Monday, February 10, 2014

ಮರುಭೂಮಿಯ ಹೂ ಓದಿದ ಮೇಲೆ..

ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಯಾವುದೇ ಪುಸ್ತಕವನ್ನು ಅನಾಮತ್ತು ಒಂದೇ ಸಲ ಓದಿ ಮುಗಿಸುವ ಜಾಯಮಾನ ನನ್ನದಲ್ಲ. ಎಷ್ಟೇ ಕಾಡಿದ್ರೂ ಅದನ್ನು ನಿಧಾನವಾಗಿ ಐದಾರು ದಿನಗಳಲ್ಲಿ ಓದಿ ಮುಗಿಸೋದು ಹವ್ಯಾಸ. ಆದರೆ ' ಮರುಭೂಮಿ ಹೂ' ಅದಕ್ಕೆ ಅವಕಾಶ ಕೊಡಲಿಲ್ಲ. ಸುಸ್ತಾಗಿದೆ ಮಲಗ್ತೀನಿ ಅಂದ್ಕೊಂಡು ಪುಸ್ತಕದ ಮೇಲೆ ಕಣ್ಣಾಡಿಸಲೆಂದು ಎತ್ತಿಕೊಂಡ ಪುಸ್ತಕ ನಿದ್ದೆಯನ್ನೇ ಓಡಿಸಿಬಿಟ್ಟಿತ್ತು.

ಸೊಮಾಲಿಯಾದ ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್. ಮುಸ್ಲಿಂ ಬುಡಕಟ್ಟ ಸಮುದಾಯದ ಹೆಣ್ಣುಮಗಳು. ಮದುವೆಯ ಹೆಸರಲ್ಲಿ ಐದು ಒಂಟೆಗಳ ಬೆಲೆಗೆ ಬಿಕರಿಯಾಗಬೇಕಿದ್ದ ಹೆಣ್ಣುಮಗಳು. ಆದರೆ ಅಮ್ಮನ ಒಪ್ಪಿಗೆ ಪಡೆದು, ಮನೆಬಿಟ್ಟು ಮರಳು ಗಾಡಿನಲ್ಲಿ ಒಂಟಿಯಾಗಿ ಸಾಗಿ ಆಕೆ ಜೀವನದ ಸವಾಲುಗಳನ್ನು ಎದುರಿಸಿದ ರೀತಿ ಮೈ ಜುಮ್ಮೆನಿಸುತ್ತೆ. ಅಂತಹ ಬರಡು ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್ ಮುಂದೊಂದು ದಿನ ಇಡೀ ಜಗತ್ತು ಮೆಚ್ಚುವ ರೂಪದರ್ಶಿಯಾಗಿ ಬೆಳೆದ ಪರಿ ಅನನ್ಯ. ಆಕೆ ಪ್ರತೀ ಬಾರಿ ಹೇಳಿಕೊಳ್ಳುವ ದೇವರೇ ನಿಜಕ್ಕೂ ಇಂತದ್ದೊಂದು ಪವಾಡ ಮಾಡಿದನೇನೋ ಎಂಬಂತೆ ಸಾಗುತ್ತೆ ಆಕೆಯ ಬದುಕು. 

ವಾಸಿರ್‌ಗಿಂತಲೂ ಆಕೆಯ ತಾಯಿಯನ್ನು ಯಾವ ರೀತಿಯಾಗಿ ವಿವರಿಸಬೇಕೋ ಗೊತ್ತಾಗುತ್ತಿಲ್ಲ. ಅಮ್ಮ ಅಂದರೆ ಹೀಗೆ ಅಲ್ವಾ ಅನ್ನಿಸಿಬಿಡುತ್ತೆ. ಆ ತಾಯಿ ತಾನು ಬಯಸಿದ್ದರೆ ವೈಭವೋಪೇತವಾಗಿ ಅಲ್ಲದಿದ್ದರೂ ದಿನದ ಕೂಳಿಗೆ ಪರದಾಡದ ಸ್ಥಿತಿಯಲ್ಲಿ ಬದುಕು ಸಾಗಿಸಬಹುದಿತ್ತು. ಆದರೆ ಆಯ್ಕೆ ಮಾಡಿಕೊಂಡ ಗಂಡನ ಜೊತೆಗೆ ಮರಳುಗಾಡಿನಲ್ಲಿ ಜೀವನ ಸಾಗಿಸುತ್ತಾಳೆ. ಮಕ್ಕಳನ್ನು ಹೆರುತ್ತಾಳೆ. ಸಂಸಾರ ಸಾಗಿಸುತ್ತಾಳೆ. ಆದರೆ ಗಂಡನೆಂಬ ಗಂಡ ಅದೊಂದು ದಿನ ಬೇರೆ ಹೆಣ್ಣನ್ನು ಮದುವೆಯಾಗಿ ಮನೆಗೆ ಕರೆತಂದಾಗ ಒಂದೂ ಮಾತಾಡದೆ ಸುಮ್ಮನಾಗುತ್ತಾಳೆ. ಮುಂದೆ ಆಕೆಯ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊರುತ್ತಾಳೆ. ಅಮ್ಮಾ ನಿನಗೊಂದು ಸಲಾಂ.

ತೇಜಸ್ವಿಯವರು ಅನುವಾದಿಸಿದ 'ಮಹಾಪಲಾಯನ' ಓದಿದಾಗ ಭೀಕರ ಅನುಭವವೊಂದು ಮನಸ್ಸಿಗೆ ನಾಟುತ್ತದೆ. ಸಾದತ್ ಹಸನ್ ಮಂಟೋನ ಕಥೆಗಳನ್ನು ಓದುವಾಗ ಬರ್ಬರತೆಯ ದರ್ಶನವಾಗುತ್ತದೆ. ಆದರೆ ಮರುಭೂಮಿಯ ಹೂವು ಹಾಗಲ್ಲ. ಇದು ಸೃಷ್ಟಿಸುವ ಅನುಭೂತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ. ಅಂತಃಕರಣವನ್ನು ತಟ್ಟುವುದು ಅಂತಾರಲ್ಲ. ಬಹುಷಃ ಅದು ಇದಕ್ಕೇ ಇರಬೇಕು. ಇರುವುದೊಂದೇ ಭೂಮಿ ಮೇಲೆ ನಮ್ಮದೇ ಕಷ್ಟ ಜಾಸ್ತಿ ಅಂತೆಲ್ಲಾ ನಾವು ಅಂದ್ಕೋತೀವಿ. ಆದರೆ ವಾಸಿರ್ ಅನುಭವಿಸಿದ ಮತ್ತು ಸೊಮಾಲಿಯಾದ ಮರಳುಗಾಡಿನಲ್ಲಿ ಇಂದಿಗೂ ಲಕ್ಷಾಂತರ ಹೆಣ್ಣುಮಕ್ಕಳು ಸಾಗಿಸುತ್ತಿರುವ ಬದುಕಿದೆಯಲ್ಲ. ಅದನ್ನು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲವೇನೊ. 

ಹಿರಿಯ ಪತ್ರಕರ್ತ ಡಾ.ಜಗದೀಶ್ ಕೊಪ್ಪ dessert flower ಎಂಬ ವಾಸಿರ್ ಳ ಜೀವನ ಚರಿತ್ರೆಯನ್ನು ಅನುವಾದಿಸಿ ಮರುಭೂಮಿಯ ಹೂವನ್ನು ಕನ್ನಡದ ಜನರ ಕೈಗಿತ್ತಿದ್ದಾರೆ. ಅಚ್ಚುಕಟ್ಟಾದ ಅನುವಾದ ಮೂಲ ಬರಹ ಕನ್ನಡದ್ದೇ ಏನೋ ಎಂಬಷ್ಟು ಆಪ್ತವಾಗಿ ಮೂಡಿಬಂದಿದೆ. ಇದಕ್ಕಾಗಿ ಖಂಡಿತ ಕನ್ನಡಿಗರು ಡಾ.ಜಗದೀಶ್ ಕೊಪ್ಪ ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕು. ಪುಸ್ತಕ ಕೊಂಡು ಓದಿದರೆ ಅದಕ್ಕಿಂತ ಹೆಚ್ಚಿನದ್ದು ಬೇರೆನೂ ಬೇಕಿಲ್ಲವೇನೋ. ಯಾಕೋ ಪುಸ್ತಕ ಓದಿದಮೇಲೆ ಇದೆಲ್ಲವನ್ನೂ ಬರೆಯಬೇಕು ಅನ್ನಿಸ್ತು. ಕೊಂಡು ಓದಿ. 

Friday, January 24, 2014

ಸಾಂಸ್ಕೃತಿಕ ನೀತಿ ರೂಪುಗೊಳ್ಳುತ್ತಿದೆ

ರಾಜ್ಯದಲ್ಲಿ ಕೃಷಿ ನೀತಿ, ಕೈಗಾರಿಕಾ ನೀತಿ, ಯುವ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ, ಹೀಗೆ ಸಾಲು ಸಾಲು ನೀತಿಗಳನ್ನು ಸರ್ಕಾರ ರೂಪಿಸುತ್ತಾ ಬಂದಿದೆ. ಇದಕ್ಕೊಂದು ಹೊಸ ಸೇರ್ಪಡೆಯಾಗಿ ಸಾಂಸ್ಕೃತಿಕ ನೀತಿ ಸೇರಿಕೊಳ್ಳಲಿದೆ. ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹಿರಿಯ ಸಾಹಿತಿಗಳು ವಹಿಸಿಕೊಂಡಿದ್ದಾರೆ.

ಇದರ ನಡುವೆ ಸಾಂಸ್ಕೃತಿಕ ನೀತಿಯನ್ನು ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ವಿರೋಧಿಸಿದ್ದಾರೆ. ತುಂಬ ಅರ್ಥಗರ್ಭಿತವಾದ ಪ್ರತಿಕ್ರಿಯೆಯೊಂದನ್ನು ಅವರು ಕೊಟ್ಟಿದ್ದಾರೆ. ಸಾಂಸ್ಕೃತಿಕ ನೀತಿಯನ್ನು ರೂಪಿಸುವಾಗ ರಾಜ್ಯದಲ್ಲಿ ಆಡಳಿತವಿರುದ ರಾಜಕೀಯ ಪಕ್ಷದ ಆಶಯಗಳು ಅದರೊಳಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಅವರು ಯಾವುದೇ ಪಕ್ಷವನ್ನು ನೇರವಾಗಿ ಉಲ್ಲೇಖಿಸದೇ ಇರೋದರಿಂದ ಇದಕ್ಕೊಂದು ವಿಶಾಲಾರ್ಥವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಇದೆಲ್ಲಾ ಪೂರ್ವಾಗ್ರಹ ಪೀಡಿತ ಹೇಳಿಕೆ ಎಂದು ತಿರಸ್ಕರಿಸಿದ್ದಾರೆ. ಉಮಾಶ್ರೀ ಇದನ್ನು ಕೇವಲ ಕಾಂಗ್ರೆಸ್‌ ಸರ್ಕಾರ ಅನ್ನುವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇಕೋ ಗೊತ್ತಿಲ್ಲ. 

ಸಾಂಸ್ಕೃತಿಕ ನೀತಿ ರಾಜ್ಯದ ಸಂಸ್ಕೃತಿಯನ್ನು ಒಳ್ಳಗೊಂಡಿರುತ್ತದೆ. ಸಂಸ್ಕೃತಿಯನ್ನು ಪೋಷಿಸುವ, ಹಾಗೂ ಬೆಳೆಸುವ ದೂರದೃಷ್ಟಿಯನ್ನು ಹೊಂದಿರಬೇತು. ಇದರಲ್ಲಿ ಪ್ರತಿಯೊಂದು ಸಂಸ್ಕೃತಿಯ ಬಗ್ಗೆಯೂ ಸಮಾನ ದೃಷ್ಟಿಕೋನವಿರಬೇಕು. ಜನಪದ ಸಂಸ್ಕೃತಿ, ಜಾತಿಗಳ ಸಂಸ್ಕೃತಿ, ವೈದಿಕ ಸಂಸ್ಕೃತಿ, ಅಲ್ಪಸಂಖ್ಯಾತರ ಸಂಸ್ಕೃತಿ, ಆದಿವಾಸಿಗಳ ಸಂಸ್ಕೃತಿ ಹೀಗೆ ಸಂಸ್ಕೃತಿಯ ಆಳ ಮತ್ತು ವಿಸ್ತಾರ ದೊಡ್ಡದು. ಇವುಗಳಲ್ಲಿ ಯಾವುದೇ ಸಂಸ್ಕೃತಿಯ ಬಗ್ಗೆಯೂ ಉದಾಸೀನವನ್ನೋ ಅಥವಾ ಉದ್ದೇಶಪೂರ್ವಕ ಕಡೆಗಣನೆ ಮಾಡುವಂತದ್ದು ಸಲ್ಲದು. ಆದರೆ ಭೈರಪ್ಪ ಹೇಳಿದಂತೆ ರಾಜಕೀಯ ಆಶಯಗಳು ಸೇರಿಕೊಂಡಾಗ ಆಡಳಿತದಲ್ಲಿರುವ ಆಯಾ ಪಕ್ಷಗಳ ಹಿತಾಸಕ್ತಿ ಮುಖ್ಯವಾಗುತ್ತದೆ. ಅದು ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು. ಈ ಎರಡೂ ಪಕ್ಷಗಳು ಓಲೈಕೆ ರಾಜಕಾರಣವನ್ನು ಮಾಡುತ್ತಾ ಬಂದಿವೆ. ಇಂತಹ ಓಲೈಕೆಯ ರಾಜಕಾರಣದ ಅಂಶಗಳು ಸಾಂಸ್ಕೃತಿಕ ನೀತಿಯ ಮೇಲೆ ಪರಿಣಾಮ ಬೀರಿದರೆ ಅದರಿಂದ ಅಪಾಯವೇ ಹೆಚ್ಚು. 

ಕೃಷಿ ನೀತಿ, ಕೈಗಾರಿಕಾ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ ಮೊದಲಾದುವುಗಳಲ್ಲಿ ಸರ್ಕಾರದ ನೀತಿ ಸರಿಯಾಗಿಲ್ಲದಿದ್ದರೆ ಅದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು. ರಾಜ್ಯದ ಸಾಧನೆಗಳ ಮೇಲೆ ಅಡ್ಡ ಪರಿಣಾಮಬೀರಬಹುದು. ಇದನ್ನು ಮುಂದೆ ಬರುವ ಸರ್ಕಾರಗಳು ವಿವೇಚನೆಯಿಂದ ಸರಿಪಡಿಸಿಕೊಳ್ಳಬಹುದು. ಆದರೆ ಯುವ ನೀತಿ, ಸಾಂಸ್ಕೃತಿಕ ನೀತಿಯಲ್ಲಿ ಎಡವಟ್ಟುಗಳಾದ್ರೆ ಅದನ್ನು ಸರಿಪಡಿಸೋದು ಕಷ್ಟ. 90ರ ದಶಕದಲ್ಲಿ ದೇಶದಲ್ಲಿ ನಡೆದಿರುವ ಸಾಂಸ್ಕೃತಿಕ ದಾಳಿಗಳ ನಂತರ ಹುಟ್ಟಿಕೊಂಡಿರುವ ಸಮುದಾಯಕ್ಕೆ ಈ ದೇಶದ ಮೂಲ ಬೇರುಗಳ ಆಶಯವೇ ಗೊತ್ತಾಗುತ್ತಿಲ್ಲ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಓದಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುತ್ತಿದೆ. ಮಾನಸಿಕ ಮಾಲಿನ್ಯ ಹಾಗೂ ಬೌದ್ಧಿಕ ದಾರಿದ್ರ್ಯ ಹೆಚ್ಚುತ್ತಿದೆ. ಅಭಿವ್ಯಕ್ತಿಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚುತನ ಹೆಚ್ಚುತ್ತಿದೆ. 

ಸಾಂಸ್ಕೃತಿಕ ನೀತಿಯ ವಿಚಾರದಲ್ಲಿ ಸಾಹಿತಿಗಳ ತಂಡ ಎಷ್ಟೇ ಒಳ್ಳೆಯ ವರದಿಯನ್ನು ನೀಡಿದರೂ ರಾಜಕೀಯ ಪಕ್ಷಗಳು ಇದರಲ್ಲಿರುವ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ಕ್ಯಾಂಪೇನ್ ಶುರುಮಾಡಿದ್ರೂ ಅಚ್ಚರಿಯೇನಿಲ್ಲ. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ವಿಚಾರದಲ್ಲಿ ಇದೇ ಆಗುತ್ತಿದೆ. ಸಾಂಸ್ಕೃತಿಕ ನೀತಿಯೂ ಇದೇ ಅಪಾಯವನ್ನು ಮುಂದೆ ಎದುರಿಸಬಹುದು. 

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜನಪದ ಜಾತ್ರೆ ಅನ್ನೋ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಅಷ್ಟೇ ಅಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತಿ ಶನಿವಾರ ಜನಪದ ಜಾತ್ರೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಬಂದು ಜಾನಪದ ನೃತ್ಯ ವೈಭವವನ್ನು ಕಂಡು ಸಂಭ್ರಮಿಸುತ್ತಿದ್ದರು. ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುವ ನಿಜವಾದ ಆಸಕ್ತಿಯಿರುವ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮುಂದೆ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದೆಲ್ಲಾ ತನ್ನ ಪಕ್ಷದ ಕೊಡುಗೆ ಅಂತಲೇ ಬಿಜೆಪಿ ಬಿಂಬಿಸಿಕೊಂಡು ಬಂದಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಾನಪದ ಜಾತ್ರೆ ನೋಡಲು ಸಿಗಲಿಲ್ಲ !



Tuesday, January 14, 2014

ಮಲ್ಲಿಕಾರ್ಜುನ ಬಂಡೆಯವರ ನೆನೆದು...

ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇತ್ತು. ಹೀಗಾಗಿ ಚುನಾವಣೆಯ ಹಿಂದಿನ ಎರಡು ರಾತ್ರಿಗಳ ವಿವರ ಹೇಳಬೇಕಿಲ್ಲ. ಹಣ ಮತ್ತು ಹೆಂಡದ ಹೊಳೆ ನೇರವಾಗಿ ಮತದಾರರ ಮನೆಗಳತ್ತಲೇ ಹರಿಯೋದು ಈ ರಾತ್ರಿಗಳಲ್ಲಿ. ಸಹಜವಾಗೇ ಟಿವಿ ಪತ್ರಕರ್ತರಿಗೆ ಇಂತ ರಾತ್ರಿಗಳಲ್ಲಿ ಏನಾದ್ರೂ ಎಕ್ಸ್‌ಕ್ಲೂಸಿವ್ ದೃಶ್ಯ ಸಿಗುತ್ತಾ ಅನ್ನೋ ಕುತೂಹಲ ಹೆಚ್ಚು. ಇದಕ್ಕಾಗಿ ಅವತ್ತು ನಾವು ನೈಟ್‌ ರೌಂಡ್ಸ್‌ಗೆ ಹೊರಟಿದ್ವಿ. ನಾನು, ಕುಲಕರ್ಣಿ ಮತ್ತು ಗುಲ್ಬರ್ಗಾ ಕ್ಯಾಮರಾಮನ್ ಗಂಗಾಧರ್.

ರಾತ್ರಿ ಎಲ್ಲಾ ಸುಮಾರು ಕಡೆ ಸುತ್ತಾಡಿ ಕೊನೆಗೆ ನಾವು ಬಂದಿದ್ದು ಗುಲ್ಬರ್ಗಾದ ಶರಣ ಬಸವೇಶ್ವರ ದೇಗುಲದ ಹತ್ತಿರ. ಅಷ್ಟೊತ್ತಿಗೆ ಅಲ್ಲಿ ನಮಗೆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಒಬ್ರು ಎದುರಾದ್ರೂ. ನಮ್‌ ಗಂಗಾಧರ್ ಅವರನ್ನು ಪರಿಚಯಿಸಿದ. ಹಾಗೆ ಅವತ್ತಿನ ರಾತ್ರಿ ಸಿಕ್ಕವರೇ ಮಲ್ಲಿಕಾರ್ಜುನ್ ಬಂಡೆ. ತೆಳು ನೀಲಿ ಬಣ್ಣದ ಟೀ ಶರ್ಟ್‌ ಹಾಕ್ಕೊಂಡಿದ್ರು ಬಂಡೆ. ಕಟ್ಟುಮಸ್ತಾದ ಮೈಕಟ್ಟು. ಖಡಕ್ ಆಫೀಸರ್ ಗೆ ಬೇಕಾದ ವ್ಯಕ್ತಿತ್ವ ಅವರಿಗಿತ್ತು. ಹಾಗೇ ಸುಮ್ಮನೆ ಎಲೆಕ್ಷನ್ ವಿಚಾರದಲ್ಲಿ ಒಂದಷ್ಟು ಹೊತ್ತು ಹರಟೆ ಹೊಡ್ಕೊಂಡು ನಿಂತಿದ್ವಿ. ಅವರ ಮಾತುಗಳಲ್ಲಿ ಚುನಾವಣೆಯಲ್ಲಿ ಹರಿಯುವ ಹಣದ ಹೊಳೆಯ ಬಗ್ಗೆ ತೀವ್ರ ಅಸಮಾಧಾನವಿತ್ತು. ಹೀಗೇ ಡಿಪಾರ್ಟ್‌ಮೆಂಟ್ ವಿಚಾರ - ಅದೂ ಇದೂ ಅಂತ ಮಾತಾಡ್ತಿದ್ವಿ. ಅಷ್ಟೊತ್ತಲ್ಲಿ ಅಲ್ಲೊಂದು ಕಾರ್‌ ಬಂದಿತ್ತು.

ಅದು ವಿಧಾನ ಪರಿಷತ್ ಸದಸ್ಯರೊಬ್ಬರ ಕಾರು. ಸ್ವತಃ ಆ ಶಾಸಕ ಕೂಡ ಅದೇ ಕಾರಿನಲ್ಲಿದ್ರು. ಗುಲ್ಬರ್ಗಾದ ಉಪಚುನಾವಣೆಯಲ್ಲಿ ಅವರು ವಿಶೇಷ ಜವಾಬ್ದಾರಿ ನಿಭಾಯಿಸುತ್ತಿದ್ದವರು. ಹೀಗಾಗಿ ಅವರ ಕಾರಿನಲ್ಲೇನಾದ್ರೂ ಹಣ ಸಾಗಾಟ ಇರಬಹುದಾ ಅನ್ನೋ ಅನುಮಾನ ನಮಗೆ ಕಾಡಿತ್ತು. ಹೇಗಿದ್ರೂ ಜೊತೇಲಿ ಬಂಡೆ ಇದ್ರಲ್ಲಾ. ಅವರ ಜೊತನೇ ಇದನ್ನು ಹೇಳಿದ್ವಿ. ತಕ್ಷಣ ಬಂಡೆ ಕಾರ್ಯಪ್ರವೃತ್ತರಾದ್ರು. ಹೋಗಿ ಶಾಸಕರ ಇನೋವಾ ಕಾರನ್ನು ತಡೆದು ನಿಲ್ಲಿಸಿದ್ರು. ಶಾಸಕರನ್ನು ಕಾರಿಂದ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಿದ್ರು. ಆ ಕಾರಿನಲ್ಲಿ ಹಣ ಇರಲಿಲ್ಲ. ಆದ್ರೆ ಚುನಾವಣೆಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ನಿಷ್ಟುರತೆ ಇಷ್ಟವಾಯಿತು. ಯಾವುದೇ ಮುಲಾಜಿಲ್ಲದೆ ಗುಲ್ಬರ್ಗಾದ ಆ ಪ್ರಭಾವಿ ಶಾಸಕರ ಕಾರನ್ನು ತಪಾಸಣೆ ಮಾಡಿದ್ದು. ಅದೂ ಕ್ಯಾಮರಾ ಮುಂದೆ ಮಾಡೋದು ಇದೆಯಲ್ಲಾ. ಅಧಿಕಾರಿ ದಕ್ಷನಾಗಿದ್ದರೆ ಮಾತ್ರ ಇಂತದ್ದೆಲ್ಲಾ ಮಾಡಲು ಸಾಧ್ಯ. ( ಬೇರೆ ಚುನಾವಣೆಗಳ ಸಂದರ್ಭದಲ್ಲಿ ಬೇಕೆ ಪೊಲೀಸ್ ಅಧಿಕಾರಿಗಳ ಹತ್ತಿರ ನಾವು ಇಂತದ್ದೇ ಅನುಮಾನ ಹೇಳಿದಾಗ ಹಲವು ಸಬೂಬು ಹೇಳಿದ ಉದಾಹರಣೆಗಳು ನಮ್ಮ ಮುಂದಿವೆ.)  ಮಲ್ಲಿಕಾರ್ಜುನ ಬಂಡೆಗೆ ರಾಜಕಾರಣಿಗಳನ್ನು ಓಲೈಸುವ ಮನೋಭಾವ ಇರಲಿಲ್ಲ ಅನ್ನೋದನ್ನು ಇದು ಎತ್ತಿ ತೋರಿಸುತ್ತಿತ್ತು.

ಇದಾದ್ಮೇಲೂ ಒಂದಷ್ಟು ಹೊತ್ತು ಮಾತಾಡಿದ್ವಿ. ಮಲ್ಲಿಕಾರ್ಜುನ ಬಂಡೆ ಮೊದಲ ಭೇಟಿಯಲ್ಲೇ ತುಂಬ ಇಷ್ಟವಾದ್ರು. ಅವರ ಬಗ್ಗೆ ಒಂದು ವಿಶೇಷ ಗೌರವ ಮೂಡಿತ್ತು. ನಮ್ ಗಂಗಾಧರ್ ಕೂಡ ಬಂಡೆಯ ಹಲವು ಸಾಹಸಗಳ ಬಗ್ಗೆ ಅವತ್ತು ರಾತ್ರಿ ಹೇಳ್ತಿದ್ದ. ರಾಜಕಾರಣಿಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಹೆಚ್ಚು ನಿಷ್ಠುರವಾಗಿರುತ್ತಿದ್ದ ಮಲ್ಲಿಕಾರ್ಜುನ್ ಬಂಡೆ ಸಾಮಾನ್ಯ ಜನರ ಬಗ್ಗೆ ಅಷ್ಟೇ ಪ್ರೀತಿಯಿಂದ ವರ್ತಿಸುತ್ತಿದ್ದರು.

ಮೊನ್ನೆ ರೌಡಿ ಮುನ್ನಾನ ಬಲಿಹಾಕಲು ಇದೇ ಸಾಹಸಿ ಮಲ್ಲಿಕಾರ್ಜುನ ಬಂಡೆ ತಮ್ಮ ತಂಡದೊಂದಿಗೆ ಹೋಗಿದ್ದರು. ಕಳೆದ ರಾತ್ರಿ ಬಂಡೆ ಇಹಲೋಕದ ಸಂಬಂಧ ಕಡಿದುಕೊಂಡಿದ್ದಾರೆ. ಬಂಡೆ ನಿಧನರಾದ ಸುದ್ದಿ ಕೇಳಿ ಗುಲ್ಬರ್ಗಾದ ಜನ ತೀವ್ರ ಶೋಕ ತಪ್ತರಾಗಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಜನರ ಪ್ರೀತಿಯನ್ನು ಗಳಿಸೋದು ಸುಲಭವಲ್ಲ. ಕರ್ನಾಟಕ ಇಂತಹ ಹಲವು ದಕ್ಷ ಅಧಿಕಾರಿಗಳನ್ನು ಕಂಡಿದೆ. ಜನ ಪ್ರೀತಿಯಿಂದ ಈಗಲೂ ಹಲವು ಪೊಲೀಸ್ ಅಧಿಕಾರಿಗಳನ್ನು ನೆನೆಯುತ್ತಾರೆ. ಅಂತವರ ಸಾಲಿಗೆ ನಿಸ್ಸಂಶಯವಾಗಿ ಬಂಡೆ ಸೇರುತ್ತಾರೆ.

ಮಲ್ಲಿಕಾರ್ಜುನ ಬಂಡೆ ವ್ಯಕ್ತಿತ್ವ ಛಾಪು ಮೂಡಿಸಿದ ನೆನಪುಗಳು ಅವರ ಸಂಪರ್ಕಕ್ಕೆ ಬಂದವರ ಮನದಲ್ಲಿ ಸದಾ ಹಸಿರಾಗಿರಲಿದೆ. ಆದರೆ ಅವರ ಕುಟುಂಬಕ್ಕೆ ಆದ ನಷ್ಟವನ್ನು ತುಂಬಲು ಅಸಾಧ್ಯ.


Saturday, December 14, 2013

ದ್ಯಾವ್ರೇ ಭಟ್ರು ಇಷ್ಟು ಚಂದ ನಟಿಸ್ತಾರಾ...!!!

ಇಷ್ಟು ದಿನ ಯೋಗರಾಜ ಭಟ್ಟರು ಒಳ್ಳೆಯ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತ್ಯ ರಚನೆಕಾರ, ಇನ್ನೂ ಏನೇನೋ ಆಗಿದ್ದರು. ಒಂದು ಒಳ್ಳೆಯ ಸಿನಿಮಾದ ಪಾಕ ಬಡಿಸಲು ಏನೇನು ಬೇಕೋ ಅದೆಲ್ಲವನ್ನೂ ಭಟ್ರು ಅಚ್ಚುಕಟ್ಟಾಗಿ ಮಾಡ್ತಿದ್ರು. ಆದರೆ ಅವರೊಬ್ಬ ಒಳ್ಳೆಯ ನಟ ಅನ್ನೋದು ಗೊತ್ತಾಗಿದ್ದು ದ್ಯಾವ್ರೇ ನೋಡಿದಾಗಲೇ. ಶಿಷ್ಯನ ಸಿನಿಮಾಗೆ ಗುರುವಿನಿಂದ ಇದಕ್ಕಿಂತ ದೊಡ್ಡ ಬೆಂಬಲ ಸಿಗೋದಿಕ್ಕೆ ಸಾಧ್ಯವಿಲ್ಲ. ಗಡ್ಡ ವಿಜಿ ಆಕ್ಷನ್ ಕಟ್ ಹೇಳಿದ್ದಕ್ಕೆ ಭಟ್ರು ಚಂದಗೆ ಅಭಿನಯಿಸಿದ್ದಾರೆ.

ದ್ಯಾವ್ರೇ ಸಿನಿಮಾ ನೋಡಿದಾಗಿನಿಂದ ಮನಸ್ಸಿನಲ್ಲಿ ಹಲವು ಪಾತ್ರಗಳು ಅಚ್ಚಾಗಿ ಉಳಿದಿವೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಎಲ್ಲವೂ ಜೈಲಿನಲ್ಲಿ ಆರಂಭವಾದ್ರೂ ಒಬ್ಬೊಬ್ಬರದ್ದು ಒಂದೊಂದು ಕಥೆ. ಒಂದೊಂದು ವ್ಯಥೆ. ಇದು ಒಬ್ಬ ನಾಯಕನ ಸುತ್ತ ಹೆಣೆದ ಕಥೆಯಲ್ಲ. ಸಿನಿಮಾದಲ್ಲಿ ಹೆಚ್ಚಿನ ಭಾಗ ಯೋಗರಾಜ ಭಟ್ಟರು ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರನ್ನು ಹೀರೋ ಅನ್ನಬಹುದೇನೋ. ಆದರೆ ಅವರೊಬ್ಬರೇ ಹೀರೋ ಅಲ್ಲ. ಚೀಂಕ್ರನಾಗಿ ಕಾಣಿಸಿಕೊಂಡ ನೀನಾಸಂ ಸತೀಶ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಪರಾಕಾಯ ಪ್ರವೇಶ ಅಂದ್ರೆ ಇದೇನಾ...? ಇಷ್ಟವಾಗುವ ಇನ್ನಷ್ಟು ಪಾತ್ರಗಳು ದ್ಯಾವ್ರೇಗೆ ಜೀವತುಂಬಿವೆ. ಎಲೆಕ್ಷನ್ ಗೆ ನಿಂತು ಎಂಎಲ್ಎ ಆಗುವ ಕನಸುಕಾಣುತ್ತಲೇ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಚಿಕ್ಕರಸ ಪಾತ್ರ ಸಿನಿಮಾ ಮುಗಿದ ಮೇಲೂ ಕಾಡುತ್ತದೆ. ಇಂಗ್ಲಿಷ್ ಗೋಡೆ, ಜಗ್ಗ ಹೀಗೆ  ಸಿನಿಮಾದ ಹೀರೋಗಳ ಸಂಖ್ಯೆ ಬೆಳೆಯುತ್ತದೆ.

ಮುವತ್ತು ವರ್ಷ ಜೈಲಲ್ಲಿದ್ದು ಹೊರಬಂದ ದ್ಯಾವಣ್ಣನಿಗೆ ಹೊರಪ್ರಪಚಂದಲ್ಲಾದ ಬದಲಾವಣೆಗಳೇ ಗೊತ್ತಿಲ್ಲ. ಗುದ್ದಲಿ, ಸಲಕೆಗಳನ್ನು ರೆಡಿ ಮಾಡಿ ಕೆಲಸಕ್ಕೆ ಹೊರಡುವ ಅವನಿಗೆ ಬುಲ್ಡೋಜರ್ ಗಳು ಬಂದಿರೋದು ಹೇಗೆ ತಾನೇ ಗೊತ್ತಾಗಬೇಕು. ಜೈಲಲ್ಲಿದ್ದು ಬಂದ ಅಮಾಯಕ ದ್ಯಾವಣ್ಣನಿಗೆ ಹೊರ ಪ್ರಪಚಂದ ಬದುಕು ದುಸ್ತರವಾಗುತ್ತಾ ಹೋಗುತ್ತದೆ. ಪಾತ್ರ ಸಣ್ಣದು. ಆದರೆ ಸೃಷ್ಟಿಸುವ ಭಾವನೆಗಳು ದೊಡ್ಡದು. ಒಂಥರಾ ಚಿತ್ರಕ್ಕೆ ಟೈಟಲ್ ನಂತಿರುವ ಪಾತ್ರ ದ್ಯಾವಣ್ಣನದ್ದು.

ಇಷ್ಟೆಲ್ಲಾ ಹೇಳಿದ್ಮೇಲೆ ಒಂದು ಪಾತ್ರ ಹೇಳಲೇ ಬೇಕು. ಅದು ಇನ್ಸ್ ಪೆಕ್ಟರ್ ಸಾವಂತ್ ನದ್ದು. 'ಆ ದಿನಗಳು' ಚಿತ್ರದಲ್ಲಿ ಸರ್ದಾರ್ ಪಾತ್ರದಲ್ಲಿ ಮಿಂಚಿದ್ದ ಸತ್ಯ ಈಗ ಸರ್ದಾರ್ ಸತ್ಯ ಆಗಿದ್ದಾರೆ. ಯಾಕಂದ್ರೆ ಅದು ಅವರು ಜೀವತುಂಬಿದ್ದ ಪಾತ್ರ. ಈಗ ಸರ್ದಾರ್ ಸತ್ಯ ಸಾವಂತನಾಗಿ ಕಾಣಿಸಿಕೊಂಡಿದ್ದಾರೆ. ಅಟ್ಟಹಾಸ ಹಾಗೂ ವಿಕಟ ನಗು ಈ ಪಾತ್ರದ ಜೀವಾಳ. ಎರಡನ್ನೂ ಸರ್ದಾರ್ ಅದ್ಭುತವಾಗಿ ನಿಭಾಯಿಸಿದ್ದಾರೆ.

ಮತ್ತೆ ಭಟ್ಟರ ಕಡೆಗೆ ಬರಲೇಬೇಕು. ಜೈಲರ್ ಭಟ್ಟರು ಇಡೀ ಚಿತ್ರದಲ್ಲಿ ಬೆರೆತುಹೋಗಿದ್ದಾರೆ. ಗೋಡೇೇೇೇೇ.... ಎಂದು ಅವರು ಚೀತ್ಕರಿಸುವ ರೀತಿ ಹೃದಯ ಕಲಕುತ್ತದೆ. ಪಾತ್ರದ ಆಳವನ್ನು ಹೆಚ್ಚಿಸುತ್ತದೆ. ಯೋಗರಾಜ ಭಟ್ಟರ ಇತರೆ ಸಿನಿಮಾಗಳಂತೆ ಉಡಾಫೆ ಶೈಲಿಯಲ್ಲಿ ನೀತಿ ಹೇಳುವ ಪರಿಪಾಠ ದ್ಯಾವ್ರೇಯಲ್ಲೂ ಮುಂದುವರಿದಿದೆ. ಗುರುವಿನಿಂದ ಶಿಷ್ಯನಿಗೆ ಬಂದಿರುವ ಬಳುವಳಿ ಇದು.

ದ್ಯಾವ್ರೇಯಲ್ಲಿ ಆಗಲೇ ಹೇಳಿದಂತೆ ಹೀರೋ ಪಾತ್ರಗಳು ಹಲವಿವೆ. ಜೊತೆಗೆ ಪುಟಾಣಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹೀರೋಯಿನ್ ಗಳ ಜೊತೆಗೆ ಒಳ್ಳೆಯ ಹಾಡುಗಳು, ಅದಕ್ಕೊಪ್ಪುವ ಸಂಗೀತ. ಚಂದನೆಯ ಸಿನಿಮಾಟೋಗ್ರಫಿ, ಸ್ಕ್ರೀನ್ ಪ್ಲೇ.. ಹೀಗೆ ದ್ಯಾವ್ರೆಯಲ್ಲಿ ಪ್ರತಿಯೊಂದು ಅಂಶವೂ ಹೀರೋಯಿನ್ ಸ್ಥಾನವನ್ನು ತುಂಬುತ್ತವೆ. ಒಂದು ಒಳ್ಳೆಯ ಸಿನಿಮಾವನ್ನು ಗಡ್ಡ ವಿಜಯ್ ಕೊಟ್ಟಿದ್ದಾರೆ.

ದ್ಯಾವ್ರೇೇೇೇೇೇ..... ಇಂತಾ ಸಿನಿಮಾಗಳು ನಿಜಕ್ಕೂ ಗೆಲ್ಲಬೇಕು.!






Friday, September 20, 2013

ಕೆಳಗಿನವರ ಲೋಕದಲ್ಲಿ ಏನೆಲ್ಲಾ ಉಂಟು...!

ಅದು ಶುರುವಾಗುವುದು ಹೀಗೆ.
ಬೆಳಗು ಇನ್ನೂ ಹರಿದಿರಲಿಲ್ಲ. ಒಂದೆಡೆ ಕೊರೆಯುವ ಚಳಿ. ಆದರೆ ಚಳಿಯೆಂದು ಕುಳಿತರೆ ಹೊಟ್ಟೆ ಹೊರೆಯುವುದು ಹೇಗೆ. ಎದ್ದು ಹೋಗಲೇ ಬೇಕು. ಚಿಂದಿ ಆಯೋದಕ್ಕೆ. ಮಲಗುವ ಗೂಡುಗಳಿಂದ ಹೊರಬಂದು ಕೊರೆಯುವ ಚಳಿಯಲ್ಲಿ ಕೆಲವರು ಚಿಂದಿ ಅರಸಿ ಹೋರಹೋಗುತ್ತಾರೆ. ಹುಡುಗಿಯ ಕಳ್ಳಸಂಬಂಧಿ ಗುಡಿ ಹೊದ್ದು ಹೊರಗೋಡುತ್ತಾನೆ. ರೋಗಗ್ರಸ್ತೆ ಹೆಂಗಸು ಕೆಮ್ಮುತ್ತಾ ನರಳುತ್ತಾಳೆ. ಆಕೆಯ ಗಂಡ ಹೆಂಡತಿ ಸತ್ತರೆ ಸಾಕೆಂದು ಆಶಿಸುವಂತೆ ತನ್ನದೇ ಕೆಲಸದಲ್ಲಿ ನಿರತನಾಗಿದ್ದಾನೆ. ಕೆಲಸ ಮಾಡದ ಸೋಮಾರಿಗಳು ತಮ್ಮದೇ ಹರಟೆಯಲ್ಲಿ ತೊಡಗಿದ್ದಾರೆ. ಕೆಳಗಿನವರ ಲೋಕದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗುತ್ತದೆ.

ಇದು ಎನ್ಎಸ್ ಡಿಯ ಬೆಂಗಳೂರು ಚಾಪ್ಟರ್ ನಲ್ಲಿ ತರಬೇತಿ ಪಡೆದ ಮೊದಲ ತಂಡ ಪ್ರಸ್ತುತಪಡಿಸಿದ ' ಈ ಕೆಳಗಿನವರು' ನಾಟಕ.  ರಷ್ಯನ್ ಸಾಹಿತಿ ಮ್ಯಾಕ್ಸಿಂ ಗೋರ್ಕಿಯ lower depths ನಾಟಕವನ್ನು ಕನ್ನಡಕ್ಕೆ ರೂಪಂತರಿಸಿದ ನಾಟಕವಿದು. ಇದನ್ನು ಅದೆಷ್ಟು ಚೆನ್ನಾಗಿ ಕನ್ನಡಕ್ಕೆ ಬಿ.ಟಿ.ದೇಸಾಯಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆಂದರೆ ಇಡೀ ನಾಟಕ ಕನ್ನಡದ್ದೇ ಮಣ್ಣಿನ ಕಥೆಯಂತಿದೆ. ಅದರ ಭಾಷೆ, ಶೈಲಿ, ವಸ್ತು, ಇತಿಹಾಸ ಎಲ್ಲದರಲ್ಲೂ ಕರ್ನಾಟಕ, ಕನ್ನಡ ಮತ್ತು ಭಾರತದ ಒಳಗಿನ ಕಥೆಯಾಗಿ ಮಾರ್ಪಟ್ಟಿದೆ. ರಷ್ಯಾದ ಬರಹಗಾರನ ಒಟ್ಟು ಆಶಯವನ್ನು ಕನ್ನಡದ ಪರಿಸರದೊಳಗೆ ಬೆರೆಸಿ ತೋರಿಸಲಾಗಿದೆ.

ನಾಟಕ್ಕಾಗಿ ತುಂಬಾ ಅದ್ಭುತ ಸೆಟ್ ಹಾಕಲಾಗಿದೆ. ಅದೇ ಸೆಟ್ ನಲ್ಲಿ ಕೆಳಗಿನವರ ಲೋಕ ನಿಧಾನಕ್ಕೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅಲ್ಲಿನ ವಾಸಿಗಳಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ. ಕೆಲವರು ಜೈಲಿಗೂ ಹೋಗಿ ಬಂದವರು. ಮನೆ ಬಿಟ್ಟು ಬಂದವರು. ಪರಿವಾರ ತೊರೆದು ಪರದೇಶಿಗಳಾದವರು.  ಅವರ ನಡುವೆ ಜಗಳವಿದೆ. ಕೋಪ ತಾಪಗಳು ಆಗಾಗ್ಗೆ ನಡೆಯುತ್ತವೆ. ಆದರೆ ಅದೆಲ್ಲವನ್ನೂ ಮೀರಿದ ಅನ್ಯೋನ್ಯತೆಯಿದೆ. ಸಮಾಜದ ಅಂಕುಡೊಂಕುಗಳ ಬಗ್ಗೆ ಈ ಕೆಳಗಿನವರು ಒಂದು ಪ್ರಬುದ್ಧ ದೃಷ್ಟಿಕೋನವನ್ನೂ ಹೊಂದಿದ್ದಾರೆ.

ಅಲ್ಲಿಗೆ ಬರುವ ಅಜ್ಜಯ್ಯ ತನ್ನದೇ ಕಲ್ಯಾಣ ರಾಜ್ಯ ಹುಡುಕುತ್ತಾ ಹೊರಟವನು. ಇಂದು ಅಲ್ಲಿಗೆ ಬಂದಿದ್ದನಷ್ಟೆ.  ಅವರ ಬದುಕಿನ ಮೇಲೆ ಅಜ್ಜಯ್ಯ ಪ್ರಭಾವ ಬೀರುತ್ತಾನೆ. ಅವರ ಕಥೆಗಳಿಗೆ ಕಿವಿಯಾಗುತ್ತಾನೆ. ಅವರ ಭಾವನೆಗಳಿಗೆ ಮಾತಾಗುತ್ತಾನೆ. ಅವರ ಬದುಕಿಗೆ ದಾರಿಯಾದಂತೆ ಕಾಣುತ್ತಾನೆ.

ಸುಮಾರು ಎರಡೂವರೆಗಂಟೆಗಳ ಸುದೀರ್ಘನಾಟಕವಿದು. ಬದುಕಿನ ಸಂಕೀರ್ಣತೆಯನ್ನು ಮನಸ್ಸಿಗೆ ನಾಟುವಂತೆ ತೆರದಿಡಲಾಗಿದೆ. ನಾಟಕದಲ್ಲಿ ಹಾಸ್ಯವಿದೆ. ಗಂಭೀರ ಚಿಂತನೆಯಿದೆ. ನಗುವಿದೆ. ಅಳುವಿದೆ. ಸಂಗೀತವಿದೆ. ಒಂದು ಅದ್ಭುತ ಲೋಕದ ಅನಾವರಣಗೊಳಿಸಲಾಗಿದೆ.


Sunday, September 8, 2013

ಢುಂಢಿ ಕಾದಂಬರಿ ಸುತ್ತ..

ಢುಂಢಿ ಈಗಾಗ್ಲೇ ಕೋಲಾಹಲ ಎಬ್ಬಿಸಿದ್ದಾನೆ. ಢುಂಢಿಯ ಸೃಷ್ಟಿಕರ್ತ ಪೊಲೀಸರ ಅತಿಥಿಯಾಗಿ ಹೊರಬಂದಿದ್ದಾರೆ. ಯೋಗೇಶ್ ಮಾಸ್ಟರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ ಪ್ರಕರಣ ದಾಖಲಾಗಿದೆ.

ನಿಜಕ್ಕೂ ಒಂದು ಕೃತಿಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲು ಸಾಧ್ಯವೇ? ಹೊಸದಾಗಿ ಬಂದಿರುವ ಕಾದಂಬರಿಯೊಂದಕ್ಕೆ ನಮ್ಮ ಇದುವರೆಗಿನ ಎಲ್ಲಾ ನಂಬಿಕೆಗಳನ್ನು ತೊಡೆದುಹಾಕುವ ಶಕ್ತಿ ಇರುತ್ತದೆಯೇ? ಅಷ್ಟೊಂದು ದುರ್ಬಲವೇ ನಮ್ಮ ಧಾರ್ಮಿಕ ಭಾವನೆಗಳು?

ಇಷ್ಟಕ್ಕೂ ಪುರಾಣದ ಕೃತಿಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಿದ ಮೊದಲ ಕಾದಂಬರಿಯೇನಲ್ಲ ಢುಂಢಿ. ಪುರಾಣದ ವೈಭವಗಳ ಬದಲು ಸಾಮಾನ್ಯ ದೃಷ್ಟಿಕೋನದಿಂದ ರಾಮಾಯಣ ಮಹಾಭಾರತಗಳನ್ನು ಹಲವು ಕೃತಿಗಳಲ್ಲಿ ಚಿತ್ರಿಸಲಾಗಿದೆ. ಢುಂಢಿಯಲ್ಲೂ ಇದನ್ನೇ ಮಾಡಲಾಗಿದೆ. ಸಾಮಾಜಿಕ ದೃಷ್ಟಿಕೋನದಿಂದ ದೇವತ್ವಕ್ಕೆ ಏರುವ ವ್ಯಕ್ತಿಯ ವ್ಯಕ್ತಿತ್ವವನ್ನುಪರಿಚಯಿಸುವ ಕೆಲಸ ಈ ಕೃತಿ ಮಾಡಿದೆ. ಢುಂಢಿಯಾಗಿದ್ದವನು ಗುಣೇಶನಾಗಿ, ಗಣೇಶನಾಗಿ, ಗಣಪತಿಯಾಗಿ ಮಹಾಗಣಪತಿಯಾಗುವ ಹಂತಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ.

ವಿವಾದಗಳಿಂದಾಗಿ ಢುಂಢಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅದರಲ್ಲಿ ಹಾಗೆ ಚಿತ್ರಿಸಲಾಗಿದೆಯಂತೆ. ಗಣಪತಿಯನ್ನು ರೌಡಿಯಂತೆ ಬಿಂಬಿಸಲಾಗಿದೆಯಂತೆ. ಪಾರ್ವತಿಯನ್ನು ಕೆಟ್ಟದಾಗಿ ತೋರಿಸಲಾಗಿದೆಯಂತೆ ಅಂತೆಲ್ಲಾ ಕಾಮೆಂಟ್ ಗಳು ಬರುತ್ತಿವೆ. ಅಂತದ್ದೇನೂ ಕೃತಿಯಲ್ಲಿ ಇಲ್ಲ. ಒಬ್ಬ ಅರಣ್ಯಕನಾಗಿದ್ದ ಢುಂಢಿ ಮುಂದೆ ಪಾರ್ವತಿಯ ಪುತ್ರನಾಗಿ ಗಣಪತಿಯಾಗುತ್ತಾನೆ. ಆರಂಭದಲ್ಲಿ ರುದ್ರ ಪಾರ್ವತಿಯ ಸಂಭೋಗದ ಬಗ್ಗೆ ಸ್ವಲ್ಪ ವಿಸ್ತೃತವಾಗಿ ಯೋಗೇಶ್ ಮಾಸ್ಟರ್ ಬರೆದಿದ್ದಾರೆ. ಇದು ಮುಖ್ಯ ಕಥೆಗೆ ಅವಶ್ಯವಾಗಿದ್ದ ವಿವರಣೆಗಳೇನಲ್ಲ.  ಯೋಗೇಶ್ ಮಾಸ್ಟರ್ ಕೆಲವೇ ವಾಕ್ಯಗಳಲ್ಲಿ ಆ ತೀವ್ರತೆಯನ್ನು ಬರೆಯಬಹುದಿತ್ತು. ಅಷ್ಟೊಂದು ಲಂಭಿಸುವುದರಿಂದ ಕಲ್ಪನೆಯನ್ನು ಕಟ್ಟಿಕೊಡುವ ಬದಲು ಅಸಹ್ಯ ಅನ್ನಿಸುವುದೂ ಇದೆ. ಆದರೆ ಮುಂದೆ ಶಿವ ಪಾರ್ವತಿಯರ ಬಗ್ಗೆ ಅಷ್ಟೇ ಪ್ರೌಢವಾಗಿ ಬರೆಯಲಾಗಿದೆ. ಬರಹದ ಮೇಲೆ ಇನ್ನಷ್ಟು ಹಿಡಿತ ಸಾಧಿಸುತ್ತಿದ್ದರೆ ಹೆಚ್ಚು ಸಾಹಿತ್ಯಿಕವಾಗಿ ಕೃತಿ ಹೊರಬರಲು ಸಾಧ್ಯವಿತ್ತು. ಢುಂಢಿಯನ್ನು ಅರಣ್ಯಕನ ಹಿನ್ನೆಲೆಯಿಂದ ಪರಿಗಣಿಸಿದ್ದರಿಂದ ಆತ ಕ್ರೂರಿಯಾಗಿದ್ದ, ಯಾಗಗಳನ್ನು ಧ್ವಂಸ ಮಾಡುತ್ತಿದ್ದ ಅನ್ನುವುದಕ್ಕೆಲ್ಲಾ ಕಾದಂಬರಿಯಲ್ಲಿ ಸಕಾರಣಗಳು ದೊರೆಯುತ್ತವೆ. ಆರ್ಯ ಮತ್ತು ಅನಾರ್ಯರ ನಡುವಿನ ತಿಕ್ಕಾಟದ ಬಗೆಗಿನ ವಿವರಗಳು ಢುಂಢಿಯನ್ನು ಹೆಚ್ಚು ಆಪ್ತನನ್ನಾಗಿಸುತ್ತದೆ.


ಒಂದು ಕಾದಂಬರಿಯಾಗಿ ಮಾತ್ರ ಢುಂಢಿಯನ್ನು ಓದಿದ್ರೆ ಅದರಲ್ಲಿ ಖುಷಿಪಡುವ ಹಲವು ಅಂಶಗಳಿವೆ. ಹಾಗೆಯೇ ಕೃತಿಯನ್ನು ಆಕ್ಷೇಪಿಸಲೂ ಸಾಕಷ್ಟು ಅಂಶಗಳಿವೆ. ಆದರೆ ಎಲ್ಲವನ್ನೂ ಧಾರ್ಮಿಕ ನಂಬಿಕೆಗಳೊಂದಿಗೆ ತಳುಕುಹಾಕಿ ನೋಡುತ್ತಾ ಹೋದ್ರೆ ವಿವಾದ ಮಾತ್ರ ಕಣ್ಣಿಗೆ ಕಾಣುತ್ತದೆ.


ಕೃತಿಯೊಂದರಿಂದ ಒಂದು ಧರ್ಮದ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಅಂತಾದರೆ ಅದೇ ಧರ್ಮ ಸಹಸ್ರಾರು ವರ್ಷಗಳಿಂದ ಸದೃಢವಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಈಗ ಬೊಬ್ಬೆ ಹೊಡೆಯುವವರಿಂದ ಅದನ್ನು ರಕ್ಷಿಸಲೂ ಸಾಧ್ಯವಿಲ್ಲ. ಅದೇನಿದ್ದರೂ ಅನುಸರಣೆಯಲ್ಲಿ ಉಳಿಯುವಂತದ್ದು. ಬೆಳೆಯುವಂತದ್ದು. ಬೆಳಗುವಂತದ್ದು !

Saturday, September 7, 2013

ಮೆಕ್ಕಾ ದಾರಿಯೆಂಬ ಅದ್ಭುತ ಲೋಕ

ಮೆಕ್ಕಾಗೆ ದಾರಿ ತೋರಿಸಿದ್ದಾರೆ ಪ್ರಸನ್ನ !

ಇದು ಸೌದಿಯಲ್ಲಿನ ಮೆಕ್ಕಾ ಅಲ್ಲ. ದಕ್ಷಿಣ ಆಫ್ರಿಕಾದ ಮೆಕ್ಕಾ. ಈ ಮೆಕ್ಕಾವನ್ನು ನೇರವಾಗಿ ಕನ್ನಡಕ್ಕೆ ಕರೆತಂದು ರವೀಂದ್ರ ಕಲಾಕ್ಷೇತ್ರದಲ್ಲಿ ತೆರೆದಿಟ್ಟರು.
ದಕ್ಷಿಣ ಆಫ್ರಿಕಾದ ಒಂದು ನೈಜ ಕಥೆಯನ್ನು ಆಧರಿಸಿದ ನಾಟಕವಿದು. ವೃದ್ಧೆ ಹೆಲೆನ್ ಳ ತೊಳಲಾಟ. ಗಂಡನ ಸಾವಿನ ನಂತರ ಆಕೆಯನ್ನು ಆವರಿಸಿದ ಕತ್ತಲು. ಅದು ಧರ್ಮ ಹೇರಿದ ಕತ್ತಲೂ ಹೌದು. ಆ ಕತ್ತಲನ್ನು ಮೆಟ್ಟಿ ನಿಲ್ಲಲು ಆಕೆ ಸೃಷ್ಟಿಸಿದ ಮೆಕ್ಕಾ. ಕತ್ತಲಾದಾಗ ಬೆಳಗುವ ಬೆಳಕಲ್ಲಿ ಜಗಮಗಿಸುವ ಲೋಕವದು. ತನ್ನೆಲ್ಲಾ ನೋವನ್ನು ಏಕತಾನತೆಯನ್ನು ಮರೆಯಲು ಆಕೆ ಸೃಷ್ಟಿಸುವ ಪ್ರತಿಮೆಗಳು. ಆ ಪ್ರತಿಮೆ ಕೇವಲ ಆಕೆಯ ತೊಳಲಾಟವನ್ನು ದೂರ ಮಾಡುವುದಷ್ಟೇ ಅಲ್ಲ. ಅದು ಆಕೆಯೊಳಗಿನ ಪ್ರತಿಭಟನೆಯನ್ನು ಅಭಿವ್ಯಕ್ತಿಸುತ್ತವೆ. ಅದು ಆಕೆಯ ಸ್ವಾತಂತ್ರ್ಯದ ಪ್ರತೀಕವಾಗುತ್ತದೆ.

ಇಡೀ ನಾಟಕದಲ್ಲಿ ಬರೋದು ಮೂರೇ ಪಾತ್ರ. ಹೆಲೆನ್ , ಎಲ್ಸಾ ಮತ್ತು ಚರ್ಚ್ ನ ಪಾದ್ರಿ ಮಾರಿಯಟ್ . ಹೆಲೆನ್ ಕೇಪ್ ಟೌನ್ ನಿಂದ ಸುಮಾರು 800 ಮೈಲಿ ದೂರದಲ್ಲಿರುವ ಹಳ್ಳಿಯೊಂದರ ಮುದುಕಿ. ಆಕೆ ಅಲ್ಲೇ ತನ್ನ ಬದುಕನ್ನು ಸವೆಸಿದವಳು. ಆಕೆಯ ಗಂಡ ಸತ್ತು ಆಗಲೇ ಹದಿನೈದು ವರ್ಷ ಕಳೆದಿದ್ದು. ಆಕೆ ಉಳಿದಿರುವ ಸ್ನೇಹಿತೆಯೊಬ್ಬಳೇ.. ಎಲ್ಸಾ.  ಕೇಪ್ ಟೌನ್ ನಲ್ಲಿ ಟೀಚರ್ ಆಗಿರುವ ಎಲ್ಸಾ ಐದು ವರ್ಷಗಳಿಂದ ಹೆಲೆನ್ ಗೆ ಸ್ನೇಹಿತೆ. ಎಲ್ಸಾ ಒಬ್ಬ ವಿಚಾರವಾದಿ ಹೆಣ್ಣು. ದಕ್ಷಿಣ ಆಫ್ರಿಕಾದ ಕರಿಯರ ಬವಣೆಗೆ ಮರಗುತ್ತಾಳೆ. ಚರ್ಚ್ ನ ನೀತಿಗಳನ್ನು ಆಕೆ ವಿರೋಧಿಸುತ್ತಾಳೆ. ವಿದ್ಯಾವಂತೆ ಎಲ್ಸಾಗೆ ಹಳ್ಳಿಯಲ್ಲಿ ತನ್ನದೇ ಲೋಕವನ್ನು ಸೃಷ್ಟಿಸಿಕೊಂಡಿರುವ ಹೆಲೆನ್ ಗೆಳತಿಯಾಗುತ್ತಾಳೆ. ಹೆಲೆನ್ ಮತ್ತು ಎಲ್ಸಾ ನಡುವೆ ಒಂದು ಅನ್ಯೋನ್ಯ ಬಾಂಧವ್ಯ ಬೆಳೆಯುತ್ತೆ. ಹೆಲೆನ್ ಸೃಷ್ಟಿಸಿದ ಮೆಕ್ಕಾ ಅರ್ಥವಾಗುವುದು ಎಲ್ಸಾಗೆ ಮಾತ್ರ. ಉಳಿದವರೆಲ್ಲಾ ಆಕೆಯನ್ನು ಹುಚ್ಚಿಯೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಚರ್ಚ್ ನವರು ಕೂಡ ಇದೇ ಕಾರಣಕ್ಕೆ ಹೆಲೆನ್ ಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಹುನ್ನಾರ ನಡೆಸುತ್ತಾರೆ. ಚರ್ಚ್ ನ ಪಾದ್ರಿ ಮಾರಿಯಟ್ ಹೆಲೆನ್ ಗೆ ಸ್ನೇಹಿತ. ಆತನ ಜೊತೆಗೆ ಹೆಲೆನ್ ಗೆ ಸಲಿಗೆಯಿರುತ್ತೆ. ಆದರೆ ಆತ ತನ್ನ ಮಾತಿನಲ್ಲಿ ಮೋಡಿ ಮಾಡುವವನು. ಅವನ ಮಾತಿಗೆ ಪ್ರತ್ಯುತ್ತರ ಕೊಡೋದು ಅನೇಕ ಬಾರಿ ಹೆಲೆನ್ ಗೆ ಕಷ್ಟವಾಗುತ್ತೆ. ವೃದ್ಧಾಶ್ರಮಕ್ಕೆ ಸೇರಿಸುವ ಅರ್ಜಿಯನ್ನು ಅದೇ ಮಾರಿಯಟ್ ತುಂಬಿರುತ್ತಾನೆ. ಆದ್ರೆ ಅದಕ್ಕೆ ಸಹಿ ಹಾಕಲು ಹೆಲೆನ್ ಗೆ ಒತ್ತಡ ಹೇರುತ್ತಾನೆ. ಹೆಲೆನ್ ಗೆ ತನ್ನ ಮೆಕ್ಕಾ ಬಿಟ್ಟು ವೃದ್ಧಾಶ್ರಮ ಸೇರಲು ಮನಸ್ಸಿಲ್ಲ. ಹಾಗಂತ ಮಾರಿಯಟ್ ನ ಮಾತಿಗೆ ಇಲ್ಲ ಅಂತ ಖಂಡಿತವಾಗಿ ಹೇಳೋದಿಕ್ಕೂ ಸಾಧ್ಯವಾಗದೆ ತೊಳಲಾಡುತ್ತಾಳೆ ಹೆಲೆನ್.
ಅಂದಹಾಗೆ ದಕ್ಷಿಣ ಆಫ್ರಿಕಾದ ನಾಟಕಕಾರ. ಕಾದಂಬರಿಕಾರ ಅಥೊಲ್ ಫುಗಾರ್ಡ್ ಬರೆದಿರುವ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ನಿರ್ದೇಶಿಸಿದ್ದು ಹಿರಿಯ ರಂಗಕರ್ಮಿ ಪ್ರಸನ್ನ. ಇಡೀ ನಾಟಕ ಎರಡು ಅಂಕಗಳಲ್ಲಿ ಮುಗಿದುಹೋಗುತ್ತೆ. ಪ್ರಸನ್ನ ಹೆಚ್ಚಿನ ರಂಗಸಜ್ಜಿಕೆಗಳನ್ನು ನಾಟಕದಲ್ಲಿ ಬಳಸಿಲ್ಲ. ಸಂಭಾಷಣೆ ಮತ್ತು ಅಭಿನಯವೇ ನಾಟಕದ ಜೀವಾಳ. ಅದರ ಮೂಲಕ ಕಲ್ಪನಾ ಲೋಕವನ್ನೇ ನೋಡುಗನ ಮನಸ್ಸಿನಲ್ಲಿ ಸೃಷ್ಟಿಸುವ ಕೆಲಸವನ್ನು ಪ್ರಸನ್ನ ಮಾಡಿದ್ದಾರೆ. ಕೇವಲ ರಂಗಸಜ್ಜಿಕೆಯನ್ನು ಹಾಕಿ ಅದರ ಸೀಮಿತ ಚೌಕಟ್ಟಿನಲ್ಲಿ ನಾಟಕದ ವ್ಯಾಪ್ತಿಯನ್ನು ಮಿತಿಗೊಳಿಸುವ ಬದಲು ನೋಡುಗನ ಕಲ್ಪನೆಗೆ ಅದೆಲ್ಲವನ್ನೂ ಬಿಟ್ಟಿದ್ದಾರೆ. ತರಿಕಿಟ ತಂಡದ ಕಲಾವಿದರು ಇದನ್ನು ಮನೋಜ್ಞವಾಗಿ ರಂಗದ ಮೇಲೆ ಪ್ರದರ್ಶಿಸಿದ್ದಾರೆ.
ಮೆಕ್ಕಾದ ದಾರಿಯ ಅದ್ಭುತ ಲೋಕವನ್ನು ರಂಗದ ಮೇಲೆ ನೋಡುವುದು ಒಂದು ಸುಂದರ ಅನುಭವ !