Wednesday, September 14, 2011

ಶ್ರೀರಾಮುಲು ರಾಜೀನಾಮೆ ಪ್ರಹಸನ

ಬಳ್ಳಾರಿಯ ಬಿ. ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ ಏನೋ ದೊಡ್ಡ ಸಾಧನೆ ಮಾಡಲು ಹೊರಟವರ ಮೂಡ್ ನಲ್ಲಿದ್ದರು. ಅವ್ರ ಸುತ್ತಲಿದ್ದ ಜನರೂ ಅಂತದ್ದೇ ನಿರೀಕ್ಷೆಯಲ್ಲಿದ್ದರು.
ಕರ್ನಾಟಕದ ಪಾಲಿಗೆ ಶಾಸಕರು ರಾಜೀನಾಮೆ ಕೊಡೋದು ಹೊಸತಲ್ಲ. 2008ರ ನಂತ್ರವಂತೂ ಆಪರೇಷನ್ ಕಮಲದ ಹೆಸರಿನಲ್ಲಿ ಹದಿನಾಲ್ಕು ಜನ ಕಾಂಗ್ರೆಸ್ - ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ. ಆದ್ರೆ ಶ್ರೀರಾಮುಲು ರಾಜೀನಾಮೆ ಕೊಡೋದಿಕ್ಕೆ ಹೊರಟಾಗ ಇದ್ದ ಒಂದೇ ಒಂದು ಚೇಂಜ್ ಅಂದ್ರೆ ಅವ್ರು ಬಿಜೆಪಿಗೆ ಸೇರಿದವರು ಅನ್ನೋದಷ್ಟೇ. 'ಶ್ರೀರಾಮುಲು ರಾಜೀನಾಮೆ ಅಂಗೀಕಾರ ಆಗೋದಿಲ್ಲ' ಅನ್ನೋ ಮಾತು ಅವ್ರು ಬೆಂಗಳೂರಿನಿಂದ ಮಡಿಕೇರಿಯತ್ತ ಹೊರಟು ನಿಂತಾಗಲೇ ಬಿಜೆಪಿಯ ಅಂಗಳದಿಂದ ಕೇಳಿಬಂದಿತ್ತು.
ಹಾಗೆ ನೋಡಿದ್ರೆ ಬಿಜೆಪಿಯಲ್ಲಿ ಆರಂಭವಾದ ಆಪರೇಷನ್ ಕಮಲದ ರುವಾರಿ ಬಿ.ಶ್ರೀರಾಮುಲು. 2008ರ ಚುನಾವಣೆಯ ನಂತ್ರ ಸ್ಪಷ್ಟ ಬಹುಮತಕ್ಕಿಂತ ಮೂರು ಸೀಟು ಕಡಿಮೆ ಇದ್ದ ಬಿಜೆಪಿ ಆರು ಜನ ಪಕ್ಷೇತರರ ನೆರವಿನಿಂದ ಅಧಿಕಾರದ ಗದ್ದುಗೆ ಏರಿತು. ಆದ್ರೆ ಬಿಜೆಪಿಯೇ ಪೂರ್ಣ ಬಹುಮತ ಪಡ್ಕೋಬೇಕು ಎಂಬ ಹಪಹಪಿ ಪಕ್ಷದ ನಾಯಕರಲ್ಲಿತ್ತು. ಹಾಗಾಗಿಯೇ ಮೊದಲಿಗೆ ಮೂವರು ಶಾಸಕರ ರಾಜೀನಾಮೆ ಕೊಡಿಸಲಾಯಿತು. ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಮತ್ತು ಶಿವನಗೌಡ ನಾಯಕ್ ಹಾಗೂ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಆನಂದ್ ಅಸ್ನೋಟಿಕರ್ ರಾಜೀನಾಮೆ ಕೊಡಿಸಲಾಯಿತು. ಅವತ್ತು ರಾಜೀನಾಮೆ ಕೊಟ್ಟ ಈ ಮೂವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಶ್ರೀರಾಮುಲು ಅವ್ರ ಸೆವೆನ್ ಮಿನಿಸ್ಚರ್ಸ್ ಕ್ವಾಟ್ರಸ್ ನಲ್ಲೇ. ಅವತ್ತು ಬಿಳಿ ಬಣ್ಣದ ಜುಬ್ಬಾದ ಮೇಲೆ ಕಡುಕಪ್ಪು ಬಣ್ಣದ ಓವರ್ ಕೋಟ್ ಹಾಕ್ಕೊಂಡು ಶ್ರೀರಾಮುಲು ಮಿಂಚುತ್ತಿದ್ದರು. ಮೂವರು ಶಾಸಕರ ರಾಜೀನಾಮೆ ಕೊಡಿಸಿ ಕಮಲದ ತೆಕ್ಕೆಗೆ ಅವ್ರನ್ನು ಕರೆತಂದ ಹೆಮ್ಮೆ ಅವ್ರ ಮುಖದಲ್ಲಿತ್ತು. ಏನೋ ದೊಡ್ಡ ಸಾಧನೆ ಮಾಡಿದಂತೆ ಅವ್ರು ಕಾಣುತ್ತಿದ್ದರು.
