇಳೋದಾದರೆ ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದರೆ ಜೆಡಿಎಸ್ ಕೋಟಾದಡಿಯಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದು. ಇದೆ ಲೆಕ್ಕಾಚಾರದ ಅಡಿಯಲ್ಲಿ ಅವರು 2009ರಲ್ಲೂ ಲೋಕಸಭೆಗೆ ಸ್ಪರ್ಧಿಸಿದ್ದರು. ಚುನಾವಣೆ ಫಲಿತಾಂಶಕ್ಕೂ ಮೊದಲೇ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ್ದರು. ಯುಪಿಎ ಸರ್ಕಾರಕ್ಕೆ ಪೂರ್ಣ ಬಹುಮತ ಬರದಿದ್ದಾಗ ಜೆಡಿಎಸ್ ಆರಂಭದಲ್ಲೇ ಭೇಷರತ್ ಬೆಂಬಲ ಘೋಷಿಸಿದ್ದು. ಅಷ್ಟೆಲ್ಲಾ ಮಾಡಿದ್ರೂ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರನ್ನು ಸರ್ಕಾರ ರಚನೆಯ ವೇಳೆ ಗಣನೆಗೆ ತೆೆಗದುಕೊಳ್ಳಲಿಲ್ಲ. ಮಂತ್ರಿ ಮಾಡಲಿಲ್ಲ. ಅದಾದ ನಂತರದ ಘಟನೆಗಳನ್ನು ಮೆಲುಕು ಹಾಕುವುದು ಈಗ ಸೂಕ್ತ.

ಕೇಂದ್ರದಲ್ಲಿ ಸಚಿವರಾಗದ ಮೇಲೆ ಕುಮಾರಸ್ವಾಮಿಯವರಿಗೆ ತಾವು ಯಾಕಾದರೂ ಸಂಸದನಾದೆನೋ ಎಂಬ ಜಿಗುಪ್ಸೆ ಶುರುವಾಗಿತ್ತು. ಯಡಿಯೂರಪ್ಪ ಸರ್ಕಾರದ ವಿರುದ್ಧ ಸದನದ ಒಳಗೆ ಮಾತನಾಡುವ ಅವಕಾಶ ಕೈ ತಪ್ಪಿ ಹೋಗಿದ್ದಕ್ಕೆ ಅನೇಕ ಬಾರಿ ಸುದ್ದಿಗೋಷ್ಟಿಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸಂಸದನಾಗಿ ತಾವು ಮಾಡುವಂತದ್ದೂ ಕೇಂದ್ರದಲ್ಲಿ ಏನೂ ಇಲ್ಲ ಎಂದು ಅರಿವಾದ ಮೇಲೆ ರಾಜ್ಯದಲ್ಲೇ ಉಳಿದು ರಾಜ್ಯ ಸರ್ಕಾರದ ವಿರುದ್ಧ ನಿರಂತರ ಟೀಕೆ ಆರಂಭಿಸಿದ್ದರು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಭೂ ಹಗರಣವನ್ನು ಮೊದಲ ಬಾರಿಗೆ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕುಳಿತೇ ಮಾಧ್ಯಮದ ಮುಂದೆ ಬಿಚ್ಚಿಟ್ಟರು. 2010 ಅಕ್ಟೋಬರ್ ತಿಂಗಳಲ್ಲಿ ಯಡಿಯೂರಪ್ಪ ವಿರುದ್ಧ ಅವರ ಪಕ್ಷದ ಶಾಸಕರು ತಿರುಗಿಬಿದ್ದಾಗ ಅವರ ಬೆಂಬಲಕ್ಕೆ ಕುಮಾರಸ್ವಾಮಿ ನಿಂತರು. ಗೋವಾದಲ್ಲಿ ಹೋಗಿ ಭೇಟಿ ಮಾಡಿ ಬಂದಿದ್ದರು. ಸರ್ಕಾರ ಏನಾದ್ರೂ ಉರುಳಿದರೆ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆಯ ಕನಸುಗಳನ್ನು ಕಂಡರು. ಕೊನೆಗೆ ಬಿಜೆಪಿಯ 16 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದಾಗ ಅವರ ಬೆನ್ನಿಗೂ ನಿಂತರು. ಆದರೆ ಶಾಸಕರ ಅನರ್ಹತೆ ಬಿಟ್ಟರೆ ಆ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರಿಗೆ ಬೇರೇನೂ ಲಾಭವಾಗಲಿಲ್ಲ. ಅಧಿಕಾರದ ಆಸೆಗಾಗಿ ಕುಮಾರಸ್ವಾಮಿ ಇಷ್ಟೆಲ್ಲಾ ಮಾಡಿದ್ರು ಅನ್ನೋ ಟೀಕೆಯನ್ನು ಎದುರಿಸಬೇಕಾಯಿತು.

