Sunday, January 23, 2011

ಬದಲಾದ ಬದುಕು

ನಮ್ಮೂರು ಬದಲಾಗಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ಹೀಗಿರಲಿಲ್ಲ. ಬದಲಾವಣೆಯಾಗಿದ್ದು ಬರೀ ಊರು ಮಾತ್ರ ಅಲ್ಲ. ನಮ್ಮೂರ ಜನರ ಬದುಕು ಕೂಡ.
ಅಂದಹಾಗೆ ನಮ್ಮೂರ ಹೆಸರು ಅಡ್ಪಂಗಾಯ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಳ್ಳಿಗಳ ಎಲ್ಲ ಲಕ್ಷಣ ನಮ್ಮೂರಿಗೂ ಇದೆ. ಹಾಗಾಗಿ ಇಲ್ಲಾದ ಬದಲಾವಣೆ ಜಿಲ್ಲೆಯ ಬಹುಭಾಗದಲ್ಲೂ ಆಗಿದೆ ಅಂತ ಹೇಳೋದಿಕ್ಕೆ ಅಡ್ಡಿಯಿಲ್ಲ.
ಆಗೆಲ್ಲ ಭತ್ತದ ಗದ್ದೆಗಳು ಊರಿಗೆ ಬಂದವರನ್ನು ಸ್ವಾಗತಿಸುತ್ತಿದ್ದವು. ಗದ್ದೆ ಉಳುಮೆ, ನೇಜಿ ಕಾಲದಲ್ಲಿ ನಾವು ಪಡುತ್ತಿದ್ದಂತ ಸಂಭ್ರಮ ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬಂತಿತ್ತು. ಅಪ್ಪನಿಂದ ಸಿಗುತ್ತಿದ್ದ ಬೈಗಳ. ಅದಕ್ಕೆ ಅವ್ವ ಕೊಡುತ್ತಿದ್ದ ಸಾಥ್. ಇದೆಲ್ಲ ಸ್ವಲ್ಪ ಹೊತ್ತು ಬೇಜಾರ್ ಮಾಡುತ್ತಿದ್ದರು ಅವ್ರು ಹೇಳೋದು ನಮ್ ಒಳ್ಳೇದಕ್ಕೆ ಅನ್ನೋದು ಆಮೇಲೆ ಅರ್ಥ ಆಗ್ತಿತ್ತು. ಬೆಳಗ್ಗಿನ ಚಳಿಯಲ್ಲಿ ಎದ್ದು ಎತ್ತುಗಳಿಗೆ ಮಡ್ಡಿ ಕೊಟ್ಟು ಗದ್ದೆಗೆ ಇಳಿಸುವ ಹೊತ್ತಿಗೆ ಬೇಜಾರು ಮಾಯವಾಗಿ ಕೆಲಸದ ಖುಷಿ ಸಿಗುತ್ತಿತ್ತು. ಇನ್ನು ಗದ್ದೆ ಗೋರಿ ದಿನಗಳಲ್ಲಂತೂ ಸಂಭ್ರಮ ಹೇಳತೀರದು. ಆ ದಿನ ನಮ್ಮ ಗದ್ದೆಗೆ ಬೇರೆಯವರ ಎತ್ತುಗಳು ಬರುತ್ತಿದ್ದವು. ಅವ್ರ ಮನೆಯ ಎತ್ತುಗಳನ್ನು ಹೊಡಕೊಂಡು ಬರುತ್ತಿದ್ದ ನನ್ನ ಸಹಪಾಟಿಗಳಾದ ಶಿವ, ಅವನ ಅಣ್ಣ ದಯಾ, ಲವರನ್ನು ಬೆಳಗ್ಗೆ ನಮ್ಮನೆಗೆ ತಿಂಡಿಗೆ ಕರ್ಕೊಂಡು ಹೋಗೋದು ಅಂದ್ರೆ ಅದು ಸಾಹಸದ ಕೆಲಸ. ತಿಂಡಿಗೆ ಕರೆದರೆ ಸಾಕು ಎಲ್ಲರು ತಪ್ಪಿಸಿಕೊಂಡು ಹೋಗೋದು. ಆಮೇಲೆ ಒತ್ತಾಯ ಮಾಡ್ಕೊಂಡು ಕರ್ಕೊಂಡು ಬರೋದು. ಅವ್ರ ಗದ್ದೆಗೆ ನಮ್ಮ ಎತ್ತು ಕೊಂಡೊಯ್ಯುವಾಗುಲು ನಮ್ಮದು ಅದೇ ಆಟ. ಮನಸ್ಸಿನಲ್ಲಿ ಅವರ ಮನೆಗೆ ಹೋಗಿ ತಿಂಡಿ ತಿನ್ನುವ ಆಸೆ ಇದ್ದರು, ತಪ್ಪಿಸಿಕೊಳ್ಳುವ ಪ್ರಯತ್ನ ನಿಲ್ತಿರಲಿಲ್ಲ. ಇನ್ನು ನೇಜಿ ನೆಡುವಾಗ ಹಾಡುತ್ತಿದ್ದ 'ರಾವೋ ರಾವು ಕೊರಂಗು', 'ದೂಜಿ ಕೆಮ್ಮಯೇ' ಹಾಡುಗಳ ನಡುವೆ ಗದ್ದೆ ಕೆಲಸದ ಆಯಾಸ ಮಾಯವಾಗ್ತಿತ್ತು.
