Saturday, September 7, 2013

ಮೆಕ್ಕಾ ದಾರಿಯೆಂಬ ಅದ್ಭುತ ಲೋಕ

ಮೆಕ್ಕಾಗೆ ದಾರಿ ತೋರಿಸಿದ್ದಾರೆ ಪ್ರಸನ್ನ !

ಇದು ಸೌದಿಯಲ್ಲಿನ ಮೆಕ್ಕಾ ಅಲ್ಲ. ದಕ್ಷಿಣ ಆಫ್ರಿಕಾದ ಮೆಕ್ಕಾ. ಈ ಮೆಕ್ಕಾವನ್ನು ನೇರವಾಗಿ ಕನ್ನಡಕ್ಕೆ ಕರೆತಂದು ರವೀಂದ್ರ ಕಲಾಕ್ಷೇತ್ರದಲ್ಲಿ ತೆರೆದಿಟ್ಟರು.
ದಕ್ಷಿಣ ಆಫ್ರಿಕಾದ ಒಂದು ನೈಜ ಕಥೆಯನ್ನು ಆಧರಿಸಿದ ನಾಟಕವಿದು. ವೃದ್ಧೆ ಹೆಲೆನ್ ಳ ತೊಳಲಾಟ. ಗಂಡನ ಸಾವಿನ ನಂತರ ಆಕೆಯನ್ನು ಆವರಿಸಿದ ಕತ್ತಲು. ಅದು ಧರ್ಮ ಹೇರಿದ ಕತ್ತಲೂ ಹೌದು. ಆ ಕತ್ತಲನ್ನು ಮೆಟ್ಟಿ ನಿಲ್ಲಲು ಆಕೆ ಸೃಷ್ಟಿಸಿದ ಮೆಕ್ಕಾ. ಕತ್ತಲಾದಾಗ ಬೆಳಗುವ ಬೆಳಕಲ್ಲಿ ಜಗಮಗಿಸುವ ಲೋಕವದು. ತನ್ನೆಲ್ಲಾ ನೋವನ್ನು ಏಕತಾನತೆಯನ್ನು ಮರೆಯಲು ಆಕೆ ಸೃಷ್ಟಿಸುವ ಪ್ರತಿಮೆಗಳು. ಆ ಪ್ರತಿಮೆ ಕೇವಲ ಆಕೆಯ ತೊಳಲಾಟವನ್ನು ದೂರ ಮಾಡುವುದಷ್ಟೇ ಅಲ್ಲ. ಅದು ಆಕೆಯೊಳಗಿನ ಪ್ರತಿಭಟನೆಯನ್ನು ಅಭಿವ್ಯಕ್ತಿಸುತ್ತವೆ. ಅದು ಆಕೆಯ ಸ್ವಾತಂತ್ರ್ಯದ ಪ್ರತೀಕವಾಗುತ್ತದೆ.

ಇಡೀ ನಾಟಕದಲ್ಲಿ ಬರೋದು ಮೂರೇ ಪಾತ್ರ. ಹೆಲೆನ್ , ಎಲ್ಸಾ ಮತ್ತು ಚರ್ಚ್ ನ ಪಾದ್ರಿ ಮಾರಿಯಟ್ . ಹೆಲೆನ್ ಕೇಪ್ ಟೌನ್ ನಿಂದ ಸುಮಾರು 800 ಮೈಲಿ ದೂರದಲ್ಲಿರುವ ಹಳ್ಳಿಯೊಂದರ ಮುದುಕಿ. ಆಕೆ ಅಲ್ಲೇ ತನ್ನ ಬದುಕನ್ನು ಸವೆಸಿದವಳು. ಆಕೆಯ ಗಂಡ ಸತ್ತು ಆಗಲೇ ಹದಿನೈದು ವರ್ಷ ಕಳೆದಿದ್ದು. ಆಕೆ ಉಳಿದಿರುವ ಸ್ನೇಹಿತೆಯೊಬ್ಬಳೇ.. ಎಲ್ಸಾ.  ಕೇಪ್ ಟೌನ್ ನಲ್ಲಿ ಟೀಚರ್ ಆಗಿರುವ ಎಲ್ಸಾ ಐದು ವರ್ಷಗಳಿಂದ ಹೆಲೆನ್ ಗೆ ಸ್ನೇಹಿತೆ. ಎಲ್ಸಾ ಒಬ್ಬ ವಿಚಾರವಾದಿ ಹೆಣ್ಣು. ದಕ್ಷಿಣ ಆಫ್ರಿಕಾದ ಕರಿಯರ ಬವಣೆಗೆ ಮರಗುತ್ತಾಳೆ. ಚರ್ಚ್ ನ ನೀತಿಗಳನ್ನು ಆಕೆ ವಿರೋಧಿಸುತ್ತಾಳೆ. ವಿದ್ಯಾವಂತೆ ಎಲ್ಸಾಗೆ ಹಳ್ಳಿಯಲ್ಲಿ ತನ್ನದೇ ಲೋಕವನ್ನು ಸೃಷ್ಟಿಸಿಕೊಂಡಿರುವ ಹೆಲೆನ್ ಗೆಳತಿಯಾಗುತ್ತಾಳೆ. ಹೆಲೆನ್ ಮತ್ತು ಎಲ್ಸಾ ನಡುವೆ ಒಂದು ಅನ್ಯೋನ್ಯ ಬಾಂಧವ್ಯ ಬೆಳೆಯುತ್ತೆ. ಹೆಲೆನ್ ಸೃಷ್ಟಿಸಿದ ಮೆಕ್ಕಾ ಅರ್ಥವಾಗುವುದು ಎಲ್ಸಾಗೆ ಮಾತ್ರ. ಉಳಿದವರೆಲ್ಲಾ ಆಕೆಯನ್ನು ಹುಚ್ಚಿಯೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಚರ್ಚ್ ನವರು ಕೂಡ ಇದೇ ಕಾರಣಕ್ಕೆ ಹೆಲೆನ್ ಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಹುನ್ನಾರ ನಡೆಸುತ್ತಾರೆ. ಚರ್ಚ್ ನ ಪಾದ್ರಿ ಮಾರಿಯಟ್ ಹೆಲೆನ್ ಗೆ ಸ್ನೇಹಿತ. ಆತನ ಜೊತೆಗೆ ಹೆಲೆನ್ ಗೆ ಸಲಿಗೆಯಿರುತ್ತೆ. ಆದರೆ ಆತ ತನ್ನ ಮಾತಿನಲ್ಲಿ ಮೋಡಿ ಮಾಡುವವನು. ಅವನ ಮಾತಿಗೆ ಪ್ರತ್ಯುತ್ತರ ಕೊಡೋದು ಅನೇಕ ಬಾರಿ ಹೆಲೆನ್ ಗೆ ಕಷ್ಟವಾಗುತ್ತೆ. ವೃದ್ಧಾಶ್ರಮಕ್ಕೆ ಸೇರಿಸುವ ಅರ್ಜಿಯನ್ನು ಅದೇ ಮಾರಿಯಟ್ ತುಂಬಿರುತ್ತಾನೆ. ಆದ್ರೆ ಅದಕ್ಕೆ ಸಹಿ ಹಾಕಲು ಹೆಲೆನ್ ಗೆ ಒತ್ತಡ ಹೇರುತ್ತಾನೆ. ಹೆಲೆನ್ ಗೆ ತನ್ನ ಮೆಕ್ಕಾ ಬಿಟ್ಟು ವೃದ್ಧಾಶ್ರಮ ಸೇರಲು ಮನಸ್ಸಿಲ್ಲ. ಹಾಗಂತ ಮಾರಿಯಟ್ ನ ಮಾತಿಗೆ ಇಲ್ಲ ಅಂತ ಖಂಡಿತವಾಗಿ ಹೇಳೋದಿಕ್ಕೂ ಸಾಧ್ಯವಾಗದೆ ತೊಳಲಾಡುತ್ತಾಳೆ ಹೆಲೆನ್.
ಅಂದಹಾಗೆ ದಕ್ಷಿಣ ಆಫ್ರಿಕಾದ ನಾಟಕಕಾರ. ಕಾದಂಬರಿಕಾರ ಅಥೊಲ್ ಫುಗಾರ್ಡ್ ಬರೆದಿರುವ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ನಿರ್ದೇಶಿಸಿದ್ದು ಹಿರಿಯ ರಂಗಕರ್ಮಿ ಪ್ರಸನ್ನ. ಇಡೀ ನಾಟಕ ಎರಡು ಅಂಕಗಳಲ್ಲಿ ಮುಗಿದುಹೋಗುತ್ತೆ. ಪ್ರಸನ್ನ ಹೆಚ್ಚಿನ ರಂಗಸಜ್ಜಿಕೆಗಳನ್ನು ನಾಟಕದಲ್ಲಿ ಬಳಸಿಲ್ಲ. ಸಂಭಾಷಣೆ ಮತ್ತು ಅಭಿನಯವೇ ನಾಟಕದ ಜೀವಾಳ. ಅದರ ಮೂಲಕ ಕಲ್ಪನಾ ಲೋಕವನ್ನೇ ನೋಡುಗನ ಮನಸ್ಸಿನಲ್ಲಿ ಸೃಷ್ಟಿಸುವ ಕೆಲಸವನ್ನು ಪ್ರಸನ್ನ ಮಾಡಿದ್ದಾರೆ. ಕೇವಲ ರಂಗಸಜ್ಜಿಕೆಯನ್ನು ಹಾಕಿ ಅದರ ಸೀಮಿತ ಚೌಕಟ್ಟಿನಲ್ಲಿ ನಾಟಕದ ವ್ಯಾಪ್ತಿಯನ್ನು ಮಿತಿಗೊಳಿಸುವ ಬದಲು ನೋಡುಗನ ಕಲ್ಪನೆಗೆ ಅದೆಲ್ಲವನ್ನೂ ಬಿಟ್ಟಿದ್ದಾರೆ. ತರಿಕಿಟ ತಂಡದ ಕಲಾವಿದರು ಇದನ್ನು ಮನೋಜ್ಞವಾಗಿ ರಂಗದ ಮೇಲೆ ಪ್ರದರ್ಶಿಸಿದ್ದಾರೆ.
ಮೆಕ್ಕಾದ ದಾರಿಯ ಅದ್ಭುತ ಲೋಕವನ್ನು ರಂಗದ ಮೇಲೆ ನೋಡುವುದು ಒಂದು ಸುಂದರ ಅನುಭವ !

5 comments:

Unknown said...

Nice review.
Keep the good work going!!!

Hariprasada. A said...

ಥ್ಯಾಂಕ್ಯೂ ರಫಿ..

Unknown said...

Nice story... good work Hari...

Unknown said...

Nice story... Good work Hari...

Hariprasada. A said...

ಥ್ಯಾಂಕ್ಸ್ ನಯನ...