Sunday, January 1, 2012

ಕಳೆದು ಹೋದ ವರ್ಷದ ನೆನಪಲ್ಲಿ..

ಹೊಸ ವರ್ಷ ಬಂದಿದೆ. ಅದೇ ಸಂಭ್ರಮ, ಸಡಗರ ಮನೆ ಮಾಡಿದೆ.
ಜೊತೆಗೆ ಹಳೆ ವರ್ಷದ ನೆನಪುಗಳು ಮತ್ತೆ ಉಕ್ಕುಕ್ಕಿ ಬರುತ್ತವೆ.
೨೦೧೧ ಅನೇಕ ಅದ್ಭುತಗಳನ್ನು ತೆರೆದಿಟ್ಟ ವರ್ಷ. ಅನೇಕ ಸಾಧ್ಯತೆಗಳನ್ನು ತೋರಿಸಿಕೊಟ್ಟ ವರ್ಷ. ದುಡ್ಡು ಮತ್ತು ಅಧಿಕಾರ ಇದ್ದರೆ ಯಾರು ಏನ್ ಬೇಕಾದ್ರೂ ಮಾಡ್ಬಹುದು. ಕಾನೂನು ಯಾವತ್ತಿದ್ದರೂ ಅಧಿಕಾರಸ್ಥರ, ಶ್ರೀಮಂತರ ಪರ. ಕಾನೂನು ದೇವತೆಯ ಕಣ್ಣಿಗೆ ಕಟ್ಟಿರುವ ಕಪ್ಪುಪಟ್ಟಿಯನ್ನು ದುಡ್ಡಿದ್ದವರು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಅಂತೆಲ್ಲಾ 2010ರ ವರೆಗೆ ಬಹುತೇಕ ಜನ ಅಂದ್ಕೊಂಡಿದ್ದರು. ಆದ್ರೆ ಅದನ್ನೆಲ್ಲಾ ೨೦೧೧ ಅನ್ನೋ ಅದ್ಭುತ ವರ್ಷ ಸುಳ್ಳಾಗಿಸಿದೆ. ಎ. ರಾಜಾ ರಿಂದ ಆರಂಭವಾಗಿ ಯಡಿಯೂರಪ್ಪ, ಜನಾರ್ದನ ರೆಡ್ಡಿವರೆಗೆ ಘಟಾನುಘಟಿಗಳು ಜೈಲು ಕಂಬಿಯನ್ನು ಎಣಿಸಿದ್ದಾರೆ.
ಇದು ದೇಶ ರಾಜ್ಯದ ಕಥೆಯಾದ್ರೆ.. ಹೋಸ್ನಿ ಮುಬಾರಕ್, ಗಡಾಫಿಯಂತ ಸರ್ವಾಧಿಕಾರಿಗಳು ಕಾಲಚಕ್ರದಡಿಗೆ ಸಿಲುಕಿ ಕಾಲಗರ್ಭ ಸೇರಿದ್ದಾರೆ. ಇರಾಕ್ ನಿಂದ ಕೊನೆಗೂ ಅಮೇರಿಕಾ ಮಿತ್ರಕೂಟದ ಪಡೆಗಳು ವಾಪಸ್ಸಾಗಿವೆ. ಜಗತ್ತಿನ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಕೂಗು ಜೋರಾಗುತ್ತಿದೆ. ನಿರಂಕುಶ ಪ್ರಭುತ್ವಕ್ಕೆ ೨೦೧೧ ಅಂಕುಶ ಹಾಕುವ ಕೆಲಸ ಮಾಡಿದೆ.
ಭಾರತದಲ್ಲೂ ಜಾಳಾಗುತ್ತಿರುವ ಪ್ರಜಾಪ್ರಭುತ್ವದ ಬೇರುಗಳು ಮತ್ತೆ ಗಟ್ಟಿಗೊಳ್ಳುವ ಲಕ್ಷಣವನ್ನು ೨೦೧೧ ತೋರಿಸಿಕೊಟ್ಟಿದೆ. 2010ರವೆರೆಗೆ ದೇಶದ ಜನತೆಗೆ ಅಷ್ಟಾಗಿ ಗೊತ್ತಿಲ್ಲದೇ ಇದ್ದ ಅಣ್ಣಾ ಹಜಾರೆ ಇವತ್ತು ಭಾರತೀಯರ ಕಣ್ಮಣಿಯಾಗಿದ್ದಾರೆ. ಅವ್ರ ಜೊತೆಗಿನ ಪಟಾಲಂ ಬಗ್ಗೆ ಏನೇ ಅನುಮಾನಗಳಿದ್ದರೂ ಅಣ್ಣಾ ಹೋರಾಟ ದೇಶಕ್ಕೆ ಮತ್ತೆ ಅಹಿಂಸಾ ತತ್ವದ ಚಳವಳಿಯ ಅವಶ್ಯಕತೆಯನ್ನು ತೋರಿಸಿಕೊಟ್ಟಿದೆ. ಅದ್ರ ಮೌಲ್ಯವನ್ನೂ ಪರಿಚಯಿಸಿದೆ. ಜೊತೆಗೆ ಜಡ್ಡುಗಟ್ಟಿರುವ ರಾಜಕೀಯ ವ್ಯವಸ್ಥೆಗೆ ಗುದ್ದು ಕೊಡುವಲ್ಲಿ ಅಣ್ಣಾ ಯಶಸ್ವಿಯಾಗಿದ್ದಾರೆ. ಹಾಗಿದ್ರೂ ಅಣ್ಣಾ ಹೋರಾಟದ ಜೊತೆಗೆ ಸಂಧಾನದ ಬಗ್ಗೆಯೂ ವಿಶ್ವಾಸ ಹೊಂದಿದ್ದರೆ ಅವ್ರ ಅಹಿಂಸಾ ಹೋರಾಟಕ್ಕೆ ಮತ್ತಷ್ಟು ಫಲ ಸಿಗುತ್ತಿತ್ತೇನೋ...
