Monday, February 10, 2014

ಮರುಭೂಮಿಯ ಹೂ ಓದಿದ ಮೇಲೆ..

ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಯಾವುದೇ ಪುಸ್ತಕವನ್ನು ಅನಾಮತ್ತು ಒಂದೇ ಸಲ ಓದಿ ಮುಗಿಸುವ ಜಾಯಮಾನ ನನ್ನದಲ್ಲ. ಎಷ್ಟೇ ಕಾಡಿದ್ರೂ ಅದನ್ನು ನಿಧಾನವಾಗಿ ಐದಾರು ದಿನಗಳಲ್ಲಿ ಓದಿ ಮುಗಿಸೋದು ಹವ್ಯಾಸ. ಆದರೆ ' ಮರುಭೂಮಿ ಹೂ' ಅದಕ್ಕೆ ಅವಕಾಶ ಕೊಡಲಿಲ್ಲ. ಸುಸ್ತಾಗಿದೆ ಮಲಗ್ತೀನಿ ಅಂದ್ಕೊಂಡು ಪುಸ್ತಕದ ಮೇಲೆ ಕಣ್ಣಾಡಿಸಲೆಂದು ಎತ್ತಿಕೊಂಡ ಪುಸ್ತಕ ನಿದ್ದೆಯನ್ನೇ ಓಡಿಸಿಬಿಟ್ಟಿತ್ತು.

ಸೊಮಾಲಿಯಾದ ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್. ಮುಸ್ಲಿಂ ಬುಡಕಟ್ಟ ಸಮುದಾಯದ ಹೆಣ್ಣುಮಗಳು. ಮದುವೆಯ ಹೆಸರಲ್ಲಿ ಐದು ಒಂಟೆಗಳ ಬೆಲೆಗೆ ಬಿಕರಿಯಾಗಬೇಕಿದ್ದ ಹೆಣ್ಣುಮಗಳು. ಆದರೆ ಅಮ್ಮನ ಒಪ್ಪಿಗೆ ಪಡೆದು, ಮನೆಬಿಟ್ಟು ಮರಳು ಗಾಡಿನಲ್ಲಿ ಒಂಟಿಯಾಗಿ ಸಾಗಿ ಆಕೆ ಜೀವನದ ಸವಾಲುಗಳನ್ನು ಎದುರಿಸಿದ ರೀತಿ ಮೈ ಜುಮ್ಮೆನಿಸುತ್ತೆ. ಅಂತಹ ಬರಡು ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್ ಮುಂದೊಂದು ದಿನ ಇಡೀ ಜಗತ್ತು ಮೆಚ್ಚುವ ರೂಪದರ್ಶಿಯಾಗಿ ಬೆಳೆದ ಪರಿ ಅನನ್ಯ. ಆಕೆ ಪ್ರತೀ ಬಾರಿ ಹೇಳಿಕೊಳ್ಳುವ ದೇವರೇ ನಿಜಕ್ಕೂ ಇಂತದ್ದೊಂದು ಪವಾಡ ಮಾಡಿದನೇನೋ ಎಂಬಂತೆ ಸಾಗುತ್ತೆ ಆಕೆಯ ಬದುಕು. 

ವಾಸಿರ್‌ಗಿಂತಲೂ ಆಕೆಯ ತಾಯಿಯನ್ನು ಯಾವ ರೀತಿಯಾಗಿ ವಿವರಿಸಬೇಕೋ ಗೊತ್ತಾಗುತ್ತಿಲ್ಲ. ಅಮ್ಮ ಅಂದರೆ ಹೀಗೆ ಅಲ್ವಾ ಅನ್ನಿಸಿಬಿಡುತ್ತೆ. ಆ ತಾಯಿ ತಾನು ಬಯಸಿದ್ದರೆ ವೈಭವೋಪೇತವಾಗಿ ಅಲ್ಲದಿದ್ದರೂ ದಿನದ ಕೂಳಿಗೆ ಪರದಾಡದ ಸ್ಥಿತಿಯಲ್ಲಿ ಬದುಕು ಸಾಗಿಸಬಹುದಿತ್ತು. ಆದರೆ ಆಯ್ಕೆ ಮಾಡಿಕೊಂಡ ಗಂಡನ ಜೊತೆಗೆ ಮರಳುಗಾಡಿನಲ್ಲಿ ಜೀವನ ಸಾಗಿಸುತ್ತಾಳೆ. ಮಕ್ಕಳನ್ನು ಹೆರುತ್ತಾಳೆ. ಸಂಸಾರ ಸಾಗಿಸುತ್ತಾಳೆ. ಆದರೆ ಗಂಡನೆಂಬ ಗಂಡ ಅದೊಂದು ದಿನ ಬೇರೆ ಹೆಣ್ಣನ್ನು ಮದುವೆಯಾಗಿ ಮನೆಗೆ ಕರೆತಂದಾಗ ಒಂದೂ ಮಾತಾಡದೆ ಸುಮ್ಮನಾಗುತ್ತಾಳೆ. ಮುಂದೆ ಆಕೆಯ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊರುತ್ತಾಳೆ. ಅಮ್ಮಾ ನಿನಗೊಂದು ಸಲಾಂ.

ತೇಜಸ್ವಿಯವರು ಅನುವಾದಿಸಿದ 'ಮಹಾಪಲಾಯನ' ಓದಿದಾಗ ಭೀಕರ ಅನುಭವವೊಂದು ಮನಸ್ಸಿಗೆ ನಾಟುತ್ತದೆ. ಸಾದತ್ ಹಸನ್ ಮಂಟೋನ ಕಥೆಗಳನ್ನು ಓದುವಾಗ ಬರ್ಬರತೆಯ ದರ್ಶನವಾಗುತ್ತದೆ. ಆದರೆ ಮರುಭೂಮಿಯ ಹೂವು ಹಾಗಲ್ಲ. ಇದು ಸೃಷ್ಟಿಸುವ ಅನುಭೂತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ. ಅಂತಃಕರಣವನ್ನು ತಟ್ಟುವುದು ಅಂತಾರಲ್ಲ. ಬಹುಷಃ ಅದು ಇದಕ್ಕೇ ಇರಬೇಕು. ಇರುವುದೊಂದೇ ಭೂಮಿ ಮೇಲೆ ನಮ್ಮದೇ ಕಷ್ಟ ಜಾಸ್ತಿ ಅಂತೆಲ್ಲಾ ನಾವು ಅಂದ್ಕೋತೀವಿ. ಆದರೆ ವಾಸಿರ್ ಅನುಭವಿಸಿದ ಮತ್ತು ಸೊಮಾಲಿಯಾದ ಮರಳುಗಾಡಿನಲ್ಲಿ ಇಂದಿಗೂ ಲಕ್ಷಾಂತರ ಹೆಣ್ಣುಮಕ್ಕಳು ಸಾಗಿಸುತ್ತಿರುವ ಬದುಕಿದೆಯಲ್ಲ. ಅದನ್ನು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲವೇನೊ. 

ಹಿರಿಯ ಪತ್ರಕರ್ತ ಡಾ.ಜಗದೀಶ್ ಕೊಪ್ಪ dessert flower ಎಂಬ ವಾಸಿರ್ ಳ ಜೀವನ ಚರಿತ್ರೆಯನ್ನು ಅನುವಾದಿಸಿ ಮರುಭೂಮಿಯ ಹೂವನ್ನು ಕನ್ನಡದ ಜನರ ಕೈಗಿತ್ತಿದ್ದಾರೆ. ಅಚ್ಚುಕಟ್ಟಾದ ಅನುವಾದ ಮೂಲ ಬರಹ ಕನ್ನಡದ್ದೇ ಏನೋ ಎಂಬಷ್ಟು ಆಪ್ತವಾಗಿ ಮೂಡಿಬಂದಿದೆ. ಇದಕ್ಕಾಗಿ ಖಂಡಿತ ಕನ್ನಡಿಗರು ಡಾ.ಜಗದೀಶ್ ಕೊಪ್ಪ ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕು. ಪುಸ್ತಕ ಕೊಂಡು ಓದಿದರೆ ಅದಕ್ಕಿಂತ ಹೆಚ್ಚಿನದ್ದು ಬೇರೆನೂ ಬೇಕಿಲ್ಲವೇನೋ. ಯಾಕೋ ಪುಸ್ತಕ ಓದಿದಮೇಲೆ ಇದೆಲ್ಲವನ್ನೂ ಬರೆಯಬೇಕು ಅನ್ನಿಸ್ತು. ಕೊಂಡು ಓದಿ. 

10 comments:

Anonymous said...

ಮರುಭೂಮಿಯ ಹೂವಿನ ಸುಗಂಧದ ಕಂಪು ಮೂಗಿಗೆ ಬಡಿದ ಮೇಲೆ ಪುಸ್ತಕ ಕೊಂಡು ಓದುವ ನಿರ್ಧಾರಕ್ಕೆ ಬಂದಾಗಿದೆ. ಓದು ಮುಗಿದ ನಂತರ ಮುಂದಿನ ಕಮೆಂಟ್.

Anonymous said...

ಮರುಭೂಮಿಯ ಹೂವು.. ನೀವು ಈ ಲೇಖನ ಬರೆದ ಮೇಲೆ ಓದು ಮನಸ್ಸಾಗಿದೆ.ಈ ಪುಸ್ತಕ ನಿಮ್ಮ ಮನಸ್ಸಿಗೆ ಹಿಡಿಸಿದೆ ಅಂದ ಮೇಲೆ ಓದಲೇಬೇಕು..

Anonymous said...

ಮರುಭೂಮಿಯ ಹೂವಿನ ಕಂಪು ಮೂಗಿಗೆ ಬಡಿದ ಮೇಲೆ ಪುಸ್ತಕ ಕೊಂಡು ಓದುವ ನಿರ್ಧಾರಕ್ಕೆ ಬಂದಾಗಿದೆ. ಓದು ಮುಗಿದ ನಂತರ ಮುಂದಿನ ಕಮೆಂಟ್.

Hariprasada. A said...

ತಮ್ಮ ಹೆಸರು ಬರೆದಿದ್ದರೆ ಓಳ್ಳೆದಿತ್ತು. ಖಂಡಿತ ಓದಿ.

ಮನಸು said...

ಬರಹ ಆಪ್ತವಾಗಿದೆ ಸರ್.. ಓದಲೇಬೇಕು ಎಂದುಕೊಂಡಿರುವೆ. ಜಗದೀಶ್ ಕೊಪ್ಪ ಅವರು ಏನನ್ನೇ ಬರೆದರು ಸವಿವರವಾಗಿ ಬರೆಯುತ್ತಲೇ ಬಂದಿದ್ದಾರೆ. ಸದ್ಯಕ್ಕೆ ಈ ಮರುಭೂಮಿ ಹೂ ಪುಸ್ತಕವೂ ಹಾಗೆಯೇ ಇರುತ್ತದೆ.
ಧನ್ಯವಾದಗಳು ಒಳ್ಳೆಯ ಪುಸ್ತಕದ ಬಗ್ಗೆ ಪರಿಚಯಿಸಿದ್ದಕ್ಕೆ
ಸುಗುಣ ಮಹೇಶ್
ಕುವೈತ್

Hariprasada. A said...

ಧನ್ಯವಾದ ಸುಗುಣ ಮಹೇಶ್. ಖಂಡಿತ ಒದಲೇ ಬೇಕಾದ ಪುಸ್ತಕ..

Unknown said...

ತುಂಬಾ ಚೆನ್ನಾಗಿದೆ...

Hariprasada. A said...

ಥ್ಯಾಂಕ್ಯೂ.....

Anonymous said...

neevu ishtu helida mele odabekendeniside...

Hariprasada. A said...

ಖಂಡಿತ ಪುಸ್ತಕ ಓದಿ.