ನಮ್ಮಂತ ಮಕ್ಕಳಿಗೆ ಭತ್ತದ ಕೊಯಿಲಾದ ಮೇಲೆ ಅವೇ ಗದ್ದೆಗಳು ಕ್ರಿಕೆಟ್ ಗ್ರೌಂಡ್ ಗಳಾಗಿಯೂ ಮಾರ್ಪಡುತ್ತಿದ್ದವು. ಎಲ್ಲರ ಸಂಭ್ರಮದ ಜೊತೆಗೆ ಒಂದು ಮನೆಯವರು ಇನ್ನೊಂದು ಮನೆಯವರ ನಡುವೆ ಕೊಡುಕೊಳ್ಳುವ ಬಾಂಧವ್ಯ ಇರ್ತಿತ್ತು. ಕೆಲಸ ಮುಗಿದ ಮೇಲೆ ಸಂಜೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರ್ತಿದ್ದೆವು. ಅದಕ್ಕೆ ಇಂತದ್ದೆ ಕಾರಣ ಬೇಕು ಅಂತಿರಲಿಲ್ಲ. ಸುಮ್ಮನೆ ಒಂದು ಹರಟೆ, ತಮಾಷೆ ಎಲ್ಲವು ಅಲ್ಲಿ ಮನೆ ಮಾಡಿರುತ್ತಿತ್ತು. ಕೈಯಲ್ಲಿ ದುಡ್ಡು ಜಾಸ್ತಿ ಇಲ್ಲದಿದ್ರು ಖುಷಿ ಪಡಲು ನೂರು ಕಾರಣಗಳು ಇರುತ್ತಿದ್ದವು.
ಈಗ ಹಾಗಿಲ್ಲ. ಭತ್ತದ ಗದ್ದೆಗಳು ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಬತ್ತಿ ಹೋಗಿವೆ. ಭತ್ತದ ಗದ್ದೆಗಳ ತುಂಬಾ ಅಡಿಕೆ ಮರಗಳು ಎದ್ದು ನಿಂತಿವೆ. ಹಿಂದೆ ದೂರ ದೊರದಲ್ಲಿ ಕಾಣುತ್ತಿದ್ದ ಮನೆಗಳು ಅಡಿಕೆ ತೋಟದಿಂದಾಗಿ ಕಾಣಿಸುತ್ತಿಲ್ಲ. ಅಡಿಕೆಗೆ ಒಳ್ಳೆಯ ರೇಟು ಸಿಕ್ಕ ಮೇಲಂತೂ ಮುಕ್ತವಾಗಿ ಮಾತಾಡೋದೇ ಕಷ್ಟವಾಗಿದೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸ ಇಲ್ಲ. ಟಿವಿ ಮುಂದೆ ಕುಳಿತು ಯಾರದೋ ಮನೆಗಳ ಕಥೆಯಂತಿರುವ ಧಾರಾವಾಹಿಗಳು ಮಾತನ್ನು ಮತ್ತಷ್ಟು ಕಡಿಮೆ ಮಾಡಿವೆ.
ಗದ್ದೆಗಳಲ್ಲಿ ಹಾಡುತ್ತಿದ್ದ ' ರಾವೋ ರಾವು ಕೊರಂಗು' ಕಾಣದಂತೆ ಎಲ್ಲೋ ಹಾರಿ ಹೋಗಿದೆ. ಜೊತೆಗೆ ನಮ್ಮೂರ ಜನರ ಬದುಕು ಕೂಡ! ಈಗಿನ ಮಕ್ಕಳಿಗೆ ಭತ್ತ ಹೇಗೆ ಬೆಳಿತಾರೆ ಅನ್ನೋದರ ಬಗ್ಗೆ ಸ್ಪಷ್ಟವಾಗಿ ಗೊತ್ತಾಗ್ತಿಲ್ಲ.

2 comments:

Mallika Adpangaya said...

hmmmm howdu..... Gadde gori dina, appa halage mettikana ni kuddukand hogthiddad yest laik erthittalla... narthe hiditiddad nenputta?.... aa dina matte yaaga bandade antha aagaaga manassu keltha eddade ala...

Hariprasada. A said...

hmmmm malli... ade badalaada baduku.. eega bare nireekshe maatra.. alaa...