ಅವತ್ತು ಜೂನ್ 19. ಬೆಳಗ್ಗೆ ಒಂಭತ್ತು ಗಂಟೆಗೆ ನ್ಯೂಸ್ ಒದ್ತಿದ್ದೆ. ಅದ್ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹೊಸ ಚಿತ್ರದ ಆಡಿಯೋ ರಿಲೀಸ್ ಗೆ ಆಟೋ ಓಡಿಸುತ್ತಿದ್ದ ಸುದ್ದಿಯಿತ್ತು. ರಾಜಾರಾಜೇಶ್ವರಿ ನಗರದ ತಮ್ಮ ನಿವಾಸದಿಂದ ದರ್ಶನ್ ರಾಜಾಜಿನಗರದ ರಾಮಮಂದಿರ ಗ್ರೌಂಡ್ ವರೆಗೆ ಆಟೋ ಚಾಲನೆ ಮಾಡ್ತಾ ಬಂದ ಸುದ್ದಿಯದು. ಅದನ್ನು ಓದ್ತಿರೋವಾಗ ಗೆಳೆಯ ಸುನಾಮಿ ಮನಸ್ಸಲ್ಲೇ ಬೈಯ್ಯುತ್ತಿದ್ದೆ. ' ಅಲ್ಲಾ ಇವ್ನ ಬಾಸ್ ದು ಪ್ರೋಗ್ರಾಂ ಇದ್ದೂ ಇವನ್ಯಾಕೆ ಮಡಿಕೇರಿಗೆ ಹೋದ... ಸಂಜೆ ಬರಲಿ ವಿಚಾರಿಸಿಕೊಳ್ಬೇಕು' ಅಂದಕ್ಕೊಂಡಿದ್ದೆ. ಆದ್ರೆ ನನಗೇನು ಗೊತ್ತಿತ್ತು ಅವನು ಬಾರದ ಊರಿಗೆ ಆಗಲೇ ಹೊರಟಿದ್ದ ಅಂತ.
ನ್ಯೂಸ್ ಮುಗಿಸಿ ಸ್ವಲ್ಪ ಹೊತ್ತಿಗೆ ಗೆಳೆಯ ಮುರಳಿ ಫೋನ್ ಮಾಡಿದ್ದ. ' ಲೋ.. ನಿಂಗೇನಾದ್ರೂ ಶೇಖರ್ ನಿನ್ನೆ ಫೋನ್ ಮಾಡಿದ್ನಾ.. ಮಡಿಕೇರಿಗೆ ಹೋಗ್ತೀನಂತಾ' ಅವನ ಮಾತಿನಲ್ಲಿ ಆತಂಕವಿತ್ತು.
ಹೌದು ಫೋನ್ ಮಾಡಿದ್ದ. ಏನ್ ಸಮಾಚಾರ. ಅಂದೆ
ಅವ್ನು ಹೋಗ್ ಬಿಟ್ನಂತೆ ಕಣೋ.. ನೀರಲ್ಲಿ.. ಬೆಳಗ್ಗೆ ನದಿಗೆ ಮುಖ ತೊಳಿಯೋಕೆ ಹೋಗಿದ್ನಂತೆ. ಕೊಚ್ಚಿಕೊಂಡು ಹೋದ್ನಂತೆ. ಅವ್ನ ಜೊತೆಗೆ ಹೋದವ್ರು ಹೇಳ್ತಿದ್ದಾರೆ. ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ. ಒಂದೇ ಸಮನೆ ಮುರಳಿ ಹೇಳ್ತಿದ್ರೆ. ನಂಗೆ ಏನ್ ಮಾತಾಡ್ಬೇಕೋ ಗೊತ್ತಾಗಿರಲಿಲ್ಲ. ಯಾಕಂದ್ರೆ ಅಷ್ಟೊತ್ತಿಗೆ ವಾಸ್ತವ ಸ್ಥಿತಿ ಅರ್ಥವಾಗಿತ್ತು. ಗೆಳೆಯ ಶೇಖರ ಇನ್ನು ಜೀವಂತ ಸಿಗೋದಿಲ್ಲ ಎಂದು ಮನಸ್ಸು ಹೇಳತೊಡಗಿತು. ಆದ್ರೂ ಎಲ್ಲೋ ನದಿ ದಡ ಸೇರಿರಬಹುದು ಎಂಬ ಆಸೆ ಇದ್ದೇ ಇತ್ತು.
