ಕಳೆದೊಂದು ವಾರದಿಂದ
ವಾಜಪೇಯಿಯವರ ಕಾವ್ಯಲೋಕದಲ್ಲಿ
ವಿಹಾರ ಮಾಡುವಂತಾಗಿದೆ.
‘ಗೀತ್ ನಹೀ ಗಾತಾ ಹೂಂ..'
ನಿಂದು ಶುರುವಾಗಿ ‘ಗೀತ್
ನಯಾ ಗಾತಾ ಹೂಂ..'
ಎನ್ನುವ ಕವಿಯ ಮನ.
ಅದನ್ನು ಹೇಳುವಾಗ ಕವಿ ವಾಜಪೇಯಿಯವರ
ಮುಖದ ಹಾವಭಾವ..!
ವ್ಯಕ್ತಿಗೆ
ಸಾವಿದೆ. ಆದರೆ
ಕವಿಗೆ ಸಾವಿಲ್ಲ.
ಯಾಕಂದ್ರೆ ಕವಿಯ ಕವಿತೆ
ಓದುವಾಗೆಲ್ಲಾ ಜೊತೆಗೆ ಕುಳಿತು
ಓದಿಸುತ್ತಾನೆ.
ಕವಿಯ ಭಾವನೆಗಳು ಜೀವಂತವಾಗಿರುತ್ತವೆ.
ಅದರಲ್ಲಿ ಕವಿ ಜೀವಂತವಾಗಿರುತ್ತಾನೆ.
ರಾಜಕಾರಣಿ ವಾಜಪೇಯಿ ಇಹಲೋಕ
ತ್ಯಜಿಸಿರಬಹುದು.
ಆದರೆ ಕವಿ ವಾಜಪೇಯಿಯ ಕವಿತೆಗಳು
ಜೊತೆಗಿರುತ್ತವೆ.
‘ಕಾಲನ ಕಪಾಲದ ಮೇಲೆ ನನ್ನ
ಭವಿಷ್ಯ ನಾನೇ ಬರೆಯುತ್ತೇನೆ'
ಎಂಬ ಸಾಲುಗಳಲ್ಲಿರುವ ವಿಶ್ವಾಸವೇ
ಇದು.
ನಾನು
ಪಿಯು ಓದುವಾಗ ಶುರುವಾಗಿ ಡಿಗ್ರಿ
ಮುಗಿಸಿ ಮೊದಲ ವರ್ಷದ ಪಿಜಿ
ಮುಗಿಸುವವರೆಗೆ ಪ್ರಧಾನಮಂತ್ರಿಯಾಗಿದ್ದವರು
ಅಟಲ್ ಬಿಹಾರಿ ವಾಜಪೇಯಿ.
ಹೀಗಾಗಿ ನಮ್ಮ ಕಾಲೇಜು ದಿನಗಳ
ಸಂದರ್ಭದಲ್ಲಿ ಪ್ರಧಾನಿಯಾಗಿದ್ದರಿಂದ
ಸ್ಪಷ್ಟವಾಗಿ ಒಂದು ಸರ್ಕಾರ,
ಪ್ರಧಾನಮಂತ್ರಿಯ ಕಾರ್ಯವೈಖರಿ
ಅರ್ಥಮಾಡಿಕೊಳ್ಳಲು ಸಾಧ್ಯವಾಗಿದ್ದ
ಮೊದಲ ಪ್ರಧಾನಮಂತ್ರಿ ವಾಜಪೇಯಿ.
ಬಸ್ ಏರಿ ಲಾಹೋರ್ಗೆ ಹೊರಟಿದ್ದ
ವಾಜಪೇಯಿ ಅಚ್ಚರಿ ಮೂಡಿಸಿದ್ದರು.
‘ ಶಾಂತಿಗೆ ಬದ್ಧರಿದ್ದೇವೆ.
ಆದರೆ ಯುದ್ಧಕ್ಕೂ ನಾವು
ಸಿದ್ಧರಿದ್ದೇವೆ'
ಎಂದು ವಾಜಪೇಯಿ ಕಾರ್ಗಿಲ್
ಯುದ್ಧದ ವೇಳೆ ಮಾಡಿದ್ದ ಘೋಷಣೆ
ಈಗಲೂ ಮನಸಿನಾಳದಲ್ಲಿ ಹಸಿರಾಗಿದೆ.
ಜೈ ಜವಾನ್,
ಜೈ ಕಿಸಾನ್ ಎಂಬ ಘೋಷಣೆಗಳಿಗೆ
ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು
ಜೈ ವಿಜ್ಞಾನ್ ಎಂದು ಸೇರಿಸಿದಾಗ
ವಿಜ್ಞಾನದ ವಿದ್ಯಾರ್ಥಿಯಾಗಿದ್ದ
ನನಗಾಗಿದ್ದ ಆನಂದ ಅಷ್ಟಿಷ್ಟಲ್ಲ.
ಡಿಗ್ರಿಯಲ್ಲಿದ್ದಾಗ
ಒಂದು ಕವಿತೆ ಬರೆದಿದ್ದೆ.
ಆ ಕವಿತೆಯನ್ನು ನಾನು ಬರೆದಿದ್ದು
ಪ್ರಧಾನಿ ವಾಜಪೇಯಿಯವರು ದೆಹಲಿಯಲ್ಲಿ
ವಿಪರೀತಿ ಚಳಿ,
ಹಿಮಪಾತದ ಸಂದರ್ಭದಲ್ಲಿ ಒಂದು
ವಾರದ ಮಟ್ಟಿಗೋ ಏನೋ ವಿಶ್ರಾಂತಿಗೆಂದು
ಗೋವಾಗೆ ತೆರಳಿದ್ದರು.
ಅದನ್ನು ಟೀಕಿಸಿ ಆ ಕವಿತೆಯನ್ನು
ಬರೆದಿದ್ದೆ.
ಅದನ್ನು ಓದಿದ್ದ ನಮ್ಮ
ಎನ್ನೆಂಸಿಯಲ್ಲಿ ಕನ್ನಡ ವಿಭಾಗದ
ಮುಖ್ಯಸ್ಥರಾಗಿದ್ದ ಶಿವಣ್ಣ ಸರ್
ತುಂಬಾ ಚೆನ್ನಾಗಿ ಬರೆದಿದ್ದಿ
ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು.
ನಾನು ಬರೆದಿದ್ದ ಕವಿತೆಗೆ
ಅವರಿಂದ ಸಿಕ್ಕ ಮೊದಲ ಪ್ರಶಂಸೆ
ಅದಾಗಿತ್ತು.
ವಾಜಪೇಯಿ
ಪ್ರಧಾನಿ ಹುದ್ದೆಯ ಅಂತಿಮ ದಿನಗಳಲ್ಲಿ
ಮೊಣಕಾಲಿನ ಆಪರೇಷನ್ ಆದ ನಂತರ
ನಡೆಯುವಾಗ ತುಂಬ ಕಷ್ಟಪಡುತ್ತಿದ್ದರು.
ಮಾತುಗಳಲ್ಲಿ ಹಳೆಯ ವೈಖರಿಯಲ್ಲಿ
ತರಲು ಪ್ರಯಾಸಪಡುತ್ತಿದ್ದರು.
ಮುಂದೆ 2004ರ
ಚುನಾವಣೆಯಲ್ಲಿ ‘ಇಂಡಿಯಾ ಶೈನಿಂಗ್'
ಕ್ಯಾಂಪೇನ್ ಮಾಡಿದ್ರೂ ವಾಪಸ್
ಅಧಿಕಾರಕ್ಕೇರಲು ಸಾಧ್ಯವಾಗಿರಲಿಲ್ಲ.
ಅಲ್ಲಿಂದ ನಂತರ ನಿಧಾನಕ್ಕೆ
ಅನಾರೋಗ್ಯಕ್ಕೆ ಒಳಗಾದ ವಾಜಪೇಯಿ
ಕಳೆದು ಒಂದು ದಶಕದಿಂದ ಹೊರಗೆ
ಕಾಣಿಸಿಕೊಂಡಿರಲಿಲ್ಲ.
ಅವರ ಭಾಷಣಗಳನ್ನು ಕಳೆದೊಂದು
ದಶಕದ ಯುವಕರಿಗೆ ಕೇಳಿಸಿಕೊಳ್ಳುವ
ಸೌಭಾಗ್ಯ ಸಿಕ್ಕಿರಲಿಲ್ಲ.
ವಾಜಪೇಯಿ
ಸ್ವತಂತ್ರ ಭಾರತದ ಶ್ರೇಷ್ಠ ನಾಯಕರ
ಸಾಲಿನಲ್ಲಿ ಸದಾ ನಿಂತಿರುತ್ತಾರೆ.
ಅದು ಕೇವಲ ಅವರು ಪ್ರಧಾನಮಂತ್ರಿಯಾಗಿದ್ದರು
ಎಂಬ ಕಾರಣಕ್ಕೋ,
ಪ್ರಧಾನಮಂತ್ರಿಯಾಗಿ ಮಾಡಿದ
ಕೆಲಸದಿಂದಲೋ ಮಾತ್ರವಲ್ಲ.
ಓರ್ವ ಅಪ್ಪಟ ನಾಯಕನಾಗಿ.
ನೇತಾರನಾಗಿ.
ಸಂಸದೀಯ ಪಟುವಾಗಿ.
ದೇಶದ ಕಟ್ಟಾಳುವಾಗಿ,
ಚಿಂತಕನಾಗಿ.
ಮಾರ್ಗದರ್ಶಿಯಾಗಿ.
ಕವಿಯಾಗಿ.
ಅದೇಕೋ
ಏನೋ, ವಾಜಪೇಯಿ
ಅಂತಿಮ ದರ್ಶನದ ವೇಳೆ ತುಂಬಾ
ಕಾಡಿದ್ದು ಎಲ್.ಕೆ.ಅಡ್ವಾಣಿ.