ನಿದನಿಧಾನ ಸಾಗುವ ರಸ್ತೆ
ಇದರ ತಳುಕೇನು? ಬಳುಕೇನು?
ಸುತ್ತು ಸುತ್ತಲೇ ಹತ್ತಿ ಹೋಗುವ ಸುಸ್ತು
ಮನಕೋಟೆಯ ಮುಂದೆ ತಲೆಎತ್ತಿದ ಘಾಟಿ
ಕತ್ತಲಾವರಿಸಿತು. ಘಾಟಿಗೇನು? ಘಾಟಿ 'ಘಾಟಿ'ಯೇ
ಹೆಸರೇ ಕೃಷ್ಣ. ಕಪ್ಪು ಕತ್ತಲು.
ಸುತ್ತಲೂ ಝಗಮಗಿಸುತಿದೆ ಬೆಳಕು. ಮನೆಗಳು..
ಒಂದು, ಎರಡು, ಮೂರು.. ನೂರು, ಇನ್ನೂರು..
ಸಾವಿರವೇ? ದಾಟಿರಬೇಕು. ಎಣಿಸುವುದು ಇತ್ತಲೋ?
ಅತ್ತಲೋ...?
ಅತ್ತಲೆಂದರೆ ಅತ್ತಲೇ. ಇತ್ತಲಿಂದಲೇ ಹೋದ ಅತ್ತಲಿಂದಲೇ ತೂರಿ ಬರುತಿದೆ ಬೆಳಕು. ಕತ್ತಲೋಡಿಸಲು
ಆವರಿಸಿದೆ ಅಲ್ಲೂ.. ಇಲ್ಲೂ
ಅತ್ತಲಿಂದಿತ್ತ ಇತ್ತಿಲಿಂದ ಹೋಗುತಿದೆ ಅತ್ತಕೂ.. ಬೆಳಕಿಗೆಲ್ಲಿದೆ ಬೇಲಿ?
ಬೇಲಿಯೇ? ಬೇಲಿಯೂ ಇದೆ ನಡುವೆ. ಬೇಲಿಗೂ ಬೆಳಕು. ನಸುನಕ್ಕು ಬೆಳಕು ಬೀರುತಿದೆ ಬೆಳಕು. ನಸುನಕ್ಕಿದ್ದು ಹೌದೋ? ಹೌದೆಂದಿತು ಮನ. ಅಲ್ಲವೋ? ಅಲ್ಲದೆಯೂ ಇರಬಹುದು. ನಿರ್ಲಿಪ್ತ. ನನಗೇನಿದೆ ಹಂಗು? ನಗುವೂ ಇಲ್ಲ ಅಳುವೂ..
ಬೇಲಿ ಬೆಳಕುಗಳ ಮೀರಿ ಹಾರಿ ಬರುತಲಿದೆ
ಸಿಡಿತಲೆಯ ಮದ್ದು ಗುಂಡು
ಢಂ.. ಢಮಾರ್.. ಅಬ್ಬರ.. ಸದ್ದಡಗುವ ನಡುವೆ ಚೀತ್ಕಾರ
ಕಷ್ಣಘಾಟಿಯ ಮಡಿಲ ಮಕ್ಕಳ ಕೂಗು
ಚೆಲ್ಲಿದ ರಕ್ತಕ್ಕೆ ಪ್ರತೀಕಾರದ ಪ್ರತಿಜ್ಞೆ
ಹಾರಲೇಬೇಕು ಸಿಡಿತಲೆಯ ಮದ್ದು
ಸಿಡಿಯಲೇಬೇಕು ಗುಂಡು.. ಚೆಲ್ಲಬೇಕು ರಕ್ತ
ರಕ್ತಕ್ಕೆ ರಕ್ತವೇ ಉತ್ತರ.. ಹಾ ಹಾ.. ರಕ್ತವೇ ಉತ್ತರ.
ಹಾರಿಹೋಗಿದ್ದು ರಕ್ತ ಬೇಕಿಲ್ಲದವರ ಪ್ರಾಣ
ಈಗಲಾದರು ಹರಿಯುವುದು ನಿಲ್ಲುತ್ತಾ ರಕ್ತ? ಇಲ್ಲ?
ನಗು ಮರೆತು ನಿರ್ಲಿಪ್ತವಾಗಿ ಬೆಳಕು ಬೀರುತಿದೆ ಬೇಲಿ
ಮೈಲುದ್ದದವರೆಗೂ ನೆರಳಾಗಿ ಕಾಡುತಿದೆ ಭಯ
ಯಾವುದರ ಗೊಡವೆಯಿಲ್ಲದೆ ನಿದ್ರೆಗೆ ಜಾರುತಿದೆ ಘಾಟಿ
ಕೃಷ್ಣಘಾಟಿ.
- ಹರಿಪ್ರಸಾದ್ ಅಡ್ಪಂಗಾಯ
(ಮನಕೋಟೆಯಿಂದ ಕೃಷ್ಣಘಾಟಿ ಹತ್ತಿಳಿದು ಪೂಂಚ್ ಗೆ ಬರುವ ಹಾದಿಯಲ್ಲಿ ಬರೆದಿದ್ದು)
No comments:
Post a Comment