ಇದೆಲ್ಲಾ ಈಗ ಮುಗಿದ ಅಧ್ಯಾಯ. ಮುಂದೆ 2013ರಲ್ಲಿ ವಿಧಾನಸಭೆ ಚುನಾವಣೆ ಎದುರಾದಾಗ ಕುಮಾರಸ್ವಾಮಿ ಇನ್ನಿಲ್ಲದಂತೆ ಶ್ರಮವಹಿಸಿ ಪಕ್ಷ ಸಂಘಟನೆಗೆ ದುಡಿದ್ರು. ಬಹುಷಃ ಚುನಾವಣೆಗೂ ಮೊದಲು ಸುಮಾರು ನಾಲ್ಕೈದು ತಿಂಗಳು ಅವರು ಎರಡು ರಾತ್ರಿಯನ್ನು ಒಂದೇ ಕಡೆ ಕಳೆದಿರಾರರು. ಇಡೀ ರಾಜ್ಯದ ಉದ್ದಗಲಕ್ಕೆ ಓಡಾಡಿದ್ರು. ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿದ್ರು. ತಮ್ಮ ಪಕ್ಷಕ್ಕೆ ಏನೂ ಲಾಭವಾಗುವುದಿಲ್ಲ ಅಂತ ಗೊತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಸಂಘಟನೆಗಾಗಿ ದುಡಿದ್ರು. ಇದೆಲ್ಲದರ ಫಲವಾಗಿ 2008ರಲ್ಲಿ 28 ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಎಲ್ಲಾ ಸಮೀಕ್ಷೆಗಳನ್ನು ಸುಳ್ಳಾಗಿಸಿ 40 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕರಾಗಿಯೂ ಆಯ್ಕೆಯಾದರು. ಬಹುಷಃ ವಿಪಕ್ಷ ನಾಯಕರಾಗಿಯೇ ಮುಂದುವರೆಯಲು ಅವಕಾಶ ಸಿಗುತ್ತಿದ್ದರೆ ಕುಮಾರಸ್ವಾಮಿ ಲೋಕಸಭೆ ಕಡೆಗೆ ಯೋಚನೆ ಮಾಡಿರಲಾರರು. ಆದರೆ ಬಿಜೆಪಿ- ಕೆಜೆಪಿ ಒಂದಾದ ಮೇಲೆ ಕುಮಾರಸ್ವಾಮಿಯವರ ವಿರೋಧ ಪಕ್ಷ ನಾಯಕ ಸ್ಥಾನವೂ ಕಳೆದುಹೋಯಿತು. ಇದೆಲ್ಲದರ ಫಲವಾಗಿ ಕುಮಾರಸ್ವಾಮಿ ಈಗ ಮತ್ತೊಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಲೆಕ್ಕಾಚಾರದಂತೆ ಅವರು ಈ ಚುನವಾಣೆಯಲ್ಲಿ ಗೆದ್ದು, ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದರೆ ಅವರು ಕೇಂದ್ರದಲ್ಲಿ ಸಚಿವರಾಗಬಹುದು.

ಯಾವುದೇ ಒಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರವಿಲ್ಲದೆ ದೀರ್ಘಕಾಲ ಸಂಭಾಳಿಸಿಕೊಂಡು ಹೋಗುವುದು ಸುಲಭವಲ್ಲ. ಹೀಗಾಗಿ ಕುಮಾರಸ್ವಾಮಿಯವರು ಒಂದು ವೇಳೆ ಕೇಂದ್ರದಲ್ಲಿ ತಮಗೆ ಅಧಿಕಾರ ಸಿಕ್ಕರೆ ಆಗ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ನೆರವಾಗಬಹುದು ಅಂತ ಲೆಕ್ಕಾಚಾರ ಹಾಕಿದ್ದರೆ ಪ್ರಸಕ್ತ ರಾಜಕೀಯ ದೃಷ್ಟಿಯಿಂದ ಅದು ಸರಿ ಅಂತ ಹೇಳಬಹುದು. ಆದರೆ ಅಲ್ಲಿ ಅಧಿಕಾರ ಸಿಗದಿದ್ದರೆ. ಆಗ ಮುಂದೇನು. ಕುಮಾರಸ್ವಾಮಿಯವರು ಗೆದ್ದರೆ ಸಂಸತ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತಾರಾ..? ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರಾ...? ರಾಜ್ಯದ ಪರ ಸಂಸತ್‌ನ ಒಳಗೆ ಹೋರಾಟ ಮಾಡ್ತಾರಾ...? ಈ ಎಲ್ಲಾ ಪ್ರಶ್ನೆಗಳಿಗೆ ಇತಿಹಾಸ ನೋಡಿದ್ರೆ ಹೌದು ಅನ್ನುವ ಉತ್ತರ ಸಿಗುವುದಿಲ್ಲ. ಅದೇನಿದ್ದರೂ ದೇವೇಗೌಡರಿಗಷ್ಟೇ ಸೀಮಿತ ಅನ್ನುವ ತೀರ್ಮಾನಕ್ಕೆ ಬಂದು ರಾಜ್ಯ ರಾಜಕಾರಣದ ವಿಚಾರದಲ್ಲಿ ಕುಮಾರಸ್ವಾಮಿ ಬ್ಯುಸಿಯಾಗುವ ಸಾಧ್ಯತೆಯೇ ಹೆಚ್ಚು.

ಇನ್ನೊಂದು ಅಂಶದ ಬಗ್ಗೆ ಇಲ್ಲಿ ಹೇಳಲೇ ಬೇಕು. ಕುಮಾರಸ್ವಾಮಿಯವರ ರಾಜಕಾರಣದ ಹಾದಿ ಹೀಗಿ ಸಾಗುತ್ತಿದ್ದರೆ ಅತ್ತ ಅವರ ತಂದೆ ದೇವೇಗೌಡರ ರಾಜಕಾರಣದ ಶೈಲಿಯನ್ನು ನೋಡಿ. ಅವರು ಮುಖ್ಯಮಂತ್ರಿಯಾಗಿದ್ದದ್ದು ಕೇವಲ 18 ತಿಂಗಳು. ಪ್ರಧಾನಿಯಾಗಿ 11 ತಿಂಗಳಿದ್ದರು. ಹಾಗಿದ್ದರೂ ಅವರು ಒಂದು ಸಮುದಾಯದ ಪ್ರಬಲ ನಾಯಕನಾಗಿ ಉಳಿದುಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಹೋರಾಟ. ಜನರ ಹೋರಾಟಗಳ ಜೊತೆಗೆ ( ಅದು ರಾಜಕೀಯ ಉದ್ದೇಶದಿಂದಲೇ ಕೂಡಿರಬಹುದು) ದೇವೇಗೌಡರು ಹೆಜ್ಜೆ ಹಾಕಿದ್ದಾರೆ. ಅವರ ಬಳಿಗೆ ನೇರವಾಗಿ ಜನ ಬಂದು ಅಪ್ಪಿಕೊಂಡು ಪ್ರೀತಿ ತೋರುವುದಿಲ್ಲ. ಆದರೆ ದೇವಗೌಡರು ಜನರಿದ್ದ ಕಡೆಗೆ ಹೋಗುತ್ತಾರೆ. ಅವರ ನಡುವೆ ಕುಳಿತುಕೊಳ್ಳುತ್ತಾರೆ. ಅವರ ಜೊತೆಗೆ ಹೆಜ್ಜೆಹಾಕುತ್ತಾರೆ. ಅವರಿಗೆ ಧ್ವನಿಯಾಗುತ್ತಾರೆ.

ಆದರೆ ಕುಮಾರಸ್ವಾಮಿಯವರದ್ದು ಇಲ್ಲಿ ವ್ಯತಿರಿಕ್ತ ನಿಲುವು. ಅವರ ಹೋರಾಟಗಳೇನಿದ್ದರೂ ಬಹುತೇಕ ಮಾಧ್ಯಮಗಳ ಸುದ್ದಿ ಗೋಷ್ಟಿಗೆ, ದಾಖಲೆಗಳ ಬಿಡುಗಡೆಗೆ ಸೀಮಿತ. ಇತ್ತೀಚೆಗೆ ಚಿಕ್ಕಮಗಳೂರಿನ ಕಳಸಾದಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ಅಲ್ಲಿನ ನಿವಾಸಿಗಳ ಪರವಾಗಿ ರಸ್ತೆಗಿಳಿದಿದ್ದನ್ನು ಬಿಟ್ಟರೆ ಕುಮಾರಸ್ವಾಮಿಯವರ ಹೋರಾಟಗಳು ಜನರ ನಡುವೆ ಹೆಚ್ಚಾಗಿ ಕಾಣಿಸುವುದಿಲ್ಲ. ಅವರು ಹೋದಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಾರೆ. ಅವರ ಕೈ ಕುಲುಕುತ್ತಾರೆ.  ಜನಪ್ರಿಯತೆಯಿದೆ. ಆದರೆ ಅದು ವೋಟಾಗೋದಿಲ್ಲ. ಯಾಕಂದ್ರೆ ಅವರ ಬಗ್ಗೆ ಪ್ರೀತಿಯಿದ್ದರೂ ಕುಮಾರಸ್ವಾಮಿ ಜನರ ನಡುವೆ ಇಳಿದು ಮಾಡಿರುವ ಕೆಲಸಗಳು, ಹೋರಾಟಗಳು ವೋಟು ಹಾಕುವ ಮತದಾರನ ಕಣ್ಣಿಗೆ ಕಾಣುವುದಿಲ್ಲ. ಇದಕ್ಕಾಗಿ ಅವರು ಮತಹಾಕುವುದಿಲ್ಲ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕುಮಾರಸ್ವಾಮಿಯವರ 20 ತಿಂಗಳ ಆಡಳಿತ ಅವಧಿಯ ಬಗ್ಗೆ ಮಾತನಾಡುವ ಜನ ಸಿಗ್ತಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ಆದರೆ ಕುಮಾರಸ್ವಾಮಿಗೆ ಚುನಾವಣೆ ಹತ್ತಿರವಾಗುವವರೆಗೆ ಜನರ ನಡುವೆ ಇಳಿದು ಕೆಲಸ ಮಾಡುವುದಿಲ್ಲ. ಯಾವುದೋ ಕಾರ್ಯಕ್ರಮಗಳಿಗೆ ಹೋಗಿ ಬರೋದನ್ನೇ ರಾಜ್ಯ ಪ್ರವಾಸ ಅಂತ ಪರಿಗಣಿಸುತ್ತಾರೆ. ಅವರ ಬಳಿ ಬಂದು ಜನ ತೋಡಿಕೊಳ್ಳುವ ಸಮಸ್ಯೆಯನ್ನೇ ಬಹುವಾಗಿ ಜನರ ಸಮಸ್ಯೆ ಅಂತಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ ಮಾಡಿದ್ದವರು ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಅದನ್ನು ಮಾಡಲು ಹೋಗುವುದಿಲ್ಲ.ಈಗ ಇದೆಲ್ಲವನ್ನೂ ಬಿಟ್ಟು ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದು ಕುಮಾರಸ್ವಾಮಿಯವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಹಪಹಪಿಯನ್ನು ತೋರಿಸಿದೆ.

ಕುಮಾರಸ್ವಾಮಿಯವು ಅವಕಾಶಗಳನ್ನು ಅರಸುತ್ತಾ ಹೋಗುತ್ತಾರೆ. ಆದರೆ ಅವಕಾಶಗಳು ತಮ್ಮ ಕಾಲುಬುಡಕ್ಕೆ ಬರುವಂತೆ ಮಾಡುವುದಿಲ್ಲ. ಬಹುಷಃ ಅವರು ಮುಖ್ಯಮಂತ್ರಿಯಾಗಿದ್ದೂ ಅವಕಾಶಗಳನ್ನು ಅರಸುತ್ತಾ ಹೋಗಿದ್ದರಿಂದಲೇ. ದೇವೇಗೌಡರ ರೀತಿಯಲ್ಲಿ ತಮ್ಮದೇ ದುಡಿಮೆಯಿಂದ ಅಧಿಕಾರ ಅವರ ಕೈಗೆ ಬಂದಿಲ್ಲವಲ್ಲ!