ಶೇಖರ್ ನನ್ನು ನಾವೆಲ್ಲಾ ಪ್ರೀತಿಯಿಂದ ಕರೀತಾ ಇದ್ದಿದ್ದು ಸುನಾಮಿ ಅಂತ. ಅವ್ನ ಮಾರುತಿ ಓಮ್ನಿ ಕಾರ್ ನಲ್ಲಿ ಬಂತಾ ಸುನಾಮಿ ಅಂತ ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡಿದ್ದ. ಹೀಗಾಗಿ ಅವನೇ ನಮಗೆ ಸುನಾಮಿ ಆಗಿದ್ದ. ಒಬ್ಬ ಒಳ್ಳೆಯ ಸ್ನೇಹಿತ. ತುಂಬ ಬಡತನದಿಂದ ಬಂದಿದ್ದ. ಆದ್ರೆ ಅದನ್ನೆಲ್ಲವನ್ನೂ ಮರೆಸುವ ಲವಲವಿಕೆ ಇತ್ತು. ಗೆಳೆಯರ ದೊಡ್ಡ ಬಳಗ ಅವನದಾಗಿತ್ತು. ಗೆಳೆಯರ ವಿಚಾರದಲ್ಲಿ ಅವನು ನಿಜಕ್ಕೂ ಶ್ರೀಮಂತ!
ಮೂಲತಃ ಕೋಲಾರದವನದ್ರೂ ಬೆಂಗಳೂರಿನಲ್ಲೇ ಬೆಳೆದ ಹುಡುಗ. ಸುನಾಮಿ ಓದಿದ್ದು ಹತ್ತನೇ ಕ್ಲಾಸ್ ವರೆಗೆ. ನಂತ್ರ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ ನಂತ್ರ ಸ್ವಂತದ್ದೊಂದು ಓಮ್ನಿ ಕಾರು ತಗೊಂಡು ಕುಟುಂಬಕ್ಕೆ ಆಧಾರವಾಗಿದ್ದ. ಛಾಲೆಂಜಿಂಗ್ ಸ್ಟಾರ್ ದರ್ಶನ್ ರ ಕಟ್ಟಾ ಅಭಿಮಾನಿ. ಆರಂಭದಲ್ಲಿ ಬಂತಾ ಸುನಾಮಿ ಅಂತ ಕಾರ್ ನ ಹಿಂಭಾಗದಲ್ಲಿ ಬರೆದುಕೊಂಡಿದ್ದವನು ನಂತ್ರ ಅದನ್ನು 'ನಾ ದರ್ಶನ್ ಪ್ರೇಮಿ' ಅಂತ ಬದಲಾಯಿಸಿಕೊಂಡಿದ್ದ. ದರ್ಶನ್ ಹುಟ್ಟಹಬ್ಬದ ದಿನ ಅನಾಥ ಮಕ್ಕಳಿಗಾಗಿ ಯಾವುದಾದ್ರೂ ಕಾರ್ಯಕ್ರಮ ಆಯೋಜಿಸುತ್ತಿದ್ದ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂದಾಗುತ್ತಿದ್ದ. ಕಾರ್ಯಕ್ರಮಗಳನ್ನು ಆಯೋಜಿಸಲು ಅದೆಲ್ಲೆಲ್ಲಿಂದ ಹಣ ಸಂಗ್ರಹಿಸುತ್ತಿದ್ದನೋ ಅನ್ನೋದು ಇವತ್ತಿಗೂ ನನಗೆ ಸೋಜಿಗದ ಪ್ರಶ್ನೆ. ಆದ್ರೆ ಆತ ಮಾತ್ರ ಯಾವುದಕ್ಕೂ ಟೆನ್ಷನ್ ತಗೊಳ್ಳದೆ ಅದ್ಭುತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ.
ಜೀವನದಲ್ಲಿ ಏನನ್ನಾದ್ರೂ ಸಾಧನೆ ಮಾಡ್ಬೇಕು ಅನ್ನೋ ಹಪಹಪಿ ಅವನಲ್ಲಿತ್ತು. ಅದಕ್ಕಾಗಿ ಅವನ ಜೊತೆ ಡಿಗ್ರಿ ಕರೆಸ್ಪಾಂಡೆಂಟ್ ಆಗಿ ಕಟ್ಟೋ ಅಂತ ಸಲಹೆ ಕೊಟ್ಟಿದ್ದೆ. ಅದಕ್ಕೆ ಒಪ್ಪಿ ಬೆಂಗಳೂರು ಯುನಿವರ್ಸಿಟಿಯಲ್ಲಿ ಕರೆಸ್ಪಾಂಡೆಂಟ್ ಪದವಿಯ ಎರಡು ವರ್ಷ ಮುಗಿಸಿದ್ದ. ಫೈನಲ್ ಇಯರ್ ಎಕ್ಸಾಮ್ ಮುಂದಿನ ವರ್ಷ ಬರೀಬೇಕಿತ್ತು. ಇದ್ರ ನಡುವೆ ಕ್ಯಾಮರಾ ಟ್ರೈನಿಂಗ್ ಪಡ್ಕೊಂಡು ಸಮಯ ನ್ಯೂಸ್ ಚಾನೆಲ್ ನಲ್ಲಿ ಕ್ಯಾಮರಾಮನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಏನನ್ನಾದ್ರೂ ಸಾಧಿಸಬೇಕು ಎಂಬ ಆಸೆಯೇ ಅವನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿತ್ತು.
ಜೂನ್ 18ರಂದು ರಾತ್ರಿ ಎಂಟು ಗಂಟೆ ಹೊತ್ತಿಗೆ ಅವನಿಗೆ ಫೋನ್ ಮಾಡಿದ್ದೆ. ಯಾವುದೋ ಕಾರಣಕ್ಕೆ ಸ್ವಲ್ಪ ಅಪ್ ಸೆಟ್ ಆಗಿದ್ದ. 'ಆದ್ರೆ ಅದಕ್ಕೆಲ್ಲಾ ತಲೆಕೆಡಿಸ್ಕೋಬೇಡಾ ಕಣೋ. ಜೀವನದಲ್ಲಿ ನೀನು ಇನ್ನೂ ದೊಡ್ಡ ಸಾಧನೆಗಳನ್ನು ಮಾಡ್ಬೇಕು' ಎಂದು ಹುರಿದುಂಬಿಸಿದ್ದೆ. ಅವನೂ ಸಮಾಧಾನಗೊಂಡಿದ್ದ. ಇವತ್ತು ನೈಟ್ ಫ್ರೆಂಡ್ಸ್ ಜೊತೆ ಮಡಿಕೇರಿಗೆ ಹೋಗ್ತಿದ್ದೀನಿ. ನಾಳೆ ಸಂಜೆ ಬಂದ್ಮೇ ಲೆ ಫೋನ್ ಮಾಡ್ತೀನಿ ಅಂದಿದ್ದ. ಹಾಗೇ ಏನೋ ತಮಾಷೆ ಮಾಡ್ತಾ ಫೋನಿಟ್ಟಿದ್ದೆ. ಆದ್ರೆ ಯಾರಿಗೆ ಗೊತ್ತಿತ್ತು ಅದೇ ಅವನ ಜೊತೆಗಿನ ಕೊನೆಯ ಸಂಭಾಷಣೆ ಆಗುತ್ತೆ ಅಂತ.
ಮಾರನೇ ದಿನ ಅಂದ್ರೆ ಜೂನ್ 19ರಂದು ಬೆಳಗ್ಗೆ ಮಡಿಕೇರಿ ಸಮೀಪದ ಬಲಮುರಿಯಲ್ಲಿ ಕಾವೇರಿ ನದಿಯಲ್ಲಿ ಮುಖ ತೊಳೆಯಲು ಗೆಳೆಯರೊಂದಿಗೆ ಇಳಿದವನು ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಮೂರು ದಿನ ಹುಡುಕಾಟದ ನಂತ್ರ ಶವವಾಗಿ ಪತ್ತೆಯಾದ.
ಎಷ್ಟೋ ಬಾರಿ ಸುನಾಮಿ ಹೇಳ್ತಿದ್ದ ಮಾತು ನೆನಪಾಗುತ್ತೆ. ಅದೆಲ್ಲಾ ಅವನು ತಮಾಷೆಗಾಗಿ ಹೇಳ್ತಿದ್ದಿದ್ದು. 'ಸಾರ್.. ಲೈಫ್ ನಲ್ಲಿ ಹಿಂಗೆ ಇರೋವಾಗ್ಲೇ ಸತ್ತೋಗ್ಬೇಕು. ಮುವತ್ತು ವರ್ಷಕ್ಕೆಲ್ಲಾ ಸತ್ತೋಗ್ಬೇಕು. ಏನಿರುತ್ತೆ ಸಾರ್ ಲೈಫ್ ನಲ್ಲಿ. ಜನ ಸುಮ್ ಸುಮ್ಮನೆ ಅದು ಬೇಕು ಇದೂ ಬೇಕು ಅಂತ ಬಡಿದಾಡುತ್ತಾರೆ.' ಅಂತ ಹೇಳ್ಕೊಂಡು ನಗಾಡ್ತಿದ್ದ.
ಹೇಳಿದಂತೆ ಅವನು ಬಾರದೂರಿಗೆ ಹೋಗಿಯೇ ಬಿಟ್ಟ !
ಅವನನ್ನು ನಂಬಿದ್ದ ಕುಟುಂಬ ದಿಕ್ಕೇ ತೋಚದೆ ಕುಳಿತಿದೆ. ಗೆಳೆಯರ ಬಳಗದಲ್ಲಿ ತುಂಬಲಾರದ ಶೂನ್ಯ ಉಳಿಸಿಟ್ಟು ಹೋದ. ಬರೀ ನೆನಪನ್ನು ಉಳಿಸಿ.
5 comments:
let his soul rest in peace.............. este nan hel balle
HMMM ......... KELI DUKHA AGGIDE .... LET HIS SOUL RIP
I initially I thought Hari written a "story".....Now its hard to believe that hari written real story.....let his soul rest in peace
AVANA ATMAKKE SHANTHI SIGALI YENDU PRATHISUVA...........
Post a Comment