Friday, February 11, 2011

ಮರೆಯಾಗದು ಪ್ರಕಾಶ...!

ಎಂ.ಪಿ. ಪ್ರಕಾಶ್ ಇನ್ನಿಲ್ಲ.
ಇದನ್ನು ಒಪ್ಪಿಕೊಳ್ಳೋದು ಕಷ್ಟ. ಹೌದು ಭೌತಿಕವಾಗಿ ಅವರು ಇನ್ನಿರಲಾರು. ಆದ್ರೆ ಅವರು ಮಾಡಿದ ಕೆಲಸಗಳು. ಅವರ ಕೊಡುಗೆಗಳು. ರಾಜಕಾರಣಿಯಾಗಿ ತೋರಿಸಿ ಕೊಟ್ಟ ಹಾದಿ. ಇದು ಎಂದೆಂದಿಗೂ ಚಿರನೂತನ.
ಎಂಪಿ ಪ್ರಕಾಶ್ ನಿಜ ಅರ್ಥದಲ್ಲೂ ಜನನಾಯಕ. ಒಬ್ಬ ಒಳ್ಳೆಯ ರಾಜತಾಂತ್ರಿಕ. ಅವರು ನಿಧನರಾದ ದಿನ ಬೆಂಗಳೂರಿನ ಸ್ವಾತಂತ್ರ್ಯ ಉಧ್ಯಾನಕ್ಕೆ ಸಾವಿರಾರು ಜನ ಹರಿದು ಬಂದಿದ್ರು. ಒಬ್ಬರಲ್ಲೂ ಒಂದೊಂದು ಭಾವನೆ. ರಾಜಕಾರಣಿಗಳು, ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ವಿಧ್ಯಾರ್ಥಿಗಳು. ಒಬ್ಬಬ್ಬರು ಒಂದೊಂದು ರೀತಿ ಪ್ರಕಾಶರನ್ನು ನೆನಪು ಮಾಡಿಕೊಂಡರು.
ಅವರಲ್ಲೊಬ್ಬ ವಿದ್ಯಾರ್ಥಿ ಸಿಕ್ಕಿದ್ದ. ಹಡಗಲಿಯವ. ಪಾಲಿಟೆಕ್ನಿಕ್ ಮುಗಿಸಿದ್ದ. ಸರ್.. ನಾನು ಓದೋದಿಕ್ಕೆ ಇವರೇ ಸರ್ ಕಾರಣ. ಸುಮಾರು ಇಪ್ಪತ್ತರ ಆಸುಪಾಸಿನ ಅವನ ಕಣ್ಣುಗಳಲ್ಲಿ ನೋವು ಮಡುಗಟ್ಟಿತ್ತು. ಒಬ್ಬ ರಾಜಕಾರಣಿ ಪ್ರಕಾಶ್ ಹಡಗಲಿಯಲ್ಲಿ ಶಾಲೆ, ಕಾಲೇಜು, ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದರಲ್ಲೂ ಇಂಜಿನಿಯರಿಂಗ್ ಕಾಲೇಜನ್ನು ಹಡಗಲಿಯಲ್ಲಿ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಬೇಕಾದ ಸಂಧರ್ಭ ಎದುರಾದಾಗ ಶಾಸಕರಲ್ಲದಿದ್ದರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಲ್ಲೂ ಹೋಗಿ ಸರ್ಕಾರವನ್ನು ಒತ್ತಾಯಿಸಿದ್ದರು. ತಾಲೂಕು ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದರು. ಇಂತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ರೂಪಿಸುವ ಕನಸು ಕಂಡಿದ್ದರು.
ವಿಧ್ಯಾರ್ಥಿ ತನ್ನ ಶಿಕ್ಷಣದ ಬಗ್ಗೆ ಹೇಳಿದ್ರೆ ಸಾಹಿತಿ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಲು, ಅದನ್ನು ಒಂದು ಮಾದರಿ ವಿವಿ ಆಗಿ ರೂಪಿಸಲು ಪ್ರಕಾಶರ ಕೊಡುಗೆಗಳನ್ನು ನೆನಪಿಸಿಕೊಂಡರು. ಹಂಪಿಗೆ ಎಂಪಿ ಕೊಡುಗೆ ಇಷ್ಟೇ ಅಲ್ಲ. ಹಂಪಿ ಉತ್ಸವವನ್ನು ಅವರು ರೂಪಿಸಿದರು. ಹಂಪಿಯ ಕಲ್ಲುಗಳಿಗೆ ಉತ್ಸವದ ಮೂಲಕ ಜೀವ ತುಂಬಿದರು ಎಂಪಿ ಪ್ರಕಾಶ್. ಈಗ ಅದು ರಾಜಕೀಯ ಪ್ರತಿಷ್ಠೆಯ ಉತ್ಸವ ಆಗಿರೋದು ವಿಪರ್ಯಾಸ.
ಪ್ರಕಾಶರ ಬಗ್ಗೆ ಕೆಲವೊಂದು ಅಂಶಗಳನ್ನು ಹೇಳಲೇ ಬೇಕು. ಆಗ ಪ್ರಕಾಶ್ ಜೆಡಿಎಸ್ ತೊರೆಯುವ ಹಂತ ತಲುಪಿದ್ದರು. ಅದು ರಾಜ್ಯದ ರಾಜಕೀಯದಲ್ಲಿ ವತ್ತು. ಜೆಡಿಎಸ್, ಬಿಜೆಪಿಗೆ ಕೈಕೊಟ್ಟಾಗಿತ್ತು. ಆಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜಕೀಯ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿತ್ತು. ಆ ಸಭೆಗೆ ಪ್ರಕಾಶ್ ಮತ್ತು ಅವರ ಬೆಂಬಲಿಗರು ಹೋಗಿರಲಿಲ್ಲ. ಅವತ್ತು ಸಂಜೆ ಅವರದೊಂದು ಪ್ರತಿಕ್ರಿಯೆ ತೆಗೆದುಕೊಳ್ಳಲು ಹೋಗಿದ್ದೆ. ಆಗ ಅವರು ಬಳಸಿದ ವಾಕ್ಯ ಅತ್ಯಂತ ಅರ್ಥಗರ್ಭಿತವಾಗಿತ್ತು. ಅವತ್ತು ಪ್ರಕಾಶ್ ಹೇಳಿದ್ದು : ' ಕರೆಸಿದ ಜನಗಳ ಮುಂದೆ ಕುಳಿತು ಸಭೆ ನಡೆಸಿದರೆ ಅದು ಕಾರ್ಯಕಾರಿಣಿ ಸಭೆ ಆಗುತ್ತಾ?...' ಜೆಡಿಎಸ್ ನಡೆಸಿದ ಅಂದಿನ ಕಾರ್ಯಕಾರಿಣಿಗೆ ಇದಕ್ಕಿಂತ ಉತ್ತಮ ವಿಶ್ಲೇಷಣೆ ಮಾಡೋದಿಕ್ಕೆ ಸಾಧ್ಯ ಇರಲಿಲ್ಲ.
ಪ್ರಕಾಶ್ ರಿಂದ ರಾಜಕೀಯ ಪಾಠ ಕೇಳುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಗೆಳೆಯ ಚೇತನ್ ಇದಕ್ಕೆ ಅವಕಾಶ ಮಾಡ್ಕೊಟ್ಟಿದ್ದ. ಸ್ವಾತಂತ್ರ್ಯ ನಂತರ ಭಾರತ ಹಾಗು ರಾಜ್ಯ ರಾಜಕೀಯದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಪ್ರಕಾಶ್ ಅವತ್ತು ಸುಮಾರು ಮೂರು ಗಂಟೆಗಳ ಕಾಲ ಹೇಳ್ಕೊಟ್ಟಿದ್ದರು. ಯಾವುದೇ ಪುಸ್ತಕ ಓದಿದರೆ ಸಿಗದಷ್ಟು ಮಾಹಿತಿಯನ್ನು ಅವರು ನೀಡಿದ್ದರು.
ಈಗ ಪ್ರಕಾಶ್ ಇಲ್ಲ. ಅವರು ನೆನಪು ಮಾತ್ರ. ಆದರೆ ಜೀವನದ ಉದ್ದಕ್ಕೂ ಸಮಾಜದ ಮೇಲೆ ಅವರು ಬೀರಿದ ಪ್ರಕಾಶ ಮರೆಯಾಗದು.

2 comments:

Anonymous said...

chennagide...

hari said...
This comment has been removed by a blog administrator.