ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ನಾವೆಲ್ಲಾ ಸಂಭ್ರಮಿಸಿದ್ದೂ ಆಗಿದೆ. ಡಾ.ಚಂದ್ರಶೇಖರ ಕಂಬಾರರು ಕನ್ನಡ ತಾಯಿಯ ಮುಕುಟಕ್ಕೆ ಎಂಟನೇ ಜ್ಞಾನಪೀಠದ ಗರಿಯನ್ನು ತೊಡಿಸಿದಾಗ ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಖುಷಿ ಪಡೋದು ಸಹಜ. ಸಾರಸ್ವತ ಲೋಕದ ಅಲ್ಲೊಂದು - ಇಲ್ಲೊಂದು ಭಿನ್ನ ಧ್ವನಿಯ ಸಾಮಾನ್ಯ ಜನರ ಸಂತಸಕ್ಕೆ ಯಾವುದೇ ತಡೆ ಆಗಿಲ್ಲ.
ಜ್ಞಾನಪೀಠ ಬರೋದ್ರ ಜೊತೆಗೆ ಅದ್ರ ವಿಜೇತರ ಮಾತುಗಳಿಗೆ ಹೆಚ್ಚಿನ ತೂಕ ಬರುತ್ತೆ. ಹೀಗಾಗಿ ಚಂದ್ರಶೇಖರ ಕಂಬಾರರು ಸದ್ಯ ಹೇಳುತ್ತಿರುವ ಕೆಲ ವಿಚಾರಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ಅದ್ರಲ್ಲೂ ನನ್ನಂತ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛಂದವಾಗಿ ಕಲಿತು ಬೆಂಗಳೂರಿನಂತಹ ಮಹಾನಗರಗಳನ್ನು ನೋಡುತ್ತಿರುವವರಿಗೆ ಕಂಬಾರರ ಮಾತು ಹೆಚ್ಚು ಆಪ್ತವಾಗುವುದು ಸಹಜ. ಆದರೂ ಈ ಆಪ್ತತೆಯನ್ನು ಹೊರಗಿಟ್ಟು ನೋಡಿದ್ರೂ ಕಂಬಾರರ ಮಾತಿನಲ್ಲಿ ಹೆಚ್ಚಿನ ಅರ್ಥವನ್ನು ಹುಡುಕಿಕೊಳ್ಳಬಹುದು. ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದಾಗ ಮೊದಲಿಗೆ ಹೋಗಿ ನಮ್ಮ ಚಾನೆಲ್ ಗೆ ಅವ್ರನ್ನು ಮಾತನಾಡಿಸುವ ಸುಯೋಗ ನನಗೆ ಸಿಕ್ಕಿತ್ತು. ಸಣ್ಣದೊಂದು ಚಿಟ್ ಚ್ಯಾಟ್ ಮಾಡಿದಾಗ ಕಂಬಾರರು ತಮ್ಮ ಮೃದು ಧ್ವನಿಯಲ್ಲೇ ಗಹನವಾದ ವಿಚಾರ ಹೇಳಿದ್ದರು. ಅದೇ ಎಲ್ ಕೆ ಜಿಯಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವನ್ನು ರಾಜ್ಯ ಸರ್ಕಾರವೇ ಕಡ್ಡಾಯವಾಗಿ ಕೊಡಬೇಕು ಎಂದು ಅವತ್ತು ಕಂಬಾರರು ಹೇಳಿದ್ದರು. ಇದೇನು ಅವ್ರು ಮೊದಲ ಬಾರಿಗೆ ಹೇಳುತ್ತಿರುವ ವಿಚಾರವಲ್ಲ. ಆದ್ರೆ ಜ್ಞಾನಪೀಠ ಪ್ರಶಸ್ತಿ ಬಂದ್ಮೇಲೆ ಅವ್ರು ಹೇಳ್ತಿರೋದ್ರಿಂದ ಇದಕ್ಕೆ ಹೆಚ್ಚಿನ ತೂಕ ಬಂದಿದೆ.
ಕಂಬಾರರ ಹೇಳಿಕೆಗೆ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಜೊತೆಗೆ ಕಾಗೇರಿಯವ್ರು ಮಾತೃಭಾಷೆಯ ಬೋಧನೆ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದಾರೆ. ಇಷ್ಟಾದ್ರೂ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಎಲ್ ಕೆಜಿಯಿಂದ ಹತ್ತನೇ ತರಗತಿವರೆಗೆ ಸರ್ಕಾರವೇ ಶಿಕ್ಷಣ ಕೊಡುತ್ತೆ ಅನ್ನೋದನ್ನು ಈಗಲೂ ನಂಬಲು ಅಸಾಧ್ಯ. ಈಗಿರುವ ವ್ಯವಸ್ಥೆಯಲ್ಲಿ ಅದು ಜಾರಿಗೆ ಬರೋದು ಕನಸಿನ ಮಾತು.
ಜುಲೈ ತಿಂಗಳ ಫ್ರಂಟ್ ಲೈನ್ ಪತ್ರಿಕೆಯಲ್ಲಿ ಒಂದು ಕವರ್ ಸ್ಟೋರಿ ಬಂದಿತ್ತು.' A long way to go' ಎಂಬ ಶೀರ್ಷಿಕೆಯಡಿ ಬಂದಿರುವ ಸಂಚಿಕೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಣದ ಒಳಹೊರಗನ್ನು ವಿಶ್ಲೇಷಿಸಲಾಗಿದೆ. ಅದರ ಅಗ್ರ ಲೇಖನದಲ್ಲಿ " ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ಡಾ. ಆರ್.ಆನಂದಕುಮಾರ್ ಮತ್ತವರ ಪತ್ನಿ ಡಾ.ಎಂ.ಶ್ರೀವಿದ್ಯಾ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಕುಮಲನಕುಟ್ಟಿಯಲ್ಲಿರುವ ತಮಿಳು ಮಾಧ್ಯಮದ ಸರ್ಕಾರಿ ಶಾಲೆಗೆ ಹೋಗಿ ಇತರೆ ಮಕ್ಕಳ ಪಾಲಕರ ಜೊತೆಗೆ ಕ್ಯೂನಲ್ಲಿ ನಿಂತು ತಮ್ಮ ಮಗಳು ಗೋಪಿಕಾಳನ್ನು ಶಾಲೆಗೆ ಅಡ್ಮಿಷನ್ ಮಾಡಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ರಾಣಿ ಅವ್ರಿಗೆ, ನಮ್ಮ ಮಗಳು ಕೂಡ ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿಯೂಟವನ್ನೇ ಊಟ ಮಾಡ್ತಾಳೆ. ಮನೆಯಿಂದ ಊಟ ತರೋದಿಲ್ಲ ಎಂದಿದ್ದಾರೆ." ಎಂಬ ವಿಚಾರವಿದೆ.
ಆದ್ರೆ ನಮ್ಮ ರಾಜ್ಯದ ಸ್ಥಿತಿಯನ್ನು ಕಲ್ಪಿಸಿಕೊಳ್ಳೋಣ. ಸರ್ಕಾರದ ಅಂಕಿಅಂಶಗಳನ್ನು ನೋಡಿದ್ರೆ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕೊಡುವ ಒಟ್ಟು ಶಾಲೆಗಳಲ್ಲಿ ಶೇ.75ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಅಂದಾಜು ಶೇ. 70ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲೇ ಓದುತ್ತಿದ್ದಾರೆ. ಆದ್ರೆ ಇನ್ನುಳಿದ ಶೇ. 30ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಮತ್ತು ಕೇಂದ್ರೀಯ ಪಠ್ಯಕ್ರಮಗಳಲ್ಲಿ ವ್ಯಾಸಾಂಗ ಮಾಡ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದರೂ ಮಾತೃಭಾಷಾ ಶಿಕ್ಷಣಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯಕಾರಣ ಬೆಂಗಳೂರಿನಂತಹ ಮಹಾನಗರಗಳಿಂದ ಹಿಡಿದು ಇತರೆ ನಗರಗಳ ನಂತ್ರ ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಇತ್ತೀಚೆಗೆ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲೂ ಮಕ್ಕಳು ಇಂಗ್ಲಿಷ್ ಪಠ್ಯಕ್ರಮದಲ್ಲಿ ಓದಿದ್ರೆ ಮಾತ್ರ ಬುದ್ಧಿವಂತರಾಗ್ತಾರೆ ಎಂಬ ಭ್ರಮೆ ಶುರುವಾಗಿದೆ.
ಈರೋಡ್ ನ ಜಿಲ್ಲಾಧಿಕಾರಿಯಂತೆ ನಮ್ಮ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವ್ರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಿದ್ದಾರೆ. ಅವ್ರು ಸಚಿವರಾಗೋದಿಕ್ಕೂ ಮೊದಲೇ ಅವ್ರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರು. ಸಚಿವರಾದ್ಮೇಲು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸೋದ್ರ ಮೂಲಕ ಸಚಿವರು ಮಾದರಿಯಾಗಿರುವುದು ನಿಜ. ಆದ್ರೆ ಕೇವಲ ಕಾಗೇರಿ ಒಬ್ರಿಂದ ಅಥವಾ ಈರೋಡ್ ನ ಜಿಲ್ಲಾಧಿಕಾರಿಯಿಂದ ಮಾತ್ರ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಉತ್ತೇಜನ ಸಿಕ್ಕರೆ ಸಾಕಾಗೋದಿಲ್ಲ.
ಈಗಿರುವ ಶಿಕ್ಷಣದ ವ್ಯವಸ್ಥೆಯಲ್ಲೇ ನಮ್ಮ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು ಸೇರಿದಂತೆ ಎಲ್ಲ ಸ್ಥರಗಳ ಜನಪ್ರತಿನಿಧಿಗಳ ಕುಟುಂಬ ವರ್ಗಗಳವರ ಮಕ್ಕಳು- ಮೊಮ್ಮಕ್ಕಳನ್ನು, ಸರ್ಕಾರದ ಉನ್ನತ ಅಧಿಕಾರಿಗಳ ಮಕ್ಕಳು - ಮೊಮ್ಮಕ್ಕಳನ್ನು, ಎಲ್ಲ ಸ್ಥರಗಳ ಅಧಿಕಾರಿಗಳ ಮಕ್ಕಳು - ಮೊಮ್ಮಕ್ಕಳನ್ನು, ಅಧ್ಯಾಪಕ ವೃಂದದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ನಮ್ಮಲ್ಲಿ ಬರೋದಿಕ್ಕೆ ಸಾಧ್ಯವೇ ? ಹಾಗೆ ಒಂದು ವೇಳೆ ಇವ್ರೆಲ್ಲಾ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದೇ ಹೌದೌದ್ರೆ ಸರ್ಕಾರಿ ಶಾಲೆಗಳ ವ್ಯವಸ್ಥೆ ತನ್ನಿಂದ ತಾನೇ ಬದಲಾಗುತ್ತದೆ. ಖಾಲಿಯಾಗಿರುವ ಶಿಕ್ಷಕರ ಹುದ್ದೆ, ಮಕ್ಕಳಿಗೆ ಪೂರೈಕೆಯಾಗಬೇಕಾದ ಪಠ್ಯಪುಸ್ತಕ, ಸಮವಸ್ತ್ರ, ಇಂಗ್ಲಿಷ್ ಸೇರಿದಂತೆ ಪ್ರತಿಯೊಂದು ಸಬ್ಜೆಕ್ಟ್ ಪಾಠ ಮಾಡುವ ನುರಿತ ಶಿಕ್ಷಕರು, ಪಾಠ ಮಾಡಲು ಮೈಗಳ್ಳತನ ಪ್ರದರ್ಶಿಸುವ ಶಿಕ್ಷಕರು, ಪದೇ ಪದೇ ಶಿಕ್ಷಣ ಪದ್ಧತಿಯಲ್ಲಿ ಆಗುವ ಅವೈಜ್ಞಾನಿಕ ಬದಲಾವಣೆಗಳು ಹೀಗೆ ಪ್ರತಿಯೊಂದು ಸಮಸ್ಯೆಯೂ ಸುಲಭವಾಗಿ ಪರಿಹಾರ ಆಗುತ್ತೆ.
ಸರ್ಕಾರಿ ಶಾಲೆಗಳ ಶಿಕ್ಷಣ ಹಳಿ ತಪ್ಪಲು ಮುಖ್ಯ ಕಾರಣ ಸರ್ಕಾರದ ಕಾನೂನು ರೂಪಿಸುವವರು ಮತ್ತು ಅದನ್ನು ಅನುಷ್ಟಾನಕ್ಕೆ ತರುವವರ ಕುಟುಂಬವರ್ಗದವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿಲ್ಲ. ಅವ್ರ ಮಕ್ಕಳೇನಿದರೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೀತಿದ್ದಾರೆ. ( ಎಲ್ಲೋ ಅಲ್ಲೊಂದು ಇಲ್ಲೊಂದು ಅಪವಾದಗಳನ್ನು ಹೊರತುಪಡಿಸಿ) ಹೀಗಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಅಧಿಕಾರಸ್ಥರಿಗೆ ಆಗ್ತಿಲ್ಲ. ಅದೇ ಅವ್ರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ಸರ್ಕಾರದ ಎಲ್ಲಾ ಯೋಜನೆಗಳು ನಿಯಮಬದ್ಧವಾಗಿ ಪಾಲನೆ ಆಗೋದಲ್ಲದೆ ಶಿಕ್ಷಣದ ಮಟ್ಟ ತನ್ನಿಂತಾನೆ ಸರಿಯಾಗುತ್ತೆ. ಒಮ್ಮೆ ಸರ್ಕಾರಿ ಶಾಲೆಗಳು ತಮ್ಮ ಸದ್ಯದ ಅವವಸ್ಥೆಗಳನ್ನು ಸರಿಪಡಿಸಿಕೊಂಡು ಮೈಕೊಡವಿ ನಿಂತ್ರೆ ಸಹಜವಾಗೇ ಖಾಸಗಿ ಶಾಲೆಗಳ ಜೊತೆ ಸವಾಲೊಡ್ಡಬಹುದು. ಅಲ್ಲದೆ ಸರ್ಕಾರಿ ಶಾಲೆಗಳ ಮಕ್ಕಳೂ ಸುಲಲಿತವಾಗಿ ಇಂಗ್ಲಿಷ್ ಗುಮ್ಮನನ್ನು ಓಡಿಸಿ ಆ ಭಾಷೆಯಲ್ಲಿ ಮಾತಾಡಲು ಸಾಧ್ಯ.
ಇಷ್ಟೆಲ್ಲಾ ಆದ್ರೂ ಕಂಬಾರರ ಮಾತಿನಂತೆ ಎಲ್ ಕೆಜಿಯಿಂದ ಹತ್ತನೇ ಕ್ಲಾಸ್ ವರೆಗೆ ಶಿಕ್ಷಣದ ರಾಷ್ಟ್ರೀಕರಣ ಮಾಡಿ ಸರ್ಕಾರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದು ಸಾಧ್ಯವೇ ? ಕಾಲವೇ ಇದಕ್ಕೆಲ್ಲಾ ಉತ್ತರಿಸಬೇಕಷ್ಟೆ.
Monday, September 26, 2011
Subscribe to:
Post Comments (Atom)
2 comments:
ನಿಜಕ್ಕೂ ಉತ್ತಮ ವಿಶ್ಲೇಷಣೆ ಮುಂದಕ್ಕೆ ನಿಮ್ಮ ಮಕ್ಕಳನ್ನೂ.. ಕನ್ನಡ ಮಾಧ್ಯಮ ಸರಕಾರಿ ಶಾಲೆಗೆ ಸೇರಿಸಲು ಮರೆಯದಿರಿ....
ನಾನು ಸೇರಿಸುತ್ತೇನೆ.. ಆದ್ರೆ ನೀವು ಅನಾಮೇದಯರಾಗಿದ್ದೀರಿ.. ಹಾಗಿದ್ರೂ ನಿಮ್ಮಲ್ಲೂ ವಿನಂತಿ.. ನಿಮಗೆ ಮಕ್ಕಳಿದ್ದರೆ ಅಥವಾ ಮುಂದೆ ಆಗೋದಿದ್ದರೆ ಅವ್ರನ್ನು ಸೇರಿಸೋದಿಕ್ಕೆ ನೀವೂ ಮರೆಯದಿರಿ.
Post a Comment