Sunday, December 21, 2014

ದೇವನೂರು, ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಮಾಧ್ಯಮ

ದೇವನೂರು ಮಹಾದೇವರು ಸಕಾರಣಕ್ಕಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದ್ದಾರೆ. ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಕಲಿತು, ಬೆಂಗಳೂರಿನಲ್ಲಿ ನೆಲೆಸಿರುವ ನನ್ನಂತವರಿಗೆ ದೇವನೂರರ ಮಾತುಗಳು ಆದರ್ಶ ಅಷ್ಟೇ ಅಲ್ಲ ವ್ಯವಸ್ಥೆ ಸರಿಪಡಿಸಲು ಇರುವ ಪ್ರಮುಖ ಅಸ್ತ್ರವಾಗಿ ಕಂಡುಬರುತ್ತೆ. ಆದರೆ ವ್ಯವಸ್ಥೆ ಸರಿಯಾಗುತ್ತೆ ಅಂತ ನಾವು ಕನಸು ಕಾಣುವಷ್ಟು ಅಪ್ಯಾಯಮಾನವಾಗಿಲ್ಲ ಈಗಿನ ಪರಿಸ್ಥಿತಿ. ಆದರೂ ಕನ್ನಡಕ್ಕಾಗಿ ಮೊಳಗುವ ಗಟ್ಟಿ ದನಿ ನನ್ನಂತವರಿಗಂತೂ ಆಶಾದಾಯಕ.

ಒಂದರಿಂದ ಹತ್ತನೇ ತರಗತಿವರೆಗಿನ ಶಿಕ್ಷಣ ಮಾತೃಭಾಷೆಯಲ್ಲಿ ನಡೆಯಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸಾಹಿತಿಗಳು ಈ ವಿಚಾರವನ್ನು ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಸಾಲಿನಲ್ಲಿ ಈ ವಿಚಾರ ಅಗ್ರಸ್ಥಾನ ಪಡೆದುಕೊಳ್ಳುತ್ತೆ. ಸಮ್ಮೇಳನಾಧ್ಯಕ್ಷರು ವಾಡಿಕೆಯೆಂಬಂತೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮ ಕಡ್ಡಾಯಗೊಳ್ಳಬೇಕು. ಆಂಗ್ಲ ಮಾಧ್ಯಮ ಹಾವಳಿಯನ್ನು ತಪ್ಪಿಸಬೇಕು ಎಂಬಿತ್ಯಾದಿ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಹೀಗೆ ಹೇಳಿರುವ ಎಲ್ಲಾ ಸಮ್ಮೇಳನಾಧ್ಯಕ್ಷರಿಗೂ ಕನ್ನಡದ ಬಗ್ಗೆ ಅದೇ ಪ್ರೀತಿ, ಕಾಳಜಿ ಇತ್ತು ಅನ್ನೋದನ್ನು ಅಲ್ಲಗಳೆಯಲಾಗದು. ಇಷ್ಟೆಲ್ಲಾ ಇದ್ದರೂ, ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯವಾಗಿ ಸರ್ವಾನುಮತದಿಂದ ಅಂಗೀಕಾರಗೊಂಡರೂ ನಮ್ಮ ಆಳುವ ಸರ್ಕಾರಗಳು ಇದರ ಬಗ್ಗೆ ಸೊಲ್ಲೆತ್ತದೆ ಇರೋದು ಯಾಕೆ? ಇದಕ್ಕೆ ಕಾರಣ ಕೇವಲ ಶಿಕ್ಷಣ ಲಾಬಿಯೇ? ನಮ್ಮಲ್ಲಿರುವ ಕಮರ್ಷಿಯಲ್‌ ಮೈಂಡ್‌ ಸೆಟ್ಟೇ? ಜಾಗತಿಕ ಪೈಪೋಟಿಯ ನಡುವೆ ನಮ್ಮ ಮಕ್ಕಳು ಹಿಂದೆ ಬೀಳಬಾರದು ಅನ್ನೋ ಮುಂದಾಲೋಚನೆಯೇ? ಈ ರೀತಿಯ ಹಲವು ಪ್ರಶ್ನೆಗಳು ಹಲವು ಸಂದರ್ಭಗಳಲ್ಲಿ ಹುಟ್ಟಿ ದೊಡ್ಡ ಚರ್ಚೆಯಾಗಿವೆ. ಆದರೆ ಇದಕ್ಕಿನ್ನೂ ಇದಮಿತ್ತಂ ಅನ್ನೋ ಉತ್ತರ ಸಿಕ್ಕಿಲ್ಲ.

ಈಗಲೇ ನಾವು ನಿರ್ಧಾರವಾಗಿ ಹೇಳಬಹುದು. ಹಾಸನದ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಸಮ್ಮೇಳನದಲ್ಲೂ ಇದೇ ವಿಚಾರದ ಮೇಲೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗುತ್ತದೆ. ಇದರಲ್ಲಿ ನಮಗೆ ಯಾವುದೇ ಅನುಮಾನಬೇಕಿಲ್ಲ. ಹಾಗಿದ್ದರೆ ದೇವನೂರು ಮಹಾದೇವರು ಯಾಕೆ ಅಧ್ಯಕ್ಷತೆ ನಿರಾಕರಿಸಿದ್ರು. ಇದರಿಂದ ಏನು ಸಾಧನೆ ಮಾಡಿದಂತಾಗುತ್ತೆ ಅನ್ನೋ ಮಾತುಗಳ ಬಗ್ಗೆಯೂ ಈಗಾಗಲೇ ಚರ್ಚೆಯಾಗಿದೆ. ದೇವನೂರು ಹೇಳಿರುವ ಮಾತುಗಳನ್ನು ಬೆಂಬಲಿಸುತ್ತಲೇ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಅನ್ನೋ ಒತ್ತಾಸೆಯನ್ನು ಅನೇಕ ಹಿರಿಯರು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದ್ದಾರೆ. ಕಾಳಜಿ ತೋರಿದ್ದಾರೆ. ದೇವನೂರು ನೇತೃತ್ವದಲ್ಲೇ ಕನ್ನಡ ಮಾಧ್ಯಮ ಪರವಾದ ಹೋರಾಟ ಶುರುವಾಗಲಿ ಎಂಬಿತ್ಯಾದಿ ಮಾತಗಳು ವ್ಯಕ್ತವಾಗಿ ಹೋಗಿವೆ. ಆದರೆ ದೇವನೂರು ನನ್ನಂತವರನ್ನು ನಿರಾಶೆ ಮಾಡಿಲ್ಲ. ಅವರ ನಿಲುವಿನಲ್ಲಿ ಬದಲಾವಣೆ ಆಗಿಲ್ಲ.

ಆದರೆ ಈಗ ಅದೇಕೋ ಸಾಹಿತ್ಯ ವಲಯದ ಹಿರಿಯ ಸಾಹಿತಿಗಳ ಸಾಲಿನಲ್ಲಿ ದೇವನೂರು ಮಹಾದೇವ ಅವರದ್ದು ಒಂಟಿ ಧ್ವನಿ ಅಂತ ಅನ್ನಿಸುತ್ತದೆ. ಯಾಕಂದ್ರೆ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ನೃಪತುಂಗ ಪ್ರಶಸ್ತಿಯನ್ನು ದೇವನೂರು ಮಹಾದೇವ ನಿರಾಕರಿಸಿದ್ರು. ಇದು ಐದು ಲಕ್ಷ ರುಪಾಯಿಯ ದೊಡ್ಡ ಮೊತ್ತವನ್ನು ಒಳಗೊಂಡಿರುವ ಪ್ರಶಸ್ತಿ. ನೃಪತುಂಗನ ಹೆಸರಿನ ಜೊತೆಗೆ ದೊಡ್ಡ ಮೊತ್ತ ಸೇರಿಕೊಂಡಿದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿ. ಹೀಗಾಗಿ ಇದು ಕನ್ನಡದ ಪಾಲಿಗೆ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿ ನೀಡುವ ನಿರ್ಧಾರ ಪ್ರಕಟವಾದ ಸಂದರ್ಭದಲ್ಲಿ ನಾನು ವರದಿ ಮಾಡಿದ್ದೆ. ಆಗ ವ್ಯಕ್ತವಾದ ಅಭಿಪ್ರಾಯ ಐದು ಲಕ್ಷದ ಒಂದು ರುಪಾಯಿ ನಗದು ಮೊತ್ತವನ್ನು ಹೊಂದಿರುವ ಈ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಗಿಂತಲೂ ಸ್ವಲ್ಪ ದೊಡ್ಡದ್ದೇ ಅನ್ನೋದು. ಅದೇನೇ ಇರಲಿ. ಪ್ರಶಸ್ತಿಗಳು ಬರುತ್ತವೆ ಹೋಗುತ್ತವೆ. ಯಾವುದೇ ಸಾಹಿತಿಗೆ ಪ್ರಶಸ್ತಿ ಬಂದರೂ ನನ್ನಂತ ಓದುಗರಿಗೆ ಖುಷಿಯೇ. ಇಂತಿಪ್ಪ ಪ್ರತಿಷ್ಟಿತ ಪ್ರಶಸ್ತಿಯನ್ನು ದೇವನೂರು ನಿರಾಕರಿಸಿದ್ರು. ಆಗಲೂ ಅವರು ಹೇಳಿದ್ದು ಕನ್ನಡ ಒಂದರಿಂದ ಹತ್ತನೇ ತರಗತಿವರೆಗೆ ಕಲಿಕಾ ಮಾಧ್ಯಮವಾಗುವವರೆಗೆ ನಾನು ಇದನ್ನು ಸ್ವೀಕರಿಸೋದಿಲ್ಲ ಅಂತ. ತಮಾಷೆ ಅಂದ್ರೆ ದೇವನೂರು ನಿರಾಕರಿಸಿದ ಮೇಲೂ ಸಾಹಿತಿಗಳು ಅದೇ ಪ್ರಶಸ್ತಿಯನ್ನು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಜೊತೆಗೆ ಕಲಿಕಾ ಮಾಧ್ಯಮವಾಗಿ ಕನ್ನಡ ಜಾರಿಗೊಳ್ಳಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದವರು ಮತ್ತು ಅದನ್ನು ನಿರಾಕರಿಸಿದ ದೇವನೂರು ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಹೇಳಬೇಕಿಲ್ಲ. ಎಲ್ಲದಕ್ಕೂ ಒಂದೊಂದು ವಿವರಣೆಗೆಳು ಇದ್ದೇ ಇರುತ್ತವೆ.

ಈಗಲೂ ಅಷ್ಟೇ ದೇವನೂರು ನಿರಾಕರಿಸಿದ ತಕ್ಷಣ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಂತು ಹೋಗುವುದಿಲ್ಲ. ಸಾಹಿತ್ಯದ ಜಾತ್ರೆ ಯಥಾ ಪ್ರಕಾರ ಅದ್ದೂರಿಯಾಗಿ ನಡೆಯುತ್ತದೆ. ದೇವನೂರು ಬದಲು ಇನ್ನೊಬ್ಬ ಹಿರಿಯ ಸಾಹಿತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ. ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಗಳು ಆರಂಭವಾಗಿವೆ. ಅವರೂ ಕೂಡ ದೇವನೂರು ರೀತಿಯಲ್ಲಿ ನಿರಾಕರಿಸಲಿ ಅಂತ ನಾವು ನಿರೀಕ್ಷಿಸುವುದು ತಪ್ಪಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈಗಾಗ್ಲೇ ದೇವನೂರು ವಿಚಾರದ ಸುತ್ತಲೇ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಟಿಗಳನ್ನು ನಡೆಸುವ ಆಶಯ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮ ಜಾರಿಗಾಗಿ ಆಮರಣಾಂತ ಉಪವಾಸ ಸೇರಿದಂತೆ ಹೋರಾಟದ ಘೋಷಣೆ ಮಾಡಿದ್ದಾರೆ. ಅದೆಲ್ಲಾ ಮುಂದೆ ನಡೆಯಬಹುದಾದ ವಿಚಾರಗಳು. ಅದಕ್ಕೆ ನಾವು ಕಾಯಬೇಕು.

ಹಾಗಿದ್ದರೂ ದೇವನೂರು ಮಹಾದೇವ ವ್ಯಕ್ತಪಡಿಸಿರುವ ವಿಚಾರ ಅಷ್ಟು ಸುಲಭದಲ್ಲಿ ಕಾರ್ಯರೂಪಕ್ಕೆ ಬರುವಂತದ್ದಲ್ಲ. ಹಾಗಂತ ನಾವು ನಿರಾಶಾವಾದಿಗಳಾಗಬೇಕಿಲ್ಲ. ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಅನ್ನೋ ವಿಚಾರದಲ್ಲಿ ಸರ್ಕಾರದ ಮೇಲಿನ ಒತ್ತಡ ನಿರಂತರವಾಗಿ ಮುಂದುವರೆಯಲೇಬೇಕು. ಮಾತೃಭಾಷಾ ಶಿಕ್ಷಣ ಕಡ್ಡಾಯಗೊಳ್ಳಲೇಬೇಕು.


Wednesday, November 19, 2014

ಅಭಿಮನ್ಯು ಸಿನಿಮಾ ನೋಡುತ್ತಾ...

ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಅಭಿಮನ್ಯು ಸಿನಿಮಾದಲ್ಲಿ ಅರ್ಜುನ್ ಸರ್ಜಾ ಈ ಡೈಲಾಗ್‌ ಹೇಳುತ್ತಿದ್ದಂತೆ ನನ್ನ ನೆನಪು ಚಿತ್ರದುರ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಡೆಗೆ ಹೋಗಿತ್ತು. ಕಂಚಿನ ಕಂಠದ ಮಾತುಗಾರ ಪ್ರೊ.ಎಲ್‌.ಬಸವರಾಜು ಅವರು ಆಡಿದ್ದ ಮಾತುಗಳು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್‌ಗುಟ್ಟಿದಂತಾಯ್ತು.

ಅವತ್ತು ಸಮ್ಮೇಳಾನಾಧ್ಯಕ್ಷರಾಗಿದ್ದ ಪ್ರೊ.ಎಲ್‌.ಬಸವರಾಜು ಆಡಿದ್ದ ಮಾತುಗಳಿವು. ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಶಿಕ್ಷಣದಲ್ಲಿ ಖಾಸಗೀಕರಣಬೇಡ. ಶಿಕ್ಷಣ ರಾಷ್ಟ್ರೀಕರಣಗೊಂಡರೆ ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತೆ ಅನ್ನೋ ಆಶಯವನ್ನು ಸಮ್ಮೇಳನಾಧ್ಯಕ್ಷರು ಅವತ್ತು ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರು ಮುದ್ರಿತ ಭಾಷಣವನ್ನು ಓದುತ್ತಾರೆ. ಆದರೆ ಪ್ರೊ. ಎಲ್‌.ಬಸವರಾಜು ತಮ್ಮ ಸಿದ್ಧ ಭಾಷಣವನ್ನು ಓದಲಿಲ್ಲ. ನನ್ನ ಭಾಷಣವನ್ನು ಮಂಡಿಸಿದ್ದೇನೆ. ಇದನ್ನು ಹೇಗಿದ್ರೂ ಮಾಧ್ಯಮದವರು ಪ್ರಕಟಿಸುತ್ತಾರೆ. ಆದರೆ ಇದರಲ್ಲಿನ ಕೆಲ ಮುಖ್ಯ ವಿಚಾರಗಳನ್ನಷ್ಟೇ ನಾನು ಈಗ ಹೇಳುತ್ತೇನೆ ಅಂತ ನೇರವಾಗಿ ಮಾತಿಗಳಿದಿದ್ದರು. ಅವರು ಪ್ರಮುಖವಾಗಿ ಹೇಳಿದ್ದು ಶಿಕ್ಷಣದ ರಾಷ್ಟ್ರೀಕರಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಒಂದು ತಲೆಮಾರಿನ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಕೊಡಬೇಕು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘವನ್ನು ಸ್ವಾಯತ್ತ ಸಂಸ್ಥೆಗಳಾಗಿ ರೂಪಿಸಬೇಕು ಎಂದು ಹೇಳಿದ್ದರು.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲಭಾಷೆಯಿಂದಾಗಿ ಕನ್ನಡಕ್ಕೆ ಆಪತ್ತು ಬಂದಿದೆ. ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲೇ ಕೊಡಬೇಕು ಅನ್ನೋ ಸಿದ್ಧ ಆದರೆ ವೈಯಕ್ತಿಕವಾಗಿ ಬಹುತೇಕರು ಜಾರಿಗೊಳಿಸದ ವಿಚಾರವನ್ನು ಪ್ರೊ.ಎಲ್‌.ಬಸವರಾಜು ಪ್ರಸ್ತಾಪಿಸಿರಲಿಲ್ಲ. ಅವತ್ತು ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದರು ಅಂತ ನೆನಪು. ಆದರೆ ಅಂದು ಮುಖ್ಯಮಂತ್ರಿಗಳಿಂದಾಗಲಿ ಅಥವಾ ಸರ್ಕಾರದಿಂದಾಗಲೀ ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗಲಿಲ್ಲ. ಅದು ಮುಂದೆಯೂ ಜಾರಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ವಿಪರ್ಯಾಸವೆಂದರೆ ಅಂದು ಸಮ್ಮೇಳನದ ಸಂದರ್ಭದಲ್ಲಿ ಪ್ರೊ.ಎಲ್‌.ಬಸವರಾಜು ಹೇಳಿದ್ದ ಇಂತಹ ಗಂಭೀರ ವಿಚಾರದ ಬದಲು ಒಂದು ಜಾತಿಯವರು ಅವರು ಆದಿಕವಿ ಪಂಪನ ಬಗ್ಗೆ ತಮ್ಮ ವ್ಯಾಪಕ ಅಧ್ಯಯನದ ಆಧಾರದಲ್ಲಿ ಲಘು ಹಾಸ್ಯದ ಮೂಲಕ ಹೇಳಿದ್ದ ಮಾತುಗಳನ್ನೇ ಇಟ್ಟುಕೊಂಡು ಮಾರನೇ ದಿನ ಗಲಾಟೆ ಎಬ್ಬಿಸಿದ್ದರು. ಪ್ರತಿಭಟನೆ ನಡೆಸಿ ಪ್ರೊ.ಎಲ್.ಬಸವರಾಜು ಕ್ಷಮೆಯಾಚಿಸಬೇಕು ಅಂತೆಲ್ಲಾ ಬೊಬ್ಬೆ ಹೊಡೆದಿದ್ದರು. ಆದರೆ ಅವರು ಪ್ರಸ್ತಾಪಿಸಿದ್ದ ಗಂಭೀರ ವಿಚಾರಗಳಿಗೆ ಸಾರಸ್ವತ ಲೋಕದ ದಿಗ್ಗಜರಿಂದಲೇ ಒಕ್ಕೊರಲಿನ ದನಿ ಮೂಡಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯಲಿಲ್ಲ. ವಿಶೇಷ ಅಂದ್ರೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಪ್ರೊ.ಎಲ್‌.ಬಸವರಾಜು ಇದೇ ಒತ್ತಾಯವನ್ನು ಮಾಡಿದ್ದರು. ಒಂದರ್ಥದಲ್ಲಿ ಅದು ಸಮ್ಮೇಳನದಲ್ಲಿ ಒಂಟಿ ಧ್ವನಿಯಾಗಿತ್ತು.

ಶಿಕ್ಷಣದ ರಾಷ್ಟ್ರೀಕರಣ ಅಷ್ಟು ಸುಲಭವಾಗಿ ಜಾರಿಗೊಳ್ಳುವ ವಿಚಾರವಲ್ಲ. ಅದರಲ್ಲೂ 1991ರ ನಂತರ ದೇಶದಲ್ಲಿ ಬದಲಾಗಿರುವ ಆರ್ಥಿಕ ನೀತಿಯ ಸಂದರ್ಭದಲ್ಲಿ ಇದು ಮತ್ತಷ್ಟು ಕಷ್ಟ ಸಾಧ್ಯ. ಇವತ್ತು ಟಾಯ್ಲೆಟ್‌ ನಿರ್ಮಾಣಕ್ಕೂ ಪಿಪಿಪಿ ಮಾಡೆಲ್‌ ಯೋಚಿಸುವ ಸರ್ಕಾರಗಳು ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಿ ಆ ಭಾರವನ್ನು ಮೈಮೇಲೆ ಹಾಕಿಕೊಳ್ಳುತ್ತವೆಯೇ? ವಾಸ್ತವದ ನೆಲೆಗಟ್ಟಿನಲ್ಲಿ ಹೇಳೋದಿದ್ದರೆ ಇದು ಸಾಧ್ಯವಿಲ್ಲದ ಮಾತು. ಇಂದು ಶಿಕ್ಷಣ ಲಾಭಿಯಾಗಿ ಪರಿವರ್ತನೆಗೊಂಡು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೇ ದೇಶದ ಬಹುತೇಕ ರಾಜ್ಯಗಳಲ್ಲಿ ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಶಿಕ್ಷಣದ ರಾಷ್ಟ್ರೀಕರಣ ಸುಲಭ ಸಾಧ್ಯವಲ್ಲ
 
ಅದಿರಲಿ. ಈಗ ಮತ್ತೆ ಅಭಿಮನ್ಯು ಸಿನಿಮಾ ವಿಚಾರಕ್ಕೆ ಬರುತ್ತೇನೆ. ಸಿನಿಮಾದಲ್ಲಿ ಸಹಜವಾಗಿ ಹೀರೋ ಹೇಳುವ ಮಾತು ಹೊಸ ಐಡಿಯಾವಾಗಿ ಕಾಣಿಸಿಕೊಳ್ಳುತ್ತದೆ. ಇದೊಂದು ಹೊಸ ಕಾನ್ಸೆಪ್ಟ್‌ ಅನ್ನೋದು ಸಿನಿಮಾದ ಒಕ್ಕಣೆ. ಇದೆಲ್ಲಾ ಸಹಜ ಬಿಡಿ. ಆದರೆ ಈ ಕಾನ್ಸೆಪ್ಟ್‌ ಹೇಳುವ ಭರದಲ್ಲಿ ಅದಕ್ಕೆ ವ್ಯಕ್ತವಾಗುವ ವಿರೋಧದ ಬಗ್ಗೆಯೇ ಸಿನಿಮಾ ಬಹುಪಾಲು ಓಡುತ್ತೆ. ವಿಷಯವನ್ನು ಸರಳವಾಗಿ ಹೇಳುತ್ತಾ ಹೋಗುವಲ್ಲಿ ಅರ್ಜುನ್‌ ಸರ್ಜಾ ಸ್ಪಲ್ಪ ಎಡವಿದ್ದಾರೆ. ಸಿನಿಮಾಗೆ ಕಮರ್ಷಿಯಲ್‌ ಟಚ್‌ ನೀಡುವ ಭರದಲ್ಲಿ ಮೂಲ ಎಳೆಯಾಗಿ ಹರಿಯಬೇಕಿದ್ದ ಶಿಕ್ಷಣ ರಾಷ್ಟ್ರೀಕರಣ ಮರೆತುಬಿಟ್ಟಿದ್ದಾರೆ. ಕಮರ್ಷಿಯಲ್‌ ಅಂಶ ಹೆಚ್ಚು ರಾರಾಜಿಸುತ್ತಾ ಹೋಗುತ್ತೆ. ಹೀಗಾಗಿ ಸಿನಿಮಾ ಹೆಚ್ಚು ಕಾಡೋದಿಲ್ಲ. ವಿಷಯ ಗಂಭೀರವಾಗಿದ್ದು ಅದನ್ನು ಕಮರ್ಷಿಯಲ್‌ ಆಗಿಯೂ ಕೊಡಬೇಕು ಅನ್ನೋ ಆಯ್ಕೆಯಲ್ಲಿ ಕಮರ್ಷಿಯಲ್‌ ಮಾತ್ರ ಉಳಿದು ರವಾನೆಯಾಗಬೇಕಿದ್ದ ಸಂದೇಶ ಅರ್ಧದಲ್ಲೇ ಉಳಿದು ಬಿಟ್ಟಿದೆ.

ಹಾಗಿದ್ರೂ ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ಕೊಡಲು ಅರ್ಜುನ್‌ ಸರ್ಜಾ ಮಾಡಿರುವ ಪ್ರಯತ್ನಕ್ಕೆ ಮೆಚ್ಚಲೇಬೇಕು.

Friday, September 5, 2014

ತುರ್ತುಪರಿಸ್ಥಿತಿಯ ಕರಾಳ ನೆನಪು : ಪುತ್ರ ಶೋಕ

'ರಾಜನ್ ಮನೆಗೆ ಬಂದೇ ಬರುತ್ತಾನೆ ಎಂದು ದೃಢವಾಗಿ ನಂಬಿಕೊಂಡೆ. ರಾತ್ರಿ ವೇಳೆ ಮಗ ಹಸಿದು ಬಂದರೆ ಊಟವಿರಲಿ ಎಂದು ಪತ್ನಿಗೆ ತಿಳಿಸಿ ಊಟ ಇಟ್ಟುಕೊಂಡು ಕಾಯುತ್ತಿದ್ದೆ. ಹಸಿರಾದ ಚಿಗುರು ಬಾಳೆ ಎಲೆಯ ಮೇಲೆ ಅವನಿಗಾಗಿ ಹರಡಿದ ಹಬೆಯಾಡುತ್ತಿದ್ದ ಬಿಸಿಬಿಸಿ ಅನ್ನ ಆರಿ ತಣ್ಣಗಾಯಿತೆ ಹೊರತು ಮಗ ಮಾತ್ರ ಮನೆಗೆ ಬರಲಿಲ್ಲ. ಪ್ರತಿ ರಾತ್ರಿ ನಿದ್ದೆಗೆಟ್ಟು ಮಗನಿಗಾಗಿ ಬಾಗಿಲು ತೆರೆದು ಕಾಯುತ್ತಿದ್ದೆ. ಹೊರಗಡೆ ನಾಯಿಗಳು ಬೊಗಳುವ ಶಬ್ಧವಾದರೆ ಸಾಕು ಬಾಗಿಲ ಬಳಿ ಓಡೋಡಿ ಬರುತ್ತಿದ್ದೆ. ಎದೆಯೊಳಗೆ ಮಡುವುಗಟ್ಟಿದ ನೋವು ನಿಟ್ಟುಸಿರು ಇವುಗಳನ್ನು ತಾಳಲಾರದೆ ಒಮ್ಮೊಮ್ಮೆ "ಅಯ್ಯೋ ಮಗನೆ" ಎನ್ನುತ್ತಾ ಒಳಗೊಳಗೆ ಚೀರಿಡುತ್ತಾ ಗೋಳಿಡುತ್ತಿದ್ದೆ. ನಾನು ಮಗನ ಅಗಲಿಕೆಯ ಸಂಕಟವನ್ನು ತಾಳಲಾರದೆ ಗಟ್ಟಿಯಾಗಿ ಮನೆಯೊಳಗೆ ಅಳುವಂತಿರಲಿಲ್ಲ. ಏಕೆಂದರೆ ಮಗನ ಬಂಧನ ಸುದ್ದಿಯನ್ನಾಗಲಿ ಅಥವಾ ನಾಪತ್ತೆಯಾದ ಸಂಗತಿಯನ್ನಾಗಲಿ ಮನೆಯಲ್ಲಿ ಮಡದಿ ಮತ್ತು ಮಕ್ಕಳಿಗೆ ತಿಳಿಸಿರಲಿಲ್ಲ. ಒಡಲೊಳಗೆ ಬಾಯಿ ತೆರೆದಿದ್ದ ಅಗ್ನಿ ಪರ್ವತವನ್ನು ಹೊತ್ತುಕೊಂಡು ಹೊರಗಡೆ ತಣ್ಣನೆಯ ಹಿಮಪರ್ವತದಂತೆ ಮುಖ ಹೊತ್ತುಕೊಂಡು ಬದುಕುವ ಸ್ಥಿತಿ ನನ್ನದಾಗಿತ್ತು. '

ಪೊ.ಈಚಾರ ವಾರಿಯರ್‌ ಅವರ ಈ ಮಾತುಗಳನ್ನು ಓದುತ್ತಾ ಹೋದರೆ ಮಗನನ್ನು ಕಳಕೊಂಡು, ಮಗನಿಗಾಗಿ ಹುಡುಕುತ್ತಾ, ಮನೆಯವರಿಗೂ ತಿಳಿಸಲಾಗದೆ ತೊಳಲಾಡುತ್ತಾ ಸಾಗಿದ್ದ ಅವರ ಪರಿಸ್ಥಿತಿ ಎಂತಹ ಕಲ್ಲು ಹೃದಯವನ್ನೂ ಕರಗಿಸಬಹುದು. ಆದರೆ ಅಂದು ಪ್ರೊ.ಈಚಾರ ವಾರಿಯರ್ ಅನುಭವಿಸಿದ್ದ ನೋವು, ಅವರದ್ದೇ ಮುಂದೆ ಹಲವು ವರ್ಷಗಳ ಹಿಂದೆ ಕತ್ತಲ ರಾತ್ರಿಯಲ್ಲಿ ಪ್ರಾಣಭಿಕ್ಷೆಯನ್ನು ಬೇಡಿ ನಿಂತಿದ್ದ, ಮುಂದೆ ಕೇರಳದ ಮುಖ್ಯಮಂತ್ರಿಯಾದ ಅಚ್ಯುತ ಮೆನನ್‌ ಅವರಿಗೆ ಗೊತ್ತಾಗಲೇ ಇಲ್ಲ. ಕಮ್ಯುನಿಸ್ಟ್‌ ಸಿದ್ಧಾಂತದ ಪ್ರತಿಪಾದಕರಾಗಿ, ಕಟ್ಟಾ ಕಮ್ಯುನಿಸ್ಟ್‌ ಆಗಿ ಬೆಳೆದು, ಜನರ ಮಧ್ಯದಲ್ಲೇ ಇದ್ದ ಅಚ್ಯುತ ಮೆನನ್‌ ತಲೆಗೂ ಅಧಿಕಾರದ ಅಮಲು ಅಡರಿತ್ತು. ಹೀಗಾಗಿ ತಮ್ಮ ಮಗನನ್ನು ಹುಡುಕುತ್ತಾ ಹೋದ ಪ್ರೊ.ವಾರಿಯರ್‌ ಗೆ ಅಚ್ಯುತ ಮೆನನ್‌ರಿಂದ ಯಾವುದೇ ಸಹಕಾರ ಸಿಗಲಿಲ್ಲ. ಅಂದಹಾಗೆ ಇದೆಲ್ಲಾ ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದು ಹೋದ ತನ್ನ ಮಗನನ್ನು ಹುಡುಕುತ್ತಾ ಹೋದ ಓರ್ವ ಹಿಂದಿ ಪ್ರೊಫೆಸರ್ ಅನುಭವಿಸಿದ ನೈಜ ಘಟನೆಗಳು.

ಡಾ.ಜಗದೀಶ್ ಕೊಪ್ಪ ಕನ್ನಡದ ಓದುಗರಿಗೆ ಬೇರೆ ಬೇರೆ ಭಾಷೆಗಳ ಅಮೂಲ್ಯ ಕೃತಿಗಳನ್ನು ಅನುವಾದಿಸಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ' ಮರುಭೂಮಿಯ ಹೂ' ಪುಸ್ತಕದ ಮೂಲಕ ವಾಸಿರ್‌ಳ ಬದುಕನ್ನು ಕನ್ನಡಕ್ಕೆ ತಂದಿದ್ದರು. ಹೆಸರಾಂತ ಮಾಡೆಲ್, ಜಗದ್ವಿಖ್ಯಾತಿ ಪಡೆದ ರೂಪದರ್ಶಿ ವಾಸಿರ್‌ಳನ್ನು ಕನ್ನಡಕ್ಕೆ ಪರಿಚಯಿಸಿದ್ದರು. ಅದೇ ರೀತಿಯ ಇನ್ನೊಂದು ಅದ್ಭುತ ಪುಸ್ತಕ ' ಪುತ್ರ ಶೋಕ'. ಇದು ಕೇರಳದ ಪ್ರೊ. ಈಚರ ವಾರಿಯರ್ ಅವರ ಬದುಕಿನ ಕಥೆ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದು ಹೋದ ಮಗನನ್ನು ಹುಡುಕುತ್ತಾ ಸಾಗಿದ ಆ ಅಪ್ಪನ ತೊಳಲಾಟದ ಕಥೆ. ಹೋರಾಟದ ಕಥೆ. ಮುಖ್ಯಮಂತ್ರಿಯನ್ನು ರಾಜೀನಾಮೆ ಕೊಡಿಸಿದ ಕಥೆ. ಅಧಿಕಾರದಲ್ಲಿದ್ದವರ ಮದದ ಕಥೆ. ಸಾಮಾನ್ಯ ವ್ಯಕ್ತಿ ಇಡೀ ವ್ಯವಸ್ಥೆಗೆ ಬುದ್ಧಿ ಕಲಿಸಿದ ನೈಜ ಕಥೆ.

ತುರ್ತುಪರಿಸ್ಥಿತಿ. ಸ್ವತಂತ್ರ ಭಾರತದ ಒಂದು ಕರಾಳ ಅಧ್ಯಾಯ. ಬ್ರಿಟಿಷರ ವಿರುದ್ಧ ಹೋರಾಡಿ ಪಡೆದ ಸ್ವಾತಂತ್ರ್ಯವನ್ನು ತನ್ನ ಸರ್ವಾಧಿಕಾರಕ್ಕಾಗಿ ಪ್ರಧಾನಿ ಇಂದಿರಾಗಾಂಧಿ ಕಟ್ಟಿಹಾಕಿದ್ದರು. ಜನರ ಹಕ್ಕುಗಳನ್ನು ಕಿತ್ತುಕೊಂಡು ಸರ್ವಾಧಿಕಾರಿಯಾಗಿ ಮೆರೆದಿದ್ದರು. ಸುಪ್ರಿಂ ಕೋರ್ಟ್‌ನ ತೀರ್ಪು ತನ್ನ ವಿರುದ್ಧವಾಗುತ್ತಿದ್ದಂತೆ ಜನರ ಮೇಲೆ ತುರ್ತುಪರಿಸ್ಥಿತಿ ಹೇರಿದ್ದರು. ಭಾರತವನ್ನು ತನ್ನ ಬಿಗಿಮುಷ್ಟಿಯಲ್ಲಿಟ್ಟುಕೊಂಡಿದ್ದರು. ಆದರೆ ಒಬ್ಬ ಪ್ರಧಾನಿ ತನ್ನ ಅಧಿಕಾರಕ್ಕಾಗಿ ಮಾಡಿದ ತೀರ್ಮಾನ ಒಬ್ಬ ಅಪ್ಪ ತನ್ನ ಮಗನನ್ನು ಕಳೆದುಕೊಳ್ಳುವಂತೆ ಮಾಡಿತ್ತು. ಆ ಅಪ್ಪನಂತೆ ಅದೆಷ್ಟು ಅಪ್ಪಂದಿರು ಮಕ್ಕಳನ್ನು ಕಳೆದುಕೊಂಡಿದ್ದರೋ !

ತುರ್ತುಪರಿಸ್ಥಿತಿಯ ದಿನಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆಗ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಪ್ರತಿಪಕ್ಷಗಳ ನಾಯಕರನ್ನು ಬಂಧನದಲ್ಲಿಡಲಾಗಿತ್ತು. ಕಾಂಗ್ರೆಸ್‌ ವಿರುದ್ಧ ಮಾತಾಡಿದವರನ್ನು ಜೈಲಿಗಟ್ಟಲಾಗಿತ್ತು. ಅದರ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ್‌ ನೇತೃತ್ವದಲ್ಲಿ ಹೋರಾಟ ರೂಪಿಸಲಾಗಿತ್ತು. ಇದೆಲ್ಲ ನಿಜ. ಆದರೆ ಆಗಿನ ದಿನಗಳ ಕರಾಳತೆ ಜನಜೀವನದ ಮೇಲೆ ಎಂತಹ ಪರಿಣಾಮ ಬೀರಿತ್ತು ಅನ್ನೋದು ಅಷ್ಟೊಂದು ಸ್ಪಷ್ಟವಾಗಿ ಗೋಚರವಾಗಲ್ಲ. ಆದರೆ ಪ್ರೊ. ಈಚಾರ ವಾರಿಯರ್‌ ಅವರ ಬದುಕಿನ ಘಟನೆಗಳಿವೆಯಲ್ಲಾ. ತುರ್ತುಪರಿಸ್ಥಿತಿಯ ಬಗ್ಗೆ ಅರ್ಥಮಾಡಿಕೊಳ್ಳಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಒನ್ಸ್‌ ಅಗೈನ್ ಅದ್ಭುತ ಪುಸ್ತಕವೊಂದನ್ನು ಕನ್ನಡದ ಓದುಗರ ಕೈಗಿತ್ತಿದ್ದಾರೆ ಡಾ.ಜಗದೀಶ್ ಕೊಪ್ಪ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಪುಸ್ತಕವಿದು. ಮರೀಬೇಡಿ. ಕೊಂಡು ಓದಿ.

Sunday, August 24, 2014

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾವು



ನಮಗೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಭಾರತೀಯರಿಗೆ ಕಲ್ಪಿಸಿರುವ ಅಮೂಲ್ಯ ಹಕ್ಕಿದು. ಎಲ್ಲ ವಿಚಾರಗಳ ಬಗ್ಗೆ ನಾವು ಯಾವುದೇ ನಿರ್ಭಿಡೆಯಿಲ್ಲದೆ ನಮ್ಮ ಅಭಿಪ್ರಾಯವನ್ನು ದಾಖಲಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಹುದೊಡ್ಡ ಆಸ್ತಿ. ಇದರಿಂದಾಗಿಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ ರೂಪುಗೊಂಡಿರುವುದು. ರೂಪುಗೊಳ್ಳುತ್ತಿರುವುದು.

ಅದರಲ್ಲೂ ಈಗ ಅಭಿವ್ಯಕ್ತಿಯ ಯುಗ. ನಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಅದು ಕೇವಲ ಗೆಳೆಯರ ಜೊತೆ ಮಾತಿನ ಕಟ್ಟೆಯಲ್ಲಿ ಕುಳಿತು ಆಡುವ ಮಾತಿಗಷ್ಟೇ ಸೀಮಿತವಾಗಿಲ್ಲ. ಯಾವುದೇ ಮಾಧ್ಯಮದವರ ಹಂಗೂ ಬೇಕಿಲ್ಲ. ಯಾರ ಒಪ್ಪಿಗೆಯೂ ಬೇಕಿಲ್ಲ. ಅಪ್ಪಣೆಗೂ ಕಾಯಬೇಕಿಲ್ಲ. ನಮಗನ್ನಿಸಿದನ್ನು ಬಹಳ ಮುಕ್ತವಾಗಿ ಚರ್ಚಿಸಬಹುದು. ನಮಗನ್ನಿಸಿದನ್ನು ದಾಖಲಿಸಬಹುದು. ಇಷ್ಟವಿದ್ದವರು ಓದಿ ಖುಷಿಪಡುತ್ತಾರೆ. ಇಷ್ಟವಿಲ್ಲದವರು ಓದಿ ಉರಿ ಪಟ್ಟುಕೊಳ್ಳುತ್ತಾರೆ. ಅಷ್ಟೇ. ಅಷ್ಟೊಂದು ಮುಕ್ತ ವೇದಿಕೆಯನ್ನು ಸಾಮಾಜಿಕ ತಾಣಗಳು ತೆರೆದುಕೊಟ್ಟಿವೆ. ನವಮಾಧ್ಯಮದ ಶಕ್ತಿಯೇ ಅದು. ಇದು ಸಾಮಾನ್ಯ ಜನರ ಅಭಿವ್ಯಕ್ತಿಗೂ ಮುಕ್ತ ಮಾರುಕಟ್ಟೆಯನ್ನು ಒದಗಿಸಿದೆ. ಪ್ರತಿಯೊಬ್ಬರಿಗೂ ಮಾತಾಡುವ ಅವಕಾಶ ಕೊಟ್ಟಿದೆ. ಬರೆಯಲು ಪ್ರೋತ್ಸಾಹಿಸಿದೆ. ಅಭಿವ್ಯಕ್ತಿಗೆ ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ.

ಇಂದು ನಾವು ಯಾವುದೇ ಭೀತಿಯಿಲ್ಲದೆ ಯಾವುದೇ ವ್ಯಕ್ತಿಯ ಬಗ್ಗೆಯೂ ಟೀಕಿಸಬಹುದು. ಆತನ ಪೂರ್ವಾಪರ ಸಂಪೂರ್ಣ ತಿಳಿದುಕೊಳ್ಳಲೇಬೇಕಂತೇನು ಇಲ್ಲ. ಆತ ಹೇಳಿದ ಯಾವುದೋ ಒಂದು ಮಾತು, ಆತನ ತೆಗೆದುಕೊಂಡು ಯಾವುದೋ ನಿಲುವು, ಆತ ಬರೆದ ಯಾವುದೇ ಬರಹ, ಆತನ ಯಾವುದೋ ಸಂಬಂಧದ ಬಗ್ಗೆ ನಮಗೆ ಇಷ್ಟವಾಗದಿದ್ದರೆ ಸಾಕು. ಅದು ನಾವು ನಂಬಿರುವ ಸಿದ್ಧಾಂತಕ್ಕೆ, ನಮ್ಮ ನಂಬಿಕೆೆಗೆ ವಿರುದ್ಧವಾಗಿದ್ದರೆ ಯಾವುದೇ ಮುಲಾಜಿಲ್ಲದೆ ವಿರೋಧಿಸಬಹುದು. ಹೀಗೆ ವಿರೋಧ ವ್ಯಕ್ತಪಡಿಸೋದಿಕ್ಕೆ ಯಾರ ಅನುಮತಿಯೂ ಬೇಕಿಲ್ಲ. ವಿರೋಧಕ್ಕೆ ಪುಷ್ಟಿ ಕೊಡಲು ನಮಗೆ ಯಾವುದೇ ಆಧಾರಗಳು ಬೇಕಿಲ್ಲ. ಅದಕ್ಕೆ ಭಾಷೆಯ ಮೇಲೆ ಹಿಡಿತ, ಸರಿಯಾದ ವ್ಯಾಕರಣ ಯಾವುದೂ ಬೇಕಿಲ್ಲ. ಆ ಕ್ಷಣದಲ್ಲಿ ಅನ್ನಿಸಿದನ್ನು ನಿರ್ಭಿಡೆಯಿಂದ ಬರೆಯುವ ಧೈರ್ಯವಿದ್ದರೆ ಸಾಕು. ಒಂದು ವೇಳೆ ಆ ಧೈರ್ಯವಿಲ್ಲದಿದ್ದರೂ ಆಗುತ್ತೆ. ಅನ್ಯರ ಹೆಸರು ಬಳಸುವ, ಫೋಟೋ ಹಾಕುವ, ಫೇಕ್ ಅಕೌಂಟ್‌ಗಳನ್ನು ಸೃಷ್ಟಿಸುವ ಕಲೆ ಗೊತ್ತಿದ್ದರೂ ನಡೆಯುತ್ತದೆ.

ಪೀಠಿಕೆ ಸ್ವಲ್ಪ ದೊಡ್ಡದೇ ಅನ್ನಿಸಬಹುದು. ಆದರೆ ಕಳೆದೆರಡು ದಿನಗಳಿಂದ ಅನ್ಸಿಸಿದ ಕೆಲವೊಂದು ವಿಚಾರಗಳನ್ನು ತಿಳಿಸಲು ಇದರ ಅವಶ್ಯಕತೆ ಖಂಡಿತ ಇದೆ. ಡಾ. ಯು. ಆರ್. ಅನಂತಮೂರ್ತಿ ಬದುಕಿದ್ದಾಗ ಅವರನ್ನು ವಿರೋಧಿಸಲು ಅನೇಕ ಕಾರಣಗಳು ಅನೇಕರಿಗೆ ಇದ್ದಿರಬಹುದು. ಒಬ್ಬ ಸಾಹಿತಿ, ಬರಹಗಾರ, ಚಿಂತಕನ ಎಲ್ಲಾ ವಿಚಾರಧಾರೆಗಳನ್ನು ಎಲ್ಲರೂ, ಎಲ್ಲಾ ಕಾಲಕ್ಕೂ ಒಪ್ಪಿಕೊಳ್ಳಬೇಕು ಅಂತೇನು ಇಲ್ಲ. ಅದು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಸತ್ತಾಗ ಆತನಿಗೊಂದು ಶ್ರದ್ಧಾಂಜಲಿ, ನಿಟ್ಟುಸಿರು, ಆತನಿಗೊಂದು ಗೌರವ ಸಲ್ಲಿಸೋದು ಮನುಷ್ಯ ಧರ್ಮ. ಕಾಗೆಗಳು ತಮ್ಮ ಸಿಕ್ಕಿರುವ ಆಹಾರದ ವಿಚಾರಕ್ಕೆ ಕೆಲವೊಮ್ಮೆ ಒಂದು ಇನ್ನೊಂದರ ಮೇಲೆ ಸಿಟ್ಟಾಗಿ ಎರಗಬಹುದು. ಆದರೆ ಒಂದು ಕಾಗೆ ಸತ್ತರೆ ಉಳಿದೆಲ್ಲಾ ಕಾಗೆಗಳು ಕಾ.. ಕಾ.. ಕಾ.. ಅಂತ ಹಾರಾಡಿ ಬರುವುದು ಅವುಗಳ ಬಳಗದಲ್ಲಿ ಸಂಭವಿಸಿದ ಸಾವಿಗೆ ಮರುಗುವುದಕ್ಕಾಗಿ. ಆದರೆ ಮನುಷ್ಯರಿಗೆ ಸತ್ತ ಮೇಲೂ ಮುಂದುವರೆಯುವ ದ್ವೇಷಕ್ಕೆ ಕಾರಣಗಳೇ ಗೊತ್ತಾಗುವುದಿಲ್ಲ.

ಮೋದಿ ವಿರುದ್ಧ ಮಾತಾಡಿದ ಅನಂತಮೂರ್ತಿ ಅಂತಹ ಘನಘೋರ ಅಪರಾಧ ಎಸಗಿದರೆ ? ಅದು ಅವರ ಎಲ್ಲ ಬರಹಗಳನ್ನು ಮರೆಸುವಷ್ಟು ದೊಡ್ಡ ಅಪರಾಧವೇ? ಎಲ್ಲರೂ ಬಯಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗೆ ಇರಲಿಲ್ಲವೇ? ಅವರು ಆ ಮಾತನ್ನು ಹೇಳಿದ ಸಂದರ್ಭದಲ್ಲಿ ವಾಚಾಮಗೋಚರವಾಗಿ ಅವರನ್ನು ನಿಂದಿಸಿ ಬರೆದರು. ಪಾಕಿಸ್ತಾನಕ್ಕೆ ಹೋಗಲು ಟಿಕೇಟ್ ಕಳಿಸಿದರು. ಆದರೆ ಇಷ್ಟಕ್ಕೆ ತೃಪ್ತರಾಗದ ಕೆಲವರು ಅವರು ಇಹಲೋಕ ತ್ಯಜಿಸಿದ ಮೇಲೂ ಸಂಭ್ರಮಿಸಿದರು. ಖುಷಿಪಟ್ಟರು. ಆದರೆ ಯಾರ ಕಾರಣಕ್ಕಾಗಿ ಅನಂತಮೂರ್ತಿಯವರ ವಿರುದ್ಧ ಕೂಗಾಡಿದರೋ ಅದೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಅನಂತಮೂರ್ತಿ ಸಾವಿನಿಂದ ಕನ್ನಡ ಸಾಹಿತ್ಯಕ್ಕಾದ ನಷ್ಟವೆಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮೋದಿಯವರ ದೊಡ್ಡತನ ಎನ್ನಬೇಕೋ ? ಅನಂತಮೂರ್ತಿಯವರ ಸಾಧನೆ ಕಾರಣ ಎನ್ನಬೇಕೋ ?

ಸಾವಿನ ಸಂದರ್ಭದಲ್ಲೂ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದ ಕೆಲ ಪ್ರತಿಕ್ರಿಯೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಅಣಕ ಮಾಡಿದಂತೆ ಭಾಸವಾಗುತ್ತಿದೆ.


Monday, June 2, 2014

'ರಾಮಂದ್ರ'ದ ನಗೆಬುಗ್ಗೆಗಳು

ರಾಮಂದ್ರ. ಇದನ್ನು ಕೇಳಿದಾಗ ನನ್ನಂತವರಿಗೆ ಸೀಮಾಂಧ್ರದ ರೀತಿಯಲ್ಲೇ ಭಾಸವಾಗತೊಡಗುತ್ತದೆ. ಆದರೆ ಬಯಲು ಸೀಮೆಯ ಮಂದಿ ಇದು ರಾಮಮಂದಿರ ಅನ್ನೋದನ್ನು ಥಟ್ಟಂತ ಹೇಳಿಯ ಉತ್ತರದಂತೆ ಹೇಳಿಬಿಡುತ್ತಾರೆ. ಅಂದಹಾಗೆ ನಾನು ಥಟ್ಟಂತ ಹೇಳಲು ಹೊರಟಿರುವ ರಾಮಂದ್ರ - ಹರಿಪ್ರಸಾದರ ಪ್ರಬಂಧಗಳ  ಬಗ್ಗೆ.

ಮಜಾ ಕೇಳಿ. ಹರಿಪ್ರಸಾದ್‌ ಪ್ರಬಂಧಗಳು ಅಂತಿದೆ ಮುಖಪುಟ. ಪುಸ್ತಕ ನೋಡಿದ ನನ್ನಕ್ಕ 'ಇದೆಂತಾ ನೀನ್ ಪುಸ್ತಕ ಬರೆದದ್ದಾ..?' ಅಂತ ಕೇಳಿದ್ದಳು. ಆಫೀಸಿನಲ್ಲಿ ಕುಳಿತು ಪುಸ್ತಕ ಓದುತ್ತಿದ್ದರೆ ಗೆಳೆಯರು - 'ಇದೇನು ನಿಂದಾ ಪುಸ್ತಕ ?' ಅಂತ ಕೇಳತೋಡಗಿದ್ದು ಒಂತರಾ ಖುಷಿಕೊಟ್ಟಿತ್ತು. ಅವ್ರಿಗೆಲ್ಲಾ ಇದು ನಾನಲ್ಲ. ನನ್ನದೇ ಹೆಸರಿನ ಇನ್ನೊಂದು ಹರಿಪ್ರಸಾದ ಅಂತ ಓದಿನ ನಡುವೆ ಸಣ್ಣದೊಂದು ಬ್ರೇಕ್ ತಕಂಡು ಹೇಳ್ತಿದ್ದೆ. ಅಂತೂ ಹರಿಪ್ರಸಾದರ ದಯೆಯಿಂದ ಪುಸ್ತಕ ಓದುವ ಎರಡು ದಿನ ಕೆಲವರ ಬಾಯಲ್ಲಿ ನಾನೂ ಬರಹಗಾರನಾಗುವ ಬಿಟ್ಟಿ ಅವಕಾಶ ಸಿಕ್ಕಿತು. ಇದೂ ಒಂಥರಾ ಥ್ರಿಲ್‌ ಕೊಡುತ್ತೆ. ಆದರೆ ಯಾರದ್ದೋ ಮಗುವಿಗೆ, ಇದು ನಿಮ್ಮ ಮಗುವಾ ಅಂತ ಕೇಳಿದಾಗ ಆಗುವ ಕಸಿವಿಸಿಯನ್ನು ನಾನು ಅನುಭವಿಸಿದ್ದು ಸುಳ್ಳಲ್ಲ.

ಇದೆಲ್ಲಾ ಇರಲಿ. ವಿಷಯಕ್ಕೆ ಬರುತ್ತೇನೆ. ಹರಿಪ್ರಸಾದ್‌, ನಿರಂತರ ಫೌಂಡೇಷನ್‌ನ ಸ್ಥಾಪಕ ಸದಸ್ಯರಲ್ಲೊಬ್ಬರು. ನನ್ನ ಹಿರಿಯ ಮಿತ್ರ ಜಯ ನಾಣಯ್ಯ ಅದೆಷ್ಟೋ ಬಾರಿ ನಿರಂತರದ ಬಗ್ಗೆ ಹೇಳುತ್ತಿರುತ್ತಾರೆ. ಹರಿಪ್ರಸಾದ್ ಬರೆಯುತ್ತಿದ್ದ ಬರಹಗಳ ಲಿಂಕ್‌ಅನ್ನು ಕಳಿಸಿ ' ಓದೋ ' ಅಂತ ದಬಾಯಿಸುತ್ತಿದ್ದರು. ಅವರು ದಬಾಯಿಸುತ್ತಿದ್ದರು ಓದುವಾಗ ಸಿಗುವ ಖುಷಿ ಮಾತ್ರ ನನ್ನದಾಗಿರುತ್ತಿತ್ತು. ಈ ನಿರಂತರದ ಬಗ್ಗೆ ಒಂದೆರಡು ಮಾತು ಹೇಳಿ ಮುಂದೆ ಪುಸ್ತಕದ ವಿಚಾರ ಹೇಳುತ್ತೇನೆ. - ಇದೇನು ಒಳ್ಳೆ ಭಾಷಣ ಬಿಗೀತಾನೆ ಅಂತ ನಿಮಗೆ ಅನ್ನಿಸಿದ್ರೂ ಮನ್ನಿಸಿ ಮುಂದೆ ಓದಿ - ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಒಂದು ಡಿಸೆರ್ಟೇಷನ್‌ ಮಾಡೋದು ಕಡ್ಡಾಯವಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು, ' ಸಂವಹನ ಮಾಧ್ಯಮವಾಗಿ ಬೀದಿ ನಾಟಕಗಳು' ಅನ್ನೋ ವಿಷಯವನ್ನು. ಇದಕ್ಕಾಗಿ ಮಾಹಿತಿ ಸಂಗ್ರಹಿಸಲು ಪುಸ್ತಕಗಳನ್ನು ತಡಕುತ್ತಾ ಕುಳಿತಾಗ ಸಿಕ್ಕಿದ್ದು ನನಗೆ ನಿರಂತರ ಪ್ರಕಾಶನದ ' ಬೀದಿ' ಪುಸ್ತಕ. ಪ್ರಸಾದ್‌ ಕುಂದೂರ್ ಸಂಪಾದಿಸಿರುವ ಈ ಪುಸ್ತಕದಲ್ಲಿ ಕರ್ನಾಟಕದ ಬೀದಿ ನಾಟಕದ ಬಗ್ಗೆ ಉಪಯುಕ್ತ ಮಾಹಿತಿ ಸಿಕ್ಕಿತ್ತು. ಈ ಪುಸ್ತಕ ಇಲ್ಲದೇ ಇರುತ್ತಿದ್ದರೆ ಬಹುಷಃ ನಾನು ನನ್ನ ಡಿಸೆರ್ಟೇಷನ್‌ಅನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಆ ಡಿಸೆರ್ಟೇಷನ್‌ಗಾಗಿ ಪ್ರಸಾದ್‌ ಕುಂದೂರರನ್ನು ಅವರ ಬೋಗಾದಿಯ ಮನೆಯಲ್ಲಿ ಸಂದರ್ಶನ ಕೂಡ ಮಾಡಿದ್ದೆ. ಹೀಗೆ ನಿರಂತರದ ಜೊತೆಗೆ ಸಂಪರ್ಕವಾಗಿದ್ದು.

ಹರಿಪ್ರಸಾದ್ ಬರೆದಿರುವ ಈ ಪುಸ್ತಕ ಒಳ್ಳೆಯ ಲಲಿತ ಪ್ರಬಂಧಗಳಿಂದ ಕೂಡಿದೆ. 'ನಮ್ಮಮ್ಮನ ಡಾಕ್ಟರ್‌ಗಳು ' ಪ್ರಬಂಧ ಓದಿದಾಗಲಂತೂ ಬಿದ್ದೂ ಬಿದ್ದೂ ನಗಾಡಿದ್ದೆ. ತಮ್ಮ ಅಜ್ಜನ ಬಗ್ಗೆ ತಮ್ಮ ತಾಯಿಯ ಮಾತುಗಳಲ್ಲಿ ಹರಿಪ್ರಸಾದ್‌ ವಿವರಿಸುತ್ತಾ ಹೋಗುತ್ತಿದ್ದಂತೆ ನಗೆಬುಗ್ಗೆಯೊಡೆಯುತ್ತದೆ. ನಿಜ ಅವರೇ ಹೇಳಿದಂತೆ ಗುರುರಾಜುಲು ನಾಯ್ಡು ಹರಿಕಥೆಯ ಶೈಲಿಯಲ್ಲಂತೂ ಇದನ್ನು ಪರಿಭಾವಿಸಿ ಓದಿದರೆ ನಗು ಇನ್ನಷ್ಟು ಜೋರಾಗುತ್ತೆ. ಲಲಿತ ಪ್ರಬಂಧವೊಂದು ಖುಷಿ ಕೊಡೋದು ಇಲ್ಲೇ.  'ಕದ್ದಾಲಿಕೆ ' ಪ್ರಬಂಧವಂತೂ ನಾಟಕದ ಶೈಲಿಯಲ್ಲೇ ನಡೆದರೂ ಒಂದು ಸಂಬಂಧದ ಬಗ್ಗೆ ಗೆಳೆಯರ ನಡುವಿನ ಸಂಭಾಷಣೆಯನ್ನು ನಿರೂಪಿಸಿದ ರೀತಿ ಅದ್ಭುತ. ಹಾಗೆಯೇ ಇದರಲ್ಲಿ ಸಂಬಂಧಗಳ ಬಗ್ಗೆ ವಿಷಣ್ಣ ಭಾವ ಮೂಡುತ್ತದೆ. 'ದೇವಾನೂರು ಪೋಸ್ಟ್‌  ' ಹಾಗೂ 'ರಾಮಂದ್ರ', ತೆಳು ಹಾಸ್ಯದ ನಡುವೆಯೇ ವಿಷಾದವನ್ನು ಮೂಡಿಸುತ್ತೆ.

ಇನ್ನು ತಮ್ಮ ಮಗಳ ಹೆಸರಿಡುವ ವಿಚಾರದ ಬಗ್ಗೆ ಹರಿಪ್ರಸಾದ್‌ ಬರೆದಿರುವ 'ಹೆಸರೇನೇ ಹುಡುಗಿ' ಹೆಸರಿಡುವ ತಾಪತ್ರಯಗಳನ್ನು ಮುಂದಿಡುತ್ತೆ. ಇದು ಕೇವಲ ಹರಿಪ್ರಸಾದ್‌ ಒಬ್ಬರದ್ದೇ ಅನುಭವವಲ್ಲ. ಬಹುಷಃ ಅನೇಕರು ಅನೇಕ ಸಂದರ್ಭಗಳಲ್ಲಿ ಇದೇ ಮಾದರಿಯ ಅನುಭವಗಳಿಗೆ ಒಳಗಾಗಿರುತ್ತಾರೆ. - ನಾನಿನ್ನೂ ಅದಕ್ಕೆ ಒಳಗಾಗಿಲ್ಲ - ' ಊರುಗಳೂ, ಚೀಟಿಗಳೂ' ಮಾತ್ರ ನನ್ನ ಮೇಲೆ ಗಾಢ ಪ್ರಭಾವವನ್ನು ಬೀರಿದೆ. ಕಾರಣ ಒಂದು - ನಾನು ಕೂಡ ಚೀಟಿ ಹಾಕಿ ಅನಿವಾರ್ಯ ಸಂದರ್ಭದಲ್ಲಿ ಚೀಟಿ ಕೂಗುವಾಗ ಅದರ ಏರಿಳಿತ ಕಂಡು ಜರ್ಜರಿತನಾಗಿದ್ದೇನೆ. ಹಾಗೆಯೇ ಅನೇಕ ಸಂದರ್ಭಗಳಲ್ಲಿ ಚೀಟಿಯಿಂದ ಮೋಸ ಹೋದ ಅನೇಕರ ಮಾತುಗಳನ್ನು, ನೋವುಗಳನ್ನು ಕಣ್ಣಾರೆ ಕಂಡಿದ್ದೇನೆ, ಕಿವಿಯಾರೆ ಕೇಳಿದ್ದೇನೆ. ಹಾಗೆಯೇ ಹಾವುಗಳ ಬಗ್ಗೆ ಹರಿಪ್ರಸಾದ್‌ ಬರೆದಿರುವ ಪ್ರಬಂಧ ನಿಜಕ್ಕೂ ಬಾಲ್ಯಕ್ಕೆ ತಂದು ನಿಲ್ಲಿಸಿತ್ತು. ಹಳ್ಳಿಯ ಹಿನ್ನೆಲೆಯಿಂದ ಬಂದ ಪ್ರತಿಯೊಬ್ಬರಿಗೂ ಇಂತಹ ಅನುಭವಗಳು ಇದ್ದೇ ಇರುತ್ತೆ. ಆದರೆ ಇತ್ತೀಚೆಗೆ ಹಳ್ಳಿಯ ಮಕ್ಕಳೂ ಕೂಡ ನನಗೆ ಒಂದೊಂದು ಸಲ ಸಿಟಿ ಮಕ್ಕಳ ತದ್ರೂಪದಂತೆ ಕಾಣುತ್ತಿದೆ. ಹೀಗಾಗಿ ಈಗಿನ ಹಳ್ಳಿ ಮಕ್ಕಳು ಈ ಅನುಭವಗಳಿಂದ ಸ್ವಲ್ಪ ದೂರವಾಗುತ್ತಿದ್ದರೆ ಅದು ಅವರ ತಪ್ಪಲ್ಲ ಬಿಡಿ.

ಒಂದೊಂದು ಪ್ರಬಂಧದ್ದೂ ಒಂದೊಂದು ಹದ. ಒಂದಷ್ಟು ಏರುಪೇರುಗಳಿವೆ ಅನ್ನಿಸುತ್ತೆ.ಆದರೆ ಕೊನೆಯಲ್ಲಿ ನಾನು ಪುಸ್ತಕದ ಮುನ್ನುಡಿಯಲ್ಲಿ ರಹಮತ್‌ ತರೀಕೆರೆಯವರು ಬರೆದಿರುವ ಸಾಲುಗಳನ್ನು ಉಲ್ಲೇಖಿಸುತ್ತೇನೆ. ' ಈ ಒಳ್ಳೆಯ ಪ್ರಬಂಧಗಳನ್ನು ಓದಿ ನಾನು ಪಟ್ಟಿರುವ ಸಂತೋಷ ಓದುಗರದ್ದೂ ಆಗಲಿದೆಯೆಂದು ಭಾವಿಸುತ್ತೇನೆ.' ಇದು ನನ್ನ ಭಾವನೆಯೂ ಹೌದು.


Thursday, May 1, 2014

ಕುಮಾರಸ್ವಾಮಿ ಮತ್ತು ಚುನಾವಣೆ

ಇದನ್ನು ತುಂಬ ದಿನಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಬರೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆಯ ಬ್ಯುಸಿಯ ನಡುವೆ ಬರೆಯಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಮುಗಿದು ರಿಸಲ್ಟ್‌ಗಾಗಿ ಎದುರು ನೋಡುತ್ತಿರುವಾಗ ಬರೆಯೋದು ಸೂಕ್ತ ಅನ್ನಿಸಿತ್ತು.

ವಿಷಯ ಇಷ್ಟೆ. ಈ ಬಾರಿ ಮತ್ತೆ ಲೋಕಸಭೆ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.2009ರಲ್ಲೂ ಕುಮಾರಸ್ವಾಮಿ ಸ್ಪರ್ಧಿಸಿದ್ದರು. 2013ರಲ್ಲಿ ಕುಮಾರಸ್ವಾಮಿ ವಿಧಾನಸಭೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೇಲೆ ಉಪಚುನಾವಣೆ ಹೇರಿದ್ದರು. ಇದಕ್ಕೆ ಮುಂಚೆ 2009ರಲ್ಲಿ ರಾಮನಗರದ ವಿಧಾನಸಭಾ ಕ್ಷೇತ್ರದ ಮೇಲೂ ಉಪಚುನಾವಣೆ ಹೇರಿದ್ದರು. ಈಗ ಅವರಿಗೆ ಚಿಕ್ಕಬಳ್ಳಾಪುರದಿಂದ ಅರ್ಜೆಂಟಾಗಿ ಎಂಪಿಯಾಗುವ ಉತ್ಸಾಹ ಬಂದು ಚುನಾವಣೆಗೆ ಧುಮುಕಿಯಾಗಿದೆ. ಮತದಾರನ ತೀರ್ಪು ಮತಪೆಟ್ಟಿಗೆಯಲ್ಲಿ ಅಡಗಿದೆ. ಕುಮಾರಸ್ವಾಮಿ ಇಲ್ಲಿ ಗೆದ್ದರೆ ಮತ್ತೆ ರಾಮನಗರಕ್ಕೆ ಉಪಚುನಾವಣೆ ನಡೆಯುತ್ತೆ. ಅಲ್ಲಿಗೆ ರಾಮನಗರದ ಶಾಸಕ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಹಿತಾಸಕ್ತಿಗಾಗಿ ಐದು ವರ್ಷಗಳ ಅಂತರದಲ್ಲಿ ಆ ಕ್ಷೇತ್ರದ ಜನರು ಐದು ಬಾರಿ ಚುನಾವಣೆಯನ್ನು ಎದುರಿಸುವಂತಹ ಕೊಡುಗೆಯನ್ನು ಕೊಟ್ಟಂತಾಗುತ್ತೆ.

ಇಷ್ಟಕ್ಕೂ ಕುಮಾರಸ್ವಾಮಿಯವರು ಎಂಪಿಯಾಗಿ ಗೆದ್ದರೆ ಏನು ಪ್ರಯೋಜನ. ಒಂದು ವೇಳೆ ಅವರದೇ ಲೆಕ್ಕಾಚಾರದಂತೆ ಹೇಳೋದಾದರೆ ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದರೆ ಜೆಡಿಎಸ್ ಕೋಟಾದಡಿಯಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದು. ಇದೆ ಲೆಕ್ಕಾಚಾರದ ಅಡಿಯಲ್ಲಿ ಅವರು 2009ರಲ್ಲೂ ಲೋಕಸಭೆಗೆ ಸ್ಪರ್ಧಿಸಿದ್ದರು. ಚುನಾವಣೆ ಫಲಿತಾಂಶಕ್ಕೂ ಮೊದಲೇ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ್ದರು. ಯುಪಿಎ ಸರ್ಕಾರಕ್ಕೆ ಪೂರ್ಣ ಬಹುಮತ ಬರದಿದ್ದಾಗ ಜೆಡಿಎಸ್ ಆರಂಭದಲ್ಲೇ ಭೇಷರತ್ ಬೆಂಬಲ ಘೋಷಿಸಿದ್ದು. ಅಷ್ಟೆಲ್ಲಾ ಮಾಡಿದ್ರೂ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರನ್ನು ಸರ್ಕಾರ ರಚನೆಯ ವೇಳೆ ಗಣನೆಗೆ ತೆೆಗದುಕೊಳ್ಳಲಿಲ್ಲ. ಮಂತ್ರಿ ಮಾಡಲಿಲ್ಲ. ಅದಾದ ನಂತರದ ಘಟನೆಗಳನ್ನು ಮೆಲುಕು ಹಾಕುವುದು ಈಗ ಸೂಕ್ತ.

ಕೇಂದ್ರದಲ್ಲಿ ಸಚಿವರಾಗದ ಮೇಲೆ ಕುಮಾರಸ್ವಾಮಿಯವರಿಗೆ ತಾವು ಯಾಕಾದರೂ ಸಂಸದನಾದೆನೋ ಎಂಬ ಜಿಗುಪ್ಸೆ ಶುರುವಾಗಿತ್ತು. ಯಡಿಯೂರಪ್ಪ ಸರ್ಕಾರದ ವಿರುದ್ಧ ಸದನದ ಒಳಗೆ ಮಾತನಾಡುವ ಅವಕಾಶ ಕೈ ತಪ್ಪಿ ಹೋಗಿದ್ದಕ್ಕೆ ಅನೇಕ ಬಾರಿ ಸುದ್ದಿಗೋಷ್ಟಿಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸಂಸದನಾಗಿ ತಾವು ಮಾಡುವಂತದ್ದೂ ಕೇಂದ್ರದಲ್ಲಿ ಏನೂ ಇಲ್ಲ ಎಂದು ಅರಿವಾದ ಮೇಲೆ ರಾಜ್ಯದಲ್ಲೇ ಉಳಿದು ರಾಜ್ಯ ಸರ್ಕಾರದ ವಿರುದ್ಧ ನಿರಂತರ ಟೀಕೆ ಆರಂಭಿಸಿದ್ದರು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಭೂ ಹಗರಣವನ್ನು ಮೊದಲ ಬಾರಿಗೆ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕುಳಿತೇ ಮಾಧ್ಯಮದ ಮುಂದೆ ಬಿಚ್ಚಿಟ್ಟರು. 2010 ಅಕ್ಟೋಬರ್ ತಿಂಗಳಲ್ಲಿ ಯಡಿಯೂರಪ್ಪ ವಿರುದ್ಧ ಅವರ ಪಕ್ಷದ ಶಾಸಕರು ತಿರುಗಿಬಿದ್ದಾಗ ಅವರ ಬೆಂಬಲಕ್ಕೆ ಕುಮಾರಸ್ವಾಮಿ ನಿಂತರು. ಗೋವಾದಲ್ಲಿ ಹೋಗಿ ಭೇಟಿ ಮಾಡಿ ಬಂದಿದ್ದರು. ಸರ್ಕಾರ ಏನಾದ್ರೂ ಉರುಳಿದರೆ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆಯ ಕನಸುಗಳನ್ನು ಕಂಡರು. ಕೊನೆಗೆ ಬಿಜೆಪಿಯ 16 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದಾಗ ಅವರ ಬೆನ್ನಿಗೂ ನಿಂತರು. ಆದರೆ ಶಾಸಕರ ಅನರ್ಹತೆ ಬಿಟ್ಟರೆ ಆ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರಿಗೆ ಬೇರೇನೂ ಲಾಭವಾಗಲಿಲ್ಲ. ಅಧಿಕಾರದ ಆಸೆಗಾಗಿ ಕುಮಾರಸ್ವಾಮಿ ಇಷ್ಟೆಲ್ಲಾ ಮಾಡಿದ್ರು ಅನ್ನೋ ಟೀಕೆಯನ್ನು ಎದುರಿಸಬೇಕಾಯಿತು.

ಇದೆಲ್ಲಾ ಈಗ ಮುಗಿದ ಅಧ್ಯಾಯ. ಮುಂದೆ 2013ರಲ್ಲಿ ವಿಧಾನಸಭೆ ಚುನಾವಣೆ ಎದುರಾದಾಗ ಕುಮಾರಸ್ವಾಮಿ ಇನ್ನಿಲ್ಲದಂತೆ ಶ್ರಮವಹಿಸಿ ಪಕ್ಷ ಸಂಘಟನೆಗೆ ದುಡಿದ್ರು. ಬಹುಷಃ ಚುನಾವಣೆಗೂ ಮೊದಲು ಸುಮಾರು ನಾಲ್ಕೈದು ತಿಂಗಳು ಅವರು ಎರಡು ರಾತ್ರಿಯನ್ನು ಒಂದೇ ಕಡೆ ಕಳೆದಿರಾರರು. ಇಡೀ ರಾಜ್ಯದ ಉದ್ದಗಲಕ್ಕೆ ಓಡಾಡಿದ್ರು. ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿದ್ರು. ತಮ್ಮ ಪಕ್ಷಕ್ಕೆ ಏನೂ ಲಾಭವಾಗುವುದಿಲ್ಲ ಅಂತ ಗೊತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಸಂಘಟನೆಗಾಗಿ ದುಡಿದ್ರು. ಇದೆಲ್ಲದರ ಫಲವಾಗಿ 2008ರಲ್ಲಿ 28 ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಎಲ್ಲಾ ಸಮೀಕ್ಷೆಗಳನ್ನು ಸುಳ್ಳಾಗಿಸಿ 40 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕರಾಗಿಯೂ ಆಯ್ಕೆಯಾದರು. ಬಹುಷಃ ವಿಪಕ್ಷ ನಾಯಕರಾಗಿಯೇ ಮುಂದುವರೆಯಲು ಅವಕಾಶ ಸಿಗುತ್ತಿದ್ದರೆ ಕುಮಾರಸ್ವಾಮಿ ಲೋಕಸಭೆ ಕಡೆಗೆ ಯೋಚನೆ ಮಾಡಿರಲಾರರು. ಆದರೆ ಬಿಜೆಪಿ- ಕೆಜೆಪಿ ಒಂದಾದ ಮೇಲೆ ಕುಮಾರಸ್ವಾಮಿಯವರ ವಿರೋಧ ಪಕ್ಷ ನಾಯಕ ಸ್ಥಾನವೂ ಕಳೆದುಹೋಯಿತು. ಇದೆಲ್ಲದರ ಫಲವಾಗಿ ಕುಮಾರಸ್ವಾಮಿ ಈಗ ಮತ್ತೊಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಲೆಕ್ಕಾಚಾರದಂತೆ ಅವರು ಈ ಚುನವಾಣೆಯಲ್ಲಿ ಗೆದ್ದು, ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದರೆ ಅವರು ಕೇಂದ್ರದಲ್ಲಿ ಸಚಿವರಾಗಬಹುದು.

ಯಾವುದೇ ಒಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರವಿಲ್ಲದೆ ದೀರ್ಘಕಾಲ ಸಂಭಾಳಿಸಿಕೊಂಡು ಹೋಗುವುದು ಸುಲಭವಲ್ಲ. ಹೀಗಾಗಿ ಕುಮಾರಸ್ವಾಮಿಯವರು ಒಂದು ವೇಳೆ ಕೇಂದ್ರದಲ್ಲಿ ತಮಗೆ ಅಧಿಕಾರ ಸಿಕ್ಕರೆ ಆಗ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ನೆರವಾಗಬಹುದು ಅಂತ ಲೆಕ್ಕಾಚಾರ ಹಾಕಿದ್ದರೆ ಪ್ರಸಕ್ತ ರಾಜಕೀಯ ದೃಷ್ಟಿಯಿಂದ ಅದು ಸರಿ ಅಂತ ಹೇಳಬಹುದು. ಆದರೆ ಅಲ್ಲಿ ಅಧಿಕಾರ ಸಿಗದಿದ್ದರೆ. ಆಗ ಮುಂದೇನು. ಕುಮಾರಸ್ವಾಮಿಯವರು ಗೆದ್ದರೆ ಸಂಸತ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತಾರಾ..? ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರಾ...? ರಾಜ್ಯದ ಪರ ಸಂಸತ್‌ನ ಒಳಗೆ ಹೋರಾಟ ಮಾಡ್ತಾರಾ...? ಈ ಎಲ್ಲಾ ಪ್ರಶ್ನೆಗಳಿಗೆ ಇತಿಹಾಸ ನೋಡಿದ್ರೆ ಹೌದು ಅನ್ನುವ ಉತ್ತರ ಸಿಗುವುದಿಲ್ಲ. ಅದೇನಿದ್ದರೂ ದೇವೇಗೌಡರಿಗಷ್ಟೇ ಸೀಮಿತ ಅನ್ನುವ ತೀರ್ಮಾನಕ್ಕೆ ಬಂದು ರಾಜ್ಯ ರಾಜಕಾರಣದ ವಿಚಾರದಲ್ಲಿ ಕುಮಾರಸ್ವಾಮಿ ಬ್ಯುಸಿಯಾಗುವ ಸಾಧ್ಯತೆಯೇ ಹೆಚ್ಚು.

ಇನ್ನೊಂದು ಅಂಶದ ಬಗ್ಗೆ ಇಲ್ಲಿ ಹೇಳಲೇ ಬೇಕು. ಕುಮಾರಸ್ವಾಮಿಯವರ ರಾಜಕಾರಣದ ಹಾದಿ ಹೀಗಿ ಸಾಗುತ್ತಿದ್ದರೆ ಅತ್ತ ಅವರ ತಂದೆ ದೇವೇಗೌಡರ ರಾಜಕಾರಣದ ಶೈಲಿಯನ್ನು ನೋಡಿ. ಅವರು ಮುಖ್ಯಮಂತ್ರಿಯಾಗಿದ್ದದ್ದು ಕೇವಲ 18 ತಿಂಗಳು. ಪ್ರಧಾನಿಯಾಗಿ 11 ತಿಂಗಳಿದ್ದರು. ಹಾಗಿದ್ದರೂ ಅವರು ಒಂದು ಸಮುದಾಯದ ಪ್ರಬಲ ನಾಯಕನಾಗಿ ಉಳಿದುಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಹೋರಾಟ. ಜನರ ಹೋರಾಟಗಳ ಜೊತೆಗೆ ( ಅದು ರಾಜಕೀಯ ಉದ್ದೇಶದಿಂದಲೇ ಕೂಡಿರಬಹುದು) ದೇವೇಗೌಡರು ಹೆಜ್ಜೆ ಹಾಕಿದ್ದಾರೆ. ಅವರ ಬಳಿಗೆ ನೇರವಾಗಿ ಜನ ಬಂದು ಅಪ್ಪಿಕೊಂಡು ಪ್ರೀತಿ ತೋರುವುದಿಲ್ಲ. ಆದರೆ ದೇವಗೌಡರು ಜನರಿದ್ದ ಕಡೆಗೆ ಹೋಗುತ್ತಾರೆ. ಅವರ ನಡುವೆ ಕುಳಿತುಕೊಳ್ಳುತ್ತಾರೆ. ಅವರ ಜೊತೆಗೆ ಹೆಜ್ಜೆಹಾಕುತ್ತಾರೆ. ಅವರಿಗೆ ಧ್ವನಿಯಾಗುತ್ತಾರೆ.

ಆದರೆ ಕುಮಾರಸ್ವಾಮಿಯವರದ್ದು ಇಲ್ಲಿ ವ್ಯತಿರಿಕ್ತ ನಿಲುವು. ಅವರ ಹೋರಾಟಗಳೇನಿದ್ದರೂ ಬಹುತೇಕ ಮಾಧ್ಯಮಗಳ ಸುದ್ದಿ ಗೋಷ್ಟಿಗೆ, ದಾಖಲೆಗಳ ಬಿಡುಗಡೆಗೆ ಸೀಮಿತ. ಇತ್ತೀಚೆಗೆ ಚಿಕ್ಕಮಗಳೂರಿನ ಕಳಸಾದಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ಅಲ್ಲಿನ ನಿವಾಸಿಗಳ ಪರವಾಗಿ ರಸ್ತೆಗಿಳಿದಿದ್ದನ್ನು ಬಿಟ್ಟರೆ ಕುಮಾರಸ್ವಾಮಿಯವರ ಹೋರಾಟಗಳು ಜನರ ನಡುವೆ ಹೆಚ್ಚಾಗಿ ಕಾಣಿಸುವುದಿಲ್ಲ. ಅವರು ಹೋದಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಾರೆ. ಅವರ ಕೈ ಕುಲುಕುತ್ತಾರೆ.  ಜನಪ್ರಿಯತೆಯಿದೆ. ಆದರೆ ಅದು ವೋಟಾಗೋದಿಲ್ಲ. ಯಾಕಂದ್ರೆ ಅವರ ಬಗ್ಗೆ ಪ್ರೀತಿಯಿದ್ದರೂ ಕುಮಾರಸ್ವಾಮಿ ಜನರ ನಡುವೆ ಇಳಿದು ಮಾಡಿರುವ ಕೆಲಸಗಳು, ಹೋರಾಟಗಳು ವೋಟು ಹಾಕುವ ಮತದಾರನ ಕಣ್ಣಿಗೆ ಕಾಣುವುದಿಲ್ಲ. ಇದಕ್ಕಾಗಿ ಅವರು ಮತಹಾಕುವುದಿಲ್ಲ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕುಮಾರಸ್ವಾಮಿಯವರ 20 ತಿಂಗಳ ಆಡಳಿತ ಅವಧಿಯ ಬಗ್ಗೆ ಮಾತನಾಡುವ ಜನ ಸಿಗ್ತಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ಆದರೆ ಕುಮಾರಸ್ವಾಮಿಗೆ ಚುನಾವಣೆ ಹತ್ತಿರವಾಗುವವರೆಗೆ ಜನರ ನಡುವೆ ಇಳಿದು ಕೆಲಸ ಮಾಡುವುದಿಲ್ಲ. ಯಾವುದೋ ಕಾರ್ಯಕ್ರಮಗಳಿಗೆ ಹೋಗಿ ಬರೋದನ್ನೇ ರಾಜ್ಯ ಪ್ರವಾಸ ಅಂತ ಪರಿಗಣಿಸುತ್ತಾರೆ. ಅವರ ಬಳಿ ಬಂದು ಜನ ತೋಡಿಕೊಳ್ಳುವ ಸಮಸ್ಯೆಯನ್ನೇ ಬಹುವಾಗಿ ಜನರ ಸಮಸ್ಯೆ ಅಂತಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ ಮಾಡಿದ್ದವರು ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಅದನ್ನು ಮಾಡಲು ಹೋಗುವುದಿಲ್ಲ.ಈಗ ಇದೆಲ್ಲವನ್ನೂ ಬಿಟ್ಟು ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದು ಕುಮಾರಸ್ವಾಮಿಯವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಹಪಹಪಿಯನ್ನು ತೋರಿಸಿದೆ.

ಕುಮಾರಸ್ವಾಮಿಯವು ಅವಕಾಶಗಳನ್ನು ಅರಸುತ್ತಾ ಹೋಗುತ್ತಾರೆ. ಆದರೆ ಅವಕಾಶಗಳು ತಮ್ಮ ಕಾಲುಬುಡಕ್ಕೆ ಬರುವಂತೆ ಮಾಡುವುದಿಲ್ಲ. ಬಹುಷಃ ಅವರು ಮುಖ್ಯಮಂತ್ರಿಯಾಗಿದ್ದೂ ಅವಕಾಶಗಳನ್ನು ಅರಸುತ್ತಾ ಹೋಗಿದ್ದರಿಂದಲೇ. ದೇವೇಗೌಡರ ರೀತಿಯಲ್ಲಿ ತಮ್ಮದೇ ದುಡಿಮೆಯಿಂದ ಅಧಿಕಾರ ಅವರ ಕೈಗೆ ಬಂದಿಲ್ಲವಲ್ಲ!

Friday, April 25, 2014

ಇದು ಅಂತಿಂತಾ ಓಟವಲ್ಲ- ಸ್ವಾತಂತ್ರ್ಯದ ಓಟ!

" ಇದನ್ನು ರಿಟೈರ್‌ಮೆಂಟ್‌ ಆದ್ಮೇಲೆ ಓದೋಕೆಂದು ಬರೆದಿದ್ದಾ..?" ಪುಸ್ತಕದಂಗಡಿಯಲ್ಲಿ ಆ ಪುಸ್ತಕ ಎತ್ತಿಕೊಂಡಾಗ ತಮಾಷೆಗೆ ಹಾಗೆ ಹೇಳಿದ್ದೆ. ಯಾಕೆಂದರೆ ಪುಸ್ತಕದ ಗಾತ್ರ ಹಾಗಿತ್ತು. 200-300 ಪುಟದ ಪುಸ್ತಕವನ್ನೇ ಒಂದು ವಾರ ಓದುವ ನನಗೆ ಅನಾಮತ್ತು 1100ಕ್ಕೂ ಹೆಚ್ಚು ಪುಟಗಳ ಆ ಪುಸ್ತಕ ಕೈಗೆತ್ತಿಕೊಂಡಾಗ ಇದನ್ನು ಓದಿ ಮುಗಿಸೋದು ಯಾವಾಗ ಅನ್ನೋ ಪ್ರಶ್ನೆ ಕಾಡಿತ್ತು. ಕಾದಂಬರಿಯನ್ನು ನಿಧಾನವಾಗಿ ಓದಿದಷ್ಟೂ ಅದರ ಸುಖ ಜಾಸ್ತಿ. ಇನ್ನು ಈ ಪುಸ್ತಕ ಓದಿ ಮುಗಿಸಬೇಕೆಂದರೆ ನಾನು ರಿಟೈರ್ ಆದ ಮೇಲೆ ಮಾತ್ರ ಅಷ್ಟು ಟೈಂ ಸಿಗಬಹುದೇನೋ ಅನ್ನಿಸಿತ್ತು. ಅಂತೂ ಕೆಲಸದ ಬ್ಯುಸಿಯ ನಡುವೆ ಸುಮಾರು 2 ತಿಂಗಳ ಅಂತರದಲ್ಲಿ ಪುಸ್ತಕ ಓದಿ ಮುಗಿಸಿದೆ.

 ಅಂದಹಾಗೆ ಅದು - " ಸ್ವಾತಂತ್ರ್ಯದ ಓಟ". ಬೊಳುವಾರು ಮಹಮದ್ ಕುಂಞಿ ಬರೆದಿರುವ ಕಾದಂಬರಿ.

ಫೇಸ್‌ ಬುಕ್‌ನಲ್ಲಿ ಸ್ವಾತಂತ್ರ್ಯದ ಓಟದ ತುಣುಕುಗಳನ್ನು ಹಾಕಿ ಬೊಳುವಾರರು ಕಾದಂಬರಿಯ ಬಗ್ಗೆ ಹುಚ್ಚು ಹಿಡಿಸಿದ್ದರು. ಪುಸ್ತಕ ಓದಲೇ ಬೇಕೆಂದು ಡಿಸೈಡ್‌ ಮಾಡಿದ್ದೆ. ಈ ಬೊಳುವಾರರ ಕೃತಿಗಳು ಬಹುಬೇಗ ಮಾರಾಟವಾಗಿ ಹೋಗ್ತವೆ. ಅವರ ಹಳೆಯ ಪುಸ್ತಕಗಳಿಗಾಗಿ ಅದೆಷ್ಟೋ ಪುಸ್ತಕದಂಗಡಿಗಳಲ್ಲಿ ಹುಡುಕಾಡಿ ಪಾಡು ಪಟ್ಟಿದ್ದೇನೆ. ಇನ್ನು ಈ ಪುಸ್ತಕವೂ ಕೈ ತಪ್ಪಬಾರದೆಂದು ಕಾದಂಬರಿ ತಂದು ಕುಳಿತೆ.

ಪುಸ್ತಕದ ಗಾತ್ರ ಮೊದಲು ಹೆದರಿಸಿದ್ದರೂ ಓದಲು ಆರಂಭಿಸುತ್ತಿದ್ದಂತೆ ಓಟ ಶುರು. ಓಡುತ್ತಾ, ನಲಿಯುತ್ತಾ, ನಗುತ್ತಾ, ಕಿವುಚುತ್ತಾ, ಕರಗುತ್ತಾ, ಮರುಗುತ್ತಾ ಸಾಗಿದ ಈ ಓಟ ಮುಗಿದಾಗ ಮನಸ್ಸಿನ ತುಂಬಾ ವಿವರಿಸಲಾಗದ ವಿಶಿಷ್ಟ ಅನುಭೂತಿ.

ಕಾದಂಬರಿಯೊಂದು ತನ್ನ ಒಟ್ಟು ವಸ್ತುವಿನ ಮೂಲಕ ಯಾವುದೋ ಒಂದು ಕಾಲಘಟ್ಟದಲ್ಲಿ ಘಟಿಸುತ್ತದೆ. ಹಾಗೇನೇ ಆ ಸಮಯದ ಪ್ರಧಾನ ವಿಚಾರಧಾರೆಗಳ ಜೊತೆಗೆ ಸಂವಾದ ಅಲ್ಲಿನ ಪಾತ್ರಗಳ ಮೂಲಕ ನಡೆದುಹೋಗುವುದು ಸಾಮಾನ್ಯ. ಆದರೆ ಸ್ವಂತತ್ರ ಭಾರತದ ಅರ್ಧ ಶತಮಾನದುದ್ದಕ್ಕೂ ನಡೆಯುವ ಘಟನೆಗಳಿಗೆ ಸಾಕ್ಷಿಪ್ರಜ್ಞೆಯಾಗಿ ನಿಲ್ಲುವ ಕಾದಂಬರಿಯ ವಸ್ತುವೇ ಅಪೂರ್ವ.

ಎಲ್ಲಿಯ ಪಾಕಿಸ್ತಾನದ ಲಾಹೋರ್ ಸಮೀಪದ ಬಹವಾಲಪುರ ಎಲ್ಲಿಯ ಪುತ್ತೂರಿನ ಪಕ್ಕದಲ್ಲಿರುವ ಬೊಳುವಾರರ ಮುತ್ತುಪ್ಪಾಡಿ. ಎತ್ತಣದಿಂದೆತ್ತಣಕ್ಕೆ ಸಂಬಂಧವಯ್ಯ ಅಂತ ಅಚ್ಚರಿಯಾಗುತ್ತದೆ. ಆದರೆ ಬೊಳುವಾರರು ಸಂಬಂಧ ಹೆಣೆದಿದ್ದಾರೆ. ಸ್ವತಂತ್ರ ಭಾರತದಲ್ಲಿ ಘಟಿಸಿದ ಅನೇಕ ಘಟನೆಗಳು, ಅವು ಹಳ್ಳಿಗಳ ಜನಜೀವನದ ಮೇಲೆ ಬೀರುತ್ತಾ ಸಾಗಿದ ಪರಿಣಾಮಗಳು ಕಾದಂಬರಿಯಲ್ಲಿ ಘಟಿಸುತ್ತಾ ಹೋಗುತ್ತದೆ. ಅದೇ ಕಾರಣಕ್ಕೆ ಇದು ಕೇವಲ ಕಾದಂಬರಿಯಲ್ಲ. ಸ್ವತಂತ್ರ ಭಾರತದ ಅನೇಕ ಘಟನಾವಳಿಗಳನ್ನು ಕಾದಂಬರಿಯ ಮೂಲಕ ಹೇಳುತ್ತಾ ಸಾಗಿದ ಇತಿಹಾಸದ ಪುಸ್ತಕವೇನೋ ಅಂತ ಕೆಲವೊಮ್ಮೆ ಭಾಸವಾಗುತ್ತೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟಿಸಿ ಹೋದ ಅನೇಕ ಘಟನೆಗಳು ಕಾಂದಬರಿಯ ಪಾತ್ರಗಳ ಜೊತೆಗೇ ಘಟಿಸುತ್ತದೆ. ಈ ಪಾತ್ರಗಳು ಅವಕ್ಕೆ ಸಾಕ್ಷಿ. ಹೀಗಾಗಿ ಇವರೆಲ್ಲರೂ ಇತಿಹಾಸದ  ಒಂದು ಭಾಗ.

ಸಾಮಾನ್ಯವಾಗಿ ಕಾದಂಬರಿಯಲ್ಲಿ ವಾಸ್ತವದಲ್ಲಿ ಇರದ ವ್ಯಕ್ತಿಗಳೇ ಪಾತ್ರಗಳಾಗುವುದು ಸಹಜ. ಅದಕ್ಕೆ ಕಾದಂಬರಿ ಅನ್ನೋದು. ಕಥೆಯಲ್ಲಾದರೂ ಅಷ್ಟೇ. ಆದರೆ ಸ್ವಾತಂತ್ರ್ಯದ ಓಟದಲ್ಲಿ ಹಾಗಲ್ಲ. ಇಲ್ಲಿ ಬಂದುಹೋಗುವ ಕೆಲವು ವ್ಯಕ್ತಿಗಳು ಪುತ್ತೂರಿನ ಸುತ್ತಮುತ್ತಲ ಪರಿಸರದಲ್ಲಿರುವ ವ್ಯಕ್ತಿಗಳು. ಹೀಗಾಗಿ ಕಾದಂಬರಿ ಸಮಾಕಾಲೀನ ಘಟನೆಗಳ ಜೊತೆಗೇ ಸಾಗುತ್ತದೆ.

ಕಾದಂಬರಿಯಲ್ಲಿ ಬಹುವಾಗಿ ಕಾಡುವುದು ಚಾಂದ್‌ ಅಲೀಯ ಪಾತ್ರ . ಚಾಂದ್ ಅಲೀ, ಚಾಂದಚ್ಚನಾಗಿ, ಚಾಂದಜ್ಜನಾಗುವವರೆಗೆ ಆತ ಇಡೀ ಕಾದಂಬರಿಯ ನಾಯಕ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕು, ಆತನ ನಡೆ ನುಡಿ ಇವೆಲ್ಲವೂ ಓದುಗನನ್ನು ಖಂಡಿತವಾಗಿ ವಿನೀತವಾಗಿಸುತ್ತೆ. ಹೆಚ್ಚು ಮೃದುವಾಗುವಂತೆ ಮಾಡುತ್ತೆ. ಅಪಾಯಗಳ ಸಂದರ್ಭದಲ್ಲೂ ತೋರಬೇಕಾದ ಸಮಚಿತ್ತವನ್ನು ತೋರಿಸಿಕೊಡುತ್ತೆ. ಆದರೆ ಆತನೊಳಗೆ ಬಚ್ಚಿಟ್ಟಿದ್ದ ಸತ್ಯಗಳನ್ನು ಯಾರ ಜೊತೆಯೂ ಹೇಳಲಾಗದೆ ಆತ ಪಡುವ ಪಾಡು ಮಾತ್ರ ಯಾರಿಗೂ ಬೇಡ ಅನ್ನಿಸುತ್ತೆ.

ಇನ್ನೊಂದು ಬಹುಮುಖ್ಯ ಪಾತ್ರ ಮಿಠಾಯಿ ಅವುಲಿಯಾ ಅಲಿಯಾಸ್ ಜೋಳಿಗೆ ಬಾಬಾ ಅಲಿಯಾಸ್ ಬದ್ರುದ್ದೀನ್‌ರದ್ದು. ಬಹುಷಃ ಧರ್ಮದ ನೆಲೆಗಟ್ಟಿನ ಆಧಾರದಲ್ಲಿ ನೋಡುತ್ತಾ ಹೋದಾಗ ಹಾಗೂ ಧರ್ಮ ಮತ್ತು ಬದುಕಿನ ವಾಸ್ತವಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅನ್ನುವ ವಿಚಾರಗಳಲ್ಲಿ ಬಾಬಾನ ದೃಷ್ಟಿಕೋನ ಹೊಸ ನೋಟವನ್ನು ತೋರುತ್ತೆ. ಹೊಸ ದಾರಿದೀಪವಾಗುತ್ತಾ ಸಾಗುತ್ತೆ. ಆದರೆ ಮುಂದೆ ಘಟಿಸುವ ವಿಚಾರಗಳ ಬಗ್ಗೆಯೂ ಹೇಳಬಲ್ಲವರಂತೆ ಕಾಣುವ ಅವುಲಿಯಾ ಬಗ್ಗೆ ಕಾದಂಬರಿ ಓದಿ ಮುಗಿಸಿದಾಗ ನನ್ನ ಮನಸ್ಸಲ್ಲೊಂದು ಆಕ್ಷೇಪ ಹುಟ್ಟಿಕೊಂಡಿತ್ತು. ಅಷ್ಟೆಲ್ಲಾ ಗೊತ್ತಿದ್ದರೂ ಚಾಂದ್‌ ಅಲೀ ಹುಡುಕುತ್ತಿದ್ದ ತನ್ವೀರ್ ಹಾಗೂ ಮೊಹಿಂದರ್ ಎಲ್ಲಿದ್ದಾರೆಂದು ಬಾಬಾ ಯಾಕೆ ಹೇಳಲಿಲ್ಲಾ ಅನ್ನೋದೇ ನನ್ನ ಆಕ್ಷೇಪ. ಆದರೆ ಬೊಳುವಾರರು ಬಾಬಾನ ಬಾಯಲ್ಲಿ ಅಗತ್ಯ ಬಿದ್ದದ್ದನ್ನು ಮಾತ್ರ ಹೇಳಿಸಿ ಕಾದಂಬರಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಆಗಲೇ ಹೇಳಿದೆ ಇದು ಇತಿಹಾಸಕ್ಕೆ ಸಾಕ್ಷಿಯಾಗುತ್ತಾ ಸಾಗಿದ ಕಾದಂಬರಿ ಅನ್ನೋದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಇಂದಿರಾಗಾಂಧಿ ವಿರುದ್ಧ ಘೋಷಣೆ ಕೂಗಿದ್ದರಂತೆ. ಆ ಕಾರಣಕ್ಕೆ ವಿದ್ಯಾರ್ಥಿಗಳನ್ನು ಅರೆಸ್ಟ್‌ ಮಾಡಿ ಜೈಲಿಗಟ್ಟಿದ್ದರಂತೆ. ಆದರೆ ನಾನು ಈ ಕಾದಂಬರಿ ಓದುವವರೆಗೂ ನನಗೆ ಈ ವಿಚಾರ ತಿಳಿದಿರಲಿಲ್ಲ. ಕಾದಂಬರಿ ಓದುವಾಗಲೂ ಇದು ಕಾಲ್ಪನಿಕ ಇರಬಹುದು ಅಂತಷ್ಟೇ ಅಂದುಕೊಂಡಿದ್ದೆ. ಆದರೆ ಮೊನ್ನೆ ಒಬ್ಬರು ಇತಿಹಾಸ ಪ್ರೊಫೆಸರ್ ಜೊತೆ ಮಾತನಾಡುತ್ತಿದ್ದಾಗ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ರು. ವಿದ್ಯಾರ್ಥಿಗಳ ಆ ಒಂದು ಹೋರಾಟ ಬಿಟ್ಟರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಂತಹ ದೊಡ್ಡ ಪ್ರತಿಭಟನೆಗಳು ನಡೆದಿರಲಿಲ್ಲ ಅಂತ ಅವರು ವಿವರಿಸುತ್ತಿದ್ದರು. ಹೀಗೆ ಇತಿಹಾಸದ ಘಟನೆಗಳು ಈ ಕಾದಂಬರಿಯ ಮೂಲಕ ನಮ್ಮನ್ನು ತಲುಪಿವೆ.

ನಾನು ಬೆಳೆದ ಪರಿಸರ ಹಾಗೂ ನನ್ನ ಬುದ್ಧಿ ಬೆಳೆಯುತ್ತಾ ಸಾಗಿದ ಅವಧಿ ರಾಮಜನ್ನಭೂಮಿಯ ಹೆಸರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಅವಧಿ. ಆಗ ನಮ್ಮ ಊರುಗಳಲ್ಲಿ ನಡೆದ ಅವಾಂತರಗಳು ಒಂದೆರಡಲ್ಲ. ಪುತ್ತೂರು ಮತ್ತು ಸುಳ್ಯ ಆಗ ಅಕ್ಷರಷಃ ಬೆಂದುಹೋಗಿತ್ತು. ಆದರೆ ಬೊಳುವಾರರ ಮುತ್ತುಪ್ಪಾಡಿಯಲ್ಲಿ ಚಾಂದ್ ಅಲೀ, ಅನಂತಣ್ಣ, ಪಂಡಿತರಂತಹ ಕೆಲವರು ಅದರಲ್ಲೂ ಇಸ್ಪೀಟ್ ಖಾದರ್ ಹಾಗೂ ಜೊಯಿಸರ ಮಗ ಸೇರಿಕೊಂಡು ಮಾಡಿದ ಕ್ರಮಗಳನ್ನು ಅದ್ಯಾಕೋ ನಮ್ಮ ಊರುಗಳಲ್ಲಿ ಮಾಡಲು ಸಾಧ್ಯವಾಗಲೇ ಇಲ್ಲ. ಅಂದು ನಮ್ಮ ಊರಲ್ಲಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ, ಖಾಯಿಲೆಗಳಿಗೆ ಮಂತ್ರಿಸಿದ ನೀರನ್ನು ಕೊಡುತ್ತಿದ್ದ 'ಧರ್ಮತನ್ನಿ' ಎಂದೇ ಕರೆಸಿಕೊಳ್ಳುತ್ತಿದ್ದ ( ಅವರ ಹೆಸರು ಈಗಲೂ ನನಗೆ ನೆನಪಾಗುವುದಿಲ್ಲ) ಅವರ ಅಂಗಡಿ ಬೆಂಕಿ ಇಟ್ಟಿದ್ದರು. ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ನಮ್ಮೂರಿನ ಧರ್ಮತನ್ನಿಯ ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ಏನು ಸಮಾಧಾನ ಸಿಕ್ಕಿತೋ ನನಗೆ ಈಗಲೂ ಅರ್ಥವಾಗುವುದಿಲ್ಲ. ಆದರೆ ಈ ಎಲ್ಲಾ ಘಟನೆಯಿಂದ ನಮ್ಮ ಊರುಗಳಲ್ಲಿ ಅದುವರೆಗೆ ಅನ್ಯೋನ್ಯವಾಗಿದ್ದ ಹಿಂದೂ ಮುಸಲ್ಮಾನರ ನಡುವೆ ಸಂಶಯದ ಬೀಜ ಬಿತ್ತಲು ಯಶಸ್ವಿಯಾದವರು ಇಂದು ಅದರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕಾದಂಬರಿ ಓದುತ್ತಿದ್ದಾಗ ಈ ಎಲ್ಲಾ ಘಟನೆಗಳು ಅದೇಕೋ ಮನಸ್ಸಿಗೆ ತುಂಬಾ ಕಾಡಲಾರಂಭಿಸಿತ್ತು.

ಕಾದಂಬರಿಯಲ್ಲಿ ಬರುವ ಒಂದು ಅಂಶವನ್ನು ಪ್ರಸ್ತಾಪಿಸಲೇಬೇಕು. ಅದು ಪ್ರವಾದಿಯವರ ಚಿತ್ರಪಟದ ಮಾರಾಟದ್ದು. ಪ್ರವಾದಿಯವರ ಚಿತ್ರಪಟವನ್ನು ಮುತ್ತುಪ್ಪಾಡಿಯಲ್ಲಿ ಹಂಚಿದ ಫಕೀರ ಅಲ್ಲಿಂದ ಕಾಲ್ಕಿತ್ತಿರುತ್ತಾನೆ. ಆದರೆ ಖರೀದಿ ಮಾಡಿದವರು ಚಿತ್ರಪಟ ಖರೀದಿಸಿದ್ದರಿಂದ ತಮಗೆ ಲಾಭವಾಗಿದೆ ಅಂದುಕೊಂಡಿರುತ್ತಾರೆ. ಇದರ ಬಗ್ಗೆ ಹಲವು ಚರ್ಚೆಗಳು ನಡೀತವೆ. ಅಂತಿಮವಾಗಿ ಸೂಫಿಯಜ್ಜ ಕೊಡುವ ಉದಾಹರಣೆ ಹೆಚ್ಚು ಮನಸ್ಸಿಗೆ ನಾಟುತ್ತದೆ. ಹಿಂದೂ ದೇವರುಗಳು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಇದ್ದರಂತೆ. ಅವರ ಚಿತ್ರಪಟಗಳನ್ನಿಟ್ಟು ಪೂಜೆ ಮಾಡುತ್ತಾರೆ. ಹಾಗಿರುವಾಗ ಕೇವರ ಸಾವಿರದೈನೂರು ವರ್ಷಗಳ ಹಿಂದೆ ಇದ್ದ ನಮ್ಮ ಪ್ರವಾದಿಯವರ ಚಿತ್ರಪಟ ಯಾಕಿರಬಾರದು ಎಂದು ಪ್ರಶ್ನಿಸಿ, ಅವರನ್ನು ಹಂಗಿಸಲು ಮುಂದಾದವರ ಬಾಯಿಮುಚ್ಚಿಸುತ್ತಾರೆ.

ಇಂತಹ ಅನೇಕ ಘಟನೆಗಳು ಈ ಕಾದಂಬರಿಯುದ್ದಕ್ಕೂ ಸಾಗುತ್ತವೆ. ಹಾಗೆಯೇ ಬೊಳುವಾರರ ಬರಹದಲ್ಲಿನ ಸೂಕ್ಷ್ಮತೆಯನ್ನು ಓದಿಯೇ ಅನುಭವಿಸಬೇಕು. 1082 ಪುಟಗಳ ಕಾದಂಬರಿಯಲ್ಲಿ ಸಣ್ಣಪುಟ್ಟ ವಸ್ತುಗಳು ಬದಲಾದಾಗಲೂ ಅದಕ್ಕೊಂದು ವಿವರಣೆ ಸಿಗುತ್ತದೆ. ಹಾಗೆಯೇ ಮಹಾಭಾರತದಲ್ಲೋ, ರಾಮಯಣದಲ್ಲೊ ಬರುವಷ್ಟು ಪಾತ್ರಗಳು ಈ ಬೃಹತ್ ಕಾಂದಬರಿಯಲ್ಲಿ ಬಂದು ಹೋಗುತ್ತವೆ. ಆ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಹೆಚ್ಚು ಪ್ರಾಮುಖ್ಯ, ಕಡಿಮ ಪ್ರಾಮುಖ್ಯ ಅನ್ನಿಸುವುದಿಲ್ಲ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆರಂಭದಲ್ಲಿ ಕುವೆಂಪು - ಇಲ್ಲಿ ಎಲ್ಲರೂ ಸಮಾನರು ಅನ್ನುವಂತೆ; ಸ್ವಾತಂತ್ರ್ಯದ ಓಟದಲ್ಲಿನ ಎಲ್ಲ ಪಾತ್ರಗಳೂ ಸಮಾನವೇ. ಕಾದಂಬರಿಯ ಒಂದು ಕಡೆಯಲ್ಲಿ ಬರುವ ಸಾಲುಗಳು - ಸ್ವಾತಂತ್ರ್ಯದ ಓಟದಲ್ಲಿ ಎಲ್ಲರೂ ಸಮಾನರೇ. ಇಲ್ಲಿ ಮೇಲು ಕೀಳಿಲ್ಲ ಅನ್ನುವಂತೆ ಎಲ್ಲಾ ಪಾತ್ರಗಳೂ ಸಮಾನವೇ. ಚಾಂದ್‌ ಅಲೀ ಪಾತ್ರ ಇಡೀ ಕಾದಂಬರಿಯುದ್ದಕ್ಕೂ ಬರುವುದರಿಂದ ಅದು ನಾಯಕ ಪಾತ್ರವಾದರೂ ಸಿನಿಮಿಬ್ರಾಯಿಯನ್ನೋ, ಸುಮತಿಯಕ್ಕಳನ್ನೋ, ಬೂಬಮ್ಮಳನ್ನೋ, ಉಸ್ಮಾನ್ ಅಲಿಯಾಸ್ ಉಮೇಶನನ್ನೋ, ಸಕೀನಾಳನ್ನೋ ನಾವು ಕಡಿಮೆ ತೂಕದ ಪಾತ್ರ ಅನ್ನುವಂತಿಲ್ಲ. ಆದರೆ ಪ್ರತಿಯೊಂದು ಪಾತ್ರ ಬಂದಾಗಲೂ ಅವರನ್ನು ಕಾದಂಬರಿಕಾರ ಪರಿಚಯಿಸುವ ರೀತಿ ನಿಜಕ್ಕೂ ಖುಷಿಕೊಡುತ್ತದೆ. ಅದು ಒಂದು ಸಾಲಿನ ಪರಿಚಯವಾದರೂ ಆಗಬಹುದು ಒಂದು ಪುಟದ ಪರಿಚಯವಾದರೂ ಸರಿಯೇ. ಅವರ ಪಾತ್ರಕ್ಕೆ ಒಗ್ಗುವ ರೀತಿಯಲ್ಲಿ ಪರಿಚಯಿಸಿ ಮುಂದಕ್ಕೆ ಸಾಗುತ್ತಾರೆ.

ಕಾದಂಬರಿಯನ್ನು ಓದಿ ಮುಗಿಸಿದಾಗ ಅದನೋ ಅವ್ಯಕ್ತ ಭಾವನೆ ಮನಸ್ಸಲ್ಲಿ ಮೂಡುತ್ತದೆ. ಮನಸ್ಸನ್ನು ಹಗುರಗೊಳಿಸುತ್ತದೆ. ಜೊತೆಗೆ ಇತಿಹಾಸ ತುಂಬ ಕಾಡುತ್ತದೆ. ಬದುಕಿನ ವೈಚಿತ್ರ್ಯಗಳು ಬೆರಗುಗೊಳಿಸುತ್ತವೆ. ಹುಟ್ಟು ಸಾವಿನ ನಡುವೆ ಮನುಷ್ಯ ಆಡುವ ಆಟಗಳು ಅಸಹ್ಯ ಮೂಡಿಸುತ್ತವೆ. ನಮ್ಮ ಬದುಕಿಗೊಂದು ಹೊಸ ಬಣ್ಣ ಹಚ್ಚಿಕೊಳ್ಳಲು, ಹೊಸ ದಾರಿಯಲ್ಲಿ ಸಾಗಲು ಪ್ರೇರಣೆಯಾಗುತ್ತದೆ.

ಖಂಡಿತವಾಗಿ ಈ ಕಾದಂಬರಿ ಕನ್ನಡದ ಶ್ರೇಷ್ಟ ಕಾದಂಬರಿಗಳ ಸಾಲಿನಲ್ಲಿ ನಿಲ್ಲುತ್ತದೆ.

Wednesday, April 2, 2014

ಉಳಿದವರು ಕಂಡಂತೆ - ಕಂಡಿದ್ದು ಕಾಣದ್ದು

ಸಿನಿಮಾ ನೋಡಲು ಕುಳಿತವನಿಗೆ ಇದ್ದಕ್ಕಿದ್ದಂತೆ ರಷೋಮನ್ ನೆನಪಾಯಿತು. ಒಂದು ಕೊಲೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಸೆರೆಹಿಡಿದ ಸಿನಿಮಾ ರಷೋಮನ್‌. ಅದು ಸಾರ್ವಕಾಲಿಕ ಕ್ಲಾಸಿಕ್‌ ಸಿನಿಮಾ. ಅಕಿರಾ ಕುರುಸೋವಾನ ಮಾಸ್ಟರ್ ಪೀಸ್. ಒಂದು ಕೊಲೆಯ ಸುತ್ತ ಹೆಣೆದ ಕುತೂಹಲಕರ ಕಥಾಹಂದರ ರಷೋಮನ್.

'ಉಳಿದವರು ಕಂಡಂತೆ' ಸಿನಿಮಾ ನೋಡುತ್ತಾ ಕುಳಿತಿದ್ದಾಗ ನೆನಪಾಗಿದ್ದು ರಷೋಮನ್‌. ಅದು ಆರಂಭದಲ್ಲಿ ಒಮ್ಮೆ ಮಾತ್ರ. ಕಾರಣ ಇಷ್ಟೇ. ಇಲ್ಲೂ ಒಂದು ಕೊಲೆಯನ್ನು ಉಳಿದವರು ಕಂಡಂತೆ ದಾಖಲಿಸಲಾಗಿದೆ. ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಶೀತಲ್ ಶೆಟ್ಟಿ ಕೊಲೆಯನ್ನು ಬೇರೆ ಬೇರೆಯವರ ದೃಷ್ಟಿಯಿಂದ ದಾಖಲಿಸುತ್ತಾ ಹೋಗುತ್ತಾರೆ. ಹೀಗಾಗಿ ಇದೂ ಕೂಡ ಒಂದು ಕೊಲೆಯ ಸುತ್ತ ಗಿರಕಿಹೊಡೆಯುವ ಸಿನಿಮಾ. ಆದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಕೊಲೆ ನಡೆದಿದೆ. ಇದರಿಂದಾಗಿ ಉಳಿದವರು ಯಾವ ಕೊಲೆಯನ್ನು ಕಂಡರು ಅನ್ನೋದು ಸ್ವಲ್ಪ ಗೊಂದಲ ಹುಟ್ಟಿಸುತ್ತೆ.

ಸಿನಿಮಾದ ಪ್ಲಸ್‌ ಪಾಯಿಂಟ್‌ ರಕ್ಷಿತ್ ಶೆಟ್ಟಿ. ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡಾಗೆಲ್ಲಾ ನಗು ತೇಲಾಡುತ್ತೆ. ರಿಚ್ಚಿಯಾಗಿ ತಿಕ್ಕಲು ತಿಕ್ಕಲಾಗಿ ಕಾಣಿಸಿಕೊಳ್ಳುವ ರಕ್ಷಿತ್‌ ಶೆಟ್ಟಿ ಚಂದಗೆ ಅಭಿನಯಿಸಿದ್ದಾರೆ. ಇನ್ನು ಕಿಶೋರ್‌ ಕೂಡ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಬರುವ ಪಾತ್ರಗಳೆಲ್ಲವೂ ಸಣ್ಣವೇ. ಆದರೆ ಪ್ರತಿಯೊದು ಪಾತ್ರಕ್ಕೂ ತನ್ನದೇ ಆಳ ಅಗಲವಿದೆ. ಅಂತದ್ದೇ ಒಂದು ಪಾತ್ರ ಪುಟಾಣಿ ಹುಡುಗ ಡೆಮಾಕ್ರಸಿಯದ್ದು.

ಚಿತ್ರದ ಸಂಭಾಷಣೆ ಬಗ್ಗೆ ಹೇಳಲೇಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ನಡೆಯುವ ಕತೆ. ಅದಕ್ಕೆ ತಕ್ಕಂತೆ ಇಲ್ಲಿ ಭಾಷೆ ಬಳಕೆಯಾಗಿದೆ. ತುಳು - ಕನ್ನಡ - ಕುಂದಗನ್ನಡ ಸಂಭಾಷಣೆ ಆ ಪರಿಸರವನ್ನು ಪ್ರತಿಬಿಂಬಿಸುತ್ತೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಭಾಗದ ಕನ್ನಡವನ್ನು ಕಾಶೀನಾಥ್ ಸಿನಿಮಾಗಳಲ್ಲಿ ನೋಡಿದ್ದೇವೆ. ತೀರಾ ನಾಟಕೀಯವಾಗಿ ಕಾಶಿನಾಥ್‌ ಸಿನಿಮಾಗಳಲ್ಲಿ ದಕ್ಷಿಣ ಕನ್ನಡದ ಕನ್ನಡ ಬಳಕೆಯಾಗಿದೆ. ಉಪೇಂದ್ರರ ಬುದ್ಧಿವಂತ ಸಿನಿಮಾದಲ್ಲೂ ಅಷ್ಟೇ. ಆದರೆ ನಿರ್ದೇಶಕರೂ ಆಗಿರುವ ರಕ್ಷಿತ್‌ ಶೆಟ್ಟಿ ಅಲ್ಲಿನ ಭಾಷೆಯನ್ನು ಯಥಾವತ್ತಾಗಿ ಸಿನಿಮಾದ ಸಂಭಾಷಣೆಯಲ್ಲಿ ಬಳಸಿದ್ದಾರೆ. ಇದರಲ್ಲಿ ಭಾಷೆ ನಾಟಕೀಯವಾಗಿ ಕೇಳಿಸುವುದಿಲ್ಲ. ಬದಲಿಗೆ ಅವಿಭಜಿತ ದಕ್ಷಿಣ ಕನ್ನಡದ ಮಾತಿನ ಶೈಲಿಯನ್ನು ಅದೇ ರೀತಿಯಾಗಿ ಹಿಡಿದಿಟ್ಟಿದ್ದಾರೆ.  ರಕ್ಷಿತ್‌ ಶೆಟ್ಟಿಯ ಸೂಕ್ಷ್ಮತೆ ಇದರಲ್ಲಿ ಗೆದ್ದಿದೆ.

ಸಿನಿಮಾದ ನಿಧಾನವಾಗಿ ಸಾಗುತ್ತೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೊಂದು ಸೀನ್‌ಗಳು ತೀರಾ ನಾಟಕೀಯ ಅನ್ನಿಸೋದೂ ಇದೆ. ನಿಧಾನ ಗತಿಯಲ್ಲಿ ಸಾಗುವುದರಿಂದ ಕೆಲವೊಮ್ಮೆ ಬೋರ್‌ ಹೊಡೆಸುತ್ತೆ. ಹಾಗಂತ ಸಿನಿಮಾದಲ್ಲಿ ಮನರಂಜನೆಗೆ - ನಗುವಿಗೆ ಕೊರತೆಯಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಇದೊಂದು ವಿಭಿನ್ನ ಪ್ರಯೋಗ. ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡುವ ನಿರ್ದೇಶಕನಿಗೆ ಗಟ್ಟಿ ಗುಂಡಿಗೆ ಬೇಕು. ಯಾಕಂದರೆ ಹೊಸ ಪ್ರಯೋಗಗಳನ್ನು ಜನ ಹೋಗಲಿ ಸಿನಿಮಾದ ಬಗ್ಗೆ ವಿಮರ್ಶೆ ಬರೆಯುವವರೇ ಮೆಚ್ಚಿಕೊಳ್ಳುವುದು ಕಷ್ಟ. ಈ ಸಿನಿಮಾದ ಬಗ್ಗೆ ಬರೆದ ವಿಮರ್ಶೆಗಳಲ್ಲಿ ಕೆಲವರು ಸಿನಿಮಾ ನೋಡೋದೇ ವ್ಯರ್ಥ ಅಂತೆಲ್ಲಾ ಬರೆದಿದ್ದಾರೆ. ಬರೆಯೋದು ಸುಲಭ. ಆದರೆ ಸಿನಿಮಾ ಮಾಡೋದು ಕಷ್ಟದ ಕೆಲಸ. ನೋಡೋದು ಬಿಡೋದು ಜನರಿಗೆ ಬಿಟ್ಟಿದ್ದು. ಸಿನಿಮಾದ ಇಡೀ ಕತೆಯನ್ನೇ ವಿಮರ್ಷೆಯಲ್ಲಿ ಬರೆದು ಕೊನೆಗೆ ತಮ್ಮದೊಂದು ತೀರ್ಮಾನ ಬರೆಯೋದು ಸುಲಭ. ಆದರೆ ವಿಮರ್ಷಕನ ಕೆಲಸ ಅದಲ್ಲ.


Monday, February 10, 2014

ಮರುಭೂಮಿಯ ಹೂ ಓದಿದ ಮೇಲೆ..

ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಯಾವುದೇ ಪುಸ್ತಕವನ್ನು ಅನಾಮತ್ತು ಒಂದೇ ಸಲ ಓದಿ ಮುಗಿಸುವ ಜಾಯಮಾನ ನನ್ನದಲ್ಲ. ಎಷ್ಟೇ ಕಾಡಿದ್ರೂ ಅದನ್ನು ನಿಧಾನವಾಗಿ ಐದಾರು ದಿನಗಳಲ್ಲಿ ಓದಿ ಮುಗಿಸೋದು ಹವ್ಯಾಸ. ಆದರೆ ' ಮರುಭೂಮಿ ಹೂ' ಅದಕ್ಕೆ ಅವಕಾಶ ಕೊಡಲಿಲ್ಲ. ಸುಸ್ತಾಗಿದೆ ಮಲಗ್ತೀನಿ ಅಂದ್ಕೊಂಡು ಪುಸ್ತಕದ ಮೇಲೆ ಕಣ್ಣಾಡಿಸಲೆಂದು ಎತ್ತಿಕೊಂಡ ಪುಸ್ತಕ ನಿದ್ದೆಯನ್ನೇ ಓಡಿಸಿಬಿಟ್ಟಿತ್ತು.

ಸೊಮಾಲಿಯಾದ ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್. ಮುಸ್ಲಿಂ ಬುಡಕಟ್ಟ ಸಮುದಾಯದ ಹೆಣ್ಣುಮಗಳು. ಮದುವೆಯ ಹೆಸರಲ್ಲಿ ಐದು ಒಂಟೆಗಳ ಬೆಲೆಗೆ ಬಿಕರಿಯಾಗಬೇಕಿದ್ದ ಹೆಣ್ಣುಮಗಳು. ಆದರೆ ಅಮ್ಮನ ಒಪ್ಪಿಗೆ ಪಡೆದು, ಮನೆಬಿಟ್ಟು ಮರಳು ಗಾಡಿನಲ್ಲಿ ಒಂಟಿಯಾಗಿ ಸಾಗಿ ಆಕೆ ಜೀವನದ ಸವಾಲುಗಳನ್ನು ಎದುರಿಸಿದ ರೀತಿ ಮೈ ಜುಮ್ಮೆನಿಸುತ್ತೆ. ಅಂತಹ ಬರಡು ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್ ಮುಂದೊಂದು ದಿನ ಇಡೀ ಜಗತ್ತು ಮೆಚ್ಚುವ ರೂಪದರ್ಶಿಯಾಗಿ ಬೆಳೆದ ಪರಿ ಅನನ್ಯ. ಆಕೆ ಪ್ರತೀ ಬಾರಿ ಹೇಳಿಕೊಳ್ಳುವ ದೇವರೇ ನಿಜಕ್ಕೂ ಇಂತದ್ದೊಂದು ಪವಾಡ ಮಾಡಿದನೇನೋ ಎಂಬಂತೆ ಸಾಗುತ್ತೆ ಆಕೆಯ ಬದುಕು. 

ವಾಸಿರ್‌ಗಿಂತಲೂ ಆಕೆಯ ತಾಯಿಯನ್ನು ಯಾವ ರೀತಿಯಾಗಿ ವಿವರಿಸಬೇಕೋ ಗೊತ್ತಾಗುತ್ತಿಲ್ಲ. ಅಮ್ಮ ಅಂದರೆ ಹೀಗೆ ಅಲ್ವಾ ಅನ್ನಿಸಿಬಿಡುತ್ತೆ. ಆ ತಾಯಿ ತಾನು ಬಯಸಿದ್ದರೆ ವೈಭವೋಪೇತವಾಗಿ ಅಲ್ಲದಿದ್ದರೂ ದಿನದ ಕೂಳಿಗೆ ಪರದಾಡದ ಸ್ಥಿತಿಯಲ್ಲಿ ಬದುಕು ಸಾಗಿಸಬಹುದಿತ್ತು. ಆದರೆ ಆಯ್ಕೆ ಮಾಡಿಕೊಂಡ ಗಂಡನ ಜೊತೆಗೆ ಮರಳುಗಾಡಿನಲ್ಲಿ ಜೀವನ ಸಾಗಿಸುತ್ತಾಳೆ. ಮಕ್ಕಳನ್ನು ಹೆರುತ್ತಾಳೆ. ಸಂಸಾರ ಸಾಗಿಸುತ್ತಾಳೆ. ಆದರೆ ಗಂಡನೆಂಬ ಗಂಡ ಅದೊಂದು ದಿನ ಬೇರೆ ಹೆಣ್ಣನ್ನು ಮದುವೆಯಾಗಿ ಮನೆಗೆ ಕರೆತಂದಾಗ ಒಂದೂ ಮಾತಾಡದೆ ಸುಮ್ಮನಾಗುತ್ತಾಳೆ. ಮುಂದೆ ಆಕೆಯ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊರುತ್ತಾಳೆ. ಅಮ್ಮಾ ನಿನಗೊಂದು ಸಲಾಂ.

ತೇಜಸ್ವಿಯವರು ಅನುವಾದಿಸಿದ 'ಮಹಾಪಲಾಯನ' ಓದಿದಾಗ ಭೀಕರ ಅನುಭವವೊಂದು ಮನಸ್ಸಿಗೆ ನಾಟುತ್ತದೆ. ಸಾದತ್ ಹಸನ್ ಮಂಟೋನ ಕಥೆಗಳನ್ನು ಓದುವಾಗ ಬರ್ಬರತೆಯ ದರ್ಶನವಾಗುತ್ತದೆ. ಆದರೆ ಮರುಭೂಮಿಯ ಹೂವು ಹಾಗಲ್ಲ. ಇದು ಸೃಷ್ಟಿಸುವ ಅನುಭೂತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ. ಅಂತಃಕರಣವನ್ನು ತಟ್ಟುವುದು ಅಂತಾರಲ್ಲ. ಬಹುಷಃ ಅದು ಇದಕ್ಕೇ ಇರಬೇಕು. ಇರುವುದೊಂದೇ ಭೂಮಿ ಮೇಲೆ ನಮ್ಮದೇ ಕಷ್ಟ ಜಾಸ್ತಿ ಅಂತೆಲ್ಲಾ ನಾವು ಅಂದ್ಕೋತೀವಿ. ಆದರೆ ವಾಸಿರ್ ಅನುಭವಿಸಿದ ಮತ್ತು ಸೊಮಾಲಿಯಾದ ಮರಳುಗಾಡಿನಲ್ಲಿ ಇಂದಿಗೂ ಲಕ್ಷಾಂತರ ಹೆಣ್ಣುಮಕ್ಕಳು ಸಾಗಿಸುತ್ತಿರುವ ಬದುಕಿದೆಯಲ್ಲ. ಅದನ್ನು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲವೇನೊ. 

ಹಿರಿಯ ಪತ್ರಕರ್ತ ಡಾ.ಜಗದೀಶ್ ಕೊಪ್ಪ dessert flower ಎಂಬ ವಾಸಿರ್ ಳ ಜೀವನ ಚರಿತ್ರೆಯನ್ನು ಅನುವಾದಿಸಿ ಮರುಭೂಮಿಯ ಹೂವನ್ನು ಕನ್ನಡದ ಜನರ ಕೈಗಿತ್ತಿದ್ದಾರೆ. ಅಚ್ಚುಕಟ್ಟಾದ ಅನುವಾದ ಮೂಲ ಬರಹ ಕನ್ನಡದ್ದೇ ಏನೋ ಎಂಬಷ್ಟು ಆಪ್ತವಾಗಿ ಮೂಡಿಬಂದಿದೆ. ಇದಕ್ಕಾಗಿ ಖಂಡಿತ ಕನ್ನಡಿಗರು ಡಾ.ಜಗದೀಶ್ ಕೊಪ್ಪ ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕು. ಪುಸ್ತಕ ಕೊಂಡು ಓದಿದರೆ ಅದಕ್ಕಿಂತ ಹೆಚ್ಚಿನದ್ದು ಬೇರೆನೂ ಬೇಕಿಲ್ಲವೇನೋ. ಯಾಕೋ ಪುಸ್ತಕ ಓದಿದಮೇಲೆ ಇದೆಲ್ಲವನ್ನೂ ಬರೆಯಬೇಕು ಅನ್ನಿಸ್ತು. ಕೊಂಡು ಓದಿ. 

Friday, January 24, 2014

ಸಾಂಸ್ಕೃತಿಕ ನೀತಿ ರೂಪುಗೊಳ್ಳುತ್ತಿದೆ

ರಾಜ್ಯದಲ್ಲಿ ಕೃಷಿ ನೀತಿ, ಕೈಗಾರಿಕಾ ನೀತಿ, ಯುವ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ, ಹೀಗೆ ಸಾಲು ಸಾಲು ನೀತಿಗಳನ್ನು ಸರ್ಕಾರ ರೂಪಿಸುತ್ತಾ ಬಂದಿದೆ. ಇದಕ್ಕೊಂದು ಹೊಸ ಸೇರ್ಪಡೆಯಾಗಿ ಸಾಂಸ್ಕೃತಿಕ ನೀತಿ ಸೇರಿಕೊಳ್ಳಲಿದೆ. ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹಿರಿಯ ಸಾಹಿತಿಗಳು ವಹಿಸಿಕೊಂಡಿದ್ದಾರೆ.

ಇದರ ನಡುವೆ ಸಾಂಸ್ಕೃತಿಕ ನೀತಿಯನ್ನು ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ವಿರೋಧಿಸಿದ್ದಾರೆ. ತುಂಬ ಅರ್ಥಗರ್ಭಿತವಾದ ಪ್ರತಿಕ್ರಿಯೆಯೊಂದನ್ನು ಅವರು ಕೊಟ್ಟಿದ್ದಾರೆ. ಸಾಂಸ್ಕೃತಿಕ ನೀತಿಯನ್ನು ರೂಪಿಸುವಾಗ ರಾಜ್ಯದಲ್ಲಿ ಆಡಳಿತವಿರುದ ರಾಜಕೀಯ ಪಕ್ಷದ ಆಶಯಗಳು ಅದರೊಳಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಅವರು ಯಾವುದೇ ಪಕ್ಷವನ್ನು ನೇರವಾಗಿ ಉಲ್ಲೇಖಿಸದೇ ಇರೋದರಿಂದ ಇದಕ್ಕೊಂದು ವಿಶಾಲಾರ್ಥವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಇದೆಲ್ಲಾ ಪೂರ್ವಾಗ್ರಹ ಪೀಡಿತ ಹೇಳಿಕೆ ಎಂದು ತಿರಸ್ಕರಿಸಿದ್ದಾರೆ. ಉಮಾಶ್ರೀ ಇದನ್ನು ಕೇವಲ ಕಾಂಗ್ರೆಸ್‌ ಸರ್ಕಾರ ಅನ್ನುವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇಕೋ ಗೊತ್ತಿಲ್ಲ. 

ಸಾಂಸ್ಕೃತಿಕ ನೀತಿ ರಾಜ್ಯದ ಸಂಸ್ಕೃತಿಯನ್ನು ಒಳ್ಳಗೊಂಡಿರುತ್ತದೆ. ಸಂಸ್ಕೃತಿಯನ್ನು ಪೋಷಿಸುವ, ಹಾಗೂ ಬೆಳೆಸುವ ದೂರದೃಷ್ಟಿಯನ್ನು ಹೊಂದಿರಬೇತು. ಇದರಲ್ಲಿ ಪ್ರತಿಯೊಂದು ಸಂಸ್ಕೃತಿಯ ಬಗ್ಗೆಯೂ ಸಮಾನ ದೃಷ್ಟಿಕೋನವಿರಬೇಕು. ಜನಪದ ಸಂಸ್ಕೃತಿ, ಜಾತಿಗಳ ಸಂಸ್ಕೃತಿ, ವೈದಿಕ ಸಂಸ್ಕೃತಿ, ಅಲ್ಪಸಂಖ್ಯಾತರ ಸಂಸ್ಕೃತಿ, ಆದಿವಾಸಿಗಳ ಸಂಸ್ಕೃತಿ ಹೀಗೆ ಸಂಸ್ಕೃತಿಯ ಆಳ ಮತ್ತು ವಿಸ್ತಾರ ದೊಡ್ಡದು. ಇವುಗಳಲ್ಲಿ ಯಾವುದೇ ಸಂಸ್ಕೃತಿಯ ಬಗ್ಗೆಯೂ ಉದಾಸೀನವನ್ನೋ ಅಥವಾ ಉದ್ದೇಶಪೂರ್ವಕ ಕಡೆಗಣನೆ ಮಾಡುವಂತದ್ದು ಸಲ್ಲದು. ಆದರೆ ಭೈರಪ್ಪ ಹೇಳಿದಂತೆ ರಾಜಕೀಯ ಆಶಯಗಳು ಸೇರಿಕೊಂಡಾಗ ಆಡಳಿತದಲ್ಲಿರುವ ಆಯಾ ಪಕ್ಷಗಳ ಹಿತಾಸಕ್ತಿ ಮುಖ್ಯವಾಗುತ್ತದೆ. ಅದು ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು. ಈ ಎರಡೂ ಪಕ್ಷಗಳು ಓಲೈಕೆ ರಾಜಕಾರಣವನ್ನು ಮಾಡುತ್ತಾ ಬಂದಿವೆ. ಇಂತಹ ಓಲೈಕೆಯ ರಾಜಕಾರಣದ ಅಂಶಗಳು ಸಾಂಸ್ಕೃತಿಕ ನೀತಿಯ ಮೇಲೆ ಪರಿಣಾಮ ಬೀರಿದರೆ ಅದರಿಂದ ಅಪಾಯವೇ ಹೆಚ್ಚು. 

ಕೃಷಿ ನೀತಿ, ಕೈಗಾರಿಕಾ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ ಮೊದಲಾದುವುಗಳಲ್ಲಿ ಸರ್ಕಾರದ ನೀತಿ ಸರಿಯಾಗಿಲ್ಲದಿದ್ದರೆ ಅದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು. ರಾಜ್ಯದ ಸಾಧನೆಗಳ ಮೇಲೆ ಅಡ್ಡ ಪರಿಣಾಮಬೀರಬಹುದು. ಇದನ್ನು ಮುಂದೆ ಬರುವ ಸರ್ಕಾರಗಳು ವಿವೇಚನೆಯಿಂದ ಸರಿಪಡಿಸಿಕೊಳ್ಳಬಹುದು. ಆದರೆ ಯುವ ನೀತಿ, ಸಾಂಸ್ಕೃತಿಕ ನೀತಿಯಲ್ಲಿ ಎಡವಟ್ಟುಗಳಾದ್ರೆ ಅದನ್ನು ಸರಿಪಡಿಸೋದು ಕಷ್ಟ. 90ರ ದಶಕದಲ್ಲಿ ದೇಶದಲ್ಲಿ ನಡೆದಿರುವ ಸಾಂಸ್ಕೃತಿಕ ದಾಳಿಗಳ ನಂತರ ಹುಟ್ಟಿಕೊಂಡಿರುವ ಸಮುದಾಯಕ್ಕೆ ಈ ದೇಶದ ಮೂಲ ಬೇರುಗಳ ಆಶಯವೇ ಗೊತ್ತಾಗುತ್ತಿಲ್ಲ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಓದಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುತ್ತಿದೆ. ಮಾನಸಿಕ ಮಾಲಿನ್ಯ ಹಾಗೂ ಬೌದ್ಧಿಕ ದಾರಿದ್ರ್ಯ ಹೆಚ್ಚುತ್ತಿದೆ. ಅಭಿವ್ಯಕ್ತಿಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚುತನ ಹೆಚ್ಚುತ್ತಿದೆ. 

ಸಾಂಸ್ಕೃತಿಕ ನೀತಿಯ ವಿಚಾರದಲ್ಲಿ ಸಾಹಿತಿಗಳ ತಂಡ ಎಷ್ಟೇ ಒಳ್ಳೆಯ ವರದಿಯನ್ನು ನೀಡಿದರೂ ರಾಜಕೀಯ ಪಕ್ಷಗಳು ಇದರಲ್ಲಿರುವ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ಕ್ಯಾಂಪೇನ್ ಶುರುಮಾಡಿದ್ರೂ ಅಚ್ಚರಿಯೇನಿಲ್ಲ. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ವಿಚಾರದಲ್ಲಿ ಇದೇ ಆಗುತ್ತಿದೆ. ಸಾಂಸ್ಕೃತಿಕ ನೀತಿಯೂ ಇದೇ ಅಪಾಯವನ್ನು ಮುಂದೆ ಎದುರಿಸಬಹುದು. 

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜನಪದ ಜಾತ್ರೆ ಅನ್ನೋ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಅಷ್ಟೇ ಅಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತಿ ಶನಿವಾರ ಜನಪದ ಜಾತ್ರೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಬಂದು ಜಾನಪದ ನೃತ್ಯ ವೈಭವವನ್ನು ಕಂಡು ಸಂಭ್ರಮಿಸುತ್ತಿದ್ದರು. ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುವ ನಿಜವಾದ ಆಸಕ್ತಿಯಿರುವ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮುಂದೆ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದೆಲ್ಲಾ ತನ್ನ ಪಕ್ಷದ ಕೊಡುಗೆ ಅಂತಲೇ ಬಿಜೆಪಿ ಬಿಂಬಿಸಿಕೊಂಡು ಬಂದಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಾನಪದ ಜಾತ್ರೆ ನೋಡಲು ಸಿಗಲಿಲ್ಲ !



Tuesday, January 14, 2014

ಮಲ್ಲಿಕಾರ್ಜುನ ಬಂಡೆಯವರ ನೆನೆದು...

ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇತ್ತು. ಹೀಗಾಗಿ ಚುನಾವಣೆಯ ಹಿಂದಿನ ಎರಡು ರಾತ್ರಿಗಳ ವಿವರ ಹೇಳಬೇಕಿಲ್ಲ. ಹಣ ಮತ್ತು ಹೆಂಡದ ಹೊಳೆ ನೇರವಾಗಿ ಮತದಾರರ ಮನೆಗಳತ್ತಲೇ ಹರಿಯೋದು ಈ ರಾತ್ರಿಗಳಲ್ಲಿ. ಸಹಜವಾಗೇ ಟಿವಿ ಪತ್ರಕರ್ತರಿಗೆ ಇಂತ ರಾತ್ರಿಗಳಲ್ಲಿ ಏನಾದ್ರೂ ಎಕ್ಸ್‌ಕ್ಲೂಸಿವ್ ದೃಶ್ಯ ಸಿಗುತ್ತಾ ಅನ್ನೋ ಕುತೂಹಲ ಹೆಚ್ಚು. ಇದಕ್ಕಾಗಿ ಅವತ್ತು ನಾವು ನೈಟ್‌ ರೌಂಡ್ಸ್‌ಗೆ ಹೊರಟಿದ್ವಿ. ನಾನು, ಕುಲಕರ್ಣಿ ಮತ್ತು ಗುಲ್ಬರ್ಗಾ ಕ್ಯಾಮರಾಮನ್ ಗಂಗಾಧರ್.

ರಾತ್ರಿ ಎಲ್ಲಾ ಸುಮಾರು ಕಡೆ ಸುತ್ತಾಡಿ ಕೊನೆಗೆ ನಾವು ಬಂದಿದ್ದು ಗುಲ್ಬರ್ಗಾದ ಶರಣ ಬಸವೇಶ್ವರ ದೇಗುಲದ ಹತ್ತಿರ. ಅಷ್ಟೊತ್ತಿಗೆ ಅಲ್ಲಿ ನಮಗೆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಒಬ್ರು ಎದುರಾದ್ರೂ. ನಮ್‌ ಗಂಗಾಧರ್ ಅವರನ್ನು ಪರಿಚಯಿಸಿದ. ಹಾಗೆ ಅವತ್ತಿನ ರಾತ್ರಿ ಸಿಕ್ಕವರೇ ಮಲ್ಲಿಕಾರ್ಜುನ್ ಬಂಡೆ. ತೆಳು ನೀಲಿ ಬಣ್ಣದ ಟೀ ಶರ್ಟ್‌ ಹಾಕ್ಕೊಂಡಿದ್ರು ಬಂಡೆ. ಕಟ್ಟುಮಸ್ತಾದ ಮೈಕಟ್ಟು. ಖಡಕ್ ಆಫೀಸರ್ ಗೆ ಬೇಕಾದ ವ್ಯಕ್ತಿತ್ವ ಅವರಿಗಿತ್ತು. ಹಾಗೇ ಸುಮ್ಮನೆ ಎಲೆಕ್ಷನ್ ವಿಚಾರದಲ್ಲಿ ಒಂದಷ್ಟು ಹೊತ್ತು ಹರಟೆ ಹೊಡ್ಕೊಂಡು ನಿಂತಿದ್ವಿ. ಅವರ ಮಾತುಗಳಲ್ಲಿ ಚುನಾವಣೆಯಲ್ಲಿ ಹರಿಯುವ ಹಣದ ಹೊಳೆಯ ಬಗ್ಗೆ ತೀವ್ರ ಅಸಮಾಧಾನವಿತ್ತು. ಹೀಗೇ ಡಿಪಾರ್ಟ್‌ಮೆಂಟ್ ವಿಚಾರ - ಅದೂ ಇದೂ ಅಂತ ಮಾತಾಡ್ತಿದ್ವಿ. ಅಷ್ಟೊತ್ತಲ್ಲಿ ಅಲ್ಲೊಂದು ಕಾರ್‌ ಬಂದಿತ್ತು.

ಅದು ವಿಧಾನ ಪರಿಷತ್ ಸದಸ್ಯರೊಬ್ಬರ ಕಾರು. ಸ್ವತಃ ಆ ಶಾಸಕ ಕೂಡ ಅದೇ ಕಾರಿನಲ್ಲಿದ್ರು. ಗುಲ್ಬರ್ಗಾದ ಉಪಚುನಾವಣೆಯಲ್ಲಿ ಅವರು ವಿಶೇಷ ಜವಾಬ್ದಾರಿ ನಿಭಾಯಿಸುತ್ತಿದ್ದವರು. ಹೀಗಾಗಿ ಅವರ ಕಾರಿನಲ್ಲೇನಾದ್ರೂ ಹಣ ಸಾಗಾಟ ಇರಬಹುದಾ ಅನ್ನೋ ಅನುಮಾನ ನಮಗೆ ಕಾಡಿತ್ತು. ಹೇಗಿದ್ರೂ ಜೊತೇಲಿ ಬಂಡೆ ಇದ್ರಲ್ಲಾ. ಅವರ ಜೊತನೇ ಇದನ್ನು ಹೇಳಿದ್ವಿ. ತಕ್ಷಣ ಬಂಡೆ ಕಾರ್ಯಪ್ರವೃತ್ತರಾದ್ರು. ಹೋಗಿ ಶಾಸಕರ ಇನೋವಾ ಕಾರನ್ನು ತಡೆದು ನಿಲ್ಲಿಸಿದ್ರು. ಶಾಸಕರನ್ನು ಕಾರಿಂದ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಿದ್ರು. ಆ ಕಾರಿನಲ್ಲಿ ಹಣ ಇರಲಿಲ್ಲ. ಆದ್ರೆ ಚುನಾವಣೆಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ನಿಷ್ಟುರತೆ ಇಷ್ಟವಾಯಿತು. ಯಾವುದೇ ಮುಲಾಜಿಲ್ಲದೆ ಗುಲ್ಬರ್ಗಾದ ಆ ಪ್ರಭಾವಿ ಶಾಸಕರ ಕಾರನ್ನು ತಪಾಸಣೆ ಮಾಡಿದ್ದು. ಅದೂ ಕ್ಯಾಮರಾ ಮುಂದೆ ಮಾಡೋದು ಇದೆಯಲ್ಲಾ. ಅಧಿಕಾರಿ ದಕ್ಷನಾಗಿದ್ದರೆ ಮಾತ್ರ ಇಂತದ್ದೆಲ್ಲಾ ಮಾಡಲು ಸಾಧ್ಯ. ( ಬೇರೆ ಚುನಾವಣೆಗಳ ಸಂದರ್ಭದಲ್ಲಿ ಬೇಕೆ ಪೊಲೀಸ್ ಅಧಿಕಾರಿಗಳ ಹತ್ತಿರ ನಾವು ಇಂತದ್ದೇ ಅನುಮಾನ ಹೇಳಿದಾಗ ಹಲವು ಸಬೂಬು ಹೇಳಿದ ಉದಾಹರಣೆಗಳು ನಮ್ಮ ಮುಂದಿವೆ.)  ಮಲ್ಲಿಕಾರ್ಜುನ ಬಂಡೆಗೆ ರಾಜಕಾರಣಿಗಳನ್ನು ಓಲೈಸುವ ಮನೋಭಾವ ಇರಲಿಲ್ಲ ಅನ್ನೋದನ್ನು ಇದು ಎತ್ತಿ ತೋರಿಸುತ್ತಿತ್ತು.

ಇದಾದ್ಮೇಲೂ ಒಂದಷ್ಟು ಹೊತ್ತು ಮಾತಾಡಿದ್ವಿ. ಮಲ್ಲಿಕಾರ್ಜುನ ಬಂಡೆ ಮೊದಲ ಭೇಟಿಯಲ್ಲೇ ತುಂಬ ಇಷ್ಟವಾದ್ರು. ಅವರ ಬಗ್ಗೆ ಒಂದು ವಿಶೇಷ ಗೌರವ ಮೂಡಿತ್ತು. ನಮ್ ಗಂಗಾಧರ್ ಕೂಡ ಬಂಡೆಯ ಹಲವು ಸಾಹಸಗಳ ಬಗ್ಗೆ ಅವತ್ತು ರಾತ್ರಿ ಹೇಳ್ತಿದ್ದ. ರಾಜಕಾರಣಿಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಹೆಚ್ಚು ನಿಷ್ಠುರವಾಗಿರುತ್ತಿದ್ದ ಮಲ್ಲಿಕಾರ್ಜುನ್ ಬಂಡೆ ಸಾಮಾನ್ಯ ಜನರ ಬಗ್ಗೆ ಅಷ್ಟೇ ಪ್ರೀತಿಯಿಂದ ವರ್ತಿಸುತ್ತಿದ್ದರು.

ಮೊನ್ನೆ ರೌಡಿ ಮುನ್ನಾನ ಬಲಿಹಾಕಲು ಇದೇ ಸಾಹಸಿ ಮಲ್ಲಿಕಾರ್ಜುನ ಬಂಡೆ ತಮ್ಮ ತಂಡದೊಂದಿಗೆ ಹೋಗಿದ್ದರು. ಕಳೆದ ರಾತ್ರಿ ಬಂಡೆ ಇಹಲೋಕದ ಸಂಬಂಧ ಕಡಿದುಕೊಂಡಿದ್ದಾರೆ. ಬಂಡೆ ನಿಧನರಾದ ಸುದ್ದಿ ಕೇಳಿ ಗುಲ್ಬರ್ಗಾದ ಜನ ತೀವ್ರ ಶೋಕ ತಪ್ತರಾಗಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಜನರ ಪ್ರೀತಿಯನ್ನು ಗಳಿಸೋದು ಸುಲಭವಲ್ಲ. ಕರ್ನಾಟಕ ಇಂತಹ ಹಲವು ದಕ್ಷ ಅಧಿಕಾರಿಗಳನ್ನು ಕಂಡಿದೆ. ಜನ ಪ್ರೀತಿಯಿಂದ ಈಗಲೂ ಹಲವು ಪೊಲೀಸ್ ಅಧಿಕಾರಿಗಳನ್ನು ನೆನೆಯುತ್ತಾರೆ. ಅಂತವರ ಸಾಲಿಗೆ ನಿಸ್ಸಂಶಯವಾಗಿ ಬಂಡೆ ಸೇರುತ್ತಾರೆ.

ಮಲ್ಲಿಕಾರ್ಜುನ ಬಂಡೆ ವ್ಯಕ್ತಿತ್ವ ಛಾಪು ಮೂಡಿಸಿದ ನೆನಪುಗಳು ಅವರ ಸಂಪರ್ಕಕ್ಕೆ ಬಂದವರ ಮನದಲ್ಲಿ ಸದಾ ಹಸಿರಾಗಿರಲಿದೆ. ಆದರೆ ಅವರ ಕುಟುಂಬಕ್ಕೆ ಆದ ನಷ್ಟವನ್ನು ತುಂಬಲು ಅಸಾಧ್ಯ.