Thursday, March 5, 2015

ಇಂಡಿಯಾಸ್‌ ಡಾಟರ್‌ : ಮಾರುಕಟ್ಟೆಯ ಕೂಸು !

ಇಂಡಿಯಾಸ್‌ ಡಾಟರ್...!

ಜಾಗತಿಕ ಮಾರುಕಟ್ಟೆಯಲ್ಲಿ ಡಾಕ್ಯುಮೆಂಟರಿ ಬಿಕರಿಗೆ ಆರಿಸಿಕೊಂಡಿರುವ ಪಕ್ಕಾ ಮಾರ್ಕೆಟಿಂಗ್‌ ಸ್ಟ್ರಾಟಜಿಯ ಹೆಸರಿದು. ಅದೇ ರೀತಿ ಡಾಕ್ಯುಮೆಂಟರಿಯ ಸುತ್ತ ಎದ್ದಿರುವ ಕಾಂಟ್ರವರ್ಸಿ ಕೂಡ ಇದಕ್ಕೆ ದೊಡ್ಡ ಮಟ್ಟದ ಪಬ್ಲಿಸಿಟಿ ಕೊಟ್ಟಿದೆ. ಅದರ ಮೇಲೆ ಹೇರಿದ ನಿಷೇಧ ಡಾಕ್ಯುಮೆಂಟರಿಯನ್ನು ಮತ್ತಷ್ಟು ಅತಿರಂಜಕಗೊಳಿಸಿದೆ. ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದೆ.
ಇನ್ನು ಅತ್ಯಾಚಾರಿ ಮನಸ್ಥಿತಿಯ ಬಗ್ಗೆ ಅರಿತುಕೊಳ್ಳುವ ಪ್ರಯತ್ನ ಇದು ಅಂತೆಲ್ಲಾ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೆಸ್ಲಿ ಉಡ್ವಿನ್‌ ಹೇಳಿಕೊಂಡಿದ್ದಾರೆ. ಅಲ್ಲಿಗೆ ಇದೊಂದು ಎಜುಕೇಟಿವ್‌ ಸಂದೇಶ ಕೊಡುವ ಪ್ರಯತ್ನ. ಆದರೆ ಈ ಡಾಕ್ಯುಮೆಂಟರಿಯಲ್ಲಿ ಎಜುಕೇಟಿವ್ ಆಗೋ ಸಂಗತಿ ಏನಿದೆ? ಅತ್ಯಾಚಾರಿ ಹೇಳಿರುವ ಮಾತುಗಳು ಎಜುಕೇಟಿವ್‌ ಆಗಿದೆಯೇ? ಡಿಫೆನ್ಸ್‌ ಲಾಯರ್‌ ಹೇಳಿರುವ ಮಾತುಗಳು ಎಜುಕೇಟಿವ್‌ ಆಗಿವೆಯೇ? ಅಂದರೆ ಇದರ ಮೂಲಕ ಯಾರಿಗಾದರೂ ಜಾಗೃತಿ ಮೂಡಿ ಹೆಣ್ಣಮಕ್ಕಳು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವೇ? ಈ ಮಾತುಗಳನ್ನು ಮುಂದಿಟ್ಟು ನೋಡಿದರೆ ಮತ್ತೆ ಹೆಣ್ಣು ಕೇವಲ ಅಡಿಗೆ ಮನೆಯ ಕೆಲಸದಾಳಾಗಬೇಕು ಅಷ್ಟೆ. ರಾತ್ರಿ 9ರ ನಂತರ ಗೆಳೆಯನ ಜೊತೆ ಅಥವಾ ಹುಡುಗನ ಜೊತೆ ಒಂದು ಹುಡುಗಿ ಕಂಡರೆ ಆಕೆ ಅತ್ಯಾಚಾರಕ್ಕೆ ಅರ್ಹಳು. ಅವಳು ಅತ್ಯಾಚಾರಕ್ಕೆ ಒಳಗಾದಾಗ ಪ್ರತಿಭಟಿಸಿದರೆ ಕೊಲೆಗೆ ಅರ್ಹಳು ಅನ್ನೋ ರೀತಿಯ ಸಮಜಾಯಿಷಿಯನ್ನು ಅತ್ಯಾಚಾರಿ ನೀಡುತ್ತಾನೆ. ಅಂದರೆ ಇಲ್ಲಿ ಯಾವುದು ಎಜುಕೇಟಿವ್‌ ಅಂಶ ಇದೆ. ಯಾರು ಇದರಿಂದ ಯಾವ ಅಂಶವನ್ನು ಕಲಿತುಕೊಳ್ಳಬೇಕು? ಅತ್ಯಾಚಾರಿಗಿಂತಲೂ ಹಾರಿಬಲ್‌ ಆಗಿರೋದು ಡಿಫೆನ್ಸ್‌ ಲಾಯರ್‌ ಹೇಳಿಕೆಗಳು. ಹೆಣ್ಣೆಂದರೆ ಅಮೂಲ್ಯ ರತ್ನ. ಅಮೂಲ್ಯ ವಜ್ರ ಅಂತೆಲ್ಲಾ ಹೇಳುವ ಆತ ಇದೇ ವಜ್ರವನ್ನು ಬೀದಿಯಲ್ಲಿಟ್ಟರೆ ನಾಯಿಗಳು ತಿನ್ನುತ್ತವೆ ಅಂತಾರೆ. ಇದನ್ನು ಜೋಪಾನವಾಗಿ ಇಟ್ಟುಕೊಳ್ಳೋದು ಮನೆಯವರ ಕರ್ತವ್ಯ. ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ರೀತಿಯ ಸ್ಥಾನಮಾನವಿಲ್ಲ ಅನ್ನೋ ರೀತಿಯ ಅಭಿಪ್ರಾಯಕ್ಕೆ ಬರುತ್ತಾರೆ. ಅಷ್ಟೇ ಅಲ್ಲ. ಒಂದು ವೇಳೆ ತನ್ನ ಮಗಳೇ ಒಂದು ವೇಳೆ ವಿವಾಹ ಪೂರ್ವ ಸಂಬಂಧಗಳನ್ನು ಹೊಂದಿದ್ದರೆ ಆಕೆಯನ್ನು ಫಾರ್ಮ್‌ ಹೌಸ್‌ನಲ್ಲಿ ಮನೆಯವರ ಸಮ್ಮುಖ ಪೆಟ್ರೋಲ್‌ ಸುರಿದು ಬೆಂಕಿಹಚ್ಚೋದಾಗಿ ಹೇಳುತ್ತಾನೆ. ಅಲ್ಲಿಗೆ 'ಇಂಡಿಯಾಸ್‌ ಡಾಟರ್‌' ಪರಿಸ್ಥಿತಿ ಹೇಗಿರಬೇಡ?

ಭಾರತದಲ್ಲಿ ನಿರ್ಭಯಾ ಅತ್ಯಾಚಾರಕ್ಕೀಡದ ಮೊದಲ ಹೆಣ್ಣು ಮಗಳಲ್ಲ. ಅಥವಾ ಅದೇ ಕೊನೆಯೂ ಅಲ್ಲ. ಆದರೆ ನಿರ್ಭಯಾ ಅತ್ಯಾಚಾರ ಭಾರತದ ಅಂತಃಕರಣವನ್ನು ಕಲಕಿತ್ತು. ದೆಹಲಿಯಲ್ಲಿ ವಿದ್ಯಾರ್ಥಿ ಸಮುದಾಯ ಒಂದು ಗೂಡಿ ಹೋರಾಟ ರೂಪಿಸಿತ್ತು. ಪೊಲೀಸರ ಲಾಟಿಗೆ, ಬೂಟಿಗೆ, ಅಶ್ರುವಾಯು ಸಿಡಿತಕ್ಕೆ, ಗಾಳಿ ಗುಂಡಿನ ಮೊರೆತಕ್ಕೆ ಸವಾಲೊಡ್ಡಿ ನಿಂತಿದ್ದು ವಿದ್ಯಾರ್ಥಿಗಳು. ಬದಲಾವಣೆ ಬಯಸಿದ್ದ ಮನಸ್ಸುಗಳು. ಅತ್ಯಾಚಾರಿಗಳ ಅಟ್ಟಹಾಸಕ್ಕೆ ಅಂತ್ಯ ಹಾಡಬೇಕು ಅನ್ನೋ ತಾರ್ಕಿಕ ಹೋರಾಟ ರೂಪಿಸಿದವರು ಯಾರೂ ದೊಡ್ಡ ಹೆಸರಿನ ವ್ಯಕ್ತಿಗಳಲ್ಲ. ಭಾರತದ ಸಾಮಾನ್ಯ ಜನ. ಆದರೆ ನಿರ್ಭಯಾಗಳನ್ನು ತಮ್ಮ ಮಗಳೆಂಬ ರೀತಿಯಲ್ಲಿ ಇವರು ಕಂಡಿದ್ದರು ಅನ್ನೋ ಅರ್ಥದಲ್ಲಿ ಡಾಕ್ಯುಮೆಂಟರಿ ರೂಪುಗೊಂಡಿದ್ದರೆ ಈ ಹೆಸರಿಲ್ಲದ ಜನರ ಹೋರಾಟ ಡಾಕ್ಯುಮೆಂಟರಿಯ ಪ್ರಮುಖ ವಸ್ತುವಾಗಬೇಕಿತ್ತು. ಅದು ಬಿಟ್ಟು ಆ ಜನರ ಹೋರಾಟ ಒಂದೆರಡು ಸೌಂಡ್‌ ಬೈಟ್‌ಗಳು ಹಾಗೂ ಸಾಕ್ಷ್ಯಚಿತ್ರದ ನಡುವಿನ ಫ್ಲೋ ಗೆ ಮಾತ್ರ ಸೀಮಿತಗೊಳ್ಳುತ್ತಿರಲಿಲ್ಲ.

ನಿರ್ಭಯಾಳ ಅಪ್ಪ ಅಮ್ಮನ ಮಾತುಗಳು. ಆಕೆಯ ಗೆಳೆಯನ ಮಾತು. ಇದೆಲ್ಲವೂ ನಿರ್ಭಯಾಳ ಗಟ್ಟಿತನವನ್ನು ಪ್ರತಿಬಿಂಬಿಸಿದೆ ನಿಜ. ಆದರೆ ಅತ್ಯಾಚಾರಿಯೊಬ್ಬನ ಪತ್ನಿ ಹೇಳುವ ಮಾತುಗಳ ಪ್ರಕಾರ, ದೇಶದಲ್ಲಿ ಅನೇಕರು ಅತ್ಯಾಚಾರ ಮಾಡಿದ್ದರೂ ಅವರೆಲ್ಲರಿಗೆ ಆಗದಂತಹ ಗಲ್ಲುಶಿಕ್ಷೆಯನ್ನು ತನ್ನ ಪತಿಗೆ ವಿಧಿಸಿದ್ದೇಕೆಾ? ಅವರಿಲ್ಲದಿದ್ದರೆ ನನ್ನ ಮಗುವನ್ನು ನೋಡಿಕೊಳ್ಳೋರು ಯಾರು? ಒಂದು ಹೆಣ್ಣಾಗಿ ನಾನು ಈ ಸಮಾಜದಲ್ಲಿ ಬದುಕೋದು ಹೇಗೆ? ಅಂತ ಪ್ರಶ್ನಿಸುತ್ತಾಳೆ. ಇದನ್ನು ಅಮಾಯಕಿ ಹೆಣ್ಣೊಬ್ಬಳ ಮಾತುಗಳಿವು ಅಂತ ಇದನ್ನು ಅಲಕ್ಷಿಸಬೇಕೆ? ಅಪರಾಧಿಗಳ ಸಂಬಂಧಿಕರಿಗೆ ಅತ್ಯಾಚಾರದ ಬಗ್ಗೆ ಒಂದಿಷ್ಟೂ ಮರುಕವಿಲ್ಲ ಅಂತ ಹೇಳಬೇಕೆ? ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅತ್ಯಾಚಾರಿಗಳ ಸಂಬಂಧಿಕರ ಮಾತುಗಳಿಂದಾಗಿ ಅತ್ಯಾಚಾರಿಗಳ ಬಗ್ಗೆ ಕನಿಕರ ಹುಟ್ಟುವಂತೆ ಮಾಡಿಬಿಡುತ್ತದೆ. ಇದರ ಎದುರು ನಿರ್ಭಯಾಳ ಅಪ್ಪ ಅಮ್ಮ ಹೇಳುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋ ಮಾತುಗಳ ಹಿಂದಿರುವ ನ್ಯಾಯಕ್ಕಾಗಿನ ಹೋರಾಟ ಗೌಣವಾಗಿಬಿಡುತ್ತದೆ.

ಸಾಕ್ಷ್ಯಚಿತ್ರವೊಂದಕ್ಕೆ ಇರುವ ಇತಿಮಿತಿಗಳು ಏನೇ ಇರಬಹುದು. ಆದರೆ ಈ ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರಕ್ಕೆ ಪ್ರಮುಖ ಕಾರಣ ಅತ್ಯಾಚಾರಿಗಳ ಬಡತನ ಹಾಗೂ ದೆಹಲಿಯ ಕಣ್ಣುಕುಕ್ಕುವ ಶ್ರೀಮಂತಿಕೆಯಾಗಿ ತೋರುತ್ತದೆ. ಹಣದ ಮೂಲಕ ಧಕ್ಕದೆ ಇರೋದನ್ನು ಧೈರ್ಯದ ಮೂಲಕ ಧಕ್ಕಿಸಿಕೊಳ್ಳುತ್ತಾರೆ ಅನ್ನೋ ವಾದ ಪ್ರಮುಖವಾಗಿ ಕಾಣುತ್ತದೆ.

ಸಾಮಾಜಿಕ ಕಳಕಳಿಯ ಹೆಸರಿನ ಮೇಲೆ ಮಾರುಕಟ್ಟೆಯಲ್ಲಿ ಹಣಗಳಿಸುವ ಉದ್ದೇಶದ ಹೊರತಾಗಿ ಬೇರೇನೂ ಕಾಣುತ್ತಿಲ್ಲ. ನಿಷೇಧದ ಬಗ್ಗೆ  ಲೆಸ್ಲಿ ಹೇಳಿದ್ದು, " ಭಾರತದಲ್ಲಿ ನಿಷೇಧ ಹೇರಿದ್ದರಿಂದ ಜಾಗತಿಕ ಮಟ್ಟದಲ್ಲಿ ಭಾರತ ಐಸೋಲೇಟ್ ಆಗುತ್ತದೆ". ಆದ್ರೆ ಅದು ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ. ಪ್ರಪಂಚದ ಇನ್ಯಾವುದೇ ಮೂಲೆಯಲ್ಲಿ ನಡೆದ ಅತ್ಯಾಚಾರದ ಬಗ್ಗೆ ಡಾಕ್ಯುಮಂಟರಿ ಮಾಡಿ ಅದಕ್ಕೆ ಆ ದೇಶದ ಡಾಟರ್‌ ಹೆಸರು ಕೊಟ್ಟಿದ್ದರೂ ಅಲ್ಲಿಯ ಅತ್ಯಾಚಾರಿಯ ಬಾಯಿಂದ ಇದಕ್ಕಿಂತ ಭಿನ್ನ ಮಾತುಗಳು ಹೊರಬೀಳುತ್ತಿರಲಿಲ್ಲ ! ಹಾಗೆಯೇ ನಿಷೇಧದ ಮೂಲಕ ಯಾವುದನ್ನೂ ತಡೆಯಲು ಸಾಧ್ಯವಿಲ್ಲ.

No comments: