Tuesday, August 23, 2011

ಅಣ್ಣಾಗೆ ವಂದಿಸುತ್ತಾ..


ಅಣ್ಣಾ
ಹಜಾರೆ ಹೋರಾಟಕ್ಕೆ ದೇಶ ವ್ಯಾಪಿ ಬೆಂಬಲ ವ್ಯಕ್ತವಾಗಿದೆ. ನಿಜಕ್ಕೂ ಈ ದೇಶದಲ್ಲಿ ಇಂತದ್ದೊಂದು ಚಳವಳಿಯ ಅವಶ್ಯಕತೆ ಇತ್ತು. ಇಡೀ ದೇಶ ಒಂದಾಗಿ ಹೋರಾಟ ನಡೆಸುವ ಶಕ್ತಿಯನ್ನು ಈಗಲೂ ಹೊಂದಿದೆ ಅನ್ನೋದನ್ನು ಅಣ್ಣಾ ಹೋರಾಟ ತೋರಿಸಿಕೊಟ್ಟಿದೆ.

ಅಣ್ಣಾ ಹೋರಾಟವನ್ನು ಎರಡನೆ ಸ್ವಾತಂತ್ರ್ಯ ಸಂಗ್ರಾಮ ಎಂದೇ ಬಿಂಬಿಸಲಾಗುತ್ತಿದೆ. ಜಯಪ್ರಕಾಶ್ ನಾರಾಯಣ್ ತುರ್ತು ಪರಿಸ್ಥಿತಿ ವಿರುದ್ದ ನಡೆಸಿದ ಸಂಪೂರ್ಣ ಕ್ರಾಂತಿ ಹೋರಾಟವನ್ನು ನೋಡದಿದ್ದ ನಮ್ಮ ಪಾಲಿಗೆ ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ. ಈಗ ದೇಶದ ಉದ್ದಗಲಕ್ಕೆ ಎಲ್ಲರು ಅಣ್ಣಾ ಭಜನೆ ಮಾಡುತ್ತಿದ್ದಾರೆ. ಅಣ್ಣಾ ನಮಗೆಲ್ಲ ಆಧುನಿಕ ಗಾಂಧಿಯಾಗಿ ತೋರುತ್ತಿದ್ದಾರೆ. ಖಂಡಿತವಾಗಿಯೂ ಅಣ್ಣಾ ಒಬ್ಬ ನಿಜವಾದ ಗಾಂಧಿವಾದಿ. ಎಲ್ಲೂ ತಾವು ನಡೆಸುತ್ತಿರುವ ಹೋರಾಟ ಹಿಂಸೆಯ ರೂಪ ಪಡೆದುಕೊಳ್ಳದಂತೆ ಎಚ್ಚರವಹಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹೋರಾಟ ನಡೆದರು ದೇಶದಲ್ಲಿ ಶಾಂತಿ ಕದಡಿಲ್ಲ. ಅಹಿಂಸೆಯ ಹಾದಿಯಲ್ಲೇ ಹೋರಾಟ ಹೆಜ್ಜೆ ಹಾಕಿದೆ. ಒಂದು ದೇಶವನ್ನು ಈ ರೀತಿ ಅಹಿಂಸೆಯ ಹಾದಿಯಲ್ಲಿ ಹೋರಾಟಕ್ಕೆ ಸಂಘಟಿಸೋದು ಅಷ್ಟು ಸುಲಭವಲ್ಲ. ಆದ್ರೆ ಅಣ್ಣಾ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಖಂಡಿತವಾಗಿಯೂ
ಇಂದಿನ ಪಾರ್ಲಿಮೆಂಟರಿ ಸಿಸ್ಟಮ್ ಗೆ ಮಹತ್ತರ ಬದಲಾವಣೆಯ ಅವಶ್ಯಕತೆ ಇದೆ. ಕಳೆದ ೬೫ ವರ್ಷಗಳಿಂದ ನಮ್ಮ ಸಂಸತ್ತು, ಶಾಸನ ಸಭೆಗಳು ಯಾವುದೇ ಮಸೂದೆಯ ಹಣೆಬರಹ ಬರೆಯುತ್ತಿವೆ. ಲೋಕಪಾಲ್ ಮಸೂದೆ ಸುಮಾರು ೪೦ ವರ್ಷಗಳಿಂದ ಜಾರಿಗೆ ಬರದೆ ಇರೋದು ಇದಕ್ಕೆ ಸಾಕ್ಷಿ. ಆದ್ರೆ ಇದೆ ಮೊದಲ ಬಾರಿಗೆ ಸಂಸತ್ತಿನ ಮುಂದೆ ಒಂದು ಮಸೂದೆ ಇಂತಿಷ್ಟೇ ಸಮಯದೊಳಗೆ ಬರಬೇಕೆಂದು ದೇಶದ ಜನ ಹಕ್ಕೊತ್ತಾಯ ಮಾಡಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ವೋಟು ಕೊಟ್ಟು ಕಳಿಸಿದ ಜನ ೫ ವರ್ಷದವರೆಗೆ ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸೋದಿಕ್ಕೆ ಇದುವರೆಗೆ ಅವಕಾಶ ಇಲ್ಲವೇನೋ ಎಂದು ನಾವೆಲ್ಲಾ ಅಂದುಕೊಂಡಿದ್ದೆವು. ಆದ್ರೆ ಈಗ 'ನಾವ್ ಹೇಳೋದನ್ನು ಸ್ವಲ್ಪ ಕೇಳಿ' ಅಂತ ಜನಪ್ರತಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಅಣ್ಣಾ ನೆನಪಿಸಿಕೊಟ್ಟಿದ್ದಾರೆ. ಸಂಸತ್ತಿನಲ್ಲಿ ಜನಲೋಕಪಾಲ್ ಬಗ್ಗೆ ಚರ್ಚೆ ನಡೆಯೋದ್ರ ಮೂಲಕ ಇತಿಹಾಸ ಸೃಷ್ಟಿಯಾಗಿದೆ.

ಇದೆಲ್ಲ ಸರಿ. ಅಣ್ಣಾ ಜನರಲ್ಲಿ ಹೋರಾಟದ ಕೆಚ್ಚನ್ನು ತುಂಬಿದ್ದಾರೆ. ಆದ್ರೆ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ, ಸಂಸತ್ತು, ರಾಜಕೀಯ ಪಕ್ಷಗಳ ಮುಖಂಡರೆಲ್ಲಾ ಪದೇ ಪದೆ ಅಣ್ಣಾ ನಿರಶನ ಕೈಬಿಡಬೇಕೆಂದು ಒತ್ತಾಯಿಸಿದ್ರೂ ಹಜಾರೆ ಉಪವಾಸವನ್ನು ನಿಲ್ಲಿಸಿಲ್ಲ. ಸಂಸತ್ತಿನಲ್ಲಿ ತಾವು ಹೇಳಿದ ವಿಚಾರಗಳ ಬಗ್ಗೆ ಅಂತಿಮ ರೆಸೆಲ್ಯೂಷನ್ ಹೊರಬರುವವರೆಗೆ ಉಪವಾಸ ಕೈಬಿಡೋದಿಲ್ಲ ಅನ್ನೋ ನಿಲುವ ಹಠಮಾರಿತನ ಅನ್ನಿಸದೆ ಇರದು. ಪ್ರಜಾಪ್ರಭುತ್ವದಲ್ಲಿ ಹೋರಾಟದ ಮೇಲೆ ಇರುವಷ್ಟೇ ನಂಬಿಕೆ ಮಾತುಕತೆಯ ಮೇಲೂ ಇರಬೇಕು. ಸಂಸತ್ತಿನಲ್ಲಿ ನೀಡುವ ಭರವಸೆಯಿಂದ ಯಾರೂ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ತಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಅದಕ್ಕೆ ತಕ್ಕ ಪಾಠ ಕಲಿಸಲು ಜನತೆ ಇದ್ದೇ ಇದ್ದಾರೆ. ಇನ್ನೂ ಒಂದು ಅಂಶವೆದ್ರೆ ಲೋಕಸಭೆಯಲ್ಲಿ ಜನ ಲೋಕಪಾಲ್ ಗೆ ಸಂಬಂಧಿಸಿದಂತೆ ಚರ್ಚೆ ಆರಂಭವಾಗುತ್ತಿದ್ದಂತೆ ಅಣ್ಣಾ ಹಜಾರೆ ರಾಮ್ ಲೀಲಾ ಮೈದಾನದಲ್ಲಿ ಮಾತನಾಡಿದ್ರು. ಜನ್ ಲೋಕಪಾಲ್ ವಿರೋಧಿಸುವವರನ್ನು ಮುಂದಿನ ಚುನಾವಣೆಯಲ್ಲಿ ಲೋಕಸಭೆಗೆ ಆರಿಸಿ ಕಳಿಸಬಾರದು ಎಂದು ಅಣ್ಣಾ ಹೇಳಿದ್ರು. ನಿಜಕ್ಕೂ ಇದು ಆಶ್ಚರ್ಯದ ಸಂಗತಿ. ಯಾಕಂದ್ರೆ ತಾವು ಸಿದ್ದಪಡಿಸಿದ ಮಸೂದೆಯನ್ನೇ ಎಲ್ಲರೂ ಒಪ್ಪಿಕೊಳ್ಳಬೇಕು. ಇದನ್ನು ವಿರೋಧಿಸುವಂತಿಲ್ಲ ಅನ್ನೋ ನಿಲುವು ಯಾರಿದಂಲೂ ಬರಬಾರದು. ಯಾಕಂದ್ರೆ ಪ್ರಜಾಪ್ರಭುತ್ವದ ವಿಶೇಷತೆ ಅಡಗಿರುವುದೇ ಕೊಡು ಕೊಳ್ಳುವಿಕೆಯಲ್ಲಿ. ಹೇರಿಕೆಯಲ್ಲಿ ಅಲ್ಲ.