ಕರ್ನಾಟಕದ ರಾಜಕೀಯ ಮತ್ತಷ್ಟು ಅಧಃಪತನದೆಡೆಗೆ ಸಾಗುವ ಮುನ್ಸೂಚನೆಯನ್ನೂ ೨೦೧೧ ತೋರಿಸಿಕೊಟ್ಟಿದೆ. ಅಧಿಕಾರ ಲಾಲಸೆ, ಅಧಿಕಾರದಲ್ಲಿರುವ ಪಕ್ಷವನ್ನು ಹೇಗಾದ್ರೂ ಮಾಡಿ ಅವಧಿ ಮೊದಲೇ ಉರುಳಿಸಬೇಕೆಂಬ ಹಪಹಪಿ. ಉಪಚುನಾವಣೆಗಳ ನಿರಂತರ ಹಾವಳಿ. ಹೀಗೆ ರಾಜ್ಯ ರಾಜಕೀಯದಲ್ಲಿ ಜನಕ್ಕೆ ಅಸಹನೆ ಹುಟ್ಟಿಸುವ ಕಾರ್ಯಗಳೇ ಕಳೆದು ಹೋದ ವರ್ಷದಲ್ಲಿ ಹೆಚ್ಚಾಗಿ ನಡೆದಿವೆ.
ಮತ್ತೆ ಕನ್ನಡಕ್ಕೊಂದು ಜ್ಞಾನಪೀಠ ಬಂದಿದೆ. ಕಂಬಾರರು ಕನ್ನಡ ತಾಯಿಯನ್ನು ಜ್ಞಾನಪೀಠದ ಮೇಲೆ ಕುಳ್ಳಿರಿಸಿದ್ದಾರೆ. ಜೊತೆಗೆ ಎಸ್.ಎಲ್.ಭೈರಪ್ಪ ಕನ್ನಡಾಂಬೆಗೆ 'ಸರಸ್ವತಿ ಸಮ್ಮಾನ' ಮಾಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಇದು ನಿಜಕ್ಕೂ ದೊಡ್ಡ ಸಂಸತದ ವಿಷಯ. ಜೊತೆಗೆ ಕನ್ನಡ ರಾಜ್ಯೋತ್ಸವಕ್ಕೆ ಅವಮಾನಿಸಿದೆ ಬೆಳಗಾವಿ ಪಾಲಿಕೆ ಮೇಯರ್ - ಉಪಮೇಯರ್ ಮೇಲೆ ಗಧಾಪ್ರಹಾರ ಮಾಡಿ ರಾಜ್ಯ ಸರ್ಕಾರ ಭೇಷ್ ಅನ್ನಿಸಿಕೊಂಡಿದೆ. ಇಷ್ಟೆಲ್ಲಾ ಇದ್ದರೂ ಮಕ್ಕಳಿಲ್ಲದ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರದಲ್ಲಿ ರಾಜ್ಯ ಸರ್ಕಾರ ವಸ್ತುಸ್ಥಿತಿಯತ್ತ ಗಂಭೀರ ಚರ್ಚೆ ನಡೆಸಬೇಕಿದೆ. ಮುಚ್ಚಿದ ಮೇಲಾದ ಪರಿಣಾಮಗಳ ಬಗ್ಗೆ ಪರಿತಪಿಸುವ ಬದಲು ಮುಚ್ಚುವ ಮೊದಲೇ ವಿವೇಚಿಸಿದರೆ ಹೆಚ್ಚು ಉಪಯುಕ್ತ.
ಇದೆಲ್ಲದರ ನಡುವೆ ನಾಡು ಕಂಡ ಇಬ್ಬರು ಅಪರೂಪದ ಮತ್ತು ಶ್ರೇಷ್ಠರ ಸಾಲಿನಲ್ಲಿ ನಿಲ್ಲುವ ರಾಜಕಾರಣಿಗಳನ್ನು 2011ರಲ್ಲಿ ಕಳೆದುಕೊಂಡಿದ್ದೇವೆ. ವರ್ಷದ ಆರಂಭದಲ್ಲಿ ಎಂ.ಪಿ.ಪ್ರಕಾಶ್ ದೂರವಾದ್ರು. ಸಜ್ಜನಿಕೆಯ, ಸಾತ್ವಿಕ ಮನೋಭಾವದ ಆಜಾತಶತ್ರು ಎಂ.ಪಿ. ಪ್ರಕಾಶ್. ಅವ್ರು ರಾಜಕೀಯದೊಳಗೆ ಸಾಂಸ್ಕೃತಿಕ ಲೋಕದ ಪ್ರತಿನಿಧಿಯಂತಿದ್ದವರು. ವರ್ಷದ ಕೊನೆಗೆ ಅಂದ್ರೆ ಡಿಸೆಂಬರ್ 26ರಂದು ಸಾರೆಕೊಪ್ಪ ಬಂಗಾರಪ್ಪ ಕೂಡ ಭೌತಿಕವಾಗಿ ಇಲ್ಲವಾದ್ರು. ಸ್ವಾಭಿಮಾನಿ, ಛಲದಂಕಮಲ್ಲ, ಬಡವರ ಬಂಗಾರವಾಗಿದ್ದವರು ಬಂಗಾರಪ್ಪ. ನಲ್ವತ್ತು ವರ್ಷ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದ ಬಂಗಾರಪ್ಪಗೆ ಅದ್ಯಾಕೋ ಕಾಂಪ್ರಮೈಸ್ ರಾಜಕಾರಣದ ಮೇಲೆ ನಂಬಿಕೆಯೇ ಇದ್ದಂತಿರಲಿಲ್ಲ. ಅವ್ರದ್ದೇನಿದ್ರೂ ಸ್ವಾಭಿಮಾನದ ರಾಜಕಾರಣವಾಗಿಬಿಟ್ಟಿತ್ತು. ಇದೇ ಕಾರಣಕ್ಕೆ ಪಕ್ಷಗಳನ್ನು ಬಿಟ್ಟು ಪಕ್ಷಗಳನ್ನು ಕಟ್ಟಿ, ಕೆಡಿವಿ, ಅಧಿಕಾರ ಅನುಭವಿಸಿ, ಅಧಿಕಾರದಿಂದ ದೂರವಿದ್ದು ತಾವು ನಡೆದಿದ್ದೇ ದಾರಿ ಎಂಬಂತಿದ್ದರೂ ಬಂಗಾರಪ್ಪ ಯಾವತ್ತೂ ಜನರಿಂದ ದೂರವಿರಲಿಲ್ಲ. ಬಡವರ, ಹಳ್ಳಿಯ ಜನರ, ರೈತರ ವಿಚಾರದಲ್ಲಿ ಅವ್ರ ನಿಲುವಿನಲ್ಲಿ ಎಂದೂ ಬದಲಾಗಲಿಲ್ಲ. ಇದಕ್ಕೆ ಬಂಗಾರಪ್ಪ ಇತರೆ ಎಲ್ಲಾ ರಾಜಕಾರಣಿಗಳಿಂತ ವಿಭಿನ್ನ ಸ್ಥಾನದಲ್ಲಿ ನಿಲ್ಲುತ್ತಿದ್ದುದು.

ಹೀಗೆ ಕಳೆದು ಹೋದ ವರ್ಷವನ್ನು ಮೆಲುಕು ಹಾಕುತ್ತಾ ಹೋದ್ರೆ ಹಲವು ನೆನಪುಗಳು ಮರುಕಳಿಸುತ್ತವೆ. ಇದ್ರ ಜೊತೆಗೆ ನಾನು ಬರವಣಿಗೆ ಆರಂಭಿಸುತ್ತಿದ್ದ ದಿನಗಳಲ್ಲಿ ' ನೀ ಎಂತ ಬರಿಯದು ಚಿಕ್ಕಪ್ಪಾ' ಅಂತಾ ತೊದಲು ನುಡಿಗಳಲ್ಲಿ ಕೇಳುತ್ತಿದ್ದ ಮಗಳು ಗಾನಶ್ರೀ ದೂರವಾಗಿ ಜ.1ಕ್ಕೆ ಎರಡು ವರ್ಷವಾದ್ರೂ ಅವಳ ನೆನಪು ಚಿರಂತನ.
ಮತ್ತೆ ಹೊಸ ವರ್ಷದೆಡೆಗೆ ಹೊಸ ಆಶೆಗಳಿಂದ ನೋಡುತ್ತಿದ್ದೇವೆ. ಕನಸುಗಳು ನೂರಾರಿವೆ. ಏನೇನಾಗಿದೆತೆ ಅನ್ನೋ ಲೆಕ್ಕಾಚಾರ ಮತ್ತೆ ವರ್ಷದ ಕೊನೆಗೆ ಹಾಕಬೇಕು. ಅಲ್ಲವರೆಗೆ ಕನಸುಗಳಿಗೆ ಕಡಿವಾಣ ಹಾಕೋದೇಕೆ. ಅಲ್ವಾ?

No comments: