Friday, March 8, 2019

ಕತ್ತಲೋಡಿಸದ ಬೆಳಕು




ನಿದನಿಧಾನ ಸಾಗುವ ರಸ್ತೆ
ಇದರ ತಳುಕೇನು? ಬಳುಕೇನು?
ಸುತ್ತು ಸುತ್ತಲೇ ಹತ್ತಿ ಹೋಗುವ ಸುಸ್ತು
ಮನಕೋಟೆಯ ಮುಂದೆ ತಲೆಎತ್ತಿದ ಘಾಟಿ

ಕತ್ತಲಾವರಿಸಿತು. ಘಾಟಿಗೇನು? ಘಾಟಿ 'ಘಾಟಿ'ಯೇ
ಹೆಸರೇ ಕೃಷ್ಣ. ಕಪ್ಪು ಕತ್ತಲು.
ಸುತ್ತಲೂ ಝಗಮಗಿಸುತಿದೆ ಬೆಳಕು. ಮನೆಗಳು.. 
ಒಂದು, ಎರಡು, ಮೂರು.. ನೂರು, ಇನ್ನೂರು.. 
ಸಾವಿರವೇ? ದಾಟಿರಬೇಕು. ಎಣಿಸುವುದು ಇತ್ತಲೋ? 
ಅತ್ತಲೋ...?

ಅತ್ತಲೆಂದರೆ ಅತ್ತಲೇ. ಇತ್ತಲಿಂದಲೇ ಹೋದ ಅತ್ತಲಿಂದಲೇ ತೂರಿ ಬರುತಿದೆ ಬೆಳಕು. ಕತ್ತಲೋಡಿಸಲು
ಆವರಿಸಿದೆ ಅಲ್ಲೂ.. ಇಲ್ಲೂ


ಅತ್ತಲಿಂದಿತ್ತ ಇತ್ತಿಲಿಂದ ಹೋಗುತಿದೆ ಅತ್ತಕೂ.. ಬೆಳಕಿಗೆಲ್ಲಿದೆ ಬೇಲಿ? 
ಬೇಲಿಯೇ? ಬೇಲಿಯೂ ಇದೆ ನಡುವೆ. ಬೇಲಿಗೂ ಬೆಳಕು. ನಸುನಕ್ಕು ಬೆಳಕು ಬೀರುತಿದೆ ಬೆಳಕು. ನಸುನಕ್ಕಿದ್ದು ಹೌದೋ? ಹೌದೆಂದಿತು ಮನ. ಅಲ್ಲವೋ? ಅಲ್ಲದೆಯೂ ಇರಬಹುದು. ನಿರ್ಲಿಪ್ತ. ನನಗೇನಿದೆ ಹಂಗು? ನಗುವೂ ಇಲ್ಲ ಅಳುವೂ..

ಬೇಲಿ ಬೆಳಕುಗಳ ಮೀರಿ ಹಾರಿ ಬರುತಲಿದೆ 
ಸಿಡಿತಲೆಯ ಮದ್ದು ಗುಂಡು
ಢಂ.. ಢಮಾರ್.. ಅಬ್ಬರ.. ಸದ್ದಡಗುವ ನಡುವೆ ಚೀತ್ಕಾರ
ಕಷ್ಣಘಾಟಿಯ ಮಡಿಲ ಮಕ್ಕಳ ಕೂಗು

ಚೆಲ್ಲಿದ ರಕ್ತಕ್ಕೆ ಪ್ರತೀಕಾರದ ಪ್ರತಿಜ್ಞೆ
ಹಾರಲೇಬೇಕು ಸಿಡಿತಲೆಯ ಮದ್ದು
ಸಿಡಿಯಲೇಬೇಕು ಗುಂಡು.. ಚೆಲ್ಲಬೇಕು ರಕ್ತ
ರಕ್ತಕ್ಕೆ ರಕ್ತವೇ ಉತ್ತರ.. ಹಾ ಹಾ.. ರಕ್ತವೇ ಉತ್ತರ.
ಹಾರಿಹೋಗಿದ್ದು ರಕ್ತ ಬೇಕಿಲ್ಲದವರ ಪ್ರಾಣ
ಈಗಲಾದರು ಹರಿಯುವುದು ನಿಲ್ಲುತ್ತಾ ರಕ್ತ? ಇಲ್ಲ?

ನಗು ಮರೆತು ನಿರ್ಲಿಪ್ತವಾಗಿ ಬೆಳಕು ಬೀರುತಿದೆ ಬೇಲಿ
ಮೈಲುದ್ದದವರೆಗೂ ನೆರಳಾಗಿ ಕಾಡುತಿದೆ ಭಯ
ಯಾವುದರ ಗೊಡವೆಯಿಲ್ಲದೆ ನಿದ್ರೆಗೆ ಜಾರುತಿದೆ ಘಾಟಿ
ಕೃಷ್ಣಘಾಟಿ.

- ಹರಿಪ್ರಸಾದ್ ಅಡ್ಪಂಗಾಯ

(ಮನಕೋಟೆಯಿಂದ ಕೃಷ್ಣಘಾಟಿ ಹತ್ತಿಳಿದು ಪೂಂಚ್ ಗೆ ಬರುವ ಹಾದಿಯಲ್ಲಿ ಬರೆದಿದ್ದು)

Wednesday, September 5, 2018

ಧೈರ್ಯ ತುಂಬಿದ ಭಾಷಣ..!


ಹಲೋ..
ಹಲೋ..
ಹರಿಪ್ರಸಾದ್‌.. ?
ಹೌದು.. ಹಲೋ..
ಹಲೋ.. ಗೊತ್ತಾಯ್ತಾ ಯಾರೂ ಅಂತ..
ಹೆಚ್‌ಎಂ ಸರ್‌..
ಹಾಂ.. ಗುರುತು ಹಿಡಿದೆ..
ಮೊನ್ನೆಯಷ್ಟೇ ಹೆಚ್‌ಎಂ ಫೋನ್‌ ಮಾಡಿದಾಗ ನಮ್ಮಿಬ್ಬರ ನಡುವಿನ ಮಾತು ಶುರುವಾಗಿದ್ದು ಹೀಗೆ. ಹೆಚ್‌ಎಂ ಈಗ ರಾಮನಗರದ ಡಿಡಿಪಿಐ ಆಗಿದ್ದಾರೆ. ಆದ್ರೆ ನಮ್ಗೆ ಈಗ್ಲೂ ಅವ್ರು ಹೆಚ್‌ಎಂ.

ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಅಜ್ಜಾವರ ಪ್ರೌಢಶಾಲೆಗೆ ಹೆಚ್‌ಎಂ ಆಗಿ ಗಂಗಮಾರೇಗೌಡರು ಬಂದಾಗ ನಾನು ಎಂಟನೇ ಕ್ಲಾಸ್‌ನ ವಿದ್ಯಾರ್ಥಿ. ಆದ್ರೆ ಹೈಸ್ಕೂಲ್‌ನಲ್ಲೂ ವಿದ್ಯಾರ್ಥಿಗಳ ಕೈ ಬರಹ ತಿದ್ದಬಹುದು, ಅಕ್ಷರ ಚಂದ ಬರೆಯುವಂತೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದು ಗಂಗಮಾರೇಗೌಡರು. ಅದುವರೆಗೆ ಕಾಟಾಚಾರಕ್ಕೆ ಬರೀತಿದ್ದ ಕಾಪಿಯನ್ನು ತಿದ್ದಿ ತೀಡಿದ್ದು ಅವರೇ. ಬೋರ್ಡ್‌ ಮೇಲೆ ಗೆರೆ ಎಳೆದು ಅಲ್ಲೇ ಅ, , , .. ಬರೆದು, ,ಬಿ,ಸಿ,ಡಿ.. ಬರೆದು ಹೇಗೆ ಅಕ್ಷರಗಳನ್ನು ಚಂದಗೆ ಬರೀಬೇಕು ಅಂತ ತೋರಿಸಿಕೊಟ್ಟಿದ್ದರು. ಅವರ ಕೈ ಬರಹದಲ್ಲಿ ಕನ್ನಡದ ಅಕ್ಷರಗಳು ಬೋರ್ಡ್‌ ಮೇಲೆ ಅರಳಿದ ಹೂವುಗಳಂತೆಯೇ ಭಾಸವಾಗುತ್ತಿದ್ದವು. ಕನ್ನಡದ ಸ್ಪಷ್ಟ ಉಚ್ಛರಣೆ ಕಲಿಸಿದ್ದು ಪ್ರೈಮರಿಯಲ್ಲಿ ಜನಾರ್ಧನ ಮಾಷ್ಟ್ರು ಹಾಗೂ ರುಕ್ಮಿಣಿ ಟೀಚರ್‌. ಆದರೆ ಇವತ್ತಿಗೂ ಕಿವಿಯಲ್ಲಿರುವ ಕಂಚಿನ ಕಂಠ ಗಂಗಮಾರೇಗೌಡರದ್ದು.
ಕೆಲವೊಂದು ಸಂದರ್ಭಗಳಲ್ಲಿ ಯಾವುದೋ ಸಮಸ್ಯೆಯನ್ನು ಎದುರಿಸಲು ಹಿಂಜರಿಕೆಯಾದಾಗ ಸದಾ ನೆನಪಾಗುವುದು ಗಂಗಮಾರೇಗೌಡರು ಮಾಡಿದ್ದ ಒಂದು ಭಾಷಣ. ಅದು ನಮ್ಮ ಹೈಸ್ಕೂಲಿನ ವಾರ್ಷಿಕೋತ್ಸವದಲ್ಲಿ ಅವರು ಮಾಡಿದ್ದ ಭಾಷಣ. ಅನೇಕ ವರ್ಷಗಳ ನಂತರ ಅದೇ ಮೊದಲ ಬಾರಿಗೆ ನಮ್ಮ ಹೈಸ್ಕೂಲಿನಲ್ಲಿ ವಾರ್ಷಿಕೋತ್ಸವ ನಡೆದಿತ್ತು. ಈ ವಾರ್ಷಿಕೋತ್ಸವಕ್ಕೂ ಮೊದಲು ಅಜ್ಜಾವರ ಹೈಸ್ಕೂಲಿನ ವಿಶಾಲವಾದ ಗ್ರೌಂಡ್‌ನಲ್ಲಿ ಇದ್ದ ಏರು ತಗ್ಗುಗಳನ್ನು ಜೆಸಿಬಿ ತರಿಸಿ ರಾತ್ರಿ ಹಗಲು ಕೆಲಸದ ಮೂಲಕ ಸರಿ ಮಾಡಿಸಿದ್ದು ಗಂಗಮಾರೇಗೌಡರು ಹೆಚ್‌ಎಂ ಆಗಿದ್ದಾಗ. ಆದರೆ ಹೀಗೆ ಕೆಲಸ ಮಾಡಿದ್ದಕ್ಕೆ ಗಂಗಮಾರೇಗೌಡರ ವಿರುದ್ಧವೇ ಒಂದಷ್ಟು ಆಪಾದನೆಗಳನ್ನು ಮಾಡಿದ್ದರು ಎಂದು ನೆನಪು. ಇದರ ಜೊತೆಗೆ ನಮ್ಮ ಊರಲ್ಲಿ ಕಾಂಗ್ರೆಸ್‌-ಬಿಜೆಪಿ ಅಂತ ದೊಡ್ಡ ಮಟ್ಟದ ರಾಜಕಾರಣ ಬೇರೆ. ಇಂತಹ ಸಂದರ್ಭದಲ್ಲೇ ವಾರ್ಷಿಕೋತ್ಸವ ಆಚರಣೆಗೆ ಗಂಗಮಾರೇಗೌಡರು ನಿರ್ಧರಿಸಿದ್ದರು. ಆದರೆ ಅದನ್ನು ವಿರೋಧಿಸಿ ಒಂದು ಗುಂಪು ವಾರ್ಷಿಕೋತ್ಸವದ ದಿನ ಕಪ್ಪುಬಾವುಟ ಪ್ರದರ್ಶಿಸುವ ಬೆದರಿಕೆ ಹಾಕಿದ್ದರು. ಈ ಗುಸುಗುಸು ವಿದ್ಯಾರ್ಥಿಗಳಾಗಿದ್ದ ನಮಗೆಲ್ಲಾ ಒಂದು ರೀತಿಯ ಆತಂಕ ಸೃಷ್ಟಿಸಿತ್ತು. ಆದರೆ ವಿದ್ಯಾರ್ಥಿಗಳ ಮನಸ್ಸನ್ನು ತಿಳಿಗೊಳಿಸುವ ದೃಷ್ಟಿಯಿಂದಲೋ ಏನೋ (ಈಗ ಯೋಚಿಸುವಾಗ ಹಾಗನ್ನಿಸುತ್ತದೆ) ಕಲ್ಲಡ್ಕದ ಬೊಂಬೆಗಳು, ಕೀಲು ಕುದುರೆ ತರಿಸಿ ನೀಲಗಿರಿ ಅಡ್ಕದಿಂದ ಹೈಸ್ಕೂಲ್‌ವರೆಗೆ ಸುಮಾರು ಅರ್ಧ ಕಿಲೋಮೀಟರ್‌ ಉದ್ದಕ್ಕೆ ವಾರ್ಷಿಕೋತ್ಸವದ ಉದ್ಘಾಟನೆಗೂ ಮೊದಲು ಮೆರವಣಿಗೆ ನಡೆಸಿದ್ದರು.

ಇದಾದ ನಂತರ ವಾರ್ಷಿಕೋತ್ಸವದ ಉದ್ಘಾಟನೆ ವೇಳೆ ಶಾಲೆಯ ವರದಿಯನ್ನು ಮಂಡಿಸಿ ಗಂಗಮಾರೇಗೌಡರು ಅವತ್ತು ಒಂದು ಭಾಷಣ ಮಾಡಿದ್ದರು. ಕ್ಲಾಸ್‌ರೂಂನಲ್ಲಿ ಕೇಳುತ್ತಿದ್ದ ಕಂಚಿನ ಕಂಠ ಅವತ್ತು ಇನ್ನಷ್ಟು ಸ್ಪಷ್ಟವಾಗಿ, ಅಧಿಕಾರಯುತವಾಗಿ, ವಿಶ್ವಾಸದಿಂದ ಮೊಳಗಿತ್ತು. ‘ಒಬ್ಬ ಸರ್ಕಾರಿ ನೌಕರನಾಗಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ನಾನು ತಯಾರಿದ್ದೇನೆ...' ಎಂದು ಗೌಡರು ಹೇಳಿದ್ದರು. ಇದು ಕಪ್ಪುಬಾವುಟ ಪ್ರದರ್ಶಿಸುವ, ಚಿಲ್ರೆ ಪಾಲಿಟಿಕ್ಸ್‌ ಮಾಡುವವರಿಗೆ ಗಂಗಮಾರೇಗೌಡರು ಕೊಟ್ಟ ಎಚ್ಚರಿಕೆಯಂತಿತ್ತು. ಅಂದಿನ ನಂತರ ಮತ್ತೆಂದೂ ಗಂಗಮಾರೇಗೌಡರ ವಿರುದ್ಧ ಆಪಾದನೆ ಮಾಡುವ ಧೈರ್ಯ ಪ್ರದರ್ಶಿಸಿದ್ದು ನಾನು ಕಂಡಿಲ್ಲ. ಅವರ ಅವಧಿಯಲ್ಲೇ ತಾಲೂಕು ಮಟ್ಟದ ಕ್ರೀಡಾಕೂಟ, ಜಿಲ್ಲಾ ಮಟ್ಟದ ಯೋಗ ಸಮ್ಮೇಳನ, ಶಾಲಾ ವಾರ್ಷಿಕೋತ್ಸವ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆದಿದ್ದವು. ಒಂದು ರೀತಿಯಲ್ಲಿ ಅಜ್ಜಾವರ ಪ್ರೌಢಶಾಲೆಯ ಸುವರ್ಣ ದಿನಗಳವು. ಅದೇ ಸಂದರ್ಭದಲ್ಲಿ ನಾನು ಅಲ್ಲಿನ ವಿದ್ಯಾರ್ಥಿ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇದೆಲ್ಲಾ ನೆನಪಾಯಿತು. ಗಂಗಮಾರೇಗೌಡರ ರೀತಿಯಲ್ಲೇ ನನ್ನನ್ನು ತಿದ್ದಿತೀಡಿ ಪ್ರಭಾವಿಸಿದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ.



Saturday, August 25, 2018

ಡಿಗ್ರಿ ದಿನಗಳ ಪ್ರಧಾನಿ..!



ಕಳೆದೊಂದು ವಾರದಿಂದ ವಾಜಪೇಯಿಯವರ ಕಾವ್ಯಲೋಕದಲ್ಲಿ ವಿಹಾರ ಮಾಡುವಂತಾಗಿದೆ. ‘ಗೀತ್‌ ನಹೀ ಗಾತಾ ಹೂಂ..' ನಿಂದು ಶುರುವಾಗಿ ‘ಗೀತ್‌ ನಯಾ ಗಾತಾ ಹೂಂ..' ಎನ್ನುವ ಕವಿಯ ಮನ. ಅದನ್ನು ಹೇಳುವಾಗ ಕವಿ ವಾಜಪೇಯಿಯವರ ಮುಖದ ಹಾವಭಾವ..!

ವ್ಯಕ್ತಿಗೆ ಸಾವಿದೆ. ಆದರೆ ಕವಿಗೆ ಸಾವಿಲ್ಲ. ಯಾಕಂದ್ರೆ ಕವಿಯ ಕವಿತೆ ಓದುವಾಗೆಲ್ಲಾ ಜೊತೆಗೆ ಕುಳಿತು ಓದಿಸುತ್ತಾನೆ. ಕವಿಯ ಭಾವನೆಗಳು ಜೀವಂತವಾಗಿರುತ್ತವೆ. ಅದರಲ್ಲಿ ಕವಿ ಜೀವಂತವಾಗಿರುತ್ತಾನೆ. ರಾಜಕಾರಣಿ ವಾಜಪೇಯಿ ಇಹಲೋಕ ತ್ಯಜಿಸಿರಬಹುದು. ಆದರೆ ಕವಿ ವಾಜಪೇಯಿಯ ಕವಿತೆಗಳು ಜೊತೆಗಿರುತ್ತವೆ. ‘ಕಾಲನ ಕಪಾಲದ ಮೇಲೆ ನನ್ನ ಭವಿಷ್ಯ ನಾನೇ ಬರೆಯುತ್ತೇನೆ' ಎಂಬ ಸಾಲುಗಳಲ್ಲಿರುವ ವಿಶ್ವಾಸವೇ ಇದು.

ನಾನು ಪಿಯು ಓದುವಾಗ ಶುರುವಾಗಿ ಡಿಗ್ರಿ ಮುಗಿಸಿ ಮೊದಲ ವರ್ಷದ ಪಿಜಿ ಮುಗಿಸುವವರೆಗೆ ಪ್ರಧಾನಮಂತ್ರಿಯಾಗಿದ್ದವರು ಅಟಲ್‌ ಬಿಹಾರಿ ವಾಜಪೇಯಿ. ಹೀಗಾಗಿ ನಮ್ಮ ಕಾಲೇಜು ದಿನಗಳ ಸಂದರ್ಭದಲ್ಲಿ ಪ್ರಧಾನಿಯಾಗಿದ್ದರಿಂದ ಸ್ಪಷ್ಟವಾಗಿ ಒಂದು ಸರ್ಕಾರ, ಪ್ರಧಾನಮಂತ್ರಿಯ ಕಾರ್ಯವೈಖರಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದ್ದ ಮೊದಲ ಪ್ರಧಾನಮಂತ್ರಿ ವಾಜಪೇಯಿ. ಬಸ್‌ ಏರಿ ಲಾಹೋರ್‌ಗೆ ಹೊರಟಿದ್ದ ವಾಜಪೇಯಿ ಅಚ್ಚರಿ ಮೂಡಿಸಿದ್ದರು. ‘ ಶಾಂತಿಗೆ ಬದ್ಧರಿದ್ದೇವೆ. ಆದರೆ ಯುದ್ಧಕ್ಕೂ ನಾವು ಸಿದ್ಧರಿದ್ದೇವೆ' ಎಂದು ವಾಜಪೇಯಿ ಕಾರ್ಗಿಲ್‌ ಯುದ್ಧದ ವೇಳೆ ಮಾಡಿದ್ದ ಘೋಷಣೆ ಈಗಲೂ ಮನಸಿನಾಳದಲ್ಲಿ ಹಸಿರಾಗಿದೆ. ಜೈ ಜವಾನ್‌, ಜೈ ಕಿಸಾನ್‌ ಎಂಬ ಘೋಷಣೆಗಳಿಗೆ ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು ಜೈ ವಿಜ್ಞಾನ್‌ ಎಂದು ಸೇರಿಸಿದಾಗ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗಾಗಿದ್ದ ಆನಂದ ಅಷ್ಟಿಷ್ಟಲ್ಲ.

ಡಿಗ್ರಿಯಲ್ಲಿದ್ದಾಗ ಒಂದು ಕವಿತೆ ಬರೆದಿದ್ದೆ. ಆ ಕವಿತೆಯನ್ನು ನಾನು ಬರೆದಿದ್ದು ಪ್ರಧಾನಿ ವಾಜಪೇಯಿಯವರು ದೆಹಲಿಯಲ್ಲಿ ವಿಪರೀತಿ ಚಳಿ, ಹಿಮಪಾತದ ಸಂದರ್ಭದಲ್ಲಿ ಒಂದು ವಾರದ ಮಟ್ಟಿಗೋ ಏನೋ ವಿಶ್ರಾಂತಿಗೆಂದು ಗೋವಾಗೆ ತೆರಳಿದ್ದರು. ಅದನ್ನು ಟೀಕಿಸಿ ಆ ಕವಿತೆಯನ್ನು ಬರೆದಿದ್ದೆ. ಅದನ್ನು ಓದಿದ್ದ ನಮ್ಮ ಎನ್ನೆಂಸಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಶಿವಣ್ಣ ಸರ್ ತುಂಬಾ ಚೆನ್ನಾಗಿ ಬರೆದಿದ್ದಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಬರೆದಿದ್ದ ಕವಿತೆಗೆ ಅವರಿಂದ ಸಿಕ್ಕ ಮೊದಲ ಪ್ರಶಂಸೆ ಅದಾಗಿತ್ತು.

ವಾಜಪೇಯಿ ಪ್ರಧಾನಿ ಹುದ್ದೆಯ ಅಂತಿಮ ದಿನಗಳಲ್ಲಿ ಮೊಣಕಾಲಿನ ಆಪರೇಷನ್‌ ಆದ ನಂತರ ನಡೆಯುವಾಗ ತುಂಬ ಕಷ್ಟಪಡುತ್ತಿದ್ದರು. ಮಾತುಗಳಲ್ಲಿ ಹಳೆಯ ವೈಖರಿಯಲ್ಲಿ ತರಲು ಪ್ರಯಾಸಪಡುತ್ತಿದ್ದರು. ಮುಂದೆ 2004ರ ಚುನಾವಣೆಯಲ್ಲಿ ‘ಇಂಡಿಯಾ ಶೈನಿಂಗ್‌' ಕ್ಯಾಂಪೇನ್‌ ಮಾಡಿದ್ರೂ ವಾಪಸ್‌ ಅಧಿಕಾರಕ್ಕೇರಲು ಸಾಧ್ಯವಾಗಿರಲಿಲ್ಲ. ಅಲ್ಲಿಂದ ನಂತರ ನಿಧಾನಕ್ಕೆ ಅನಾರೋಗ್ಯಕ್ಕೆ ಒಳಗಾದ ವಾಜಪೇಯಿ ಕಳೆದು ಒಂದು ದಶಕದಿಂದ ಹೊರಗೆ ಕಾಣಿಸಿಕೊಂಡಿರಲಿಲ್ಲ. ಅವರ ಭಾಷಣಗಳನ್ನು ಕಳೆದೊಂದು ದಶಕದ ಯುವಕರಿಗೆ ಕೇಳಿಸಿಕೊಳ್ಳುವ ಸೌಭಾಗ್ಯ ಸಿಕ್ಕಿರಲಿಲ್ಲ.

ವಾಜಪೇಯಿ ಸ್ವತಂತ್ರ ಭಾರತದ ಶ್ರೇಷ್ಠ ನಾಯಕರ ಸಾಲಿನಲ್ಲಿ ಸದಾ ನಿಂತಿರುತ್ತಾರೆ. ಅದು ಕೇವಲ ಅವರು ಪ್ರಧಾನಮಂತ್ರಿಯಾಗಿದ್ದರು ಎಂಬ ಕಾರಣಕ್ಕೋ, ಪ್ರಧಾನಮಂತ್ರಿಯಾಗಿ ಮಾಡಿದ ಕೆಲಸದಿಂದಲೋ ಮಾತ್ರವಲ್ಲ. ಓರ್ವ ಅಪ್ಪಟ ನಾಯಕನಾಗಿ. ನೇತಾರನಾಗಿ. ಸಂಸದೀಯ ಪಟುವಾಗಿ. ದೇಶದ ಕಟ್ಟಾಳುವಾಗಿ, ಚಿಂತಕನಾಗಿ. ಮಾರ್ಗದರ್ಶಿಯಾಗಿ. ಕವಿಯಾಗಿ.

ಅದೇಕೋ ಏನೋ, ವಾಜಪೇಯಿ ಅಂತಿಮ ದರ್ಶನದ ವೇಳೆ ತುಂಬಾ ಕಾಡಿದ್ದು ಎಲ್‌.ಕೆ.ಅಡ್ವಾಣಿ.


Sunday, April 10, 2016

ಸುಂಟರಗಾಳಿಯಲ್ಲಿದೆ ಹಿತ ಅನುಭುವ!



ಅದು ಅಂತಿಂಥಾ ಸುಂಟರಗಾಳಿಯಲ್ಲ. ಆ ಸುಂಟರಗಾಳಿಯ ಹೊಡೆತಕ್ಕೆ ವಿಶಾಲ ಕಡಲಲ್ಲಿ ಹಡಗಿನಲ್ಲಿ ಸಂತಸದ ಅಲೆಯ ಮೇಲೆ ತೇಲುತ್ತಿದ್ದವರೆಲ್ಲಾ ಛಿದ್ರ ಛಿದ್ರ. ಆದರೆ ಅದು ಯಾರೊಬ್ಬರ ಪ್ರಾಣ ತೆಗೆವ ಸುಂಟರಗಾಳಿಯಲ್ಲ. ಅದು ಬದುಕನ್ನು ಕೂಡಿಸಿದ ಸುಂಟರಗಾಳಿ. ತಪ್ಪನ್ನು ಸರಿಪಡಿಸಿದ ಸುಂಟರಗಾಳಿ. ಮಾನವೀಯತೆಯನ್ನು ಬಿತ್ತಿದ ಸುಂಟರಗಾಳಿ. ರಂಗದ ಮೇಲೆ ಬೀಸಿದ ರಂಗದ ಮೇಲೆ ಬೀಸಿದ ಆ ಸುಂಟರಗಾಳಿಯೇ ಧಾಂ.. ಧೂಂ... ಸುಂಟರಗಾಳಿ!

ಶೇಕ್ಸ್‌ಪಿಯರ್‌ನ ಟೆಂಪೆಸ್ಟ್‌ ನಾಟಕವನ್ನು ಕನ್ನಡಕ್ಕೆ ತಂದು ಕನ್ನಡದ್ದೇ ಸೊಗಡಿನಲ್ಲಿ ಕಟ್ಟಿಕೊಟ್ಟಿದ್ದು ವೈದೇಹಿ. ಈ ನಾಟಕದ ಪಾತ್ರಗಳಿಗೆ ಜೀವ ತುಂಬಿದ್ದು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪಿಯು ವಿದ್ಯಾರ್ಥಿಗಳು. ರಂಗದ ಮೇಲೊಂದು ಅದ್ಭುತ ಲೋಕವನ್ನು ಸೃಷ್ಟಿಸಿದ್ದು ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ !

ಜೀವನ್‌ ರಾಂ ಸುಳ್ಯ ನನ್ನ ಇಷ್ಟದ ರಂಗ ನಿರ್ದೇಶಕ. ಸುಳ್ಯದ ಎನ್‌ಎಂಸಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಜೀವನ್‌ ರಾಂ ನಿರ್ದೇಶಿಸಿ ಅಭಿನಯಿಸಿದ್ದ - ಏಡ್ಸ್‌ ಬಂತು ಏಡ್ಸ್‌...! ಬೀದಿನಾಟಕವನ್ನು ಮೊದಲ ಬಾರಿಗೆ ನೋಡಿದ್ದೆ. ಅದು ನಾನು ನೋಡಿದ ಮೊದಲ ಬೀದಿನಾಟಕ. ಆ ಬೀದಿನಾಟಕದ ಪ್ರಭಾವ ಎಷ್ಟರ ಮಟ್ಟಿಗೆ ನನ್ನ ಮೇಲಾಗಿತ್ತೆಂದರೆ ಮುಂದೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ಪ್ರೌಢಪ್ರಬಂಧಕ್ಕೆ - ಸಂವಹನ ಮಾಧ್ಯಮವಾಗಿ ಬೀದಿನಾಟಕಗಳು ವಿಷಯವನ್ನು ಆಯ್ಕೆ ಮಾಡಿಕೊಂಡು ಭಾರತ ಹಾಗೂ ಕನ್ನಡದಲ್ಲಿ ಬೀದಿನಾಟಕಗಳ ಹುಟ್ಟು ಬೆಳವಣಿಗೆಯ ಮೇಲೆ ಕನ್ನಡದ ಹೆಸರಾಂತ ನಾಟಕ ನಿರ್ದೇಶಕರನ್ನು ಸಂದರ್ಶನ ಮಾಡಿ ಆ ಪ್ರೌಢ ಪ್ರಬಂಧ ರಚಿಸಿದ್ದೆ. ರಂಗಭೂಮಿಯ ಬಗ್ಗೆ ಸೆಳೆತ ಶುರುವಾಗಿದ್ದು ಅಲ್ಲಿಂದಲೇ. ನನ್ನಂತೆಯೇ ಅನೇಕ ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಮೋಹ ಬೆಳೆಸಿದ್ದು ಜೀವನ್‌ ರಾಂ ಸುಳ್ಯ. ಅವರಿಂದು ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ ಮಾಡುವ ಕಾಯಕದಲ್ಲೇ ತೊಡಗಿದ್ದಾರೆ. ಅವರ ಕೈಕೆಳಗೆ ಕಲಿಯುವ ಅವಕಾಶ ಪಡೆದ ವಿದ್ಯಾರ್ಥಿಗಳು ನಿಜಕ್ಕೂ ಧನ್ಯರು.

ಜೀವನ್‌ ರಾಂ ನಿರ್ದೇಶಿಸುವ ನಾಟಕಗಳ ವಿಶೇಷತೆಯೆಂದರೆ ಅದ್ಭುತ ರಂಗ ಸಜ್ಜಿಕೆ. ಅಷ್ಟೇ ಆಕರ್ಷಕ ಪ್ರಸಾದನ. ರಂಗದ ಮೇಲೆ ಎದೆ ಝಲ್ಲೆನ್ನಿಸುವ ಪ್ರದರ್ಶನ. ಧಾಂ ಧೂಂ ಸುಂಟರಗಾಳಿಯಲ್ಲೂ ಇಂತಹ ಹಲವು ಅಚ್ಚರಿಗಳಿವೆ. ಕಣ್ಮನ ತಣಿಸುವಂತಹ ಪ್ರದರ್ಶನವಿದು. ಕಲಾವಿದರೆಲ್ಲರೂ ಆಳ್ವಾಸ್‌ ಕಾಲೇಜಿನ ಪಿಯು ವಿದ್ಯಾರ್ಥಿಗಳು. ಅಲ್ಲೊಂದು ಇಲ್ಲೊಂದು ಸಣ್ಣ ಲೋಪಗಳನ್ನು ಹೊರತುಪಡಿಸಿದ್ರೆ ರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಸರಿಸಾಟಿಯಾದ ನಾಟಕವಿದು.

ರಂಗದ ಮೇಲೆ ಮಂತ್ರಬುದ್ದಿಯಾಗಿ ಅಭಿನಯಿಸಿದ ವಿದ್ಯಾರ್ಥಿ ಒಬ್ಬ ಪರ್ಫೆಕ್ಟ್‌ ರಂಗ ಕಲಾವಿದ. ಆತನ ಆರ್ಭಟ, ಸಿಟ್ಟು, ಸೆಡವು, ಪ್ರತೀಕಾರದ ಛಲ, ಕಾಡುವ ಅಂತಃಕರಣ, ಮಾನವೀಯ ಮುಖ ಎಲ್ಲವನ್ನೂ ಪಾತ್ರಕ್ಕೆ ಒಪ್ಪುವ ರೀತಿಯಲ್ಲಿ ಅಭಿನಯಿಸಿದ್ದಾನೆ. ಹಾಗೆಯೇ ಗಾಳಿ ಕಿನ್ನರ ಪಾತ್ರದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿ ರಂಗದ ಮೇಲೆ ನಿಜಕ್ಕೂ ಚಮತ್ಕಾರ ಮಾಡಿತೋರಿಸಿದ್ದಾನೆ. ನಿಜಕ್ಕೂ ಗಾಳಿಯಲ್ಲೇ ತೇಲುವ ರೀತಿಯ ಅಭಿನಯವದು. ಇನ್ನು ರಂಗದ ಮೇಲೆ ಜಾದೂ ನಡೆಯುತ್ತೆ. ಹುಡುಗಿ ಸುಮಾರು ಕೆಲ ನಿಮಿಷಗಳ ಕಾಲ ಗಾಳಿಯಲ್ಲಿ ತೇಲುತ್ತಾಳೆ. ಮಂತ್ರಬುದ್ಧಿ ಕೈ, ಕಾಲು ಕಟ್‌ ಆಗುತ್ತೆ. ಈ ಜಾದೂ ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸುತ್ತದೆ
 



( ಮಂತ್ರಬುದ್ಧಿಯ ಪಾತ್ರಧಾರಿ- ಜೀವನ್‌ರಾಂ ಸುಳ್ಯ ಆಲ್ಬಮ್‌ನಿಂದ)

ಈ ಬಾರಿ ಧಾಂ ಧೂಂ ಸುಂಟರಗಾಳಿ ಆಳ್ವಾಸ್‌ ರಂಗಯಾತ್ರೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬೀಸಿದೆ. ಈ ರಂಗಯಾತ್ರೆ ಇಡೀ ರಾಜ್ಯದಲ್ಲಿ ಸಂಚರಿಸಿದ್ರೆ ರಂಗಾಸಕ್ತರಿಗೆ ಸುಗ್ಗಿ. ಈ ನಾಟಕ ನೋಡುವ ಅವಕಾಶ ಸಿಕ್ಕಲ್ಲಿ ಮಿಸ್‌ ಮಾಡ್ಕೋಬೇಡಿ. ಎಷ್ಟು ದುಡ್ಡು ಕೊಟ್ಟರೂ ಸಾಲದು ಅನ್ನುವಷ್ಟು ಉತ್ತಮವಾದ ಈ ನಾಟಕವನ್ನು ಉಚಿತ ಪ್ರದರ್ಶನದ ಮೂಲಕ ತೋರಿಸಿದ್ದಾರೆ. ನಾಟಕಗಳನ್ನು ಉಚಿತವಾಗಿ ನೋಡಬಾರದು, ತೋರಿಸಬಾರದು ಅನ್ನೋದು ನನ್ನ ಅಚಲ ನಂಬಿಕೆ.

ಧಾಂ ಧೂಂ ಸುಂಟರಗಾಳಿಯಿಂದ ಸಿಕ್ಕ ಹಿತ ಅನುಭವ ಮತ್ತೆ ಮತ್ತೆ ನೆನಪಾಗುವಂತದ್ದು!

Wednesday, July 22, 2015

ರೈತರ ಆತ್ಮಹತ್ಯೆ, ವರದಿ, ಲಾಬಿ ಮತ್ತು ಸರ್ಕಾರ !

ದಿನಕ್ಕೊಂದು ಊರಲ್ಲಿ ದಿನಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈ ಸುದ್ದಿ ಓದಿದಾಗಲೆಲ್ಲಾ ಮನಸ್ಸಿಗೆ ದಿಗಲಾಗುತ್ತಿದೆ. ಈ ಸಾವಿನ ಸರಣಿಗೆ ಕೊನೆ ಎಂದು? ಒಮ್ಮೆ ರೈತರ ಆತ್ಮಹತ್ಯೆಯ ಸರಣಿ ಶುರುವಾದ್ರೆ ಅದು ಅಷ್ಟು ಬೇಗ ನಿಲ್ಲೋದಿಲ್ಲ. ಒಬ್ಬರಾದ ಮೇಲೊಬ್ಬರು ಸಾವಿನ ಮನೆಯ ಕದ ತಟ್ಟಲು ಆರಂಭಿಸುತ್ತಾರೆ. ಸಾವು ಸಮಸ್ಯೆಗೆ ಪರಿಹಾರ ಎಂದು ಕಂಡ ಮೇಲೆ ಉಳಿದೆಲ್ಲಾ ಪರಿಹಾರಗಳ ಕಡೆಗೆ ಮನಸ್ಸು ಹೊರಳುವುದಿಲ್ಲ.

ನಮ್ಮಲ್ಲೇ ಏಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಾ ಹೋಗುತ್ತದೆ? ರೈತರು ಸತ್ತಾಕ್ಷಣ ರಾಜಕೀಯ ಪಕ್ಷಗಳು ಆಳುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತವೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಈಗ ಕಂಡುಬರುತ್ತಿದೆ. ಎಲ್ಲಾ ಪಕ್ಷಗಳು ಆಳುವ ರಾಜ್ಯಗಳಲ್ಲೂ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 1997ರಿಂದ 2005ರ ನಡುವೆ ಪ್ರತಿ 32 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗಂತ ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಲೇ ಇದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ರೈತರನ್ನು ನಾವು ಆತ್ಯಹತ್ಯೆಯ ಕಾರಣಕ್ಕೆ ಕಳೆದುಕೊಂಡಿದ್ದೇವೆ

ನಮ್ಮದು ಕೃಷಿ ಪ್ರಧಾನ ದೇಶ. ಕೃಷಿ ನಮ್ಮ ದೇಶದ ಬೆನ್ನೆಲುಬು. ರೈತ ದೇಶದ ಅನ್ನದಾತ. ಇವೆಲ್ಲಾ ಪ್ರಾಥಮಿಕ ಶಾಲಾ ಹಂತದಲ್ಲಿ ನಾವು ಕಲಿತಿರುವ ಪಾಠ. ಹಾಗಿದ್ರೆ ಅನ್ನದಾತ ಯಾಕೆ ವಿಷ ಉಣ್ಣುವ, ನೇಣುಬಿಗಿಯುವ, ಬೆಂಕಿಗೆ ಹಾರುವ ಪರಿಸ್ಥಿತಿ ಬಂದೊದಗಿದೆ? ದೇಶದ ಬೆನ್ನೆಲುಬಾಗಿದ್ದ ಕೃಷಿ ಇಂದೇಕೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ? ಕೃಷಿ ಪ್ರಧಾನ ದೇಶದಲ್ಲಿ ಕೃಷಿಕನೇಕೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ? ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳವರೆಗೆ ನಡೆದ ಎಲ್ಲಾ ಚುನಾವಣೆಗಳ ಸಂದರ್ಭದಲ್ಲೂ ಕೃಷಿಗೆ ಉತ್ತೇಜನ, ರೈತ ಪರ ಅಂತ ಪ್ರತಿಯೊಂದು ರಾಜಕೀಯ ಪಕ್ಷ ಬಿಂಬಿಸಿಕೊಂಡು ಬಂದಿವೆ. ಯಾರು ನಾವು ಕೃಷಿಗೆ ಆದ್ಯತೆ ಕೊಡೋದಿಲ್ಲ ಅನ್ನೋ ಮಾತನ್ನು ಎಂದೂ ಹೇಳಿಲ್ಲ. ಹಾಗಿದ್ದರೂ ರೈತರು ಸಾಯುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಭಾರತದಲ್ಲಿ ಮಾತ್ರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅಂತಲ್ಲ. ಅಮೇರಿಕಾ, ಇಂಗ್ಲೆಂಡ್‌, ಫ್ರಾನ್ಸ್‌ ಹೀಗೆ ಮುಂದುವರಿದ ದೇಶಗಳಲ್ಲೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ರೈತರು ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಅನ್ನೋದನ್ನು ಹುಡುಕಲು ಈಗಾಗ್ಲೇ ಹಲವು ಅಧ್ಯಯನಗಳು ನಡೆದಿವೆ. ಈಗಿನ ಸರ್ಕಾರಗಳೂ ಮತ್ತಷ್ಟು ಹೊಸ ಅಧ್ಯಯನ ಮಾಡಿಸಲು ಮುಂದಾಗುತ್ತಿವೆ. ಆದರೆ ದುರಂತ ಎಂದರೆ ಈ ಯಾವ ಅಧ್ಯಯನ ವರದಿಗಳೂ ಸರಿಯಾಗಿ ಅನುಷ್ಟಾನಕ್ಕೆ ಬರೋದಿಲ್ಲ. ಯಾವ ವರದಿ ಸಂಪೂರ್ಣ ರೈತ ಪರವಾಗಿದ್ದು ರೈತರ ಆಶಯಗಳನ್ನು ಈಡೇರಿಸುವಂತಹ ಸಲಹೆಗಳು ಇದ್ದ ವರದಿಗಳು ವರ್ಷಾನುಗಟ್ಟಲೆ ಕೊಳೆಯುತ್ತಿರುತ್ತವೆ. ಅದೇ ರೈತರ ಹೆಸರಿನಲ್ಲಿ ನಡೆಸಿದ ವರದಿಯಲ್ಲಿ ಕಾರ್ಖಾನೆಗಳು, ಗ್ರಾಹಕರು, ಕಂಪನಿಗಳ ಹಿತಾಸಕ್ತಿಗಳು ಇದ್ದಲ್ಲಿ ಅವು ಬಹುಬೇಗನೆ ಜಾರಿಗೆ ಬರುತ್ತವೆ. ಇತ್ತೀಚೆಗೆ ಕಬ್ಬಿಗೆ ಸಂಬಂಧಿಸಿದಂತೆ ಬಂದಿರುವ ರಂಗರಾಜನ್‌ ಸಮಿತಿಯ ವರದಿ ಇದಕ್ಕೊಂದು ತಾಜಾ ಉದಾಹರಣೆ. ಎಲ್ಲಿ ಲಾಬಿ ಕೆಲಸ ಮಾಡುತ್ತಿದೆಯೋ ಅಲ್ಲಿ ಸರ್ಕಾರದಿಂದ ಕೆಲಸವಾಗುತ್ತೆ. ಆದರೆ ಲಾಬಿ ಮಾಡುವ ಶಕ್ತಿ ನಮ್ಮ ರೈತರಿಗೆ ಇಲ್ವಲ್ಲ.

ಈಗ ಸಾವಯವ ಕೃಷಿ ಕ್ಷೇತ್ರಕ್ಕೆ ಬರೋಣ. ನಮ್ಮ ದೇಶದಲ್ಲಿ ಬಹುತೇಕ 1960ರ ದಶಕದವರೆಗೂ ರೈತರು ಮಾಡ್ತಿದ್ದಿದ್ದು ಸಾವಯವ ಕೃಷಿಯನ್ನೇ. ಆದರೆ ನಮ್ಮ ಸರ್ಕಾರಗಳು ರೈತರು ಹೆಚ್ಚಿನ ಬೆಳೆ ತೆಗೆಯಲು, ಹೆಚ್ಚು ಉತ್ಪಾದನೆ ಮಾಡಲು ರಾಸಾಯನಿಕ ಗೊಬ್ಬರ ಮತ್ತು ಹೈಬ್ರೀಡ್‌ ಬೀಜಗಳನ್ನು ರೈತರ ಕೈಗಿತ್ತಿದ್ದು ಇದೇ ಸರ್ಕಾರಗಳು. ಆದರೀಗ ಉತ್ಪಾದನೆ ಹೆಚ್ಚುತ್ತಿದೆ ರೈತನಿಗೆ ಸರಿಯಾದ ಮಾರುಕಟ್ಟೆ ಒದಗಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ದಲ್ಲಾಳಿಗಳು ಮಾರುಕಟ್ಟೆಯನ್ನು ಆಳುತ್ತಿದ್ದಾರೆ. ಸರ್ಕಾರಕ್ಕೆ ರೈತರ ಉತ್ಪಾದನೆಗಿಂತ ಹೆಚ್ಚಾಗಿ ಕೈಗಾರಿಕೆಗಳ ಉತ್ಪಾದನೆಯ ಕಡೆಗೆ ಆಸಕ್ತಿ ಬೆಳೆದಿದೆ. ಜನರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ರೈತರ ಹೊಲ ಗದ್ದೆಗಳಲ್ಲಿರುವ ಕೆಲಸಗಳನ್ನು ಕೆಲಸವೇ ಅಲ್ಲ ಎಂದು ಬಿಂಬಿಸುವ ಧೋರಣೆ ಬೆಳೀತಿದೆ. ಇದರ ನಡುವೆ ಸಾವಯವ ಕೃಷಿಯ ಬಗ್ಗೆ ಕ್ಯಾಂಪೇನ್‌ ಶುರುವಾಗಿದೆ. ಬುದ್ಧಿವಂತ ರೈತರು ಸಾವಯವದ ಕಡೆಗೆ ಹೊರಳುತ್ತಿದ್ದಾರೆ. ಸಾವಯವ ಬೆಳೆಗೆ ನಗರ ಪ್ರದೇಶದಲ್ಲಿ ಸಂಘಟಿತ ಮಾರುಕಟ್ಟೆ ರೂಪಿಸುವ ಕೆಲಸ ಕೂಡ ಸದ್ದಿಲ್ಲದೆ ನಡೀತಿದೆ. ದಲ್ಲಾಳಿಗಳ ಹಾವಳಿಯನ್ನು ಇಲ್ಲಿ ತಪ್ಪಿಸುವ ಪ್ರಯತ್ನವನ್ನು ರೈತರು ಮಾಡಿಕೊಂಡಿದ್ದಾರೆ. ಆದರೆ ಹಳ್ಳಿಯಲ್ಲಿರುವ ಒಂದೆಕರೆ, ಎರಡೆಕರೆ ಇರುವ ಅತಿಸಣ್ಣ ರೈತರಿಗೆ ಇನ್ನೂ ಈ ಮಾರುಕಟ್ಟೆಯ ವಿಶಾಲತೆ ಗೊತ್ತಾಗುತ್ತಿಲ್ಲ. ಸರ್ಕಾರ ಇಲ್ಲೂ ರೈತರ ಕೈ ಹಿಡಿಯುವ ಕೆಲಸ ಮಾಡುತ್ತಿಲ್ಲ.

ಆದರೆ ರೈತರ ಆತ್ಮಹತ್ಯೆ ಆದಾಗ, ಚುನಾವಣೆಗಳು ಹತ್ತಿರ ಬಂದಾಗ ನಮ್ಮೆಲ್ಲಾ ರಾಜಕಾರಣಿಗಳು ನಾನೂ ರೈತನ ಮಗನೇ, ನಾನೂ ರೈತರ ಪರವೇ ಅಂತ ಮಾತುಗಳನ್ನು ಹೇಳೋದಿಕ್ಕೆ ಮರೆಯೋದಿಲ್ಲ. ಕೃಷಿ ಆದ್ಯತೆಯ ವಲಯ ಅನ್ನೋದನ್ನು ಹೇಳೋದಿಕ್ಕೂ ಮರೆಯೋದಿಲ್ಲ. ಇಷ್ಟೆಲ್ಲಾ ಇವರು ಹೇಳುತ್ತಿದ್ದರೂ ರೈತರು ಆತ್ಮಹತ್ಯೆಯನ್ನು ಮಾಡುವ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಿರೋದೇಕೆ? ಉತ್ತರ ರಾಜಕೀಯ ಪಕ್ಷಗಳಿಗೆ ಗೊತ್ತಿದ್ದರೂ ಹೊಸ ಹೊಸ ಅಧ್ಯಯನದ ವರದಿಗಳನ್ನು ಪಡೆಯುವ ಕೆಲಸ ಮಾಡುತ್ತಲೇ ಇವೆ.

ರೈತರು ಅನ್ನ ಬೆಳೆಯುವುದನ್ನು ನಿಲ್ಲಿಸಿದ ಮೇಲೆ ಸರ್ಕಾರಗಳು ವರದಿ ತರಿಸಿಕೊಳ್ಳುವುದನ್ನು ನಿಲ್ಲಿಸಬಹುದೇನೋ?







Monday, July 20, 2015

ಡೆನ್ನನ ಡೆನ್ನಾನಾ... ಹ್ಯಾಟ್ಸಪ್‌ ಅನುಪ್‌ ಭಂಡಾರಿ...!

ಒಂದು ಸಿನಿಮಾ ನೋಡೋದಕ್ಕೆ ಅಷ್ಟೊಂದು ಸಲ ಹೋಗಿದ್ದು ಇದೇ ಮೊದಲು. ಕಪಾಲಿ, ಪಿವಿಆರ್‌.. ಊಹೂಂ ಟಿಕೇಟ್‌ ಸಿಗ್ಲಿಲ್ಲ. ಮತ್ತೆ ಮಾರ್ನಿಂಗ್‌ ಷೋ ಟೈಮ್‌ಗೆ ಕಪಾಲಿಗೆ ಹೋಗ್ಬೇಕಾಯ್ತು. ಯಾಕಂದ್ರೆ ಸಂಡೇ ಎಲ್ಲಾ ಮಲ್ಟಿಪ್ಲೆಕ್ಸ್‌ಲೂ ಟಿಕೇಟ್‌ ಸೋಲ್ಡ್‌ ಔಟ್‌ ಆಗಿತ್ತು. ಅಂದಹಾಗೆ ನೋಡೋಕೆ ಹೋಗಿದ್ದು ರಂಗೀತರಂಗ ಸಿನೇಮಾಕ್ಕೆ.

ಸಿನಿಮಾ ರಿಲೀಸ್‌ ಆದ ವಾರದಲ್ಲೇ ನೋಡ್ಬೇಕು ಅನ್ನೋವಷ್ಟು ಸಿನಿಮಾ ನೋಡೋ ಕ್ರೇಜ್‌ ನಂಗಿಲ್ಲ. ಸಾಮಾನ್ಯವಾಗಿ ಎರಡು ಮೂರು ವಾರ ಬಿಟ್ಟು ಸಿನಿಮಾ ನೋಡೋದು ಅಭ್ಯಾಸ. ಆಗ ಟಿಕೇಟ್‌ ಆರಾಮಾಗಿ ಸಿಗುತ್ತೆ ಅನ್ನೋದು ಇದ್ಕೆ ಕಾರಣ. ರಂಗೀತರಂಗ ಸಿನಿಮಾ ವಿಷ್ಯದಲ್ಲೂ ಹಾಗೇ ಮೂರು ವಾರ ಬಿಟ್ಟು ನೋಡೋಕೆ ಹೋದ್ರೆ ಟಿಕೇಟ್‌ ಭರ್ತಿ ಮಾರಾಯ್ರೇ ! ಹೌಸ್‌ ಫುಲ್‌. ಅದೂ ಬಾಹುಬಲಿ ಅನ್ನೋ ತೆಲುಗು ಸಿನಿಮಾ ಕರ್ನಾಟಕದ ಮೂಲೆ ಮೂಲೆಯಲ್ಲಿ ಅಬ್ಬರಿಸುತ್ತಿರೋ ಕಾಲದಲ್ಲಿ. ಆ ಸಿನಿಮಾ ಬಿಟ್ಟು ನಮ್‌ ಕನ್ನಡದ ಸಿನಿಮಾ ನೋಡೋಕೆ ಜನ ಹೀಗೆ ದಂಡು ಕಟ್ಟಿಕೊಂಡು ಬರೋದನ್ನು ನೋಡೋದಿದ್ಯಲ್ಲಾ. ಅದು ನಿಜಕ್ಕೂ ಅದ್ಭುತ. 250 ಕೋಟಿ ರುಪಾಯಿಯ ಸಿನಿಮಾ ಎಲ್ಲಿ. ಕನ್ನಡದ ಸ್ಟಾರ್‌ಗಿರಿಯ ಹೀರೋಗಳಿಲ್ಲದ ಸಿನಿಮಾ ಎಲ್ಲಿ ! ಆದ್ರೆ ಕನ್ನಡಿಗರು ಒಳ್ಳೆಯ ಸಿನಿಮಾ ಬಂದಾಗ ಅಷ್ಟೇ ಪ್ರೀತಿಯಿಂದ ಒಪ್ಕೊಳ್ತಾರೆ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕೆ- ರಂಗೀತರಂಗಕ್ಕಿಂತ ? ಹ್ಯಾಟ್ಸಪ್‌ ಅನೂಪ್‌ ಭಂಡಾರಿ !


ಅನೇಕ ಗೆಳೆಯರು ಅದಾಗಲೇ ರಂಗೀತರಂಗದ ಬಗ್ಗೆ ಬರೆದಿದ್ದಾರೆ. ಕೆಲವೊಬ್ಬರು ಕೆಲವೊಂದು ಸಣ್ಣಪುಟ್ಟ ಲೋಪದ ನಡುವೆಯೂ ಒಳ್ಳೆಯ ಸಿನಿಮಾ ಅಂತ ಹೊಗಳಿದ್ದಾರೆ. ಆದ್ರೆ ಸಿನಿಮಾ ಎಂಜಾಯ್‌ ಮಾಡೋಕೆ ಕೂತಾಗ ಅಂತ ಯಾವ ಸಣ್ಣಪುಟ್ಟ ಲೋಪ ಕೂಡ ಈ ಸಿನಿಮಾದಲ್ಲಿ ಕಾಣಿಸೋದಿಲ್ಲ. ಅಷ್ಟೊಂದು ಚಂದಗಿದೆ ಸ್ಕ್ರೀನ್‌ ಪ್ಲೇ, ಡೈಲಾಗ್ಸ್‌, ಹಾಡು, ಕ್ಯಾಮರಾ, ನಟನೆ. ಬಹುಷಃ ನಾನು ಮಲಯಾಳಂ ಸಿನಿಮಾಗಳನ್ನು ಹೆಚ್ಚು ನೋಡುವುದಕ್ಕೋ ಏನೋ. ರಂಗೀತರಂಗ ಸಿನಿಮಾ ಮಲಯಾಳಂ ಸಿನಿಮಾಗಳ ರೀತಿಯಲ್ಲಿ ನೇಟಿವಿಟಿಯನ್ನು ಕಟ್ಟುಕೊಡುವಲ್ಲಿ ಯಶಸ್ವಿಯಾಗಿದೆ ಅಂತ ಅನ್ನಿಸಿತು.

ಅನೂಪ್‌ ಭಂಡಾರಿ ಒಂದು ಒಳ್ಳೆಯ ಸಿನಿಮಾವನ್ನು ಕನ್ನಡದಲ್ಲಿ ಮಾಡಿದ್ದಾರೆ. ನಿರೂಪ್‌ ಭಂಡಾರಿ ನಟನೆಯಲ್ಲಿ ಗೆದ್ದಿದ್ದಾರೆ. ಜೊತೆಗೆ ಆವಂತಿಕಾ ಶೆಟ್ಟಿ ಹಾಗೂ ರಾಧಿಕಾ ಚಂದನ್‌ ನಟನೆಗೂ ಫುಲ್‌ ಮಾರ್ಕ್ಸ್‌ ಕೊಡ್ಲೇಬೇಕು.

ಇನ್ನೂ ನೋಡದೇ ಇರೋರು ಒಂದೊಳ್ಳೆ ಸಿನಿಮಾವನ್ನು ಮಿಸ್‌ ಮಾಡ್ಕೊಬೇಡಿ. ಕನ್ನಡದಲ್ಲಿ ರಿಮೇಕ್‌ಗಳ ಅಬ್ಬರದ ನಡುವೆ, ಹಳೇ ಸೀಕ್ವೆನ್ಸ್‌ಗಳ ಭರಾಟೆಯ ನಡುವೆ, ರಂಗೀತರಂಗ ರಸದೌತಣ ಬಡಿಸುವ ಚೆಂದನೆಯ ಸಿನಿಮಾ.
ಡೆನ್ನನ ಡೆನ್ನಾನಾ... .. ಡೆನ್ನನ ಡೆನ್ನಾನಾ....

Monday, June 8, 2015

ಚಾ-ಟೀ..!


ಬಡವರ ಕೈಯ
ಕಣ್ಣ ಚಾ
ಶ್ರೀಮಂತಿಕೆಯಲ್ಲಿ
black ಟೀ...!