ಏನೇ ಆದ್ರೂ ಅಣ್ಣಾ ಹೋರಾಟ ದೇಶದಲ್ಲಿ ಜನರಲ್ಲಿ ಹೊಸ ಸಂಚಲನ ಮೂಡಿಸಿರೋದಂತೂ ಸತ್ಯ.

7 comments:

ಸಿಬಂತಿ ಪದ್ಮನಾಭ Sibanthi Padmanabha said...

ಚೆನ್ನಾಗಿ ಹೇಳಿದ್ದಿ. Good One.

Nandini (Priya) said...

Howdu anna avara horaata okay!!!!! but hata yenake yennuva prashnee nannaliyu mudithu... but ondanthu artha aaythu sir rajakaranigalannu nambalu asaadya adakagiye anna horata maadiye bittaru.........

Nandini (Priya) said...

sir anna avara horata okayy aadaare hata yenake antha nanagu annisithu sir......channagide lekhanada anthya!!!!!

Hariprasada. A said...

ಥ್ಯಾಂಕ್ಸ್ ಪದ್ಮ..

Hariprasada. A said...

ನಂದಿನಿ thanks

Vivek's said...

ಯಾವದೇ ಒಂದು ಹೋರಾಟಕ್ಕೆ ತಾರ್ಕಿಕ ಅಂತ್ಯ ಕೊಡೋದು ಹೋರಾಟಗಾರನ ಕರ್ತವ್ಯ. ಒಂದು ಒಳ್ಳೆಯ ನಿರ್ದಾರ ಕೈಗೊಂಡ ಮೇಲೆ ಅದನ್ನ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋದು ಮತ್ತು ಬಹಳ ಮುಖ್ಯ ವಿಚಾರಗಳನ್ನ ಲೋಕ್ಪಾಲ್ ಮಸೂದೆಯಲ್ಲಿ ಅಳವಡಿಸಬೇಕೆಂಬ ಅವರ ತರ್ಕ ಅದು ಹತಮಾರಿಥನವಂತು ಅಲ್ಲ ಎಂದು ನನ್ನ ಅಭಿಪ್ರಾಯ. ಅಣ್ಣ ಒಳ್ಳೆ ಕೆಲಸ ಮಾಡಿದ್ದರೆ, ಆಮೇಲೆ ಹೋರಾಟವನ್ನ ಒಂದು ತಾರ್ಕಿಕ ನೆಲೆಗಟ್ಟಿಗೆ ತಂದು ನಿಲ್ಲಿಸಿದ್ದಾರೆ.

ಅವರು ಎಂದೂ ತನ್ನದೇ ಲೋಕ್ಪಾಲ್ ಬಿಲ್ ಬರಬೇಕು ಅಂತ ಹಠ ಹಿಡಿದಿರಲಿಲ್ಲ, ಆದರೆ ಸರಕಾರ ಮಂಡಿಸ ಹೊರಟಿದ್ದ ಮಸೂದೆ, ಭ್ರಷ್ಟಾಚಾರ ತಡೆಗಟ್ಟುವ ಬದಲು ಅದನ್ನು ರಕ್ಷಿವಂಥಿತ್ತು ಅನ್ನೋದನ್ನ ಮರೆಯಬಾರದು ಮತ್ತು ಸರಕಾರೀ ಮಸೂದೆಯನ್ನ ಅಸ್ಟೇ ವಿರೋದಿಸಿದರು. ಇನ್ನೊಂದು ವಿಚಾರ ಅಂದ್ರೆ ಅಣ್ಣ ಈ ರೀತಿ ಹಠ ಹಿಡಿಯೋಕೆ ಅವ್ರ ಏಪ್ರಿಲ್ ತಿಂಗಳ ಹೋರಾಟದ ಅನುಭವವೂ ಇದೆ. ಅಣ್ಣ ಟೀಂ ಅಥವ IAC ತನ್ನ ಮಸೂದೆಯೇ ಮಂಡನೆಯಾಗಬೇಕು ಅಂತ ಹಠ ಹಿಡಿದಿರಲಿಲ್ಲ. ಅವ್ರ ಹಟವೆನಿದ್ರು, ಅವರಿಟ್ಟ ಶರತ್ತಿನ ಮೂರಂಶ ಮಸೂದೆಯಲ್ಲಿರಬೇಕು ಅನ್ನೋದು ಮತ್ತು ಆ ಮೂರಂಶ ಬಹಳ ಅಗತ್ಯವೂ ಆಗಿತ್ತು ಅಂತ ನನ್ನ ಅಭಿಪ್ರಾಯ.

123 said...

Good one Hari...