Friday, September 20, 2013

ಕೆಳಗಿನವರ ಲೋಕದಲ್ಲಿ ಏನೆಲ್ಲಾ ಉಂಟು...!

ಅದು ಶುರುವಾಗುವುದು ಹೀಗೆ.
ಬೆಳಗು ಇನ್ನೂ ಹರಿದಿರಲಿಲ್ಲ. ಒಂದೆಡೆ ಕೊರೆಯುವ ಚಳಿ. ಆದರೆ ಚಳಿಯೆಂದು ಕುಳಿತರೆ ಹೊಟ್ಟೆ ಹೊರೆಯುವುದು ಹೇಗೆ. ಎದ್ದು ಹೋಗಲೇ ಬೇಕು. ಚಿಂದಿ ಆಯೋದಕ್ಕೆ. ಮಲಗುವ ಗೂಡುಗಳಿಂದ ಹೊರಬಂದು ಕೊರೆಯುವ ಚಳಿಯಲ್ಲಿ ಕೆಲವರು ಚಿಂದಿ ಅರಸಿ ಹೋರಹೋಗುತ್ತಾರೆ. ಹುಡುಗಿಯ ಕಳ್ಳಸಂಬಂಧಿ ಗುಡಿ ಹೊದ್ದು ಹೊರಗೋಡುತ್ತಾನೆ. ರೋಗಗ್ರಸ್ತೆ ಹೆಂಗಸು ಕೆಮ್ಮುತ್ತಾ ನರಳುತ್ತಾಳೆ. ಆಕೆಯ ಗಂಡ ಹೆಂಡತಿ ಸತ್ತರೆ ಸಾಕೆಂದು ಆಶಿಸುವಂತೆ ತನ್ನದೇ ಕೆಲಸದಲ್ಲಿ ನಿರತನಾಗಿದ್ದಾನೆ. ಕೆಲಸ ಮಾಡದ ಸೋಮಾರಿಗಳು ತಮ್ಮದೇ ಹರಟೆಯಲ್ಲಿ ತೊಡಗಿದ್ದಾರೆ. ಕೆಳಗಿನವರ ಲೋಕದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗುತ್ತದೆ.

ಇದು ಎನ್ಎಸ್ ಡಿಯ ಬೆಂಗಳೂರು ಚಾಪ್ಟರ್ ನಲ್ಲಿ ತರಬೇತಿ ಪಡೆದ ಮೊದಲ ತಂಡ ಪ್ರಸ್ತುತಪಡಿಸಿದ ' ಈ ಕೆಳಗಿನವರು' ನಾಟಕ.  ರಷ್ಯನ್ ಸಾಹಿತಿ ಮ್ಯಾಕ್ಸಿಂ ಗೋರ್ಕಿಯ lower depths ನಾಟಕವನ್ನು ಕನ್ನಡಕ್ಕೆ ರೂಪಂತರಿಸಿದ ನಾಟಕವಿದು. ಇದನ್ನು ಅದೆಷ್ಟು ಚೆನ್ನಾಗಿ ಕನ್ನಡಕ್ಕೆ ಬಿ.ಟಿ.ದೇಸಾಯಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆಂದರೆ ಇಡೀ ನಾಟಕ ಕನ್ನಡದ್ದೇ ಮಣ್ಣಿನ ಕಥೆಯಂತಿದೆ. ಅದರ ಭಾಷೆ, ಶೈಲಿ, ವಸ್ತು, ಇತಿಹಾಸ ಎಲ್ಲದರಲ್ಲೂ ಕರ್ನಾಟಕ, ಕನ್ನಡ ಮತ್ತು ಭಾರತದ ಒಳಗಿನ ಕಥೆಯಾಗಿ ಮಾರ್ಪಟ್ಟಿದೆ. ರಷ್ಯಾದ ಬರಹಗಾರನ ಒಟ್ಟು ಆಶಯವನ್ನು ಕನ್ನಡದ ಪರಿಸರದೊಳಗೆ ಬೆರೆಸಿ ತೋರಿಸಲಾಗಿದೆ.

ನಾಟಕ್ಕಾಗಿ ತುಂಬಾ ಅದ್ಭುತ ಸೆಟ್ ಹಾಕಲಾಗಿದೆ. ಅದೇ ಸೆಟ್ ನಲ್ಲಿ ಕೆಳಗಿನವರ ಲೋಕ ನಿಧಾನಕ್ಕೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅಲ್ಲಿನ ವಾಸಿಗಳಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ. ಕೆಲವರು ಜೈಲಿಗೂ ಹೋಗಿ ಬಂದವರು. ಮನೆ ಬಿಟ್ಟು ಬಂದವರು. ಪರಿವಾರ ತೊರೆದು ಪರದೇಶಿಗಳಾದವರು.  ಅವರ ನಡುವೆ ಜಗಳವಿದೆ. ಕೋಪ ತಾಪಗಳು ಆಗಾಗ್ಗೆ ನಡೆಯುತ್ತವೆ. ಆದರೆ ಅದೆಲ್ಲವನ್ನೂ ಮೀರಿದ ಅನ್ಯೋನ್ಯತೆಯಿದೆ. ಸಮಾಜದ ಅಂಕುಡೊಂಕುಗಳ ಬಗ್ಗೆ ಈ ಕೆಳಗಿನವರು ಒಂದು ಪ್ರಬುದ್ಧ ದೃಷ್ಟಿಕೋನವನ್ನೂ ಹೊಂದಿದ್ದಾರೆ.

ಅಲ್ಲಿಗೆ ಬರುವ ಅಜ್ಜಯ್ಯ ತನ್ನದೇ ಕಲ್ಯಾಣ ರಾಜ್ಯ ಹುಡುಕುತ್ತಾ ಹೊರಟವನು. ಇಂದು ಅಲ್ಲಿಗೆ ಬಂದಿದ್ದನಷ್ಟೆ.  ಅವರ ಬದುಕಿನ ಮೇಲೆ ಅಜ್ಜಯ್ಯ ಪ್ರಭಾವ ಬೀರುತ್ತಾನೆ. ಅವರ ಕಥೆಗಳಿಗೆ ಕಿವಿಯಾಗುತ್ತಾನೆ. ಅವರ ಭಾವನೆಗಳಿಗೆ ಮಾತಾಗುತ್ತಾನೆ. ಅವರ ಬದುಕಿಗೆ ದಾರಿಯಾದಂತೆ ಕಾಣುತ್ತಾನೆ.

ಸುಮಾರು ಎರಡೂವರೆಗಂಟೆಗಳ ಸುದೀರ್ಘನಾಟಕವಿದು. ಬದುಕಿನ ಸಂಕೀರ್ಣತೆಯನ್ನು ಮನಸ್ಸಿಗೆ ನಾಟುವಂತೆ ತೆರದಿಡಲಾಗಿದೆ. ನಾಟಕದಲ್ಲಿ ಹಾಸ್ಯವಿದೆ. ಗಂಭೀರ ಚಿಂತನೆಯಿದೆ. ನಗುವಿದೆ. ಅಳುವಿದೆ. ಸಂಗೀತವಿದೆ. ಒಂದು ಅದ್ಭುತ ಲೋಕದ ಅನಾವರಣಗೊಳಿಸಲಾಗಿದೆ.


Sunday, September 8, 2013

ಢುಂಢಿ ಕಾದಂಬರಿ ಸುತ್ತ..

ಢುಂಢಿ ಈಗಾಗ್ಲೇ ಕೋಲಾಹಲ ಎಬ್ಬಿಸಿದ್ದಾನೆ. ಢುಂಢಿಯ ಸೃಷ್ಟಿಕರ್ತ ಪೊಲೀಸರ ಅತಿಥಿಯಾಗಿ ಹೊರಬಂದಿದ್ದಾರೆ. ಯೋಗೇಶ್ ಮಾಸ್ಟರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ ಪ್ರಕರಣ ದಾಖಲಾಗಿದೆ.

ನಿಜಕ್ಕೂ ಒಂದು ಕೃತಿಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲು ಸಾಧ್ಯವೇ? ಹೊಸದಾಗಿ ಬಂದಿರುವ ಕಾದಂಬರಿಯೊಂದಕ್ಕೆ ನಮ್ಮ ಇದುವರೆಗಿನ ಎಲ್ಲಾ ನಂಬಿಕೆಗಳನ್ನು ತೊಡೆದುಹಾಕುವ ಶಕ್ತಿ ಇರುತ್ತದೆಯೇ? ಅಷ್ಟೊಂದು ದುರ್ಬಲವೇ ನಮ್ಮ ಧಾರ್ಮಿಕ ಭಾವನೆಗಳು?

ಇಷ್ಟಕ್ಕೂ ಪುರಾಣದ ಕೃತಿಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಿದ ಮೊದಲ ಕಾದಂಬರಿಯೇನಲ್ಲ ಢುಂಢಿ. ಪುರಾಣದ ವೈಭವಗಳ ಬದಲು ಸಾಮಾನ್ಯ ದೃಷ್ಟಿಕೋನದಿಂದ ರಾಮಾಯಣ ಮಹಾಭಾರತಗಳನ್ನು ಹಲವು ಕೃತಿಗಳಲ್ಲಿ ಚಿತ್ರಿಸಲಾಗಿದೆ. ಢುಂಢಿಯಲ್ಲೂ ಇದನ್ನೇ ಮಾಡಲಾಗಿದೆ. ಸಾಮಾಜಿಕ ದೃಷ್ಟಿಕೋನದಿಂದ ದೇವತ್ವಕ್ಕೆ ಏರುವ ವ್ಯಕ್ತಿಯ ವ್ಯಕ್ತಿತ್ವವನ್ನುಪರಿಚಯಿಸುವ ಕೆಲಸ ಈ ಕೃತಿ ಮಾಡಿದೆ. ಢುಂಢಿಯಾಗಿದ್ದವನು ಗುಣೇಶನಾಗಿ, ಗಣೇಶನಾಗಿ, ಗಣಪತಿಯಾಗಿ ಮಹಾಗಣಪತಿಯಾಗುವ ಹಂತಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ.

ವಿವಾದಗಳಿಂದಾಗಿ ಢುಂಢಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅದರಲ್ಲಿ ಹಾಗೆ ಚಿತ್ರಿಸಲಾಗಿದೆಯಂತೆ. ಗಣಪತಿಯನ್ನು ರೌಡಿಯಂತೆ ಬಿಂಬಿಸಲಾಗಿದೆಯಂತೆ. ಪಾರ್ವತಿಯನ್ನು ಕೆಟ್ಟದಾಗಿ ತೋರಿಸಲಾಗಿದೆಯಂತೆ ಅಂತೆಲ್ಲಾ ಕಾಮೆಂಟ್ ಗಳು ಬರುತ್ತಿವೆ. ಅಂತದ್ದೇನೂ ಕೃತಿಯಲ್ಲಿ ಇಲ್ಲ. ಒಬ್ಬ ಅರಣ್ಯಕನಾಗಿದ್ದ ಢುಂಢಿ ಮುಂದೆ ಪಾರ್ವತಿಯ ಪುತ್ರನಾಗಿ ಗಣಪತಿಯಾಗುತ್ತಾನೆ. ಆರಂಭದಲ್ಲಿ ರುದ್ರ ಪಾರ್ವತಿಯ ಸಂಭೋಗದ ಬಗ್ಗೆ ಸ್ವಲ್ಪ ವಿಸ್ತೃತವಾಗಿ ಯೋಗೇಶ್ ಮಾಸ್ಟರ್ ಬರೆದಿದ್ದಾರೆ. ಇದು ಮುಖ್ಯ ಕಥೆಗೆ ಅವಶ್ಯವಾಗಿದ್ದ ವಿವರಣೆಗಳೇನಲ್ಲ.  ಯೋಗೇಶ್ ಮಾಸ್ಟರ್ ಕೆಲವೇ ವಾಕ್ಯಗಳಲ್ಲಿ ಆ ತೀವ್ರತೆಯನ್ನು ಬರೆಯಬಹುದಿತ್ತು. ಅಷ್ಟೊಂದು ಲಂಭಿಸುವುದರಿಂದ ಕಲ್ಪನೆಯನ್ನು ಕಟ್ಟಿಕೊಡುವ ಬದಲು ಅಸಹ್ಯ ಅನ್ನಿಸುವುದೂ ಇದೆ. ಆದರೆ ಮುಂದೆ ಶಿವ ಪಾರ್ವತಿಯರ ಬಗ್ಗೆ ಅಷ್ಟೇ ಪ್ರೌಢವಾಗಿ ಬರೆಯಲಾಗಿದೆ. ಬರಹದ ಮೇಲೆ ಇನ್ನಷ್ಟು ಹಿಡಿತ ಸಾಧಿಸುತ್ತಿದ್ದರೆ ಹೆಚ್ಚು ಸಾಹಿತ್ಯಿಕವಾಗಿ ಕೃತಿ ಹೊರಬರಲು ಸಾಧ್ಯವಿತ್ತು. ಢುಂಢಿಯನ್ನು ಅರಣ್ಯಕನ ಹಿನ್ನೆಲೆಯಿಂದ ಪರಿಗಣಿಸಿದ್ದರಿಂದ ಆತ ಕ್ರೂರಿಯಾಗಿದ್ದ, ಯಾಗಗಳನ್ನು ಧ್ವಂಸ ಮಾಡುತ್ತಿದ್ದ ಅನ್ನುವುದಕ್ಕೆಲ್ಲಾ ಕಾದಂಬರಿಯಲ್ಲಿ ಸಕಾರಣಗಳು ದೊರೆಯುತ್ತವೆ. ಆರ್ಯ ಮತ್ತು ಅನಾರ್ಯರ ನಡುವಿನ ತಿಕ್ಕಾಟದ ಬಗೆಗಿನ ವಿವರಗಳು ಢುಂಢಿಯನ್ನು ಹೆಚ್ಚು ಆಪ್ತನನ್ನಾಗಿಸುತ್ತದೆ.


ಒಂದು ಕಾದಂಬರಿಯಾಗಿ ಮಾತ್ರ ಢುಂಢಿಯನ್ನು ಓದಿದ್ರೆ ಅದರಲ್ಲಿ ಖುಷಿಪಡುವ ಹಲವು ಅಂಶಗಳಿವೆ. ಹಾಗೆಯೇ ಕೃತಿಯನ್ನು ಆಕ್ಷೇಪಿಸಲೂ ಸಾಕಷ್ಟು ಅಂಶಗಳಿವೆ. ಆದರೆ ಎಲ್ಲವನ್ನೂ ಧಾರ್ಮಿಕ ನಂಬಿಕೆಗಳೊಂದಿಗೆ ತಳುಕುಹಾಕಿ ನೋಡುತ್ತಾ ಹೋದ್ರೆ ವಿವಾದ ಮಾತ್ರ ಕಣ್ಣಿಗೆ ಕಾಣುತ್ತದೆ.


ಕೃತಿಯೊಂದರಿಂದ ಒಂದು ಧರ್ಮದ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಅಂತಾದರೆ ಅದೇ ಧರ್ಮ ಸಹಸ್ರಾರು ವರ್ಷಗಳಿಂದ ಸದೃಢವಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಈಗ ಬೊಬ್ಬೆ ಹೊಡೆಯುವವರಿಂದ ಅದನ್ನು ರಕ್ಷಿಸಲೂ ಸಾಧ್ಯವಿಲ್ಲ. ಅದೇನಿದ್ದರೂ ಅನುಸರಣೆಯಲ್ಲಿ ಉಳಿಯುವಂತದ್ದು. ಬೆಳೆಯುವಂತದ್ದು. ಬೆಳಗುವಂತದ್ದು !

Saturday, September 7, 2013

ಮೆಕ್ಕಾ ದಾರಿಯೆಂಬ ಅದ್ಭುತ ಲೋಕ

ಮೆಕ್ಕಾಗೆ ದಾರಿ ತೋರಿಸಿದ್ದಾರೆ ಪ್ರಸನ್ನ !

ಇದು ಸೌದಿಯಲ್ಲಿನ ಮೆಕ್ಕಾ ಅಲ್ಲ. ದಕ್ಷಿಣ ಆಫ್ರಿಕಾದ ಮೆಕ್ಕಾ. ಈ ಮೆಕ್ಕಾವನ್ನು ನೇರವಾಗಿ ಕನ್ನಡಕ್ಕೆ ಕರೆತಂದು ರವೀಂದ್ರ ಕಲಾಕ್ಷೇತ್ರದಲ್ಲಿ ತೆರೆದಿಟ್ಟರು.
ದಕ್ಷಿಣ ಆಫ್ರಿಕಾದ ಒಂದು ನೈಜ ಕಥೆಯನ್ನು ಆಧರಿಸಿದ ನಾಟಕವಿದು. ವೃದ್ಧೆ ಹೆಲೆನ್ ಳ ತೊಳಲಾಟ. ಗಂಡನ ಸಾವಿನ ನಂತರ ಆಕೆಯನ್ನು ಆವರಿಸಿದ ಕತ್ತಲು. ಅದು ಧರ್ಮ ಹೇರಿದ ಕತ್ತಲೂ ಹೌದು. ಆ ಕತ್ತಲನ್ನು ಮೆಟ್ಟಿ ನಿಲ್ಲಲು ಆಕೆ ಸೃಷ್ಟಿಸಿದ ಮೆಕ್ಕಾ. ಕತ್ತಲಾದಾಗ ಬೆಳಗುವ ಬೆಳಕಲ್ಲಿ ಜಗಮಗಿಸುವ ಲೋಕವದು. ತನ್ನೆಲ್ಲಾ ನೋವನ್ನು ಏಕತಾನತೆಯನ್ನು ಮರೆಯಲು ಆಕೆ ಸೃಷ್ಟಿಸುವ ಪ್ರತಿಮೆಗಳು. ಆ ಪ್ರತಿಮೆ ಕೇವಲ ಆಕೆಯ ತೊಳಲಾಟವನ್ನು ದೂರ ಮಾಡುವುದಷ್ಟೇ ಅಲ್ಲ. ಅದು ಆಕೆಯೊಳಗಿನ ಪ್ರತಿಭಟನೆಯನ್ನು ಅಭಿವ್ಯಕ್ತಿಸುತ್ತವೆ. ಅದು ಆಕೆಯ ಸ್ವಾತಂತ್ರ್ಯದ ಪ್ರತೀಕವಾಗುತ್ತದೆ.

ಇಡೀ ನಾಟಕದಲ್ಲಿ ಬರೋದು ಮೂರೇ ಪಾತ್ರ. ಹೆಲೆನ್ , ಎಲ್ಸಾ ಮತ್ತು ಚರ್ಚ್ ನ ಪಾದ್ರಿ ಮಾರಿಯಟ್ . ಹೆಲೆನ್ ಕೇಪ್ ಟೌನ್ ನಿಂದ ಸುಮಾರು 800 ಮೈಲಿ ದೂರದಲ್ಲಿರುವ ಹಳ್ಳಿಯೊಂದರ ಮುದುಕಿ. ಆಕೆ ಅಲ್ಲೇ ತನ್ನ ಬದುಕನ್ನು ಸವೆಸಿದವಳು. ಆಕೆಯ ಗಂಡ ಸತ್ತು ಆಗಲೇ ಹದಿನೈದು ವರ್ಷ ಕಳೆದಿದ್ದು. ಆಕೆ ಉಳಿದಿರುವ ಸ್ನೇಹಿತೆಯೊಬ್ಬಳೇ.. ಎಲ್ಸಾ.  ಕೇಪ್ ಟೌನ್ ನಲ್ಲಿ ಟೀಚರ್ ಆಗಿರುವ ಎಲ್ಸಾ ಐದು ವರ್ಷಗಳಿಂದ ಹೆಲೆನ್ ಗೆ ಸ್ನೇಹಿತೆ. ಎಲ್ಸಾ ಒಬ್ಬ ವಿಚಾರವಾದಿ ಹೆಣ್ಣು. ದಕ್ಷಿಣ ಆಫ್ರಿಕಾದ ಕರಿಯರ ಬವಣೆಗೆ ಮರಗುತ್ತಾಳೆ. ಚರ್ಚ್ ನ ನೀತಿಗಳನ್ನು ಆಕೆ ವಿರೋಧಿಸುತ್ತಾಳೆ. ವಿದ್ಯಾವಂತೆ ಎಲ್ಸಾಗೆ ಹಳ್ಳಿಯಲ್ಲಿ ತನ್ನದೇ ಲೋಕವನ್ನು ಸೃಷ್ಟಿಸಿಕೊಂಡಿರುವ ಹೆಲೆನ್ ಗೆಳತಿಯಾಗುತ್ತಾಳೆ. ಹೆಲೆನ್ ಮತ್ತು ಎಲ್ಸಾ ನಡುವೆ ಒಂದು ಅನ್ಯೋನ್ಯ ಬಾಂಧವ್ಯ ಬೆಳೆಯುತ್ತೆ. ಹೆಲೆನ್ ಸೃಷ್ಟಿಸಿದ ಮೆಕ್ಕಾ ಅರ್ಥವಾಗುವುದು ಎಲ್ಸಾಗೆ ಮಾತ್ರ. ಉಳಿದವರೆಲ್ಲಾ ಆಕೆಯನ್ನು ಹುಚ್ಚಿಯೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಚರ್ಚ್ ನವರು ಕೂಡ ಇದೇ ಕಾರಣಕ್ಕೆ ಹೆಲೆನ್ ಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಹುನ್ನಾರ ನಡೆಸುತ್ತಾರೆ. ಚರ್ಚ್ ನ ಪಾದ್ರಿ ಮಾರಿಯಟ್ ಹೆಲೆನ್ ಗೆ ಸ್ನೇಹಿತ. ಆತನ ಜೊತೆಗೆ ಹೆಲೆನ್ ಗೆ ಸಲಿಗೆಯಿರುತ್ತೆ. ಆದರೆ ಆತ ತನ್ನ ಮಾತಿನಲ್ಲಿ ಮೋಡಿ ಮಾಡುವವನು. ಅವನ ಮಾತಿಗೆ ಪ್ರತ್ಯುತ್ತರ ಕೊಡೋದು ಅನೇಕ ಬಾರಿ ಹೆಲೆನ್ ಗೆ ಕಷ್ಟವಾಗುತ್ತೆ. ವೃದ್ಧಾಶ್ರಮಕ್ಕೆ ಸೇರಿಸುವ ಅರ್ಜಿಯನ್ನು ಅದೇ ಮಾರಿಯಟ್ ತುಂಬಿರುತ್ತಾನೆ. ಆದ್ರೆ ಅದಕ್ಕೆ ಸಹಿ ಹಾಕಲು ಹೆಲೆನ್ ಗೆ ಒತ್ತಡ ಹೇರುತ್ತಾನೆ. ಹೆಲೆನ್ ಗೆ ತನ್ನ ಮೆಕ್ಕಾ ಬಿಟ್ಟು ವೃದ್ಧಾಶ್ರಮ ಸೇರಲು ಮನಸ್ಸಿಲ್ಲ. ಹಾಗಂತ ಮಾರಿಯಟ್ ನ ಮಾತಿಗೆ ಇಲ್ಲ ಅಂತ ಖಂಡಿತವಾಗಿ ಹೇಳೋದಿಕ್ಕೂ ಸಾಧ್ಯವಾಗದೆ ತೊಳಲಾಡುತ್ತಾಳೆ ಹೆಲೆನ್.
ಅಂದಹಾಗೆ ದಕ್ಷಿಣ ಆಫ್ರಿಕಾದ ನಾಟಕಕಾರ. ಕಾದಂಬರಿಕಾರ ಅಥೊಲ್ ಫುಗಾರ್ಡ್ ಬರೆದಿರುವ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ನಿರ್ದೇಶಿಸಿದ್ದು ಹಿರಿಯ ರಂಗಕರ್ಮಿ ಪ್ರಸನ್ನ. ಇಡೀ ನಾಟಕ ಎರಡು ಅಂಕಗಳಲ್ಲಿ ಮುಗಿದುಹೋಗುತ್ತೆ. ಪ್ರಸನ್ನ ಹೆಚ್ಚಿನ ರಂಗಸಜ್ಜಿಕೆಗಳನ್ನು ನಾಟಕದಲ್ಲಿ ಬಳಸಿಲ್ಲ. ಸಂಭಾಷಣೆ ಮತ್ತು ಅಭಿನಯವೇ ನಾಟಕದ ಜೀವಾಳ. ಅದರ ಮೂಲಕ ಕಲ್ಪನಾ ಲೋಕವನ್ನೇ ನೋಡುಗನ ಮನಸ್ಸಿನಲ್ಲಿ ಸೃಷ್ಟಿಸುವ ಕೆಲಸವನ್ನು ಪ್ರಸನ್ನ ಮಾಡಿದ್ದಾರೆ. ಕೇವಲ ರಂಗಸಜ್ಜಿಕೆಯನ್ನು ಹಾಕಿ ಅದರ ಸೀಮಿತ ಚೌಕಟ್ಟಿನಲ್ಲಿ ನಾಟಕದ ವ್ಯಾಪ್ತಿಯನ್ನು ಮಿತಿಗೊಳಿಸುವ ಬದಲು ನೋಡುಗನ ಕಲ್ಪನೆಗೆ ಅದೆಲ್ಲವನ್ನೂ ಬಿಟ್ಟಿದ್ದಾರೆ. ತರಿಕಿಟ ತಂಡದ ಕಲಾವಿದರು ಇದನ್ನು ಮನೋಜ್ಞವಾಗಿ ರಂಗದ ಮೇಲೆ ಪ್ರದರ್ಶಿಸಿದ್ದಾರೆ.
ಮೆಕ್ಕಾದ ದಾರಿಯ ಅದ್ಭುತ ಲೋಕವನ್ನು ರಂಗದ ಮೇಲೆ ನೋಡುವುದು ಒಂದು ಸುಂದರ ಅನುಭವ !