ಆದ್ರೆ ಕೇವಲ ಮೂರೇ ವರ್ಷದ ಅಂತರದಲ್ಲಿ ಅದೇ ಶ್ರೀರಾಮುಲು ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದರು. ಹೀಗೆ ರಾಜೀನಾಮೆ ಕೊಡಲು ಹೊರಟಾಗ ಅವ್ರ ಮುಖದಲ್ಲಿ ಯುದ್ಧೋನ್ಮಾದ ಇತ್ತು. ಅದೇ ಉನ್ಮಾದದಲ್ಲೇ ಅವ್ರು ಸೆಪ್ಟಂಬರ್ ನಾಲ್ಕರಂದು ಮಡಿಕೇರಿಗೆ ಹೋಗಿದ್ದರು.
ಮಾರನೇ ದಿನ ಚಿತ್ರಣ ಸಂಪೂರ್ಣ ಅದಲು ಬದಲಾಗಿತ್ತು. ಶ್ರೀರಾಮುಲು ರಾಜೀನಾಮೆಯ ತಂತ್ರಗಾರಿಕೆ ಮಾಡಿದ್ದ ಗಣಿಧಣಿ ಜನಾರ್ಧನ ರೆಡ್ಡಿ ಸಿಬಿಐನ ವಶದಲ್ಲಿದ್ದರು. ಯುದ್ಧಕ್ಕೆ ಹೊರಟ ಶ್ರೀರಾಮುಲು ರಣರಂಗ ಪ್ರವೇಶಕ್ಕೂ ಅವಕಾಶ ಸಿಗದೆ ಅರಮನೆಗೆ (ಬಳ್ಳಾರಿಗೆ) ದೌಡಾಯಿಸಿದ್ದರು.
ಇಷ್ಟೆಲ್ಲಾ ಆಗಿ ಇಪ್ಪತ್ತು ದಿನ ಕಳೆದಿದೆ. ಆದ್ರೆ ಶ್ರೀರಾಮುಲು ರಾಜೀನಾಮೆ ಅಂಗೀಕಾರ ಇನ್ನೂ ಆಗಿಲ್ಲ. ತಮ್ಮ ರಾಜೀನಾಮೆ ಹಿಂಪಡೆಯೋದಿಲ್ಲ ಎಂದು ರಾಮುಲು ಬಹಿರಂಗವಾಗಿ ಹೇಳ್ಕೊಂಡಿದ್ದಾರೆ. ರಾಜೀನಾಮೆ ವಿಚಾರದಲ್ಲಿ ಅವ್ರ ಮನವೊಲಿಸುವ ಪ್ರಯತ್ನ ನಡೆದಿದೆ ಅನ್ನೋ ಮಾತನ್ನು ಬಿಜೆಪಿ ನಾಯಕರು ಹೇಳಿದ್ದಾರೆ.
2008ರ ವಿಧಾನಸಭಾ ಚುನಾವಣೆಯ ನಂತ್ರ ರಾಜ್ಯದಲ್ಲಿ ಇದುವರೆಗೆ ಹದಿನಾಲ್ಕು ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗೆ ರಾಜೀನಾಮೆ ಕೊಟ್ಟವರೆಲ್ಲಾ ಆಮೇಲೆ ಕಮಲ ಪಾಳಯ ಸೇರಿದ್ದಾರೆ. ಅವ್ರ ರಾಜೀನಾಮೆಗಳನ್ನು ಕೆ.ಜಿ.ಬೋಪಯ್ಯ ತತಕ್ಷಣವೇ ಅಂಗೀಕರಿಸಿ ಸ್ಥಾನ ತೆರವಿಗೆ ಅವಕಾಶ ಮಾಡ್ಕೊಟ್ಟಿದ್ದರು. ಶ್ರೀರಾಮುಲು ವಿಷಯದಲ್ಲಿ ಮಾತ್ರ ರಾಜೀನಾಮೆ ಅಂಗೀಕರಿಸಲು ಅಥವಾ ಅದನ್ನು ತಿರಸ್ಕರಿಸಲು ಸ್ಪೀಕರ್ ಬೋಪಯ್ಯ ಅವ್ರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಕರ್ನಾಟಕದ ರಾಜಕಾರಣ ಅನೇಕ ಸಂದರ್ಭಗಳಲ್ಲಿ ರಾಷ್ಟ್ರಕ್ಕೆ ಮಾದರಿಯಾದ ಉದಾಹರಣೆಗಳಿವೆ. ಆದ್ರೆ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬೇರೆ ಬೇರೆ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ನಿದರ್ಶನಗಳನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಅದ್ರ ಮುಂದುವರಿದ ಭಾಗವನ್ನು ಸ್ಪೀಕರ್ ಪರಿಚಯಿಸುತ್ತಿದ್ದಾರೆ.
ಶ್ರೀರಾಮುಲು ರಾಜೀನಾಮೆ ಪ್ರಹಸನದ ಕ್ಲೈಮಾಕ್ಸ್ ಹೇಗಾಗುತ್ತೆ ಅನ್ನುವ ಕುತೂಹಲ ಜನರಲ್ಲಿದೆ. ರಾಜೀನಾಮೆ ಅಂಗೀಕಾರ ಆದ್ರೂ ತಿರಸ್ಕಾರ ಆದ್ರೂ ಅದೊಂದು ದಾಖಲೆಯೇ...!

No comments: